ಚೆನ್ನೈ: ಇತ್ತೀಚಿಗಷ್ಟೇ ಹೊಸ ರಾಜಕೀಯ ಪಕ್ಷ ಸ್ಥಾಪಿಸುವುದಾಗಿ ಘೋಷಿಸಿದ್ದ ಎಐಎಡಿಎಂಕೆಯ ಉಚ್ಚಾಟಿತ ನಾಯಕಿ ವಿ ಕೆ ಶಶಿಕಲಾ ಅವರು ಶುಕ್ರವಾರ ತಮ್ಮ ನೂತನ ಪಕ್ಷದ ಹೆಸರು ಅಖಿಲ ಭಾರತ ಪುರಚ್ಚಿ ತಲೈವರ್ ಮಕ್ಕಳ್ ಮುನ್ನೇತ್ರ ಕಳಗಂ ಎಂದು ಘೋಷಿಸಿದ್ದಾರೆ..
ಫೆಬ್ರವರಿ 24 ರಂದು, ದಿವಂಗತ ಎಐಎಡಿಎಂಕೆ ಮುಖ್ಯಸ್ಥೆ ಜೆ ಜಯಲಲಿತಾ ಅವರ 74ನೇ ಜನ್ಮ ದಿನಾಚರಣೆಯಂದು, ಅವರ ಆಪ್ತ ಸಹಾಯಕಿಯಾಗಿದ್ದ ಶಶಿಕಲಾ ರಾಮನಾಥಪುರಂ ಜಿಲ್ಲೆಯ ಕಮುತಿಯಲ್ಲಿ ಪಕ್ಷದ ಧ್ವಜವನ್ನು ಅನಾವರಣಗೊಳಿಸಿದ್ದರು.
ಇಂದು ತಮ್ಮ ಹೊಸ ಪಕ್ಷದ ಹೆಸರು ಘೋಷಿಸಿದ್ದು, ಪಕ್ಷದ ಚಿಹ್ನೆ ‘ತೆಂಗಿನ ತೋಟ’ ಆಗಿರುತ್ತದೆ ಮತ್ತು ಇದು ಶ್ರಮಿಕರ ಸಂಕೇತವಾಗಿದೆ ಎಂದು ಶಶಿಕಲಾ ವರದಿಗಾರರಿಗೆ ತಿಳಿಸಿದ್ದಾರೆ.
ವರದಿಗಾರರ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಶಶಿಕಲಾ, ತಮ್ಮ ಪಕ್ಷವು ಮುಂಬರುವ ವಿಧಾನಸಭಾ ಚುನಾವಣೆಯನ್ನು ಇತರ ಪಕ್ಷಗಳೊಂದಿಗೆ ಮೈತ್ರಿಮಾಡಿಕೊಂಡು ಎದುರಿಸಲಿದೆ ಎಂದು ಹೇಳಿದರು.
“ನಾವು ಸಮಾನ ಮನಸ್ಕ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಳ್ಳುತ್ತೇವೆ. ಕೆಲವರು ಏಕಾಂಗಿಯಾಗಿ ಸ್ಪರ್ಧಿಸಲು ಬಯಸುತ್ತಾರೆ. ಮೈತ್ರಿ ಅಗತ್ಯವಿಲ್ಲ ಎಂದು ಹೇಳುತ್ತಾರೆ. ಆದರೆ ನಾವು ಹಾಗಲ್ಲ. ತಮಿಳುನಾಡಿನ ಜನರಿಗೆ ನಾವು ಒಳ್ಳೆಯದನ್ನು ಮಾಡಬೇಕು ಎಂದು ನಾನು ಸ್ಪಷ್ಟವಾಗಿ ಹೇಳಲು ಬಯಸುತ್ತೇನೆ” ಎಂದರು.
