ಉನ್ನಾವೋ: ಭೂವಿವಾದ ಪ್ರಕರಣವೊಂದರಲ್ಲಿ ಪೊಲೀಸರು ನ್ಯಾಯವೊದಗಿಸಿಲ್ಲ ಎಂದು ಆರೋಪಿಸಿ ದಲಿತ ವ್ಯಕ್ತಿಯೊಬ್ಬ ಇಲ್ಲಿನ ಪೊಲೀಸ್ ವರಿಷ್ಠಾಧಿಕಾರಿಯ ಕಚೇರಿಯೆದುರು ಸೀಮೆಎಣ್ಣೆ ಸುರಿದು ಆತ್ಮಹತ್ಯೆಗೆ ಯತ್ನಿಸಿದ ಘಟನೆ ವರದಿಯಾಗಿದೆ.
ಪೂರ್ವ ಕೋತ್ವಾಲಿ ಪ್ರದೇಶದ ಭುಲೆಮಾವೊ ಗ್ರಾಮದ ಶ್ರೀಚಂದ್ರ ಎಂಬಾತನಿಗೆ ಈ ಘಟನೆಯಲ್ಲಿ ಶೇ 60ರಷ್ಟು ಸುಟ್ಟ ಗಾಯಗಳಾಗಿವೆ. ಸ್ಥಳದಲ್ಲಿದ್ದ ಪೊಲೀಸರು ತಕ್ಷಣ ಆತನಿಗೆ ಬ್ಲಾಂಕೆಟ್ ಹೊದೆಸಿ ಬೆಂಕಿ ನಂದಿಸಿ ಜಿಲ್ಲಾಸ್ಪತ್ರೆಗೆ ಆತನನ್ನು ದಾಖಲಿಸಿದ್ದಾರೆ. ಆತನನ್ನು ಹೆಚ್ಚಿನ ಚಿಕಿತ್ಸೆಗಾಗಿ ಲಕ್ನೋದ ಆಸ್ಪತ್ರೆಗೆ ದಾಖಲಿಸಲಾಗುವುದು ಎಂದು ತಿಳಿದು ಬಂದಿದೆ.
ಗ್ರಾಮದಲ್ಲಿರುವ ಕುಟುಂಬದ ಜಮೀನನ್ನು ಕೆಲವರು ಒತ್ತುವರಿ ಮಾಡಿದ್ದರು. ಇದನ್ನು ವಿರೋಧಿಸಿದಾಗ ಅವರು ಕುಟುಂಬ ಸದಸ್ಯರ ಮೇಲೆ ದಾಳಿ ನಡೆಸಿದ್ದರು. ಈ ಕಾರಣ ಪೊಲೀಸ್ ದೂರು ದಾಖಲಿಸಲಾಗಿತ್ತು. ದಾಳಿಕೋರರ ವಿರುದ್ಧ ಪೊಲೀಸರು ಕ್ರಮಕೈಗೊಳ್ಳುವ ಬದಲು ದೂರುದಾರನ ವಿರುದ್ಧ ನಕಲಿ ಪ್ರಕರಣ ದಾಖಲಿಸಿದ್ದರೆಂದು ಸಂತ್ರಸ್ತನ ಸಹೋದರ ಆರೋಪಿಸಿದ್ದಾರೆ.
ಕುಟುಂಬ ಸದಸ್ಯರು ಹಿರಿಯ ಪೊಲೀಸ್ ಅಧಿಕಾರಿಗಳನ್ನು ಭೇಟಿಯಾಗಿ ನ್ಯಾಯಕ್ಕಾಗಿ ಅಂಗಲಾಚಿದ್ದರೂ ಪ್ರಯೋಜನವಾಗಿಲ್ಲ ಎಂದು ಕುಟುಂಬ ದೂರಿದೆ.
ಈ ಘಟನೆಗೆ ಕಾರಣವೇನೆಂದು ಕೂಲಂಕಷವಾಗಿ ತನಿಖೆ ನಡೆಸಲಾಗುವುದು ಎಂದು ಸ್ಥಳಕ್ಕೆ ಭೇಟಿ ನೀಡಿದ ಐಜಿಪಿ ತರುಣ್ ಗೌಬ ಹೇಳಿದ್ದಾರೆ.