ರಾಜ್ಯ ವನ್ಯಜೀವಿ ಪಿಸಿಸಿಎಫ್ ಮತ್ತು ಮುಖ್ಯ ವನ್ಯಜೀವಿ ವಾರ್ಡನ್ ಆದೇಶದ ಮೇರೆಗೆ ದುಬಾರೆ ಆನೆ ಶಿಬಿರದಲ್ಲಿರುವ ಐದು ಪಳಗಿದ ಆನೆಗಳನ್ನು ಮಧ್ಯ ಪ್ರದೇಶದ ಭೋಪಾಲ್ನಲ್ಲಿರುವ ಶಿಬಿರಕ್ಕೆ ಸ್ಥಳಾಂತರಿಸಲಾಗುತ್ತಿದೆ. ಮಡಿಕೇರಿ: ರಾಜ್ಯ ವನ್ಯಜೀವಿ ಪಿಸಿಸಿಎಫ್ ಮತ್ತು ಮುಖ್ಯ ವನ್ಯಜೀವಿ ವಾರ್ಡನ್ ಆದೇಶದ ಮೇರೆಗೆ ದುಬಾರೆ ಆನೆ ಶಿಬಿರದಲ್ಲಿರುವ ಐದು ಪಳಗಿದ ಆನೆಗಳನ್ನು ಮಧ್ಯ ಪ್ರದೇಶದ ಭೋಪಾಲ್ನಲ್ಲಿರುವ ಶಿಬಿರಕ್ಕೆ ಸ್ಥಳಾಂತರಿಸಲಾಗುತ್ತಿದೆ. ಶಿಬಿರದ ಮಾವುತರೊಂದಿಗೆ ಈ ಆನೆಗಳು ಭೋಪಾಲ್ ಗೆ ತೆರಳುತ್ತಿದ್ದು, ಗುರುವಾರ ಸಂಜೆಯೇ ತಮ್ಮ ಪ್ರಯಾಣ ಆರಂಭಿಸಿವೆ.
ದುಬಾರೆ ಆನೆ ಶಿಬಿರದ ಐವರು ಆನೆಗಳಾದ ಜನರಲ್ ಕಾರಿಯಪ್ಪ, ಜನರಲ್ ತಿಮ್ಮಯ್ಯ , ವಾಲಿ(40), ಲವ (21) ಮತ್ತು ಮಾರುತಿ(20) ಗುರುವಾರ ಶಿಬಿರದಿಂದ ತಮ್ಮ ಪ್ರಯಾಣವನ್ನು ಆರಂಭಿಸಿವೆ. ಆನೆಗಳ ಜೊತೆಯಲ್ಲಿ ಮಾವುತರೂ ಇದ್ದು, ಅವರು ಆನೆಗಳೊಂದಿಗೆ ಕೆಲವು ದಿನಗಳ ಕಾಲ ಭೋಪಾಲ್ ನಲ್ಲಿ ಉಳಿಯುವ ಸಾಧ್ಯತೆಯಿದೆ. ಅವರು ಹೊಸ ಪರಿಸರ ಮತ್ತು ಜನರಿಗೆ ಹೊಂದಿಕೊಳ್ಳಲು ಸಹಾಯ ಮಾಡುತ್ತಾರೆ.
ಇದನ್ನು ಓದಿ: ಕೊಡಗು: ದಸರಾ ಆನೆ ಬಲರಾಮನಿಗೆ ಗುಂಡೇಟು, ಜಮೀನು ಮಾಲೀಕನ ಬಂಧನ
ದುಬಾರೆ ಶಿಬಿರದಿಂದ ಎಂಟು ಮಾವುತರು ಮತ್ತು ಉಸ್ತುವಾರಿಗಳು ಆನೆಗಳೊಂದಿಗೆ ಮಧ್ಯೆ ಪ್ರದೇಶಕ್ಕೆ ತೆರಳಿದರು. ಕೊಡಗು ವಿಭಾಗದ ಅರಣ್ಯ ಇಲಾಖೆಯ ಅಧಿಕಾರಿಗಳು ಮತ್ತು ಭೋಪಾಲ್, ಮಧ್ಯ ಪ್ರದೇಶ ವಿಭಾಗದ ಅರಣ್ಯ ಇಲಾಖೆಯ ಸಿಬ್ಬಂದಿ ಸಮ್ಮುಖದಲ್ಲಿ ಇಂದು ಸಂಜೆ ಆನೆಗಳನ್ನು ವರ್ಗಾವಣೆ ಮಾಡಲಾಗಿದೆ.
ನ್ಯಾಯಾಲಯದ ಆದೇಶದ ಪ್ರಕಾರ, ಆನೆ ಶಿಬಿರದಲ್ಲಿ ಗರಿಷ್ಠ 15 ಆನೆಗಳು ಇರುತ್ತವೆ. ಆದಾಗ್ಯೂ, ಇತ್ತೀಚೆಗೆ ಜಿಲ್ಲೆಯಲ್ಲಿ ಹೊಸದಾಗಿ ತೆರೆಯಲಾದ ಹಾರಂಗಿ ಆನೆ ಶಿಬಿರಕ್ಕೆ ಕೆಲವು ಆನೆಗಳನ್ನು ಸ್ಥಳಾಂತರಿಸಲಾಗಿದ್ದು, ದುಬಾರೆ ಆನೆ ಶಿಬಿರದಲ್ಲಿ 32 ಆನೆಗಳಿವೆ. ಇದಲ್ಲದೆ, ಹೆಚ್ಚುತ್ತಿರುವ ಕಾಡಾನೆಗಳ ಹಾವಳಿಯನ್ನು ತಡೆಯಲು ಈ ಸಾಕಾನೆಗಳನ್ನು ಬಳಸಿಕೊಳ್ಳಲಾಗುತ್ತದೆ.
ಏತನ್ಮಧ್ಯೆ, ಹೆಚ್ಚುತ್ತಿರುವ ಹುಲಿ ದಾಳಿ ಮತ್ತು ವನ್ಯಜೀವಿ ಸಂಘರ್ಷದ ವಿರುದ್ಧ ಹೋರಾಡಲು ಮಧ್ಯ ಪ್ರದೇಶ ಅರಣ್ಯ ಇಲಾಖೆಗೆ ಪಳಗಿದ ಆನೆಗಳ ಅಗತ್ಯವಿದ್ದು, ಅವರು ನಮ್ಮ ರಾಜ್ಯದಿಂದ ಪಳಗಿದ ಆನೆಗಳಿಗೆ ಮನವಿ ಸಲ್ಲಿಸಿದ್ದಾರೆ. ಅದೇ ರೀತಿ, ರಾಜ್ಯದ 14 ಪಳಗಿದ ಆನೆಗಳನ್ನು ಕರ್ನಾಟಕದಿಂದ ಮಧ್ಯ ಪ್ರದೇಶ ಸ್ಥಳಾಂತರಿಸಲು ಗುರುತಿಸಲಾಗಿದ್ದು, ಈ ಪೈಕಿ ಐದು ಆನೆಗಳನ್ನು ದುಬಾರೆ ಆನೆ ಶಿಬಿರದಿಂದ ಕಳುಹಿಸಲಾಗುತ್ತಿದೆ.