Home Uncategorized ಪಾಕಿಸ್ತಾನಕ್ಕೆ ಜಿಂದಾಬಾದ್ ಕೂಗಿದ ಮಾಧ್ಯಮಗಳು!

ಪಾಕಿಸ್ತಾನಕ್ಕೆ ಜಿಂದಾಬಾದ್ ಕೂಗಿದ ಮಾಧ್ಯಮಗಳು!

8
0

ಈ ಹಿಂದೆ ವಿಜಯಪುರದ ಸಿಂಧಗಿಯ ತಹಶೀಲ್ದಾರ್ ಕಚೇರಿ ಆವರಣದಲ್ಲಿ ದುಷ್ಕರ್ಮಿಗಳು ಪಾಕಿಸ್ತಾನದ ಧ್ವಜವನ್ನು ಹಾರಿಸಿ, ಆ ಮೂಲಕ ಗಲಭೆ ನಡೆಸಲು ವಿಫಲ ಸಂಚು ನಡೆಸಿದ್ದು ರಾಜ್ಯ ಮಟ್ಟದಲ್ಲಿ ಸುದ್ದಿಯಾಗಿತ್ತು. ಪಾಕಿಸ್ತಾನದ ಧ್ವಜ ಹಾರಾಟ ನಡೆದ ಬೆನ್ನಿಗೆ ಅದನ್ನು ವಿರೋಧಿಸಿ ರಾಮಸೇನೆ ಸಹಿತ ಸಂಘಪರಿವಾರ ಸಂಘಟನೆಗಳು ಪ್ರತಿಭಟನೆ, ಗದ್ದಲಗಳನ್ನು ಎಬ್ಬಿಸಿದ್ದವು. ಇನ್ನೇನು ಸಿಂಧಗಿಗೆ ಬೆಂಕಿ ಬೀಳಬೇಕು ಎನ್ನುವಷ್ಟರಲ್ಲಿ ಪೊಲೀಸರು ನಿಜವಾದ ಆರೋಪಿಗಳನ್ನು ಬಂಧಿಸಿದ್ದರು. ಯಾರು ಪಾಕಿಸ್ತಾನದ ಧ್ವಜ ಹಾರಾಟದ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದರೋ ಅದೇ ರಾಮಸೇನೆಯ ಕಾರ್ಯಕರ್ತರೇ ಸಿಂಧಗಿಯಲ್ಲಿ ಪಾಕಿಸ್ತಾನದ ಧ್ವಜ ಹಾರಿಸಿದ್ದರು. ಜನರ ನಡುವೆ ದ್ವೇಷದ ಕಿಚ್ಚು ಹಚ್ಚಲು ಎಂತಹ ಹೀನಾಯಮಟ್ಟಕ್ಕೂ ಸಂಘಪರಿವಾರ ಇಳಿಯಬಲ್ಲುದು ಎನ್ನುವುದು ಆ ಪ್ರಕರಣದಿಂದ ಮತ್ತೊಮ್ಮೆ ಸಾಬೀತಾಯಿತು. ಆ ತನಿಖೆ ಬಳಿಕ ಪ್ರಕರಣ ಬೇರೆಯದೇ ತಿರುವು ಪಡೆಯಿತು. ರಾಜ್ಯದಲ್ಲಿ ರಾಮಸೇನೆ ಕಾರ್ಯಕರ್ತರು ನಡೆಸಿದ ಭಾರೀ ದುಷ್ಕೃತ್ಯಗಳೆಲ್ಲವೂ ಒಂದೊಂದಾಗಿ ಹೊರಬಿದ್ದವು. ಹುಬ್ಬಳ್ಳಿಯ ಕೋರ್ಟ್ ಆವರಣದಲ್ಲಿ ಸ್ಫೋಟ ನಡೆಸಿರುವುದರ ಹಿಂದೆಯೂ ಅವರ ಕೈವಾಡವಿರುವುದು ಬೆಳಕಿಗೆ ಬಂತು. ಈ ಸಂಬಂಧ ಜಂಬಗಿ ಸೇರಿದಂತೆ ಹಲವು ರಾಮಸೇನೆ ಕಾರ್ಯಕರ್ತರ ಬಂಧನವಾಯಿತು. ಪ್ರಮೋದ್ ಮುತಾಲಿಕ್‌ನ ಪ್ರಮುಖ ಬಂಟನೆಂದು ಗುರುತಿಸಲ್ಪಟ್ಟಿದ್ದ ಜಂಬಗಿ ಬಳಿಕ ಜೈಲಿನಲ್ಲೇ ಭೀಕರವಾಗಿ ಕೊಲೆಯಾದ.

