ಉದಯಪುರ: ರಾಜಸ್ಥಾನದ ಉದಯಪುರದಲ್ಲಿ ನಿನ್ನೆ ನಡೆದ ವಿವಾಹ ಮಹೋತ್ಸವದ ನಂತರ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಇದೇ ಮೊದಲ ಬಾರಿಗೆ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದಾರೆ. ನವವಿವಾಹಿತ ದಂಪತಿ ಉದಯಪುರದ ವಿಮಾನ ನಿಲ್ದಾಣದಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದು, ಪರಸ್ಪರ ಕೈಹಿಡಿದು ನಡೆದಿದ್ದಾರೆ. ಈ ಜೋಡಿಯ ಫೋಟೋಗಳು, ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.
ರಶ್ಮಿಕಾ ಕೆಂಪು ಚೂಡಿದಾರ್ ಧರಿಸಿದ್ದರೆ, ವಿಜಯ್ ದೇವರಕೊಂಡ ತಿಳಿ ನೀಲಿ ಕುರ್ತಾ-ಪೈಜಾಮಾದಲ್ಲಿದ್ದರು. ಒಟ್ಟಿಗೆ ಕೈಹಿಡಿದು ನಡೆದ ದಂಪತಿ ಫೋಟೋಗಳಿಗೆ ಪೋಸ್ ನೀಡಿದ್ದಾರೆ. ವಿಮಾನ ನಿಲ್ದಾಣದ ಒಳಗೆ ಹೋಗುವ ಮೊದಲು ಛಾಯಾಗ್ರಾಹಕರು ಮತ್ತು ಅಭಿಮಾನಿಗಳಿಗೆ ಕೈ ಬೀಸಿದ್ದು, ಪ್ಲೇಯಿಂಗ್ ಕಿಸ್ ಮಾಡುವುದು ವಿಡಿಯೋದಲ್ಲಿದೆ.
ಉದಯಪುರದ ಐಟಿಸಿ ಮೆಮೆಂಟೋಸ್ ಹೋಟೆಲ್ ನಲ್ಲಿ ನಡೆದ ವಿವಾಹ ಮಹೋತ್ಸವದಲ್ಲಿ ಆಪ್ತ ಸ್ನೇಹಿತರು ಮತ್ತು ಕುಟುಂಬದವರಷ್ಟೇ ಭಾಗವಹಿಸಿದ್ದರು. ಮೊದಲು ತೆಲುಗಿನ ಆಂಧ್ರ ಸಂಪ್ರದಾಯದಂತೆ, ತದನಂತರ ಕೊಡವ ಪದ್ದತಿಯಂತೆ ವಿವಾಹ ಮಹೋತ್ಸವ ನೆರವೇರಿದೆ.

ಚಿತ್ರನಿರ್ಮಾಪಕ ಸಂದೀಪ್ ರೆಡ್ಡಿ ವಂಗಾ ಮತ್ತು ನಟಿ ಕಲ್ಯಾಣಿ ಪ್ರಿಯದರ್ಶನ್, ಆಶಿಕಾ ರಂಗನಾಥ್ ಮತ್ತಿತರರು ಮದುವೆ ಸಮಾರಂಭದಲ್ಲಿ ಪಾಲ್ಗೊಂಡಿದ್ದರು. ಮಾರ್ಚ್ 4 ರಂದು ಚಿತ್ರೋದ್ಯಮದ ಸಹೋದ್ಯೋಗಿಗಳಿಗಾಗಿ ಆರತಕ್ಷತೆ ಸಮಾರಂಭ ಆಯೋಜಿಸಿದ್ದಾರೆ ಎಂದು ವರದಿಯಾಗಿದೆ.
