ಕೈಗಾರಿಕೋದ್ಯಮಿಯೊಬ್ಬರ ಆತ್ಮಹತ್ಯೆ ಪ್ರಕರಣ ರಾಜಕೀಯ ತಿರುವು ಪಡೆದುಕೊಂಡಿದ್ದು, ಕಾಂಗ್ರೆಸ್ ನಿಯೋಗ ಮಂಗಳವಾರ ಮೃತರ ಮನೆಗೆ ಭೇಟಿ ನೀಡಿ ಘಟನೆಯನ್ನು ಕೊಲೆ ಎಂದು ಬಣ್ಣಿಸಿದೆ. ರಾಜ್ಯದ ಆಡಳಿತಾರೂಢ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದೆ. ಬೆಂಗಳೂರು: ಕೈಗಾರಿಕೋದ್ಯಮಿಯೊಬ್ಬರ ಆತ್ಮಹತ್ಯೆ ಪ್ರಕರಣ ರಾಜಕೀಯ ತಿರುವು ಪಡೆದುಕೊಂಡಿದ್ದು, ಕಾಂಗ್ರೆಸ್ ನಿಯೋಗ ಮಂಗಳವಾರ ಮೃತರ ಮನೆಗೆ ಭೇಟಿ ನೀಡಿ ಘಟನೆಯನ್ನು ಕೊಲೆ ಎಂದು ಬಣ್ಣಿಸಿದೆ. ರಾಜ್ಯದ ಆಡಳಿತಾರೂಢ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದೆ.
ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ ನಿಯೋಗದಲ್ಲಿದ್ದರು.
ಭೇಟಿಯ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಸುರ್ಜೇವಾಲಾ, ‘ಮೃತ ಪ್ರದೀಪ್ ಅವರ ಕುಟುಂಬ ದುಃಖದಲ್ಲಿದೆ. ಅವರ ಕುಟುಂಬದ ದುಃಖವನ್ನು ಹಂಚಿಕೊಳ್ಳಲು ನಾವು ಇಲ್ಲಿಗೆ ಬಂದಿದ್ದೇವೆ. ಅವರು ಆತುರದ ನಿರ್ಧಾರ ಕೈಗೊಂಡಿದ್ದಾರೆ. ಆಡಳಿತಾರೂಢ ಬಿಜೆಪಿಯ 40 ಪರ್ಸೆಂಟ್ ಕಮಿಷನ್ ಪದ್ಧತಿ ರಾಜ್ಯದಲ್ಲಿ ಜೀವ ತೆಗೆಯುತ್ತಿದೆ’ ಎಂದು ಹೇಳಿದರು.
ಇದನ್ನೂ ಓದಿ: ಪ್ರದೀಪ್ ಆತ್ಮಹತ್ಯೆ ಪ್ರಕರಣ: ಮಾಜಿ ಸಚಿವ ಅರವಿಂದ ಲಿಂಬಾವಳಿ ಸೇರಿ 6 ಮಂದಿ ವಿರುದ್ಧ ಎಫ್ಐಆರ್ ದಾಖಲು
‘ರಾಜ್ಯದಲ್ಲಿ ತಮ್ಮ ಬದುಕನ್ನು ಮುಗಿಸಿಕೊಂಡ ಸಂತೋಷ್ ಪಾಟೀಲ್, ಪ್ರದೀಪ್, ಪ್ರಸಾದ್ ಅವರ ಸಾವಿಗೆ ಭ್ರಷ್ಟಾಚಾರವೇ ನೇರ ಹೊಣೆ. ಇದು ಆತ್ಮಹತ್ಯೆ ಪ್ರಕರಣವಲ್ಲ. ಇದು ಕೊಲೆ. ಸಂತೋಷ್ ಪಾಟೀಲ್ ಬಿಜೆಪಿ ನಾಯಕರಾಗಿದ್ದರು. ಅವರು ಆರ್ಥಿಕ ಆಘಾತವನ್ನು ಎದುರಿಸಿದರು. ಪ್ರಸಾದ್ ಜೀವನ ಅಂತ್ಯಗೊಳಿಸಲು ಕಾರಣ ಹಣಕಾಸಿನ ವಿಚಾರದಲ್ಲಿ ತೊಂದರೆ. ಬಿಜೆಪಿ ನಾಯಕರು ಹಣಕಾಸಿನ ವಿಚಾರದಲ್ಲಿ ಏಕೆ ಹಸ್ತಕ್ಷೇಪ ಮಾಡುತ್ತಿದ್ದಾರೆ?’ ಎಂದು ಸುರ್ಜೇವಾಲಾ ಪ್ರಶ್ನಿಸಿದ್ದಾರೆ.