ಅಂದು ಸಿಂಧಗಿಯಲ್ಲಿ ರಾಮಸೇನೆ ಕಾರ್ಯಕರ್ತರು ಪಾಕಿಸ್ತಾನ ಧ್ವಜವನ್ನು ಹಾರಿಸಿದಾಗ ಅವುಗಳನ್ನು ನಾಡಿನ ಪತ್ರಿಕೆಗಳು ಬಣ್ಣಕಟ್ಟಿ ವರದಿ ಮಾಡಿದ್ದವು. ಕೆಲವು ಮುಸ್ಲಿಮ್ ಸಂಘಟನೆಗಳನ್ನು ಮಾಧ್ಯಮಗಳು ಶಂಕಿಸಿದ್ದವು. ಆದರೆ ನಿಜವಾದ ಆರೋಪಿ ಯಾರೆನ್ನುವುದು ಬೆಳಕಿಗೆ ಬರುತ್ತಿದ್ದಂತೆಯೇ, ಮುಖಪುಟದ ವರದಿ ಒಳಪುಟಕ್ಕೆ ಸರಿಯಿತು. ಎಂಟು ಕಾಲಂ ಸುದ್ದಿಗಳು ಸತ್ಯ ಬಯಲಾಗುತ್ತಿದ್ದಂತೆಯೇ ಒಂದು ಕಾಲಂಗೆ ಇಳಿಯಿತು. ಒಂದು ನಿರ್ದಿಷ್ಟ ಸಮುದಾಯಗಳ ಮೇಲೆ ಗೂಬೆ ಕೂರಿಸುವುದಕ್ಕಷ್ಟೇ ಮಾಧ್ಯಮಗಳು ಪಾಕಿಸ್ತಾನ ಬಾವುಟವನ್ನು ಬಳಸಿಕೊಂಡಿದ್ದವೇ ಹೊರತು, ದೇಶದ ಮೇಲೆ ಪ್ರೀತಿಯಿಂದಲ್ಲ. ನಿಜಕ್ಕೂ ಅದಕ್ಕೆ ದೇಶದ ಮೇಲೆ ಪ್ರೀತಿಯಿದ್ದಿದ್ದರೆ, ಬಾವುಟವನ್ನು ಯಾರೇ ಹಾರಿಸಿದ್ದರೂ ಅವರು ದೇಶದ್ರೋಹಿಗಳು ಎನ್ನುವ ತಮ್ಮ ನಿಲುವಿಗೆ ಕೊನೆಯವರೆಗೂ ಬದ್ಧವಾಗಿರಬೇಕಾಗಿತ್ತು.

