Home Uncategorized ಸಿದ್ದರಾಮಯ್ಯಗೆ ಬಿಜೆಪಿ 'ಮಾಸ್ಟರ್ ಸ್ಟ್ರೋಕ್': ತವರು ಜಿಲ್ಲೆಯಾದರೂ 'ವರುಣಾ' ಗೆಲುವು ಸುಲಭವಲ್ಲ!

ಸಿದ್ದರಾಮಯ್ಯಗೆ ಬಿಜೆಪಿ 'ಮಾಸ್ಟರ್ ಸ್ಟ್ರೋಕ್': ತವರು ಜಿಲ್ಲೆಯಾದರೂ 'ವರುಣಾ' ಗೆಲುವು ಸುಲಭವಲ್ಲ!

24
0

ವರುಣಾ ವಿಧಾನಸಭೆ ಕ್ಷೇತ್ರದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಸಚಿವ ವಿ.ಸೋಮಣ್ಣ ಅವರನ್ನು ಕಣಕ್ಕಿಳಿಸುವ ಮೂಲಕ ಬಿಜೆಪಿ ಮಾಸ್ಚರ್ ಸ್ಟ್ರೋಕ್ ನೀಡಿದೆ. ಮೈಸೂರು: ವರುಣಾ ವಿಧಾನಸಭೆ ಕ್ಷೇತ್ರದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಸಚಿವ ವಿ.ಸೋಮಣ್ಣ ಅವರನ್ನು ಕಣಕ್ಕಿಳಿಸುವ ಮೂಲಕ ಬಿಜೆಪಿ ಮಾಸ್ಚರ್ ಸ್ಟ್ರೋಕ್ ನೀಡಿದೆ.

ಸಿದ್ದರಾಮಯ್ಯ ತವರು ಜಿಲ್ಲೆಯಾದ ವರುಣಾ ಕ್ಷೇತ್ರವನ್ನು ಸಿದ್ದರಾಮಯ್ಯ ಪುತ್ರ ಯತೀಂದ್ರ ಪ್ರತಿನಿಧಿಸುತ್ತಿದ್ದರು, ಆದರೆ ಈ ಬಾರಿ ತಮ್ಮ ತಂದೆಗೋಸ್ಕರ ಕ್ಷೇತ್ರ ತ್ಯಾಗ ಮಾಡಿದ್ದಾರೆ. ವರುಣಾ ಕ್ಷೇತ್ರ ಸಿದ್ದರಾಮಯ್ಯ ತವರು ಜಿಲ್ಲೆಯಲ್ಲಿದ್ದರೂ  ಗೆಲುವು ಸುಲಭವಲ್ಲ. ಕೋಲಾರದಿಂದ ಸ್ಪರ್ಧಿಸಲು ಸಿದ್ದರಾಮಯ್ಯ ಸಿದ್ಧರಿದ್ದರೂ ರಿಸ್ಕ್ ತೆಗೆದುಕೊಳ್ಳದಂತೆ ಹಾಗು ವರುಣಾದಲ್ಲಿ ಸ್ಪರ್ಧಿಸುವಂತೆ ಕಾಂಗ್ರೆಸ್ ಹೈಮಾಂಡ್ ಸೂಚಿಸಿದೆ.

ಆದರೆ ಬಿಜೆಪಿ ಸಿದ್ದರಾಮಯ್ಯ ಅವರನ್ನು ಸೋಲಿಸಲು ಎಲ್ಲಾ ರೀತಿಯ ಪ್ರಯತ್ನ ಮಾಡುತ್ತಿದೆ. ಸಿದ್ದರಾಮಯ್ಯ ವಿರುದ್ಧ ಸೋಮಣ್ಣ ಕಣಕ್ಕಿಳಿಸುವ ತಂತ್ರಗಾರಿಕೆ ಕೆಲಸ ಮಾಡಲಿದೆ ಎಂದು ಬಿಜೆಪಿ ಭಾವಿಸಿದೆ. ವರುಣಾ ಭಾಗದ ರಾಜಕೀಯ ಭೌಗೋಳಿಕತೆ ಮತ್ತು ಜಾತಿ ಲೆಕ್ಕಾಚಾರವನ್ನು ಚೆನ್ನಾಗಿ ತಿಳಿದಿರುವ ಸೋಮಣ್ಣ ಅವರ ಆಯ್ಕೆ “ಮಾಸ್ಟರ್‌ಸ್ಟ್ರೋಕ್” ಎಂದು ಕರೆಯಲಾಗಿದೆ.

