ಅಮೃತಸರ : ಆಡಳಿತಾರೂಢ ಆಮ್ ಆದ್ಮಿ ಪಕ್ಷ (ಎಎಪಿ)ದ ಕಾರ್ಯಕರ್ತರೊಬ್ಬರನ್ನು ಅಪರಿಚಿತ ದುಷ್ಕರ್ಮಿಗಳು ಪಂಜಾಬಿನ ತರಣ್ ತರಣ್ ಜಿಲ್ಲೆಯಲ್ಲಿ ಶುಕ್ರವಾರ ಗುಂಡು ಹಾರಿಸಿ ಹತ್ಯೆಗೈದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಹತ್ಯೆಗೀಡಾದ ಆಪ್ ಕಾರ್ಯಕರ್ತನನ್ನು ಗುರುಪ್ರೀತ್ ಸಿಂಗ್ ಆಲಿಯಾಸ್ ಗೋಪಿ ಚೋಳ ಎಂದು ಗುರುತಿಸಲಾಗಿದೆ. ಗುರುಪ್ರೀತ್ ಸಿಂಗ್ ಅವರು ನ್ಯಾಯಾಲಯದ ಪ್ರಕರಣವೊಂದಕ್ಕೆ ಸಂಬಂಧಿಸಿ ಕಪುರ್ತಲಾ ಜಿಲ್ಲೆಗೆ ಕಾರಿನಲ್ಲಿ ಏಕಾಂಗಿಯಾಗಿ ತೆರಳುತ್ತಿದ್ದ ಸಂದರ್ಭ ಅಪರಿಚಿತ ದುಷ್ಕರ್ಮಿಗಳು ಗುಂಡು ಹಾರಿಸಿದ್ದಾರೆ.
ಗುರ್ಪ್ರೀತ್ ಸಿಂಗ್ ಅವರು ಫತೇಹ್ಬಾದ್ ಹಾಗೂ ಗೊಯಿಂಡ್ವಾಲ್ ಸಾಹೀಬ್ ನಡುವಿನ ರೈಲ್ವೆ ಕ್ರಾಸಿಂಗ್ ತಲುಪಿದಾಗ ಅವರನ್ನು ಹಿಂಬಾಲಿಸುತ್ತಿದ್ದ ದುಷ್ಕರ್ಮಿಗಳು ಗುಂಡು ಹಾರಿಸಿದ್ದಾರೆ. ಅನಂತರ ಅಲ್ಲಿಂದ ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆಯ ಕುರಿತು ಮಾಹಿತಿ ಸ್ವೀಕರಿಸಿದ ಬಳಿಕ ಉಪ ಪೊಲೀಸ್ ಅಧೀಕ್ಷಕ ರವೀಶರ್ ಸಿಂಗ್ ನೇತೃತ್ವ ಪೊಲೀಸ್ ಸಿಬ್ಬಂದಿ ಘಟನಾ ಸ್ಥಳಕ್ಕೆ ಧಾವಿಸಿದ್ದಾರೆ. ದುಷ್ಕರ್ಮಿಗಳನ್ನು ವಶಕ್ಕೆ ತೆಗೆದುಕೊಳ್ಳಲು ಹಲವು ಪೊಲೀಸ್ ತಂಡಗಳನ್ನು ರೂಪಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