ಇದೀಗ ಸ್ವತಃ ಕೆಲವು ಮಾಧ್ಯಮಗಳೇ ವಿಧಾನಸೌಧದಲ್ಲಿ ‘ಪಾಕಿಸ್ತಾನ್ ಜಿಂದಾಬಾದ್’ ಎಂದು ಕೂಗುವ ಮೂಲಕ ಸುದ್ದಿಯಲ್ಲಿವೆ. ರಾಜ್ಯ ಸಭೆ ಚುನಾವಣಾ ಫಲಿತಾಂಶದ ಸಂಭ್ರಮಾಚರಣೆ ವೇಳೆ ವಿಧಾನಸೌಧ ಕಾರಿಡಾರ್‌ನಲ್ಲಿ ಪಾಕಿಸ್ತಾನ್ ಜಿಂದಾಬಾದ್ ಎಂದು ಕೂಗಲಾಗಿದೆ ಎಂಬ ಸುಳ್ಳುವರದಿಯನ್ನು ಪ್ರಸಾರ ಮಾಡುವ ಮೂಲಕ ಕೆಲವು ಮಾಧ್ಯಮಗಳು ಕಟಕಟೆಯಲ್ಲಿ ನಿಂತಿವೆ. ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ವೀಡಿಯೊಗಳಲ್ಲಿ ‘ನಾಸಿರ್ ಹುಸೇನ್ ಜಿಂದಾಬಾದ್’ ಎಂದು ಘೋಷಣೆ ಕೂಗುತ್ತಿರುವುದು ಸ್ಪಷ್ಟವಾಗಿ ಕೇಳಿಸುತ್ತಿದೆಯಾದರೂ, ಕೆಲವು ಮಾಧ್ಯಮ ಮುಖ್ಯಸ್ಥರಿಗೆ ಅದು ಪಾಕಿಸ್ತಾನ್ ಜಿಂದಾಬಾದ್ ಎಂದು ಕೇಳಿಸಿದೆ. ಎದೆಯೊಳಗೆ ಪಾಕಿಸ್ತಾನವನ್ನೇ ಮುಚ್ಚಿಟ್ಟುಕೊಂಡ ಜನರಿಗೆ ಕಿವಿ ಮೋಸ ಮಾಡುವುದು ಸಹಜವಾಗಿದೆ. ಆದುದರಿಂದ ಅವರಿಗೇನು ಬೇಕೋ ಅದನ್ನೇ ಅವರು ಕೇಳಿಸಿಕೊಂಡಿದ್ದಾರೆ. ಸುದ್ದಿ ಪ್ರಸಾರವಾದ ಬೆನ್ನಿಗೇ ಹಲವು ಮಾಧ್ಯಮಗಳು ಸತ್ಯಾಸತ್ಯತೆಯನ್ನು ಬಹಿರಂಗಪಡಿಸಿದವಾದರೂ, ಕೆಲವು ಟಿವಿಗಳಿಗೆ, ಪತ್ರಿಕೆಗಳಿಗೆ ಸತ್ಯ ಬೇಕಾಗಿರಲಿಲ್ಲ. ಆದುದರಿಂದ ತಮಗೇನು ಕೇಳಿಸಿದೆ ಎಂದು ನಂಬಿದ್ದಾರೆಯೋ ಅದನ್ನೇ ಮುಖಪುಟದ ಮುಖ್ಯ ಸುದ್ದಿಗಳನ್ನಾಗಿ ಪ್ರಕಟಿಸಿದರು. ಈ ಮಾಧ್ಯಮಗಳು ಒಂದು ನಿರ್ದಿಷ್ಟ ಸಮುದಾಯಕ್ಕೆ ಸೇರಿದ ರಾಜಕೀಯ ವ್ಯಕ್ತಿ ರಾಜ್ಯಸಭೆಗೆ ಆಯ್ಕೆಯಾಗಿರುವುದನ್ನು ಮಾನಸಿಕವಾಗಿ ಒಪ್ಪುವುದಕ್ಕೆ ಸಿದ್ಧವಿರಲಿಲ್ಲ. ಆದುದರಿಂದ ನಾಸಿರ್ ಹುಸೇನ್ ಬೆಂಬಲಿಗರು ಸಂಭ್ರಮದ ಭಾಗವಾಗಿ ಪಾಕಿಸ್ತಾನ್ ಜಿಂದಾಬಾದ್ ಎಂದು ಕೂಗುವುದು ಕಡ್ಡಾಯ ಎಂದು ತಮಗೆ ತಾವೇ ನಂಬಿಕೊಂಡು ಸುದ್ದಿಯನ್ನು ಪ್ರಕಟಿಸಿದ್ದಾರೆ.

