ಬೆಂಗಳೂರು: ವಿಧಾನ ಮಂಡಲ ಬಜೆಟ್ ಅಧಿವೇಶನ ನಡೆಯುತ್ತಿದೆ. ರಾಜ್ಯದ ಜನರ ಸಮಸ್ಯೆಗಳ ಬಗ್ಗೆ ಚರ್ಚಿಸಬೇಕಾದ ಜನಪ್ರತಿನಿಧಿಗಳೇ ಕಲಾಪಕ್ಕೆ ಗೈರಾಗುತ್ತಾರೆ, ಸರಿಯಾಗಿ ಸದನಕ್ಕೆ ಹಾಜರಾಗುವುದಿಲ್ಲ ಎಂಬ ಆರೋಪ ಹಿಂದಿನಿಂದಲೂ ಇದೆ.
ಕಾಲೇಜುಗಳಲ್ಲಿ ವಿದ್ಯಾರ್ಥಿಗಳು ಚಕ್ಕರ್ ಹಾಕುವಂತೆ ಶಾಸಕರು ಕೂಡ ಸದನಕ್ಕೆ ಗೈರಾಗುತ್ತಾರೆ. ಈ ಬಗ್ಗೆ ಇಂದು ವಿಧಾನಸಭೆಯಲ್ಲಿ ಬೆಂಗಳೂರಿನ ರಾಜಾಜಿನಗರ ಕ್ಷೇತ್ರದ ಶಾಸಕ ಎಸ್ ಸುರೇಶ್ ಕುಮಾರ್ ಸಭಾಧ್ಯಕ್ಷ ಯು ಟಿ ಖಾದರ್ ಅವರ ಗಮನ ಸೆಳೆದು ಕೋಪ ವ್ಯಕ್ತಪಡಿಸಿದ ಪ್ರಸಂಗ ನಡೆಯಿತು.
ಇಂದು ಬೆಳಗ್ಗೆ ಕಲಾಪ ಆರಂಭವಾಗುತ್ತಿದ್ದಂತೆ ಎದ್ದುನಿಂತು ಮಾತನಾಡಿದ ಶಾಸಕ ಸುರೇಶ್ ಕುಮಾರ್, ಸಭಾಧ್ಯಕ್ಷರೇ ನಿಮ್ಮ ಕಚೇರಿಯಿಂದ 9.15ಕ್ಕೆ ಸದನದಲ್ಲಿ ಹಾಜರಿರಬೇಕೆಂದು ನಮಗೆ ಸೂಚನೆ ಬರುತ್ತದೆ, ಅದರಂತೆ ನಾವು ಬರುತ್ತೇವೆ, ಸದನ ಫುಲ್ ಖಾಲಿ…ಖಾಲಿ, ನೀವು 10.20ಕ್ಕೆ ಕಲಾಪ ಆರಂಭಿಸಿದ್ದೀರಿ, ಏನಿದು, ನೀವು ಮನೆಯಿಂದ ಹೊರಡುವಾಗ ನನಗೆ ಫೋನ್ ಮಾಡಿ, ನಾವು ಕೂಡಲೇ ಇಲ್ಲಿಗೆ ಬರುತ್ತೇವೆ ಎಂದು ಗರಂ ಆಗಿಯೇ ಹೇಳಿದರು.
ಅದಕ್ಕೆ ಉತ್ತರಿಸಿದ ಸಭಾಧ್ಯಕ್ಷ ಯು ಟಿ ಖಾದರ್, ನಾನು ಸರಿಯಾದ ಸಮಯಕ್ಕೆ ಇರುತ್ತೇನೆ, ಮೊದಲೆಲ್ಲಾ 12 ಗಂಟೆಗೆ ಕಲಾಪ ಆರಂಭವಾಗುತ್ತಿತ್ತು. 11 ಗಂಟೆಗೆ ಹೇಳಿದರೆ 11.15ಕ್ಕೆ ಬೆಲ್ ಆಗುತ್ತಿತ್ತು, ಬೆಲ್ ಆಯಿತಾ ಎಂದು ಎಲ್ಲರೂ ಕಾಯುತ್ತಿದ್ದರು, ಬೆಲ್ ಆದ ಮೇಲೆ ಶಾಸಕರ ಭವನದಿಂದ ಎಲ್ಲರೂ ಬಂದು 11.30ಗೆ ಸೇರುತ್ತಿದ್ದರು. ಅದಕ್ಕೆ ನಾನು ಬೇಗನೆ ಬರಲು ಹೇಳಿರುತ್ತೇನೆ. ನಿಮ್ಮನ್ನು ನಾನು ಅಭಿನಂದಿಸುತ್ತೇನೆ. ನೀವು ನಾಲ್ಕೈದು ಮಂದಿ ಬಹಳ ಬೇಗ ಬರುತ್ತೀರಿ, ಶಾಸಕರೆಲ್ಲರೂ ಹಿರಿಯರಾಗಿದ್ದಾರೆ, ಅವರೆಲ್ಲರೂ ಮಾದರಿಯಾಗಿರಬೇಕು ಎಂದರು.
ಕಮಿಟಿಯಲ್ಲಿ ಕೋರಂನ್ನು ಕಡಿಮೆ ಮಾಡಿದ್ದೀರಿ, ಇಲ್ಲಿ ಕೂಡ ಅದೇ ರೀತಿ ಮಾಡಿ ಎಂದು ಸುರೇಶ್ ಕುಮಾರ್ ಹೇಳಿ ಸುಮ್ಮನಾದರು, ಕೊನೆಗೆ ಕಲಾಪ ಮುಂದುವರಿಯಿತು.
