ಅಮರಾವತಿ: ಟಿವಿ ಸೌಂಡ್ ಕಡಿಮೆ ಮಾಡು ಎಂದಿದ್ದಕ್ಕೇ ಆಕ್ರೋಶಗೊಂಡ ಪತ್ನಿ ತನ್ನ ಪತಿಯನ್ನೇ ಚಾಕುವಿನಿಂದ ಇರಿದು ಕೊಂದು ಹಾಕಿರುವ ವಿಲಕ್ಷಣ ಘಟನೆ ಆಂಧ್ರ ಪ್ರದೇಶದ ಮಂಗಳಗಿರಿಯಲ್ಲಿ ನಡೆದಿದೆ.
ಮಂಗಳಗಿರಿಯ ಟಿಡ್ಕೋ ವಸತಿ ಸಂಕೀರ್ಣದಲ್ಲಿ ಈ ಘಟನೆ ನಡೆದಿದ್ದು ಎಸಿ ಮೆಕಾನಿಕ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ ಶೇಖ್ ಅಹ್ಮದ್ (27) ಮೃತ ವ್ಯಕ್ತಿಯಾಗಿದ್ದು, ಆತನನ್ನು ಕೊಂದ ಪತ್ನಿ ಕ್ರಾಂತಿ ಎಂಬಾಕೆಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಮೂಲಗಳ ಪ್ರಕಾರ ಬುಧವಾರ ರಾತ್ರಿ ಶೇಖ್ ಅಹ್ಮದ್ ಹಾಗೂ ಕ್ರಾಂತಿ ಇಬ್ಬರೂ ಪ್ರೀತಿಸಿ ಮದುವೆಯಾಗಿದ್ದರು. ವರ್ಷದ ಹಿಂದಷ್ಟೇ ಟಿಡ್ಕೋ ವಸತಿ ಸಂಕೀರ್ಣದಲ್ಲಿ ಮನೆ ಮಾಡಿಕೊಂಡಿದ್ದರು ಎಂದು ಹೇಳಿದ್ದಾರೆ.
ಪೊಲೀಸರು ನೀಡಿರುವ ಮಾಹಿತಿಯಂತೆ ರಂಜಾನ್ ಮಾಸದ ನಿಮಿತ್ತ ಶೇಖ್ ಅಹ್ಮದ್ ಉಪವಾಸದಲ್ಲಿದ್ದು, ಮನೆಗೆ ಆಗಮಿಸಿದ್ದರು. ಈ ವೇಳೆ ಪತ್ನಿ ಕ್ರಾಂತಿ ಟಿವಿ ನೋಡುತ್ತಿದ್ದರು. ಶೇಖ್ ಅಹ್ಮದ್ ಟಿವಿ ಸೌಂಡ್ ಕಡಿಮೆ ಮಾಡುವಂತೆ ಕೇಳಿದ್ದಾರೆ. ಇದಕ್ಕೆ ಒಪ್ಪದ ಪತ್ನಿ ಪತಿಯ ವಿರುದ್ಧವೇ ಕಿಡಿಕಾರಿದ್ದಾರೆ. ಈ ವೇಳೆ ಇಬ್ಬರ ನಡುವೆ ವಾಕ್ಸಮರ ನಡೆದಿದ್ದು, ಅದು ವಿಕೋಪಕ್ಕೆ ತಿರುಗಿ ಇಬ್ಬರೂ ಪರಸ್ಪರ ಜಗಳ ಮಾಡಿದ್ದಾರೆ.
ಈ ವೇಳೆ ಶೇಖ್ ಅಹ್ಮದ್ ಪತ್ನಿ ಕ್ರಾಂತಿ ಮೇಲೆ ಹಲ್ಲೆಗೆ ಮುಂದಾಗಿದ್ದಾರೆ. ಇದೇ ಸಂದರ್ಭದಲ್ಲಿ ಪತ್ನಿ ಕ್ರಾಂತಿ ಕೂಡ ಆಕ್ರೋಶಗೊಂಡು ಕೈಗೆ ಸಿಕ್ಕ ಹರಿತವಾದ ವಸ್ತುವಿನಿಂದ ಇರಿದಿದ್ದಾರೆ.
ಈ ವೇಳೆ ಕೂಗಾಟ ಕೇಳಿದ ಸ್ಥಳೀಯರು ಮನೆಗೆ ಬಂದಾಗ ಶೇಖ್ ಅಹ್ಮದ್ ರಕ್ತದ ಮಡುವಿನಲ್ಲಿ ಬಿದ್ದಿದ್ದರು. ಕೂಡಲೇ ಅವರನ್ನು ವಿಜಯವಾಡದ ಸರ್ಕಾರಿ ಜನರಲ್ ಆಸ್ಪತ್ರೆಗೆ ಕರೆದೊಯ್ದರು. ಆದಾಗ್ಯೂ, ಚಿಕಿತ್ಸೆ ಪಡೆಯುತ್ತಿದ್ದಾಗ ಅವರು ಸಾವನ್ನಪ್ಪಿದರು ಎಂದು ಹೇಳಿದ್ದಾರೆ.
ಪ್ರಸ್ತುತ ಕೊಲೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