ರಾಜ್ಯಸಭಾ ಚುನಾವಣೆಯಲ್ಲಾದ ಅವಮಾನದಿಂದ ಮುಖ ಉಳಿಸಿಕೊಳ್ಳುವುದಕ್ಕಾಗಿ ಬಿಜೆಪಿಯೂ ಪಾಕಿಸ್ತಾನ್ ಜಿಂದಾಬಾದ್ ಘೋಷಣೆಗೆ ನೇತಾಡಿಕೊಂಡಿದೆ. ಸಂಭ್ರಮಾಚರಣೆಯಲ್ಲಿ ಪಾಕಿಸ್ತಾನ ಘೋಷಣೆ ಕೂಗಲಾಗಿದೆ ಎಂದು ಆಪಾದಿಸಿ ಸದನದಲ್ಲಿ ಗದ್ದಲ ಎಬ್ಬಿಸಿದೆ. ಪಾಕಿಸ್ತಾನ್ ಜಿಂದಾಬಾದ್ ಎಂದು ಘೋಷಣೆ ಕೂಗಿದ ಕಾರಣಕ್ಕಾಗಿ ಅಪರಿಚಿತನ ವಿರುದ್ಧ ಎಫ್‌ಐಆರ್ ದಾಖಲಾಗಿದೆ ಎಂದು ಹೇಳಲಾಗುತ್ತಿದೆ. ಇದೇ ಸಂದರ್ಭದಲ್ಲಿ, ಘಟನೆಯ ಬಗ್ಗೆ ತನಿಖೆ ನಡೆಸಿ, ಆರೋಪ ನಿಜವೇ ಆಗಿದ್ದರೆ ಸೂಕ್ತ ಕ್ರಮ ತೆಗೆದುಕೊಳ್ಳುತ್ತೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿಕೆ ನೀಡಿದ್ದಾರೆ. ಒಂದು ವೇಳೆ ಆರೋಪ ನಿಜವಲ್ಲ ಎಂದಾದರೆ ಯಾರ ಮೇಲೆ ಕ್ರಮ ತೆಗೆದುಕೊಳ್ಳುತ್ತೀರಿ? ಎಂದು ನಾಡಿನ ಜನತೆ ಮುಖ್ಯಮಂತ್ರಿಯನ್ನು ಮರು ಪ್ರಶ್ನಿಸುತ್ತಿದ್ದಾರೆ. ವೀಡಿಯೊದಲ್ಲಿ ‘ಪಾಕಿಸ್ತಾನ್ ಜಿಂದಾಬಾದ್’ ಎಂದು ಘೋಷಣೆ ಕೂಗಿದ್ದು ನಿಜವೇ ಆಗಿದ್ದರೆ ಆರೋಪಿಗಳ ಮೇಲೆ ಕಠಿಣ ಕ್ರಮ ತೆಗೆದುಕೊಳ್ಳಬೇಕು. ಇದೇ ಸಂದರ್ಭದಲ್ಲಿ ಇಲ್ಲ ಎಂದಾದರೆ, ಸುಳ್ಳು ಸುದ್ದಿಯನ್ನು ಹರಡಿ ತಮ್ಮದೇ ಪಕ್ಷದ ರಾಜ್ಯ ಸಭಾ ಸದಸ್ಯನಿಗೆ ಆ ಮೂಲಕ ಕಾಂಗ್ರೆಸ್ ಪಕ್ಷಕ್ಕೆ, ಸರಕಾರಕ್ಕೆ ಕಳಂಕ ಹಚ್ಚಲು ಪ್ರಯತ್ನಿಸಿದ ಮಾಧ್ಯಮಗಳ ಮೇಲೆ ಕ್ರಮ ತೆಗೆದುಕೊಳ್ಳುವ ಅಗತ್ಯವಿಲ್ಲವೆ? ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿಗಳನ್ನು ಹರಡಿ, ನಾಡಿನಲ್ಲಿ ದ್ವೇಷದ ಬೆಂಕಿ ಹಚ್ಚುವವರನ್ನು ಗುರುತಿಸುವುದಕ್ಕಾಗಿ ಪ್ರತ್ಯೇಕ ಐಟಿ ತಂಡವನ್ನು ಸರಕಾರ ಸ್ಥಾಪಿಸಿದೆ. ಸುಳ್ಳು ಸುದ್ದಿಗಳನ್ನು ಪತ್ತೆ ಹಚ್ಚುವುದಕ್ಕಾಗಿ ಕೋಟ್ಯಂತರ ರೂಪಾಯಿಯನ್ನು ಈ ತಂಡಕ್ಕೆ ವ್ಯಯ ಮಾಡುತ್ತಿದೆ. ನಾಳೆ ಈ ಸುದ್ದಿ ಸುಳ್ಳು ಎನ್ನುವುದು ಬೆಳಕಿಗೆ ಬಂದರೆ, ಆ ಸುಳ್ಳು ಸುದ್ದಿಯನ್ನು ಹರಡಿದ ಎಲ್ಲ ಮಾಧ್ಯಮಗಳ ಮೇಲೆ ಕಠಿಣ ಕ್ರಮ ತೆಗೆದುಕೊಳ್ಳುವುದು ಕಾನೂನು ಪಾಲಕರ ಕರ್ತವ್ಯವಾಗಿದೆ. ವಿಪರ್ಯಾಸವೆಂದರೆ, ಬಿಜೆಪಿಯು ಈ ಪ್ರಕರಣವನ್ನು ಮುಂದಿಟ್ಟು ಕಾಂಗ್ರೆಸನ್ನು ನೈತಿಕವಾಗಿ ಕುಗ್ಗಿಸಲು ‘ಹಸ್ತ’ದ ಮೇಲೆ ‘ಪಾಕಿಸ್ತಾನ್‌ಜಿಂದಾಬಾದ್’ ಎಂದು ಸಹಸ್ರಬಾರಿ ಬರೆದು ಅದನ್ನು ‘ಎಕ್ಸ್’ನಲ್ಲಿ ಹಾಕಿ ತನ್ನ ‘ಪಾಕಿಸ್ತಾನ್ ಪ್ರೇಮ’ವನ್ನು ಪ್ರಕಟಿಸಿದೆ. ಇನ್ನೊಂದು ಪಕ್ಷವನ್ನು ಅವಮಾನಿಸುವ ಉದ್ದೇಶದಿಂದ, ಪಾಕಿಸ್ತಾನ್ ಜಿಂದಾಬಾದ್ ಎಂದು ಅಂಗೈ ತುಂಬಾ ಬರೆದು ಅದನ್ನು ಟ್ವೀಟ್ ಮಾಡಿದ ಬಿಜೆಪಿಯ ಕೃತ್ಯವೂ ಖಂಡನೀಯವೇ ಆಗಿದೆ.

