ಬಾಡಿಗೆ ಮನೆಯ ಮಾಲೀಕರ ಮನೆಯಲ್ಲೇ ಕಳ್ಳತನ ಮಾಡಿ, ಶಿವಮೊಗ್ಗಕ್ಕೆ ಪರಾರಿಯಾಗಿದ್ದ ಪ್ರೇಮಿಗಳಿಬ್ಬರನ್ನು ಪೊಲೀಸರು ಬಂಧನಕ್ಕೊಳಪಡಿಸಿದ್ದಾರೆ. ಬೆಂಗಳೂರು: ಬಾಡಿಗೆ ಮನೆಯ ಮಾಲೀಕರ ಮನೆಯಲ್ಲೇ ಕಳ್ಳತನ ಮಾಡಿ, ಶಿವಮೊಗ್ಗಕ್ಕೆ ಪರಾರಿಯಾಗಿದ್ದ ಪ್ರೇಮಿಗಳಿಬ್ಬರನ್ನು ಪೊಲೀಸರು ಬಂಧನಕ್ಕೊಳಪಡಿಸಿದ್ದಾರೆ.
ಬಂಧಿತರನ್ನು ಲಿಖಿತ (20) ಮತ್ತು ಸುಮಂತ್ (27) ಎಂದು ಗುರ್ತಿಸಲಾಗಿದೆ. ‘ಶಿವಮೊಗ್ಗ ಜಿಲ್ಲೆ ಮೂಲದವರಾಗಿದ್ದ ಇಬ್ಬರೂ ನಗರದಲ್ಲಿ ಸಹಜೀವನ ನಡೆಸುತ್ತಿದ್ದರು. ಕೆಲ ದಿನಗಳ ಹಿಂದೆ ತಾವು ವಾಸವಿದ್ದ ಬಾಡಿಗೆ ಮನೆಯ ಮಾಲೀಕರ ಮನೆಯಲ್ಲಿ ಕಳ್ಳತನ ಮಾಡಿ ಪರಾರಿಯಾಗಿದ್ದರು.
ಎಜಿಎಸ್ ಬಡಾವಣೆಯಲ್ಲಿರುವ ಮನೆ ಮಾಲೀಕರು ನೀಡಿದ್ದ ದೂರು ಆಧರಿಸಿ ಆರೋಪಿಗಳನ್ನು ಶಿವಮೊಗ್ಗದಲ್ಲಿ ಬಂಧಿಸಿ ನಗರಕ್ಕೆ ಕರೆತರಲಾಗಿದೆ. ಸದ್ಯ ಇಬ್ಬರೂ ನ್ಯಾಯಾಂಗ ಬಂಧನದಲ್ಲಿದ್ದಾರೆ’ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಸುಮಂತ್ ಹಾಗೂ ಲಿಖಿತಾ, ಪಿಜಿಯೋಥೆರಪಿ ಕೋರ್ಸ್ ಅಧ್ಯಯನಕ್ಕಾಗಿ ಎರಡು ವರ್ಷಗಳ ಹಿಂದೆಯಷ್ಟೇ ನಗರಕ್ಕೆ ಬಂದಿದ್ದರು. ವ್ಯಾಸಂಗದ ಸ್ಥಳದಲ್ಲಿ ಇಬ್ಬರಿಗೂ ಪರಿಚಯವಾಗಿ ಸಲುಗೆ ಬೆಳೆದಿತ್ತು. ನಂತರ, ಅವರಿಬ್ಬರು ಒಂದೇ ಮನೆಯಲ್ಲಿ ಸಹಜೀವನ ನಡೆಸುತ್ತಿದ್ದರು.
‘ಇಬ್ಬರೂ ಬೆಲೆಬಾಳುವ ವಸ್ತುಗಳನ್ನು ಹೆಚ್ಚು ಖರೀದಿಸುತ್ತಿದ್ದರು. ಐಷಾರಾಮಿ ಜೀವನ ನಡೆಸುತ್ತಿದ್ದರು. ಇದಕ್ಕಾಗಿ ಹಲವರ ಬಳಿ ಸಾಲ ಮಾಡಿಕೊಂಡಿದ್ದರು. ಕೋರ್ಸ್ ಅಧ್ಯಯನ ಅವಧಿ ಮುಗಿಯುತ್ತಿದ್ದಂತೆ ಮನೆ ಖಾಲಿ ಮಾಡಿದ್ದ ಇಬ್ಬರೂ ಕೆಲ ತಿಂಗಳು ತಮ್ಮೂರಿಗೆ ಹೋಗಿದ್ದರು. ಸಾಲ ಕೊಟ್ಟವರು, ಮರುಪಾವತಿಗಾಗಿ ಒತ್ತಾಯಿಸಲಾರಂಭಿಸಿದ್ದರು.
ಹೀಗಾಗಿ ಸಾಲ ಮರುಪಾವತಿ ಮಾಡಲು ಸಂಚು ರೂಪಿಸಿದ್ದರು. ಇದರಂತೆ ತಾವು ವಾಸವಿದ್ದ ಮನೆ ಮಾಲೀಕರ ಚಿನ್ನಭಾರಣವನ್ನು ಕಳ್ಳತನ ಮಾಡಲು ನಿರ್ಧರಿಸಿದ್ದರು.
ಇದರಂತೆ ಮಾಲೀಕರ ಚಲನವಲನಗಳ ಮೇಲೆ ನಿಗಾವಹಿಸಿದ್ದ ಇಬ್ಬರೂ, ಮನೆಯಲ್ಲಿ ಯಾರೂ ಇಲ್ಲದನ್ನು ಗಮನಿಸಿ ರೂ.4 ಲಕ್ಷ ಮೌಲ್ಯದ ಚಿನ್ನಾಭರಣವನ್ನು ದೋಚಿಸಿದ್ದರು. ನಂತರ ಮನೆಯನ್ನು ಖಾಲಿ ಮಾಡಿ ಪರಾರಿಯಾಗಿದ್ದರು. ನಂತರ ಶಿವಮೊಗ್ಗಕ್ಕೆ ಪರಾರಿಯಾದ ಇಬ್ಬರೂ ಕದ್ದ ಚಿನ್ನಾಭರಣ ಮಾರಿ ಸಾಲ ತೀರಿಸಿದ್ದರು.
ಇತ್ತ ಮನೆ ಮಾಲೀಕರು ನೀಡಿದ್ದ ದೂರು ಅಧರಿಸಿ ತನಿಖೆ ಆರಂಭಿಸಿದ್ದ ಪೊಲೀಸರು ಆರೋಪಿಗಳ ಕುರಿತು ಮಾಹಿತಿ ಸಂಗ್ರಹಿಸಿದ್ದರು. ಇದರಂತೆ ಶಿವಮೊಗ್ಗದಲ್ಲಿ ಇಬ್ಬರನ್ನೂ ಬಂಧಿಸಿ, ನಗರಕ್ಕೆ ಕರೆತಂದಿದ್ದಾರೆ.