ಪ್ರವಾಸಿಗರು ಪ್ರವೇಶ ಟಿಕೆಟ್ಗಾಗಿ ಸರತಿ ಸಾಲಿನಲ್ಲಿ ನಿಲ್ಲುವುದನ್ನು ತಪ್ಪಿಸಲು ಹಂಪಿ ವಿಶ್ವ ಪರಂಪರೆಯ ಪ್ರದೇಶ ನಿರ್ವಹಣಾ ಪ್ರಾಧಿಕಾರ (HWHAMA) ಮತ್ತು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ (ASI) ಇತ್ತೀಚೆಗೆ ಹಂಪಿಯಲ್ಲಿ ಡಿಜಿಟಲ್ ಕ್ಯೂಆರ್ ಕೋಡ್ ಟಿಕೆಟಿಂಗ್ ವ್ಯವಸ್ಥೆಯನ್ನು ಪರಿಚಯಿಸಿದೆ. ಹೊಸಪೇಟೆ: ಪ್ರವಾಸಿಗರು ಪ್ರವೇಶ ಟಿಕೆಟ್ಗಾಗಿ ಸರತಿ ಸಾಲಿನಲ್ಲಿ ನಿಲ್ಲುವುದನ್ನು ತಪ್ಪಿಸಲು ಹಂಪಿ ವಿಶ್ವ ಪರಂಪರೆಯ ಪ್ರದೇಶ ನಿರ್ವಹಣಾ ಪ್ರಾಧಿಕಾರ (HWHAMA) ಮತ್ತು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ (ASI) ಇತ್ತೀಚೆಗೆ ಹಂಪಿಯಲ್ಲಿ ಡಿಜಿಟಲ್ ಕ್ಯೂಆರ್ ಕೋಡ್ ಟಿಕೆಟಿಂಗ್ ವ್ಯವಸ್ಥೆಯನ್ನು ಪರಿಚಯಿಸಿದೆ.
QR ಕೋಡ್ ಅನ್ನು ಸ್ಕ್ಯಾನ್ ಮಾಡಿದ ನಂತರ, ಪ್ರವಾಸಿಗರು ಡಿಜಿಟಲ್ UPI ಮೂಲಕ ಪಾವತಿ ಮಾಡಿ, ಟಿಕೆಟ್ ಪಡೆಯಬಹುದಾಗಿದೆ.
ಪ್ರವಾಸಿಗರ ಸಂಖ್ಯೆ ಹೆಚ್ಚಾಗಿದ್ದಾಗ ಕೌಂಟರ್ ಗಳಲ್ಲಿ ಟಿಕೆಟ್ ಪಡೆಯಲು ಜನರು ಇಷ್ಟು ದಿನ ಹೆಚ್ಚಿನ ಸಮಯ ಕ್ಯೂನಲ್ಲಿ ನಿಲ್ಲಬೇಕಿತ್ತು. ಹೀಗಾಗಿಯೇ ಅಧಿಕಾರಿಗಳು ಹೊಸ ಡಿಜಿಟಲ್ ವ್ಯವಸ್ಥೆಯನ್ನು ಪ್ರಾರಂಭಿಸಿದ್ದಾರೆ.
ಛಾಯಾಗ್ರಹಣ ಮತ್ತು ವೀಡಿಯೋಗ್ರಾಫಿ ಶುಲ್ಕಗಳನ್ನೂ ಕೂಡ ಡಿಜಿಟಲ್ ರೂಪದಲ್ಲಿಯೂ ಪಾವತಿಸಬಹುದಾಗಿದೆ.
ಪ್ರಸ್ತುತ ವಿಜಯ ವಿಠ್ಠಲ ದೇವಸ್ಥಾನ ಮತ್ತು ಎಎಸ್ಐ ಮ್ಯೂಸಿಯಂನಲ್ಲಿ ಇಂತಹ ಸೌಲಭ್ಯಗಳನ್ನು ನೀಡಲಾಗಿದ್ದು, ಶೀಘ್ರದಲ್ಲೇ ಇತರ ಸ್ಮಾರಕಗಳಿಗೂ ಸೌಲಭ್ಯಗಳ ವಿಸ್ತರಿಸಲಾಗುತ್ತದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಆದರೆ, ವ್ಯವಸ್ಥೆಗೆ ಹಂಪಿಯಲ್ಲಿ ನೆಟ್ ವರ್ಕ್ ಸಮಸ್ಯೆ ಎದುರಾಗಲಿದೆ ಎಂದು ಪ್ರವಾಸಿಗರು ಅಸಮಾಧಾನ ವ್ಯಕ್ತಪಡಿಸುತ್ತಿದ್ದು, ಎಎಸ್ಐ ಮತ್ತು ಎಚ್ಡಬ್ಲ್ಯೂಎಚ್ಎಎಂಎ ಅಧಿಕಾರಿಗಳಿಗೆ ಸಮಸ್ಯೆಯನ್ನು ಶೀಘ್ರಗತಿಯಲ್ಲಿ ಪರಿಹರಿಸುವಂತೆ ಮನವಿ ಮಾಡಿಕೊಂಡಿದ್ದಾರೆ.
