ಬೆಂಗಳೂರು: ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನರ್ಸ್ ಮಾಡಿದ ಎಡವಟ್ಟಿನಿಂದ ಆರು ತಿಂಗಳ ಗಂಡು ಮಗುವಿನ ಬೆರಳು ಭಾಗಶಃ ಕತ್ ಆಗಿದ್ದು, ನಿರ್ಲಕ್ಷ್ಯ ವಹಿಸಿದ ಆರೋಪದ ಮೇಲೆ ಆಸ್ಪತ್ರೆಯ ನರ್ಸ್, ವೈದ್ಯರು ಮತ್ತು ಆಸ್ಪತ್ರೆಯ ಆಡಳಿತ ಮಂಡಳಿಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ.
ವಿಜಯ್ ಕುಮಾರ್ ಎಂಬುವವರು ತಮ್ಮ ದೂರಿನಲ್ಲಿ, ಫೆಬ್ರವರಿ 19 ರಂದು, ಜ್ವರ ಮತ್ತು ಶೀತದಿಂದ ಬಳಲುತ್ತಿದ್ದ ಮಗುವನ್ನು ಚಿಕಿತ್ಸೆಗಾಗಿ ಇಂದಿರಾನಗರದ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರು. ಪರೀಕ್ಷೆ ನಡೆಸಿದ ವೈದ್ಯರು ಮಗುವನ್ನ ಅಡ್ಮಿಟ್ ಮಾಡಿಕೊಂಡು ಚಿಕಿತ್ಸೆ ನೀಡುತ್ತಿದ್ದರು. ಮಗುವಿಗೆ ಕಫದ ಸಮಸ್ಯೆ ಇದೆ ಎಂದ ವೈದ್ಯರು ಆಸ್ಪತ್ರೆಯಲ್ಲೇ ಚಿಕಿತ್ಸೆ ಮುಂದುವರಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಫೆಬ್ರವರಿ 24 ರಂದು ಮಧ್ಯಾಹ್ನ 3 ಗಂಟೆಗೆ ಮಗುವನ್ನು ಡಿಸ್ಚಾರ್ಜ್ ಮಾಡಬೇಕಾಗಿತ್ತು ಮತ್ತು ಅದರ ಪ್ರಕಾರ, ವಾರ್ಡ್ನಲ್ಲಿ ಡಿಸ್ಚಾರ್ಜ್ ಪ್ರಕ್ರಿಯೆ ನಡೆಯುತ್ತಿರುವಾಗ ಆಸ್ಪತ್ರೆಯ ಬಿಲ್ ಪಾವತಿಸಲಾಯಿತು.
ಡಿಸ್ಚಾರ್ಜ್ ಸಮಯದಲ್ಲಿ, ಕರ್ತವ್ಯದಲ್ಲಿದ್ದ ನರ್ಸ್ ಡ್ರಿಪ್ ತೆಗೆದಿದ್ದು, ಡ್ರೆಸ್ಸಿಂಗ್ ಮಾಡುವಾಗ, ಮಗುವಿನ ಎಡಗೈಯ ಕಿರುಬೆರಳಿನ ತುದಿಯನ್ನು ಕತ್ತರಿಸಿದ್ದಾರೆ ಎಂದು ಆರೋಪಿಸಲಾಗಿದೆ.
ಇದರಿಂದಾಗಿ ಮಗುವಿಗೆ ತೀವ್ರ ನೋವು ಮತ್ತು ಗಾಯವಾಗಿದೆ ಎಂದು ದೂರುದಾರರು ಆರೋಪಿಸಿರುವುದಾಗಿ ಎಫ್ಐಆರ್ನಲ್ಲಿ ಉಲ್ಲೇಖಿಸಲಾಗಿದೆ.
“ತಕ್ಷಣವೇ ಮಗುವನ್ನು ತುರ್ತು ಚಿಕಿತ್ಸಾ ವಿಭಾಗಕ್ಕೆ ಕರೆದೊಯ್ಯಲಾಯಿತು, ಅಲ್ಲಿ ಡ್ರೆಸ್ಸಿಂಗ್ ಮಾಡಿ ಪ್ಲಾಸ್ಟರ್ ಹಚ್ಚಲಾಯಿತು. ಆರಂಭದಲ್ಲಿ, ಸಂಬಂಧಪಟ್ಟ ಸಿಬ್ಬಂದಿ ಇದು ದೊಡ್ಡ ಗಾಯವಲ್ಲ ಮತ್ತು ಮಗು ಚಿಕ್ಕದಾಗಿರುವುದರಿಂದ ಅದು ತಾನಾಗಿಯೇ ಗುಣವಾಗುತ್ತದೆ ಎಂದು ನಮಗೆ ತಿಳಿಸಿದರು. ಆದಾಗ್ಯೂ, ಅವರ ನಿರ್ಲಕ್ಷ್ಯದಿಂದಾಗಿ, ನನ್ನ 6 ತಿಂಗಳ ಮಗುವಿನ ಎಡಗೈಯ ಕಿರುಬೆರಳಿಗೆ ಗಂಭೀರ ಗಾಯವಾಗಿದ್ದು, ಅಪಾರ ನೋವು ಮತ್ತು ಹಾನಿಯಾಗಿದೆ” ಎಂದು ಎಫ್ಐಆರ್ನಲ್ಲಿ ತಿಳಿಸಲಾಗಿದೆ.
ದೂರಿನ ಆಧಾರದ ಮೇಲೆ, ಭಾರತೀಯ ನ್ಯಾಯ ಸಂಹಿತಾ ಸೆಕ್ಷನ್ 125 (ಬಿ) (ಇತರರ ಜೀವ ಅಥವಾ ವೈಯಕ್ತಿಕ ಸುರಕ್ಷತೆಗೆ ಅಪಾಯವನ್ನುಂಟುಮಾಡುವ ಕಾಯ್ದೆ) ಅಡಿಯಲ್ಲಿ ನರ್ಸ್, ವೈದ್ಯರು ಮತ್ತು ಆಸ್ಪತ್ರೆಯ ಆಡಳಿತ ಮಂಡಳಿಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಮತ್ತು ಪ್ರಕರಣದ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