ಸಿಂಧಗಿಯಲ್ಲಿ ಪಾಕಿಸ್ತಾನ ಧ್ವಜವನ್ನು ರಾತ್ರೋರಾತ್ರಿ ಹಾರಿಸಿ ಬಳಿಕ ದೇಶಪ್ರೇಮಿಗಳ ವೇಷ ಧರಿಸಿ ಪ್ರತಿಭಟನೆಯ ಪ್ರಹಸನ ನಡೆಸಿದ ರಾಮಸೇನೆಯ ದುಷ್ಕರ್ಮಿಗಳಿಗೂ, ವೀಡಿಯೊದಲ್ಲಿ ಪಾಕಿಸ್ತಾನ ಪರ ಘೋಷಣೆ ಕೂಗಿದ್ದಾರೆ ಎಂದು ಸುಳ್ಳು ಸುದ್ದಿಯನ್ನು ಹರಡಿದ ಪತ್ರಕರ್ತರಿಗೂ ದೊಡ್ಡ ವ್ಯತ್ಯಾಸವೇನೂ ಇಲ್ಲ. ಇಬ್ಬರೂ ಒಂದು ನಿರ್ದಿಷ್ಟ ಸಮುದಾಯವನ್ನು ಗುರಿಯಾಗಿಸಿಕೊಂಡಿದ್ದಾರೆ ಮಾತ್ರವಲ್ಲ, ಸಮಾಜದ ಶಾಂತಿಯನ್ನು ಕೆಡಿಸುವ ದುರುದ್ದೇಶವನ್ನು ಹೊಂದಿದ್ದಾರೆ. ದ್ವೇಷ, ರಾಜಕೀಯ ಪಕ್ಷಪಾತ, ಜಾತೀಯತೆಯಿಂದ ಮೆದುಳು, ಮನಸ್ಸು ಕೆಡಿಸಿಕೊಂಡಾಗ ಪತ್ರಕರ್ತನ ಕಿವಿ ಇಲ್ಲದ್ದನ್ನೆಲ್ಲ ಕೇಳಿಸಿಕೊಳ್ಳುತ್ತದೆ. ಹಾಗೆಯೇ ಇರುವುದನ್ನು ಕೇಳಿಸಿಕೊಳ್ಳುವ ಸಾಮರ್ಥ್ಯ ಕಳೆದುಕೊಳ್ಳುತ್ತದೆ. ಹಗಲು ರಾತ್ರಿ ದೆವ್ವವನ್ನು ಜಪಿಸುವವನಿಗೆ ದೆವ್ವವಲ್ಲದೆ ದೇವರು ಪ್ರತ್ಯಕ್ಷವಾಗಲು ಸಾಧ್ಯವೆ? ಹಗಲೂ ರಾತ್ರಿ ಪಾಕಿಸ್ತಾನವನ್ನು ಜಪಿಸುವ ಕೆಲವು ಮಾಧ್ಯಮಗಳಿಗೆ ಪಾಕಿಸ್ತಾನ್ ಜಿಂದಾಬಾದ್ ಎಂದು ಕೇಳುವುದರಲ್ಲಿ ಅಚ್ಚರಿಯಾದರೂ ಏನಿದೆ? ‘ಪಾಕಿಸ್ತಾನ್ ಜಿಂದಾಬಾದ್’ ಘೋಷಣೆ ಪ್ರಕರಣದಲ್ಲಿ ಕನ್ನಡದ ಕೆಲವು ಮಾಧ್ಯಮಗಳು ತಮ್ಮ ಕಿವಿಯನ್ನು ಮಾತ್ರವಲ್ಲ, ಮೆದುಳನ್ನು ಕೂಡ ಚಿಕಿತ್ಸೆಗೆ ಒಳಪಡಿಸುವ ಅಗತ್ಯವಿದೆ ಎನ್ನುವುದಷ್ಟೇ ಬಹಿರಂಗವಾಗಿದೆ. ಪಾಕಿಸ್ತಾನ ಜಪಕ್ಕೆ ಕಿವುಡಾಗಿ, ಜೈ ಭಾರತ್ ಘೋಷಣೆಗೆ ತನ್ನ ಕಿವಿಯನ್ನು ತೆರೆದುಕೊಳ್ಳುವ ಮೂಲಕ, ನಾಡನ್ನು ಒಳಿತಿನೆಡೆಗೆ ಮುನ್ನಡೆಸುವ ಕಾರ್ಯದಲ್ಲಿ ಮಾಧ್ಯಮಗಳು ತಮ್ಮನ್ನು ತೊಡಗಿಸಿಕೊಳ್ಳಬೇಕಾಗಿದೆ.

LEAVE A REPLY

Please enter your comment!
Please enter your name here