ಇದನ್ನೂ ಓದಿ: ಕಮಲಕ್ಕೆ ರೆಬೆಲ್ಸ್ ಟ್ರಬಲ್: ವಿಧಾನಸಭೆ ಚುನಾವಣೆಗೂ ಮುನ್ನ ಪರಿಷತ್ ನಲ್ಲಿ ಬಹುಮತ ಕಳೆದುಕೊಂಡ ಬಿಜೆಪಿ!

ಕೋವಿಡ್ -19 ಸೋಂಕಿನ ವೇಳೆ ಮೈಸೂರು ಜಿಲ್ಲಾ ಸಚಿವರಾಗಿದ್ದ ಸೋಮಣ್ಣ,  ಸ್ಥಳೀಯ ರಾಜಕೀಯದ ಬಗ್ಗೆ ತಿಳಿದಿದ್ದಾರೆ. ಬೆಂಗಳೂರಿನಿಂದ ಸ್ವತಂತ್ರ ಅಭ್ಯರ್ಥಿಯಾಗಿ ಗೆದ್ದು ರಾಜಕೀಯ ವಲಯದಲ್ಲಿ ತಮ್ಮ ಸಾಮರ್ಥ್ಯ ಸಾಬೀತುಪಡಿಸಿರುವ ಸೋಮಣ್ಣ ಅವರು ಸಿದ್ದರಾಮಯ್ಯ ಅವರಿಗೆ ಕಠಿಣ ಪೈಪೋಟಿ ನೀಡುವ ನಿರೀಕ್ಷೆಯಲ್ಲಿದ್ದಾರೆ.

ಮತದಾರರ ನಡವಳಿಕೆಯಲ್ಲಿ ಪ್ರಮುಖ ಪಾತ್ರ ವಹಿಸುವ ವರುಣಾ ಕ್ಷೇತ್ರದ ಪ್ರಮುಖ ವೀರಶೈವ ಮಠ ಸುತ್ತೂರು ಮಠದ ಉಪಸ್ಥಿತಿಯಲ್ಲಿ ಲಿಂಗಾಯತ ಅಭ್ಯರ್ಥಿಯನ್ನು ಕಣಕ್ಕಿಳಿಸುವುದು ಲಿಂಗಾಯತ ಮತದಾರರನ್ನು ಕಾಂಗ್ರೆಸ್‌ನಿಂದ ದೂರವಿಡುವ ಕಾರ್ಯತಂತ್ರ ಎಂದು ಹೇಳಲಾಗಿದೆ.

ಸಿದ್ದರಾಮಯ್ಯ ವಿರುದ್ಧ ಸ್ಪರ್ಧಿಸಲು ಸೋಮಣ್ಣ ಅವರಿಗೆ ಆಸಕ್ತಿ ಇಲ್ಲದಿದ್ದರೂ ಹೈಕಮಾಂಡ್‌ನಿಂದ ಒತ್ತಡ ಬಂದ ಕಾರಣ ವರುಣಾದಿಂದ ಸ್ಪರ್ಧಿಸಲು ಒಪ್ಪಿದ್ದಾರೆ, ಅದಕ್ಕೆ ಪ್ರತಿಯಾಗಿ ಅವರೇ ಬಯಸಿದ್ದ ಚಾಮರಾಜನಗರದಿಂದ ಟಿಕೆಟ್‌ ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ. ಸೋಮಣ್ಣ ಪುತ್ರನಿಗೆ ಸೂಕ್ತ ಸ್ಥಾನಮಾನ ನೀಡುವ ಭರವಸೆಯನ್ನು ಬಿಜೆಪಿ ನೀಡಿದೆ ಎನ್ನಲಾಗಿದೆ.

