ಸೋನಿಪತ್: ಸರ್ವಾಧಿಕಾರಿ ಅಡಾಲ್ಫ್ ಹಿಟ್ಲರ್ ಜೊತೆಗೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಹೋಲಿಕೆ ಮಾಡಿದ ಆರೋಪದ ಮೇರೆಗೆ ಹರಿಯಾಣದ ಸೋನಿಪತ್ನ ಒಪಿ ಜಿಂದಾಲ್ ಗ್ಲೋಬಲ್ ಯೂನಿವರ್ಸಿಟಿಯ ಸಹ ಪ್ರಾಧ್ಯಾಪಕರೊಬ್ಬರನ್ನು ಒಂದು ಸೆಮಿಸ್ಟರ್ ಅವಧಿಗೆ ಅಮಾನತುಗೊಳಿಸಲಾಗಿದೆ.
ತನ್ನ ಮಗ ನಿರಂತರ ಕಿರುಕುಳ, ಅವಮಾನ ಮತ್ತು ತಾರತಮ್ಯ ವರ್ತನೆಗೆ ಒಳಗಾಗಿದ್ದಾನೆ. ಇದರಿಂದ ಆತನ ಮಾನಸಿಕ ಹಾಗೂ ಶೈಕ್ಷಣಿಕ ಕಾರ್ಯಕ್ಷಮತೆಯ ಮೇಲೆ ಪರಿಣಾಮ ಬೀರಿದೆ ಎಂದು ಆರೋಪಿಸಿ ವಿದ್ಯಾರ್ಥಿಯೊಬ್ಬನ ತಂದೆ ಹರಿಯಾಣ ಮಾನವ ಹಕ್ಕುಗಳ ಆಯೋಗಕ್ಕೆ ತೆರಳಿದ ನಂತರ ಅಧ್ಯಾಪಕನನ್ನು ಅಮಾನತುಗೊಳಿಸಲಾಗಿದೆ.
ಏನಿದು ಆರೋಪ: ಕಳೆದ ವರ್ಷ ಅಕ್ಟೋಬರ್ 31 ರಂದು ನನ್ನ ಮಗ ‘ಉರಿ ಸರ್ಜಿಕಲ್ ಸ್ಟ್ರೈಕ್’ ಕುರಿತು ಪ್ರಬಂಧ ಬರೆದಿದ್ದ. ಇದು ವಿಶ್ವವಿದ್ಯಾಲಯದ ಅಧ್ಯಾಪಕರಿಗೆ ಇಷ್ಟವಾಗಿರಲಿಲ್ಲ. ಹೀಗಾಗಿ ನವೆಂಬರ್ 3 ರಂದು ತರಗತಿ ವೇಳೆಯಲ್ಲಿ ನನ್ನ ಮಗನಿಗೆ ಕಿರುಕುಳ ನೀಡಲಾಗಿದೆ.
ನವೆಂಬರ್ 7 ರಂದು ಸಹಾಯಕ ಪ್ರಾಧ್ಯಾಪಕರೊಬ್ಬರು ತರಗತಿಯಲ್ಲಿ ರಾಜಕೀಯ ಅವಹೇಳನಕಾರಿ ಹೇಳಿಕೆ ನೀಡಿದ್ದು, ಪ್ರಧಾನಿ ನರೇಂದ್ರ ಮೋದಿ ಅವರನ್ನು ಹಿಟ್ಲರ್ ಅವರೊಂದಿಗೆ ಹೋಲಿಸಿದ್ದಾರೆ. ಅಲ್ಲದೇ ಸರ್ಜಿಕಲ್ ಸ್ಟ್ರೈಕ್ ನ್ನು ರಾಜಕೀಯ ಗಿಮ್ಮಿಕ್ ಎಂದು ಲೇವಡಿ ಮಾಡಿದ್ದಾರೆ ಎಂದು ವಿದ್ಯಾರ್ಥಿ ವಿಖ್ಯಾತ್ ಬಜಾಜ್ ಅವರ ತಂದೆ ವಿಶ್ವ್ ಬಜಾಜ್ ದೂರಿನಲ್ಲಿ ಆರೋಪಿಸಿದ್ದಾರೆ.
ಇದು ತನ್ನ ಮಗನ ಬಗ್ಗೆ ಕೆಲವು ಪ್ರಾಧ್ಯಾಪಕರಲ್ಲಿ ಅಸಮಾಧಾನವನ್ನು ಉಂಟುಮಾಡಿದ್ದು, ಆತ ಮಾನಸಿಕ ಮತ್ತು ದೈಹಿಕ ತೊಂದರೆಯಿಂದ ಬಳಲುತ್ತಿದ್ದಾನೆ. ನಿರಂತರ ಭಯದಿಂದ ಬದುಕುತ್ತಿದ್ದಾನೆ ಎಂದು ಅವರು ಹೇಳಿದ್ದರು. ಈ ಮಧ್ಯೆ ಮಾತನಾಡಿರುವ ವಿಶ್ವವಿದ್ಯಾನಿಲಯದ ಮುಖ್ಯ ಸಂವಹನ ಅಧಿಕಾರಿ ಅಂಜು ಮೋಹನ್ ಕಾನೂನು ಪ್ರಕಾರ, ಈ ವಿಷಯವನ್ನು HHRC ವಿಚಾರಣೆ ನಡೆಸುತ್ತಿದ್ದು, ಸಂಪೂರ್ಣವಾಗಿ ಸಹಕಾರ ನೀಡುತ್ತಿದ್ದೇವೆ ಎಂದು ತಿಳಿಸಿದ್ದಾರೆ.
ಜನವರಿ 16 ರಂದು, HHRC ಸೋನಿಪತ್ ಪೊಲೀಸ್ ಕಮಿಷನರ್ ಮತ್ತು ವಿಶ್ವವಿದ್ಯಾನಿಲಯದ ರಿಜಿಸ್ಟ್ರಾರ್ ಅವರಿಂದ ವರದಿಗಳನ್ನು ಕೇಳಿದೆ. ಈ ವಿಚಾರದಲ್ಲಿ ಮೇ 13ರಂದು ಖುದ್ದು ಹಾಜರಾಗುವಂತೆ ಅಥವಾ ಬೇರೆ ಹಿರಿಯ ಅಧಿಕಾರಿಯನ್ನು ನಿಯೋಜಿಸುವಂತೆ ಎಚ್ಎಚ್ಆರ್ಸಿ ರಿಜಿಸ್ಟ್ರಾರ್ಗೆ ಸೂಚಿಸಿದೆ.
