ನವದೆಹಲಿ: ಸರ್ಕಾರ ಚಿನ್ನದ ಬೆಲೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ. ಸಾಮಾನ್ಯವಾಗಿ ಹಬ್ಬದ ಸಮಯದಲ್ಲಿ ಹಳದಿ ಲೋಹದ ಬೆಲೆಯಲ್ಲಿ ಏರಿಕೆಯಾಗುತ್ತದೆ. ಆದರೆ, ‘ನಿರ್ದಿಷ್ಟ ಮಿತಿಗಳನ್ನು’ ದಾಟಿಲ್ಲ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸೋಮವಾರ ಹೇಳಿದ್ದಾರೆ.
ಆರ್ಬಿಐನ ಕೇಂದ್ರೀಯ ನಿರ್ದೇಶಕರ ಮಂಡಳಿಯೊಂದಿಗಿನ ಬಜೆಟ್ ನಂತರದ ಸಭೆಯ ನಂತರ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ‘ಚಿನ್ನ ಯಾವಾಗಲೂ ಸಾಮಾನ್ಯ ಜನರಿಗೆ ಹೂಡಿಕೆಯಾಗಿದೆ, ಹಬ್ಬದ ಸಮಯದಲ್ಲಿ ಸಾಮಾನ್ಯವಾಗಿ ಏರಿಕೆ ಕಂಡುಬರುತ್ತದೆ. ನಾವು ಅದನ್ನು ಗಮನಿಸುತ್ತಿದ್ದೇವೆ. ಆದರೆ, ಬೆಲೆಗಳು ನಿರ್ದಿಷ್ಟ ಮಿತಿಯನ್ನು ಮೀರಿ ಹೋಗಿಲ್ಲ’ ಎಂದು ಹೇಳಿದರು.
ಐಡಿಬಿಐ ಬ್ಯಾಂಕಿನ ಬಗ್ಗೆ ಮಾತನಾಡಿದ ಸೀತಾರಾಮನ್, ‘ಯಾವುದೇ ವ್ಯವಸ್ಥಿತ ರೀತಿಯ ಸಮಸ್ಯೆ ಇಲ್ಲ’. ನೀತಿಯ ವಿಷಯವಾಗಿ ಸರ್ಕಾರವು ವೈಯಕ್ತಿಕ ಕಂಪನಿಗಳ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಅವರು ಹೇಳಿದರು.
‘ಭಾರತೀಯ ರಿಸರ್ವ್ ಬ್ಯಾಂಕ್ ಬಳಿ ಸಾಕಷ್ಟು ಲಿಕ್ವಿಡಿಟಿ (ಹಣ) ಲಭ್ಯವಿದೆ, ಐದು ವರ್ಷಗಳವರೆಗೆ ಸಾಲ ಪಡೆಯಬಹುದು ಮತ್ತು ಸರ್ಕಾರವು ದೇಶದ ಆರ್ಥಿಕ ಅಗತ್ಯಗಳನ್ನು ಪೂರೈಸಲು ಸಿದ್ಧವಾಗಿದೆ’ ಎಂದು ಅವರು ಹೇಳಿದರು.
ಅಮೆರಿಕದ ಸುಂಕದ ವಿಷಯದ ಬಗ್ಗೆ ಪ್ರತಿಕ್ರಿಯಿಸಿದ ಸೀತಾರಾಮನ್, ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯವು ಪರಿಸ್ಥಿತಿಯನ್ನು ಪರಿಶೀಲಿಸುತ್ತಿದೆ. ಆ ಬಗ್ಗೆ ಈಗಲೇ ಪ್ರತಿಕ್ರಿಯಿಸುವುದು ತುಂಬಾ ಬೇಗ ಅನ್ನಿಸುತ್ತದೆ’ ಎಂದರು.
ಮಾಧ್ಯಮಗಳನ್ನುದ್ದೇಶಿಸಿ ಮಾತನಾಡಿದ ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ಗವರ್ನರ್ ಸಂಜಯ್ ಮಲ್ಹೋತ್ರಾ, ಇತ್ತೀಚಿನ ದಿನಗಳಲ್ಲಿ ಬೆಲೆಗಳು ಏರಿಕೆಯಾಗಿದ್ದರೂ, ಚಿನ್ನದ ಆಮದಿನ ಆರ್ಡರ್ ಮೌಲ್ಯವು ಹೆಚ್ಚಿಲ್ಲ ಎಂದು ಹೇಳಿದರು.
‘ವಿದೇಶಿ ನೇರ ಹೂಡಿಕೆ (FDI) ಕಳೆದ ವರ್ಷ ಮತ್ತು ಈ ವರ್ಷ ಎರಡೂ ಪ್ರಬಲವಾಗಿದೆ ಮತ್ತು ಸ್ಥಿರವಾಗಿ ಬೆಳೆಯುತ್ತಿದೆ. ಆರ್ಥಿಕ ಸ್ಥಿರತೆಯನ್ನು ಬೆಂಬಲಿಸಲು ದೇಶವು ಸಾಕಷ್ಟು ಮೀಸಲು ಹೊಂದಿದೆ’ ಎಂದು ಹೇಳಿದರು.
ಕೇಂದ್ರ ಹಣಕಾಸು ರಾಜ್ಯ ಸಚಿವ ಪಂಕಜ್ ಚೌಧರಿ ಮತ್ತು ಆರ್ಬಿಐ ಗವರ್ನರ್ ಸಂಜಯ್ ಮಲ್ಹೋತ್ರಾ ಸೇರಿದಂತೆ ಆರ್ಬಿಐನ ಕೇಂದ್ರೀಯ ನಿರ್ದೇಶಕರ ಮಂಡಳಿಯೊಂದಿಗೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಬಜೆಟ್ ನಂತರದ ಸಾಂಪ್ರದಾಯಿಕ ಸಭೆ ನಡೆಸಿದರು.
