ಚಿಕ್ಕಮಗಳೂರು: ತೃತೀಯ ಲಿಂಗ ಸಮುದಾಯದ ಅಭಿವೃದ್ಧಿಗಾಗಿ ರಾಜ್ಯ ಸರ್ಕಾರ ಮುಂಬರುವ ಬಜೆಟ್ನಲ್ಲಿ 200 ಕೋಟಿ ರೂ. ಅನುದಾನ ಮೀಸಲಿಡಬೇಕು ಎಂದು ತೃತೀಯ ಲಿಂಗ ಅಲ್ಪಸಂಖ್ಯಾತರ ಸಂಘ ಆಗ್ರಹಿಸಿದೆ.
ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಸಂಘದ ಮುಖ್ಯಸ್ಥೆ ಮೇಘಾ ಮಲ್ನಾಡ್ ಅವರು, ಕಾಂಗ್ರೆಸ್ ಸರ್ಕಾರ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ವರ್ಷಕ್ಕೆ ರೂ.200 ಕೋಟಿ ಅನುದಾನ ನೀಡುವುದಾಗಿ ಭರವಸೆ ನೀಡಿದ್ದರೂ, ಮೂರು ವರ್ಷಗಳಾದರೂ ಅದನ್ನು ಜಾರಿಗೆ ತರಲಾಗಿಲ್ಲ ಎಂದು ಆರೋಪಿಸಿದರು.
ಇದು ಮಾನವೀಯತೆ ಅಲ್ಲ, ನಮ್ಮ ಸಂವಿಧಾನಾತ್ಮಕ ಹಕ್ಕು. ಗೌರವಯುತ ಜೀವನ, ಉದ್ಯೋಗ ಭದ್ರತೆ ಮತ್ತು ಆರೋಗ್ಯ ಸೇವೆ ನಮ್ಮ ಸಂವಿಧಾನಿಕ ಹಕ್ಕು. ಸರ್ಕಾರ ತಾನು ಕೊಟ್ಟ ಮಾತನ್ನು ಉಳಿಸಿಕೊಳ್ಳಬೇಕು. ವಿಳಂಬ ಮಾಡಬಾರದು ಎಂದು ಹೇಳಿದರು.
ಸಮುದಾಯದ ಸರ್ವಾಂಗೀಣ ಅಭಿವೃದ್ಧಿಗೆ ಕನಿಷ್ಠ ರೂ.250 ಕೋಟಿ ಪ್ರತ್ಯೇಕ ಬಜೆಟ್, ಅಭಿವೃದ್ಧಿ ನಿಗಮ ಸ್ಥಾಪನೆ ಸೇರಿದಂತೆ ಹಲವು ಬೇಡಿಕೆಗಳನ್ನು ಸರ್ಕಾರದ ಮುಂದೆ ಇಡಲಾಗಿದೆ. ಅದೇ ರೀತಿ ಆಶ್ರಯ ಗೃಹಗಳು, ಹಾಸ್ಟೆಲ್ಗಳು, ತಾತ್ಕಾಲಿಕ ವಾಸಸ್ಥಾನ ನಿರ್ಮಾಣ, ಪ್ರತಿವರ್ಷ 500 ಮನೆಗಳ ವಿತರಣೆ, ಕೃಷಿಗೆ ಆಸಕ್ತಿ ಇರುವವರಿಗೆ ಎರಡು ಎಕರೆ ಕೃಷಿ ಭೂಮಿ ನೀಡುವಂತೆ ಹಾಗೂ ಉದ್ಯಮಿಗಳಿಗೆ ಬ್ಯಾಂಕ್ ಸಂಪರ್ಕಿತ ಯೋಜನೆ, ರೂ.2 ಲಕ್ಷ ಸಬ್ಸಿಡಿ, ಬಡ್ಡಿ ರಹಿತ ಸಾಲ, ಪಿಂಚಣಿ ಹಣ ರೂ.2000ಕ್ಕೆ ಏರಿಕೆ ಹಾಗೂ ವೃದ್ಧಾಪ್ಯ ಪಿಂಚಣಿ ರೂ.5,000ಕ್ಕೆ ಹೆಚ್ಚಿಸುವಂತೆ, ಸರ್ಕಾರಿ ಉದ್ಯೋಗಗಳಲ್ಲಿ ಶೇ.1ರಷ್ಟು ಮೀಸಲಾತಿ ಮತ್ತು ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತ ಲಿಂಗ ದೃಢೀಕರಣ ಶಸ್ತ್ರಚಿಕಿತ್ಸೆ ನೀಡಬೇಕು ಎಂಬುದು ಸಂಘದ ಪ್ರಮುಖ ಬೇಡಿಕೆಗಳಾಗಿವೆ ಎಂದು ಮೇಘಾ ಮಲ್ನಾಡ್ ತಿಳಿಸಿದ್ದಾರೆ.
