ಮುಂಬೈ: ಅಸ್ಸಾಂ ನಗರವಾದ ಗುವಾಹಟಿಯಲ್ಲಿನ ದಟ್ಟ ಮಂಜಿನ ಪರಿನಾಮ ಮುಂಬೈನಿಂದ ಗುವಾಹಟಿಗೆ ತೆರಳಬೇಕಿದ್ದ ಇಂಡಿಗೊ ವಿಮಾನದ ಮಾರ್ಗವನ್ನು ಢಾಕಾಗೆ ಬದಲಿಸಲಾಯಿತು ಎಂದು ಶನಿವಾರ ವಿಮಾನ ಯಾನ ಸಂಸ್ಥೆಯು ತಿಳಿಸಿದೆ. ಶುಕ್ರವಾರ ತಡ ರಾತ್ರಿ ಈ ಘಟನೆ ನಡೆದಿದೆ ಎಂದು ಅದು ಹೇಳಿದೆ.
ಪ್ರತಿಕೂಲ ಹವಾಮಾನದಿಂದಾಗಿ ವಿಮಾನವನ್ನು ಢಾಕದಲ್ಲಿ ಇಳಿಸಬೇಕಾಯಿತು. ಪ್ರಯಾಣಿಕರಿಗೆ ನಮ್ಮ ತಂಡ ಎಲ್ಲಾ ರೀತಿಯ ಸಹಾಯವನ್ನು ಮಾಡುತ್ತಿದೆ ಎಂದು ಇಂಡಿಗೋ ತಿಳಿಸಿದೆ.
ಈ ಕುರಿತು ವಿಮಾನ ಪ್ರಯಾಣಿಕರಿಗೆ ಮುಂಚಿತವಾಗಿಯೇ ಮಾಹಿತಿ ನೀಡಲಾಯಿತು ಹಾಗೂ ಅವರಿಗೆ ಉಪಾಹಾರವನ್ನು ಒದಗಿಸಲಾಯಿತು ಎಂದೂ ಪ್ರಕಟಣೆಯಲ್ಲಿ ಹೇಳಲಾಗಿದೆ.
ಈ ಕುರಿತು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿರುವ ಗುವಾಹಟಿಗೆ ತೆರಳುತ್ತಿದ್ದ ವಿಮಾನದಲ್ಲಿದ್ದ ಪ್ರಯಾಣಿಕರೋರ್ವರು, ದಟ್ಟ ಮಂಜು ಆವರಿಸಿರುವುದರಿಂದ ವಿಮಾನವನ್ನು ಢಾಕಾದಲ್ಲಿ ತುರ್ತು ಭೂಸ್ಪರ್ಶ ಮಾಡಲಾಯಿತು.
ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಎಲ್ಲರ ಬಳಿ ಪಾಸ್ ಪೋರ್ಟ್ ಇರಲಿಲ್ಲ ಎಂದೂ ಆ ಪ್ರಯಾಣಿಕರು ಬರೆದುಕೊಂಡಿದ್ದಾರೆ.
Flightradar24 ಅಂತರ್ಜಾಲ ತಾಣದ ಪ್ರಕಾರ, ಶುಕ್ರವಾರ ರಾತ್ರಿ 8.20ಕ್ಕೆ ಮುಂಬೈನಿಂದ ನಿರ್ಗಮಿಸಿ, ರಾತ್ರಿ 11.10ಕ್ಕೆ ಗುವಾಹಟಿ ತಲುಪಬೇಕಿದ್ದ ಇಂಡಿಗೊ ವಿಮಾನ, ಮೂರು ಗಂಟೆ ತಡವಾಗಿ ರಾತ್ರಿ 11.20ಕ್ಕೆ ಮುಂಬೈನಿಂದ ನಿರ್ಗಮಿಸಿದೆ.