ಎರಡು ತಿಂಗಳ ಹಿಂದೆ ವಿಜಯ ವಿಟ್ಲ ದೇವಸ್ಥಾನದ ಆವರಣದಲ್ಲಿ ಪ್ರವೇಶ ಟಿಕೆಟ್ ಪಡೆಯಲು ಕ್ಯೂಆರ್ ಬಾರ್ಕೋಡ್ ಸ್ಕ್ಯಾನ್ ಸೌಲಭ್ಯವನ್ನು ಪರಿಚಯಿಸಿದ್ದೇವೆ ಎಂದು ಹಿರಿಯ ಎಎಸ್ಐ ಅಧಿಕಾರಿಗಳು ತಿಳಿಸಿದ್ದಾರೆ.
ಟಿಕೆಟ್ ಪಡೆಯಲು ಸರತಿ ಸಾಲಿನಲ್ಲಿ ನಿಲ್ಲುವ ಪ್ರವಾಸಿಗರಿಗೆ ಇದು ಸಹಾಯಕವಾಗಿದೆ. ಪ್ರವಾಸಿಗರು ಒಮ್ಮೆ QR ಕೋಡ್ ಅನ್ನು ಸ್ಕ್ಯಾನ್ ಮಾಡಿದರೆ, ಅವರು ಸ್ಮಾರಕ ಮತ್ತು ಪ್ರವೇಶ ಶುಲ್ಕದ ಬಗ್ಗೆ ಮಾಹಿತಿಯನ್ನು ಪಡೆಯುತ್ತಾರೆ. ಇದೇ ವೇಳೆ ಗೂಗಲ್ ಪೇ ಅಥವಾ ಇನ್ನಾವುದೇ ಡಿಜಿಟಲ್ ವ್ಯವಸ್ಥೆ ಮೂಲಕ ಪಾವತಿ ಮಾಡಬಹುದು. ಆನ್ಲೈನ್ ಟಿಕೆಟ್ ಅನ್ನು ಪ್ರವೇಶದ ಸಂದರ್ಭದಲ್ಲಿ ತೋರಿಸಬಹುದು ಎಂದು ತಿಳಿಸಿದ್ದಾರೆ.
ನಾಲ್ಕು ದಿನ ಸರಣಿ ರಜೆ ಹಿನ್ನೆಲೆಯಲ್ಲಿ ಇತ್ತೀಚೆಗೆ ಹಂಪಿಯಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿ ಕಂಡು ಬಂದಿತ್ತು. ಸುಮಾರು 20,000ಕ್ಕೂ ಹೆಚ್ಚು ಮಂದಿ ಪ್ರವಾಸಿಗರು ಈ ಸಂದರ್ಭದಲ್ಲಿ ಹಂಪಿಗೆ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ಡಿಜಿಟಲ್ ಟಿಕೆಟ್ ವ್ಯವಸ್ಥೆ ಪ್ರವಾಸಿಗರಿಗೆ ಸಾಕಷ್ಟು ಅನುಕೂಲ ಮಾಡಿತ್ತು. ಡಿಜಿಟಲ್ ಪಾವತಿಗೆ ನೆಟ್ವರ್ಕ್ ಸಮಸ್ಯೆಯಾಗುತ್ತಿರುವುದು ನಮ್ಮ ಗಮನಕ್ಕೆ ಬಂದಿದೆ. ASI ಮಾರ್ಗಸೂಚಿಗಳ ಪ್ರಕಾರ, ಸಮಸ್ಯೆಯನ್ನು ಪರಿಹರಿಸಲು ಪ್ರಯತ್ನಿಸುತ್ತಿದ್ದೇವೆ. ಆದಷ್ಟು ಬೇಗ ಸಮಸ್ಯೆಗೆ ಸೂಕ್ತ ಪರಿಹಾರ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.