ಬೆಂಗಳೂರು: ಕರ್ನಾಟಕ ವಿದ್ಯುತ್ ನಿಗಮ ನಿಯಮಿತ (KPCL) 56ನೇ ಸಂಸ್ಥಾಪನಾ ದಿನಾಚರಣೆಯಲ್ಲಿ ಭಾಗವಹಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಂಸ್ಥೆಯ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿದರು. “ವಿದ್ಯುತ್ ಉತ್ಪಾದನೆಯಲ್ಲಿ ಕರ್ನಾಟಕ ಇಂದು ಸ್ವಾವಲಂಬಿಯಾದುದು KPCL ನೌಕರರ ಶ್ರಮದ ಫಲ,” ಎಂದು ಸಿಎಂ ಹೇಳಿದರು.
“KPCL ಅಧ್ಯಕ್ಷನಾಗಿ ನಾನೂ ಸಹ ನೌಕರರ ಕುಟುಂಬದ ಭಾಗವಾಗಿದ್ದೇನೆ. ಇಡೀ ನಿಗಮದ ಬೆಳವಣಿಗೆಗೆ ಸಾಕ್ಷಿಯಾದ ಅನುಭವ ನನಗಿದೆ,” ಎಂದು ಅವರು ನೆನಪಿಸಿದರು. ಸಚಿವ ಕೆ.ಜೆ. ಜಾರ್ಜ್ ಅವರ ನೇತೃತ್ವದಲ್ಲಿ ಅಧಿಕಾರಿಗಳ ತಂಡ ಉತ್ತಮ ಕಾರ್ಯಭಾರ ನಿರ್ವಹಿಸುತ್ತಿದೆ ಎಂದು ಅವರು ಶ್ಲಾಘಿಸಿದರು.
ವಿದ್ಯುತ್ ಸೌಲಭ್ಯ ಮತ್ತು ಕೃಷಿ ಬೆಂಬಲ
ಸಿದ್ದರಾಮಯ್ಯ ತಮ್ಮ ಬಾಲ್ಯದ ನೆನಪಿನಲ್ಲಿ ಹೇಳಿದರು, “ನಾನು ಓದುತ್ತಿದ್ದಾಗ ಊರಲ್ಲಿ ವಿದ್ಯುತ್ ಇರಲಿಲ್ಲ. ಸೀಮೆಎಣ್ಣೆ ದೀಪದಲ್ಲಿ ಓದಿದೆ. ಈಗ ರೈತರಿಗಾಗಿ ರಾಜ್ಯ ಸರ್ಕಾರ ವರ್ಷಕ್ಕೆ ₹20,000 ಕೋಟಿ ಪಂಪ್ ಸೆಟ್ ಸಬ್ಸಿಡಿ ನೀಡುತ್ತಿದೆ. ಈ ವಿದ್ಯುತ್ ರೈತರ ಮನೆಗೂಲು ತಲುಪಿಸಲು KPCL ನೌಕರರ ಪಾತ್ರ ಮಹತ್ತರವಾಗಿದೆ.”
ಪರ್ಯಾಯ ವಿದ್ಯುತ್ ಮತ್ತು ಗುರಿ
ಪವನ, ಸೌರ, ಉಷ್ಣ ಮತ್ತು ಜಲ ವಿದ್ಯುತ್ ಜೊತೆಗೆ ತ್ಯಾಜ್ಯದಿಂದ ವಿದ್ಯುತ್ ಉತ್ಪಾದನೆ ಮಾಡುವಲ್ಲಿ ಕರ್ನಾಟಕ ರಾಷ್ಟ್ರದಾದ್ಯಾಂತ ಮಾದರಿಯಾಗಿದೆ. “60,000 ಮೆಗಾವಾಟ್ ಉತ್ಪಾದನೆ ಗುರಿಯಾಗಿದ್ದು, ನಾವು ಅದರತ್ತ ದಿಟ್ಟ ಹೆಜ್ಜೆ ಹಾಕುತ್ತಿದ್ದೇವೆ,” ಎಂದರು.
ಸಮಾಜಿಕ ವಿಚಾರಗಳು ಮತ್ತು ಶಿಕ್ಷಣದ ಶಕ್ತಿ
“ರಾಜ್ಯವು ತಲಾ ಆದಾಯದಲ್ಲಿ ಪ್ರಥಮ ಸ್ಥಾನದಲ್ಲಿದೆ. ಆದರೆ ಸಮಾಜದಲ್ಲಿ ಇನ್ನೂ ಜಾತಿ ವ್ಯವಸ್ಥೆ ಮತ್ತು ಅಸಮಾನತೆ ಇದೆ. ಇದು ಹೋಗಬೇಕಾದರೆ ಎಲ್ಲರಿಗೂ ಶಿಕ್ಷಣ, ಆರ್ಥಿಕ ಶಕ್ತಿ ಅಗತ್ಯ. ಶಿಕ್ಷಣ ಪಡೆದವರೂ ಜಾತಿವಾದಿ, ದ್ವೇಷವಾದಿಯಾಗುತ್ತಿರುವುದು ವಿಷಾದಕರ,” ಎಂದು ಸಿದ್ದರಾಮಯ್ಯ ಹೇಳಿದರು.
“ಜಾತಿ-ಧರ್ಮದ ಹೆಸರಿನಲ್ಲಿ ಸಮಾಜವನ್ನು ವಿಭಜಿಸುವವರಿಂದ ದೂರವಿರಿ. ಕುವೆಂಪು ಆಶಿಸಿದ ವಿಶ್ವಮಾನವತೆಯತ್ತ ನಾವು ಸಾಗಬೇಕು,” ಎಂದು ಅವರು ಕರೆ ನೀಡಿದರು.
ಹೊಸ ನೇಮಕಾತಿಗೆ ಭರವಸೆ
“KPCL ನಲ್ಲಿ ಖಾಲಿ ಹುದ್ದೆಗಳ ಭರ್ತಿಗೆ ತೀರ್ಮಾನ ಕೈಗೊಳ್ಳಲಾಗುವುದು,” ಎಂಬ ಭರವಸೆಯನ್ನೂ ಸಿಎಂ ಈ ವೇಳೆ ನೀಡಿದರು.