ಪ್ರದೀಪ್ ಅವರ ಕುಟುಂಬಕ್ಕೆ ಆದ ನಷ್ಟವನ್ನು ಆಡಳಿತಾರೂಢ ಬಿಜೆಪಿಯಿಂದ ತುಂಬಲು ಸಾಧ್ಯವೇ? ಅವರ ಸಾವಿಗೆ ಕಾರಣರಾದವರನ್ನು ಸರ್ಕಾರ ಶಿಕ್ಷಿಸಬೇಕು. ಅವರ ಸ್ಥಾನಮಾನವನ್ನು ಲೆಕ್ಕಿಸದೆ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದರು.
ಇದನ್ನೂ ಓದಿ: ಉದ್ಯಮಿ ಆತ್ಮಹತ್ಯೆ: ಅರವಿಂದ ಲಿಂಬಾವಳಿ ವಿರುದ್ಧ ಪ್ರಕರಣ, ಕಾನೂನು ಪ್ರಕಾರ ಕ್ರಮ- ಸಿಎಂ ಬೊಮ್ಮಾಯಿ
ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮಾತನಾಡಿ, ಈ ಘಟನೆ ನಡೆಯಬಾರದಿತ್ತು, ಸಂತ್ರಸ್ತರ ಆತ್ಮಹತ್ಯೆ ಪತ್ರದಲ್ಲಿ ಉಲ್ಲೇಖಿಸಿರುವ ಐವರನ್ನು ಕೂಡಲೇ ಬಂಧಿಸಬೇಕು. ಶಾಸಕರನ್ನು ಬಂಧಿಸಬೇಕು ಇಲ್ಲವಾದಲ್ಲಿ ಸಾಕ್ಷ್ಯ ನಾಶಪಡಿಸುತ್ತಾರೆ. ಸಂತೋಷ ಪಾಟೀಲ್ ಆತ್ಮಹತ್ಯೆ ಪ್ರಕರಣದಲ್ಲಿ ಮೂರು ತಿಂಗಳಲ್ಲಿ ಕ್ಲೀನ್ ಚಿಟ್ ನೀಡಲಾಗಿದೆ. ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿದ್ದಾಗ ಜನರು ದಯಾ ಹತ್ಯೆಗಾಗಿ ಕೇಳುತ್ತಿದ್ದಾರೆ ಎಂದರು.
ಮೃತರು ಮಹದೇವಪುರ ಕ್ಷೇತ್ರದ ಬಿಜೆಪಿ ಶಾಸಕ ಹಾಗೂ ಮಾಜಿ ಸಚಿವ ಅರವಿಂದ ಲಿಂಬಾವಳಿ, ಜಿ. ರಮೇಶ್ ರೆಡ್ಡಿ, ಕೆ. ಗೋಪಿ, ಡಾ. ಜಯರಾಮರೆಡ್ಡಿ, ರಾಘವ ಭಟ್, ಸೋಮಯ್ಯ ಅವರ ಹೆಸರನ್ನು ಉಲ್ಲೇಖಿಸಿದ್ದಾರೆ.
ಇದನ್ನೂ ಓದಿ: ಬೆಂಗಳೂರು: ಮಾಜಿ ಸಚಿವ ಅರವಿಂದ ಲಿಂಬಾವಳಿ ಹೆಸರು ಬರೆದಿಟ್ಟು ವ್ಯಕ್ತಿ ಆತ್ಮಹತ್ಯೆ
ಬೆಂಗಳೂರಿನ ಎಚ್ಎಸ್ಆರ್ ಲೇಔಟ್ ಬಳಿಯ ಅಮಲಿಪುರ ನಿವಾಸಿ 47 ವರ್ಷದ ಪ್ರದೀಪ್ ಭಾನುವಾರ ತಲೆಗೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಸಂಬಂಧ ಕಗ್ಗಲಿಪುರ ಪೊಲೀಸರು ಐವರ ವಿರುದ್ಧ ಎಫ್ಐಆರ್ ದಾಖಲಿಸಿಕೊಂಡಿದ್ದಾರೆ.
ಮೃತರ ಕರೆ ವಿವರಗಳನ್ನು ಪೊಲೀಸರು ಪಡೆದುಕೊಳ್ಳುತ್ತಿದ್ದು, ತನಿಖೆ ನಡೆಸುತ್ತಿದ್ದಾರೆ.