ರಾಮನಗರ: ನಾನು ರಾಮನಗರಕ್ಕೆ ಫಿಕ್ಸ್ ಆಗಿದ್ದೇನೆ, ಯಾವುದೇ ಅನುಮಾನ ಬೇಡ. ನಾನು ಪಲಾಯನವಾದಿ ರಾಜಕಾರಣ ಮಾಡಲ್ಲ, ನಮ್ಮ ಕಾರ್ಯಕರ್ತರ ಆದೇಶವೇ ಅಂತಿಮ ಎಂದು ಹೇಳುವ ಮೂಲಕ ಮುಂದಿನ ಚುನಾವಣೆಯಲ್ಲಿ ರಾಮನಗರ ಕ್ಷೇತ್ರದಿಂದ ಸ್ಪರ್ಧಿಸುವ ಸುಳಿವನ್ನು ಜೆಡಿಎಸ್ ಯುವ ಘಟಕ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ನೀಡಿದ್ದಾರೆ.
ರಾಮನಗರದಲ್ಲಿ ಖಾಸಗಿ ಕಾರ್ಯಕ್ರಮದ ನಿಮಿತ್ತ ಆಗಮಿಸಿದ್ದ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಸಚಿವರ ಬದಲಾವಣೆ ಬಗ್ಗೆ 31 ಶಾಸಕರ ಪತ್ರ ವಿಚಾರವಾಗಿ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದರು. ಕೇವಲ ಸಚಿವರ ಬದಲಾವಣೆ ಅಲ್ಲ. ಇಡೀ ಸರಕಾರ ಬದಲಾವಣೆ ಮಾಡುವ ದಿನ ದೂರವಿಲ್ಲ. 7 ಕೋಟಿ ಕನ್ನಡಿಗರು ಅದನ್ನು ಮಾತನಾಡುತ್ತಿದ್ದಾರೆ ಎಂದರು.
ರಾಜ್ಯಾದ್ಯಂತ ನಾನು ಪ್ರವಾಸ ಮಾಡಿದ್ದೇನೆ. ರಾಜ್ಯದಲ್ಲಿ ಟ್ರೆಂಡ್ ಬದಲಾವಣೆ ಆಗಿದೆ. ಈಗ ಚುನಾವಣೆ ನಡೆದರೂ ಕಾಂಗ್ರೆಸ್ ಸರಕಾರವನ್ನು ಜನರು ತಿರಸ್ಕಾರ ಮಾಡ್ತಾರೆ. ಸ್ಥಳೀಯ ಚುನಾವಣೆಗಳಲ್ಲಿ ಕಾಂಗ್ರೆಸ್ ಬೀದಿಗೆ ಬರುತ್ತೆ. ಯಾವ ಸಚಿವರ ಚೇಂಜ್ ಮಾಡಿದರೂ ಆಡಳಿತದಲ್ಲಿ ಯಾವುದೇ ಬದಲಾವಣೆ ಆಗಲ್ಲ. ಇವರ ಮನಸ್ಥಿತಿ ಲೂಟಿ ಮಾಡುವುದೇ ಆಗಿದೆ ಎಂದರು.
ಮುಂದಿನ ಚುನಾವಣೆಯಲ್ಲಿ ನಿಖಿಲ್ ಕುಮಾರಸ್ವಾಮಿ ಸ್ಪರ್ಧೆಗೆ ವಿಚಾರಕ್ಕೆ ಕುರಿತಂತೆ ಪ್ರತಿಕ್ರಿಯೆ ನೀಡಿ, ಪದೇ ಪದೇ ಈ ಬಗ್ಗೆ ಪ್ರಶ್ನೆ ಕೇಳಬೇಡಿ. ಅಷ್ಟೊಂದು ಅನುಮಾನ ಬೇಡ. ನಾನು ರಾಮನಗರಕ್ಕೆ ಫಿಕ್ಸ್ ಆಗಿದ್ದೇನೆ. ನನ್ನನ್ನ ಎಲ್ಲಾ ಕಡೆಯಿಂದ ವಿರೋಧಿಗಳು ರೌಂಡಪ್ ಆಗ್ತಾರೆ. ಮುಂದೆಯೂ ಕೂಡಾ ರೌಂಡಪ್ ಮಾಡ್ತಾರೆ. ಆದರೆ ಜನ ನಮ್ಮನ್ನ ಕಾಪಾಡುವ ಸಂಪೂರ್ಣ ವಿಶ್ವಾಸ ಇದೆ ಎಂದು ಹೇಳಿದರು.
