ಚೆನ್ನೈ: ರಾಜಕೀಯ ಅಖಾಡಕ್ಕೆ ಇಳಿಯುತ್ತಿದ್ದಂತೆ ಯಾರ ಮೇಲೆ ಆಗಲಿ ವೈಯಕ್ತಿಕ ದಾಳಿಗಳು ಹೆಚ್ಚಾಗುತ್ತದೆ. ಅದೇ ರೀತಿ ಇತ್ತೀಚೆಗಷ್ಟೇ ತಮಿಳುನಾಡು ರಾಜಕೀಯದಲ್ಲಿ ಹೊಸದಾಗಿ ರಾಜಕೀಯ ಪಕ್ಷ ಕಟ್ಟಿ ಧೂಳೆಬ್ಬಿಸುತ್ತಿರುವ ನಟ ವಿಜಯ್ ವಿರುದ್ಧ ಸಹ ವೈಯಕ್ತಿಕ ದಾಳಿಯಾಗಿತ್ತು. ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ನೈನಾರ್ ನಾಗೇಂದ್ರ ಅವರು ನಟಿ ತ್ರಿಶಾ ಹೆಸರಿನ ಜೊತೆ ತಳುಕು ಹಾಕಿದ್ದರು.
ಮುಂದಿನ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ದಳಪತಿ ವಿಜಯ್ ಅವರ ಸ್ಪರ್ಧೆ ಮತ್ತು ಗೆಲುವಿನ ಸಾಧ್ಯತೆ ಬಗ್ಗೆ ಕೇಳಿದ ಪ್ರಶ್ನೆಗೆ ಬಿಜೆಪಿ ರಾಜ್ಯಾಧ್ಯಕ್ಷರು ವಿವಾದಾತ್ಮಕ ಹೇಳಿಕೆ ನೀಡಿದ್ದರು. ಇದು ವಿವಾದಕ್ಕೆ ಗುರಿಯಾಗಿದ್ದು ನಂತರ ನಾಗೇಂದ್ರ ಅವರು ಕ್ಷಮೆಯಾಚಿಸಬೇಕಾಯಿತು.
ನಾಗೇಂದ್ರ ಹೇಳಿದ್ದೇನು?
ತಮಿಳು ನಟ ವಿಜಯ್ ಅವರ ರಾಜಕೀಯ ಪ್ರವೇಶ ಮತ್ತು ಅವರ ಪಕ್ಷ ತಮಿಳಿಗ ವೆಟ್ರಿ ಕಳಗಂ (ಟಿವಿಕೆ) ಕುರಿತು ಪ್ರತಿಕ್ರಿಯಿಸುವಾಗ ಬಿಜೆಪಿಯ ನಾಗೇಂದ್ರನ್ ಅವರು, ವಿಜಯ್ ತುಂಬಾ ಸರಳ ವ್ಯಕ್ತಿ, ಅವರಿಗೆ ರಾಜಕೀಯ ಅರ್ಥವಾಗುವುದಿಲ್ಲ. ಮೊದಲು ಅವರು ತಮ್ಮ ಗೂಡಿನಿಂದ ಹೊರಬರಬೇಕು. ತಮ್ಮ ಕುಟುಂಬ ಜೊತೆ ಉತ್ತಮ ಸಂಬಂಧ ಹೊಂದಬೇಕು, ಜೊತೆಗೆ ತಮಿಳುನಾಡಿನ ತಳಮಟ್ಟದ ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳಲು ಅವರು ತ್ರಿಶಾ ಅವರ ಮನೆಯಿಂದಲೂ ಹೊರಬರಬೇಕು ಎಂದು ಹೇಳಿದ್ದರು.
ನಟ ವಿಜಯ್ ದಾಂಪತ್ಯ ಜೀವನದಲ್ಲಿ ಬಿರುಕು
ಕಾಲಿವುಡ್ ಖ್ಯಾತ ನಟ ದಳಪತಿ ವಿಜಯ್ ಸಂಸಾರದಲ್ಲಿ ಬಿರುಕು ಮೂಡಿದೆ. ವಿಜಯ್ ಪತ್ನಿ ಸಂಗೀತಾ ಅವರು ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದು 27 ವರ್ಷಗಳ ದಾಂಪತ್ಯ ಜೀವನವನ್ನು ಕಡಿದುಕೊಳ್ಳಲು ಮುಂದಾಗಿದ್ದಾರೆ. ವಿಜಯ್ ಅವರಿಗೆ ನಟಿಯೊಬ್ಬರ ಜೊತೆ ಅನೈತಿಕ ಸಂಬಂಧ ಇದೆ ಎಂದು ಸಂಗೀತಾ ಆರೋಪಿಸಿದ್ದಾರೆ. ಚೆಂಗಲ್ಪಟ್ಟು ಕೌಟುಂಬಿಕ ನ್ಯಾಯಾಲಯದಲ್ಲಿ ಸಂಗೀತಾ ಅವರು ಫೆಬ್ರವರಿ 27ರಂದು ವಿಚ್ಛೇದನಕ್ಕೆ ಅರ್ಜಿ ಸಲ್ಲಿದಿದ್ದಾರೆ.
ರಾಜಕೀಯಕ್ಕೆ ಬರುತ್ತಿದ್ದಂತೆ ವಿಜಯ್ ಗೆ ಸಾಲು ಸಾಲು ಸಂಕಷ್ಟಗಳು ಎದುರಾಗುತ್ತಿವೆ. ವಿಜಯ್ ನಟನೆಯ ಕೊನೇ ಚಿತ್ರ ‘ಜನ ನಾಯಗನ್’ ಬಿಡುಗಡೆಗೆ ಅಡ್ಡಿಯಾಗಿದ್ದು ಚಿತ್ರ ಯಾವಾಗ ಬಿಡುಗಡೆಯಾಗುತ್ತದೆಯೇ ಸದ್ಯಕ್ಕೆ ತಿಳಿಯುತ್ತಿಲ್ಲ. ಇದರ ಬೆನ್ನಲ್ಲೇ ದಾಂಪತ್ಯ ಜೀವನದಲ್ಲಿ ಬಿರುಕು ಮೂಡಿದೆ.