ಕ್ಷೇತ್ರದಲ್ಲಿ ಸುಮಾರು 2.33 ಲಕ್ಷ ಮತದಾರರಿದ್ದು, ಉತ್ತಮ ಸಂಖ್ಯೆಯ ಲಿಂಗಾಯತ ಮತ್ತು ಕುರುಬ ಮತದಾರರಿದ್ದಾರೆ. ಸಿದ್ದರಾಮಯ್ಯ ಅವರ ತವರು ಕ್ಷೇತ್ರವಾಗಿದ್ದು, ಪುತ್ರ ಯತೀಂದ್ರ ಅವರು ಅಭಿವೃದ್ಧಿ ಕಾರ್ಯಗಳಿಂದ ಜನ ಮೆಚ್ಚುಗೆ ಗಳಿಸಿರುವ ಹಿನ್ನೆಲೆಯಲ್ಲಿ ಪರಿಸ್ಥಿತಿಗಳು ಸಿದ್ದರಾಮಯ್ಯ ಅವರಿಗೆ ಅನುಕೂಲಕರವಾಗಿವೆ ಎನ್ನಲಾಗಿದೆ.

ಇದನ್ನೂ ಓದಿ: ರಂಗೇರಿದ ವರುಣಾ- ಕನಕಪುರ: ಕಾಂಗ್ರೆಸ್ – ಬಿಜೆಪಿ ದಿಗ್ಗಜರ ಮಹಾಸಮರ; ‘ಸೋಮಣ್ಣ- ಸಾಮ್ರಾಟ್’ ಪವರ್ ಮೇಲೆ ಬಿಜೆಪಿ ಭರವಸೆ ಅಪಾರ!

ನಾನು ಕೇವಲ ನಾಮಪತ್ರ ಸಲ್ಲಿಸುತ್ತೇನೆ, ಇಲ್ಲಿ ಬಂದು ಪ್ರಚಾರ ಮಾಡುವುದಿಲ್ಲ ಎಂದು ಸಿದ್ದರಾಮಯ್ಯ  ಹೇಳಿದ್ದಾರೆ.  ಆದರೆ ಬಿಜೆಪಿಯಲ್ಲಿನ ಭಿನ್ನಾಭಿಪ್ರಾಯ ಸೋಮಣ್ಣ ಅವರಿಗೆ ಸಂಕಷ್ಟ ತರುವ ಸಾಧ್ಯತೆಯಿದೆ.  ಬಿ ವೈ ವಿಜಯೇಂದ್ರ ಅವರಿಗೆ ವರುಣಾ ಟಿಕೆಟ್ ನೀಡುವಂತೆ ಒತ್ತಡವಿತ್ತು.

ವರುಣಾದಲ್ಲಿ ಈಗಾಗಲೇ ‘ಗೋ ಬ್ಯಾಕ್ ಸೋಮಣ್ಣ’ ಅಭಿಯಾನ ಶುರುವಾಗಿದ್ದು, ಟಿಕೆಟ್‌ಗಾಗಿ ಆಕಾಂಕ್ಷಿಯಾಗಿದ್ದ ಬಿಜೆಪಿ ಮುಖಂಡ ಸದಾನಂದ ಅವರಿಗೆ ಅವಕಾಶ ಕೈ ತಪ್ಪಿದ್ದರಿಂದ ಅವರ ಅಭಿಮಾನಿಗಳು ಹಾಗೂ ಬೆಂಬಲಿಗರು ಅಭಿಯಾನ ಆರಂಭಿಸಿದ್ದಾರೆ.

ಸೋಮಣ್ಣ ಅವರಿಗೆ ವರುಣಾದಿಂದ ಸ್ಪರ್ಧಿಸಲು ಆಸಕ್ತಿ  ಇರಲಿಲ್ಲ, ಆದರೆ ಬಿಜೆಪಿ ನಾಯಕರ ಒತ್ತಡದಿಂದ ಸ್ಪರ್ಧಿಸುತ್ತಿದ್ದಾರೆ ಎಂದು ಯತೀಂದ್ರ ಸಿದ್ದರಾಮಯ್ಯ ಹೇಳಿದ್ದಾರೆ. ಸೋಮಣ್ಣ ಅವರನ್ನು ಎರಡು ಕ್ಷೇತ್ರಗಳಿಂದ ಕಣಕ್ಕಿಳಿಸಿ, ಎರಡರಲ್ಲೂ ಸೋಲಿಸಿ ಅವರನ್ನು ರಾಜಕೀಯವಾಗಿ ಮುಗಿಸಲು ಇದು ಬಿಜೆಪಿಯ ಒಂದು ಬಣದ ಷಡ್ಯಂತ್ರವೇ ಎಂಬ ಚರ್ಚೆಯೂ ರಾಜಕೀಯ ವಲಯದಲ್ಲಿ ನಡೆಯುತ್ತಿದೆ.

LEAVE A REPLY

Please enter your comment!
Please enter your name here