Mahadayi project: ಮಹದಾಯಿ ಯೋಜನೆಗೆ ಅನುಮತಿ ನಿರಾಕರಣೆ: ಕೇಂದ್ರದ ನಿರ್ಧಾರ ಕರ್ನಾಟಕದ ಜನರ ಮೇಲಿನ ದ್ರೋಹ – ಸಿಎಂ ಸಿದ್ದರಾಮಯ್ಯ
ಬೆಂಗಳೂರು: ಮಹದಾಯಿ ಯೋಜನೆಗೆ ಅನುಮತಿ ನೀಡುವುದಿಲ್ಲ ಎಂಬ ಕೇಂದ್ರ ಸರ್ಕಾರದ ನಿರ್ಧಾರವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ತೀವ್ರವಾಗಿ ಖಂಡಿಸಿದ್ದಾರೆ. ಈ ನಿರ್ಧಾರ ಕರ್ನಾಟಕದ ಜನರ ಮೇಲಿನ ದ್ರೋಹವಾಗಿದ್ದು, ಸರ್ಕಾರ ಈ ಅನ್ಯಾಯದ ವಿರುದ್ಧ ಸಮಸ್ತ ಕನ್ನಡಿಗರೊಂದಿಗೆ ಹೋರಾಟ ನಡೆಸಲಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ವಿಧಾನಸಭೆಯಲ್ಲಿಂದು ಗೋವಾ ಮುಖ್ಯಮಂತ್ರಿ ಸಾವಂತ ನೀಡಿದ ಹೇಳಿಕೆಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, “ಪರಿಸರ ಮತ್ತು ಅರಣ್ಯ ಖಾತೆ ಸಚಿವ ಭೂಪೇಂದ್ರ ಯಾದವ್ ಮಹದಾಯಿ ಯೋಜನೆಗೆ ಅನುಮತಿ ನೀಡಲಾಗದು ಎಂಬುದನ್ನು ನನಗೆ ಖುದ್ದಾಗಿ ತಿಳಿಸಿದ್ದಾರೆ ಎಂದು ಸಾವಂತ ಹೇಳಿದ್ದಾರೆ. ಇದು ಕರ್ನಾಟಕದ ಹಿತಾಸಕ್ತಿಗೆ ವಿರುದ್ಧವಾಗಿರುವ ಮತ್ತೊಂದು ಪ್ರಹಾರ,” ಎಂದು ವಿಷಾದ ವ್ಯಕ್ತಪಡಿಸಿದರು.
ಮಹದಾಯಿ ಜಲವಿವಾದ ನ್ಯಾಯಮಂಡಳಿಯು 2018ರಲ್ಲಿ 13.42 ಟಿಎಂಸಿ ನೀರನ್ನು ಕರ್ನಾಟಕಕ್ಕೆ ಹಂಚಿಕೆ ಮಾಡಿದ್ದರೂ, ಕೇಂದ್ರ ಸರ್ಕಾರದ ವಿಳಂಬಿ ನೀತಿಯ ಕಾರಣದಿಂದ ಯೋಜನೆಯ ಅನುಷ್ಠಾನ ತೀವ್ರ ವಿಳಂಬವಾಗಿದೆ.
ಕಲಸಾ-ಬಂಡೂರಿ ಯೋಜನೆಯ ಮೂಲಕ ಬೆಳಗಾವಿ, ಧಾರವಾಡ, ಹುಬ್ಬಳ್ಳಿ, ಗದಗ, ಬಾಗಲಕೋಟೆ ಜಿಲ್ಲೆಗಳ ಕುಡಿಯುವ ನೀರಿನ ಅಗತ್ಯ ಪೂರೈಸುವ ಉದ್ದೇಶವಿದ್ದು, ಇದಕ್ಕೆ ಕೇಂದ್ರ ನಿರಂತರ ಅಡ್ಡಿ ಮಾಡುತ್ತಿದೆ. ಸಿಎಂ ಆರೋಪಿಸಿದ್ದಾರೆ: “ಗೋವಾದ ಬಿಜೆಪಿ ಸರ್ಕಾರದ ಒಡನಾಡಿಯಾಗಿ ಕೇಂದ್ರ ಸರ್ಕಾರ ಯೋಜನೆಗೆ ಅಡ್ಡಗಾಲು ಹಾಕುತ್ತಿದೆ.”
ರಾಜ್ಯದಿಂದ ಆರಿಸಿಕೊಂಡ ಬಿಜೆಪಿ ಮತ್ತು ಜೆಡಿಎಸ್ ಸಂಸದರು ಕೂಡಾ ಈ ನಿಷ್ಠುರ ನಿರ್ಧಾರದ ವಿರುದ್ಧ ಧ್ವನಿ ಎತ್ತದೆ ಮೌನ ಪಾಲಿಸುತ್ತಿದ್ದಾರೆ ಎಂಬ ಆರೋಪವನ್ನು ಸಿದ್ದರಾಮಯ್ಯ ಮಾಡಿದ್ದಾರೆ. “ಇದು ರಾಜ್ಯದ ಜನತೆ ಬಿಜೆಪಿಗೆ ತಿರಸ್ಕಾರ ತೋರಿದ ಸೇಡಿನ politics,” ಎಂದು ಅವರು ಆರೋಪಿಸಿದ್ದಾರೆ.
ತೆರಿಗೆ ಹಂಚಿಕೆ, ಕೇಂದ್ರ ಅನುದಾನ ಕಡಿತ, ಭಾಷಾ ಹಕ್ಕುಗಳು ಸೇರಿದಂತೆ ವಿವಿಧ ವಿಚಾರಗಳಲ್ಲಿ ಕೇಂದ್ರ ಸರ್ಕಾರ ಕರ್ನಾಟಕದ ಮೇಲೆ ನಿರಂತರವಾಗಿ ಅನ್ಯಾಯ ಮಾಡುತ್ತಿದೆ. ಇಂತಹ ಮಲತಾಯಿ ಧೋರಣೆಯ ವಿರುದ್ಧ ಎಲ್ಲ ಕನ್ನಡಿಗರನ್ನು ಒಗ್ಗೂಡಿಸಿ ಹೋರಾಟವನ್ನು ಮುಂದುವರಿಸಲಾಗುತ್ತದೆ ಎಂದು ಸಿದ್ದರಾಮಯ್ಯ ಘೋಷಿಸಿದ್ದಾರೆ.
