ತುಮಕೂರು: ಜಿಲ್ಲೆಯ ಪಾವಗಡ ಪಟ್ಟಣದಲ್ಲಿ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರಾದ ಮಲ್ಲಿಕಾರ್ಜುನ (59b) ಪಾವಗಡದಲ್ಲಿರುವ ಸಮಾಜ ಕಲ್ಯಾಣ ಇಲಾಖೆಯ ಕಚೇರಿಯಲ್ಲೇ ನೇಣಿಗೆ ಶರಣಾಗಿದ್ದಾರೆ. ಸಾವಿಗೆ ಮುಂಚೆ ತಮ್ಮ ಸಾವಿಗೆ ಜಂಟಿ ನಿರ್ದೇಶಕ ಕಾರಣವೆಂದು ಹೇಳಿ ಮಾಡಿರುವ ವಿಡಿಯೊ ವೈರಲ್ ಆಗಿದೆ.
ಮೇಲಾಧಿಕಾರಿ ಕಿರುಕುಳ ಆರೋಪ, ವಿಡಿಯೊ ಮಾಡಿಟ್ಟು ಸಾವು
ಮಲ್ಲಿಕಾರ್ಜುನ ಆತ್ಮಹತ್ಯೆಗೆ ಮುನ್ನ ವಿಡಿಯೋ ಮಾಡಿದ್ದು, ತಮ್ಮ ಸಾವಿಗೆ ಜಂಟಿ ನಿರ್ದೇಶಕ ಕೃಷ್ಣಪ್ಪ ಕಾರಣ ಎಂದು ಆರೋಪಿಸಿದ್ದಾರೆ. ನನ್ನ ತಾಯಿ, ಪತ್ನಿ ಮತ್ತು ಮಕ್ಕಳು ನನ್ನನ್ನು ಚೆನ್ನಾಗಿ ನೋಡಿಕೊಂಡಿದ್ದಾರೆ. ಆದರೆ ಮೇಲಾಧಿಕಾರಿ ನೀಡಿದ ಕಿರುಕುಳದಿಂದ ಈ ನಿರ್ಧಾರಕ್ಕೆ ಬಂದಿದ್ದೇನೆ ಎಂದು ವಿಡಿಯೋದಲ್ಲಿ ತಿಳಿಸಿದ್ದಾರೆ. ಕೃಷ್ಣಪ್ಪ ಅವರಿಗೆ ದೇವರು ಹಾಗೂ ಕಾನೂನು ಶಿಕ್ಷೆ ನೀಡಲಿದೆ ಎಂದೂ ಹೇಳಿದ್ದಾರೆ.
ಡೆತ್ ನೋಟ್ ವಶಕ್ಕೆ ಪಡೆದಿರುವ ಪೊಲೀಸರು
ಮಲ್ಲಿಕಾರ್ಜುನ ಮೂಲತಃ ಪಾವಗಡ ತಾಲೂಕಿನವರಾಗಿದ್ದು, ಕಳೆದ ಮೂರು ವರ್ಷಗಳಿಂದ ಸಮಾಜ ಕಲ್ಯಾಣ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಇನ್ನೂ ಕೆಲವೇ ದಿನಗಳಲ್ಲಿ ಅವರ ಸೇವಾ ಅವಧಿ ಮುಕ್ತಾಯಗೊಳ್ಳಬೇಕಿತ್ತು. ಆದರೆ ಜಂಟಿ ನಿರ್ದೇಶಕ ನೀಡಿದ ಕಿರುಕುಳದಿಂದ ಈ ನಿರ್ಧಾರ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ. ಘಟನೆ ನಡೆದ ದಿನ ಸಂಜೆ, ಕಚೇರಿಯ ಎಲ್ಲಾ ಸಿಬ್ಬಂದಿ ತೆರಳಿದ ನಂತರ ಅವರು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವುದು ತಿಳಿದುಬಂದಿದೆ.
ಡೆತ್ ನೋಟ್ ವಶಪಡಿಸಿಕೊಂಡಿರುವ ಪಾವಗಡ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
