ಉಡುಪಿ, ಜ.13: ಬ್ಯಾಂಕಿನಲ್ಲಿ ನಕಲಿ ಸಹಿ ದುರ್ಬಳಕೆ ಮಾಡಿ ಮೋಸ ಮಾಡಿರುವುದಾಗಿ ಆರೋಪಿಸಿ ಸಲ್ಲಿಸಲಾದ ದೂರು ಅರ್ಜಿಯನ್ನು ವಜಾ ಗೊಳಿಸಿದ ಉಡುಪಿ ಜಿಲ್ಲಾ ಗ್ರಾಹಕ ನ್ಯಾಯಾಲಯವು ನಕಲು, ದುರ್ಬಳಕೆ, ಮೋಸ, ದುರಾಚಾರ ದಂತಹ ಆರೋಪಗಳು ಗ್ರಾಹಕ ನ್ಯಾಯಾಲಯದ ವ್ಯಾಪ್ತಿಗೆ ಬರುವುದಿಲ್ಲ ಎಂದು ಆದೇಶ ನೀಡಿದೆ.
ಉಡುಪಿಯ ಭಾರತ್ ಕೋ ಆಪರೇಟಿವ್ ಬ್ಯಾಂಕಿನಲ್ಲಿ ತನ್ನ ಕೆವೈಸಿ ಸಂಖ್ಯೆಯನ್ನು ಗಮನಕ್ಕೆ ತಾರದೇ ಬದಲಾಯಿಸಿ ಕೆಲ ವ್ಯಕ್ತಿಗೆ ಚೆಕ್ ಪುಸ್ತಕವನ್ನು ನೀಡಲಾಗಿದ್ದು, ಮೂರನೇ ಪ್ರತಿವಾದಿ ಜಗದೀಶ್ ಆಮೀನ್ ಬೈಲೂರು ಜೊತೆ ಸೇರಿ ಸಹಿ ವ್ಯತ್ಯಾಸವಿರುವ 2015-2016ನೇ ಸಾಲಿನ ಚೆಕ್ಗಳಲ್ಲಿ 12.50 ಲಕ್ಷ ರೂ. ಮೊತ್ತದ ನಕಲಿ ಸಹಿ ದುರ್ಬಳಕೆ ಮೋಸ ದುರಾಚಾರ ನಡೆದಿರುವುದಾಗಿ ಆರೋಪಿಸಿ ಉಚ್ಚಿಲದ ನಾಗರಾಜ ಮೋಹನ್ ಬಂಗೇರ, ಒಟ್ಟು 15.50ಲಕ್ಷ ರೂ. ಪರಿಹಾರ ಕೋರಿ ಜಿಲ್ಲಾ ಗ್ರಾಹಕ ನ್ಯಾಯಾಲಯಕ್ಕೆ ದೂರು ಅರ್ಜಿ ಸಲ್ಲಿಸಿದ್ದರು.
ಇದಕ್ಕೆ ಬ್ಯಾಂಕಿನವರು ಹಾಗೂ ಜಗದೀಶ್ ಅಮೀನ್ ಇಂತಹ ಯಾವುದೇ ಕೃತ್ಯಗಳು ನಡೆದಿರುವುದಿಲ್ಲ. ದೂರುದಾರರು ಅಕ್ರಮ ಲಾಭಗಳಿಸಲು ಈ ದೂರು ನೀಡಿರುವುದಾಗಿ 3ನೇ ಪ್ರತಿವಾದಿ ಜಗದೀಶ ಆಮೀನ್ ಹೇಳಿಕೆ ನೀಡಿದ್ದರು. ವಾದ ಹಾಗೂ ಪ್ರತಿವಾದ, ಮೂರನೇ ಪ್ರತಿವಾದಿಯ ವಕೀಲರು ಸಲ್ಲಿಸಿದ ಸರ್ವೋಚ್ಚ ನ್ಯಾಯಾಲಯ, ರಾಷ್ಟ್ರೀಯ ಆಯೋಗದ ತೀರ್ಪುಗಳನ್ನು ಆಧರಿಸಿ ಮನಗಂಡು ದೂರುದಾರರು 2015-2019ರಂದು ಘಟನೆಯು ಯಾವಾಗ ತಮ್ಮ ತಿಳುವಳಿಕೆಗೆ ಬಂದಿತು ಎಂದು ತಿಳಿಸಿರುವುದಿಲ್ಲ.
ಮುಖ್ಯವಾಗಿ ನಕಲು, ದುರ್ಬಳಕೆ, ಮೋಸ, ದುರಾಚಾರದಂತಹ ಆರೋಪಗಳು ಗ್ರಾಹಕ ನ್ಯಾಯಾಲಯದ ವ್ಯಾಪ್ತಿಗೆ ಒಳಪ ಡುವುದಿಲ್ಲ ಎಂದು ನಿರ್ಧರಿಸಿ ನ್ಯಾಯಾಲಯದ ಅಧ್ಯಕ್ಷ ಸುನಿಲ್ ತಿ.ಮಾಸರೆಡ್ಡಿ ಹಾಗೂ ಸದಸ್ಯೆ ಸುಜಾತ ಬಿ.ಕೊರಳ್ಳಿ ಅವರನ್ನು ಒಳಗೊಂಡ ಉಡುಪಿ ಜಿಲ್ಲಾ ಗ್ರಾಹಕ ನ್ಯಾಯಾಲಯದ ನ್ಯಾಯಪೀಠವು ದೂರುದಾರರ ದೂರನ್ನು ವಜಾಗೊಳಿಸಿ ಆದೇಶ ನೀಡಿದೆ. 3ನೇ ಪ್ರತಿವಾದಿಯವರ ಪರವಾಗಿ ನ್ಯಾಯವಾದಿ ವಿವೇಕಾನಂದ ಮಲ್ಯ ಕಾರ್ಕಳ ವಾದ ಮಂಡಿಸಿದ್ದರು.