ಬೆಂಗಳೂರಿನ ಮೂರು ನಗರ ಪಾಲಿಕೆಗಳಿಂದ 108 ಅಸ್ವಚ್ಛ ಖಾಲಿ ನಿವೇಶನಗಳ ಮಾಲೀಕರಿಗೆ ಸ್ವಚ್ಛತಾ ನೋಟಿಸ್
ಬೆಂಗಳೂರು: ಕಸ, ಕಳೆ ಹಾಗೂ ಕಟ್ಟಡ ನಿರ್ಮಾಣ ತ್ಯಾಜ್ಯದಿಂದ ಅಸ್ವಚ್ಛಗೊಂಡಿದ್ದ ಖಾಲಿ ನಿವೇಶನಗಳ ವಿರುದ್ಧ ವಿಶೇಷ ಸ್ವಚ್ಛತಾ ಕಾರ್ಯಾಚರಣೆ ಕೈಗೊಂಡಿರುವ ಬೆಂಗಳೂರು ಉತ್ತರ, ಪಶ್ಚಿಮ ಮತ್ತು ದಕ್ಷಿಣ ನಗರ ಪಾಲಿಕೆಗಳು ಒಟ್ಟು 108 ನಿವೇಶನಗಳ ಮಾಲೀಕರಿಗೆ ನೋಟಿಸ್ ಜಾರಿ ಮಾಡಿವೆ.
ಗ್ರೇಟರ್ ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಅವರ ಸೂಚನೆಯಂತೆ ಈ ಕಾರ್ಯಾಚರಣೆ ಕೈಗೊಳ್ಳಲಾಗಿದೆ ಎಂದು ಆಯಾ ನಗರ ಪಾಲಿಕೆಗಳ ಮಾಧ್ಯಮ ಪ್ರಕಟಣೆಗಳು ತಿಳಿಸಿವೆ.
ಬೆಂಗಳೂರು ಪಶ್ಚಿಮ ನಗರ ಪಾಲಿಕೆಯು 41 ನಿವೇಶನಗಳ ಮಾಲೀಕರಿಗೆ ನೋಟಿಸ್ ನೀಡಿದ್ದರೆ, ಬೆಂಗಳೂರು ದಕ್ಷಿಣ ನಗರ ಪಾಲಿಕೆಯು 30 ಮಾಲೀಕರಿಗೆ ನೋಟಿಸ್ ಜಾರಿ ಮಾಡಿದೆ. ಬೆಂಗಳೂರು ಉತ್ತರ ನಗರ ಪಾಲಿಕೆ ಮತ್ತೂ 37 ನಿವೇಶನಗಳ ಮಾಲೀಕರಿಗೆ ನೋಟಿಸ್ ನೀಡಿದೆ.
ಪಾಲಿಕೆ ವ್ಯಾಪ್ತಿಯಲ್ಲಿರುವ ಅನೈರ್ಮಲ್ಯದಿಂದ ಕೂಡಿದ ಖಾಲಿ ನಿವೇಶನಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಬೆಂಗಳೂರು ಪಶ್ಚಿಮ ನಗರ ಪಾಲಿಕೆ ಆಯುಕ್ತ ಡಾ. ರಾಜೇಂದ್ರ ಕೆ.ವಿ. ತಿಳಿಸಿದ್ದಾರೆ.
ಪಶ್ಚಿಮ ನಗರ ಪಾಲಿಕೆ ವ್ಯಾಪ್ತಿಯಲ್ಲಿ ನೋಟಿಸ್ ನೀಡಲಾದ 41 ನಿವೇಶನಗಳಲ್ಲಿ ಪದ್ಮನಾಭನಗರದ 20, ಗೋವಿಂದರಾಜನಗರದ ಒಂಬತ್ತು, ಬಸವನಗುಡಿ ಮತ್ತು ರಾಜಾಜಿನಗರದ ತಲಾ ಐದು ಹಾಗೂ ಮಲ್ಲೇಶ್ವರಂನ ಎರಡು ನಿವೇಶನಗಳು ಸೇರಿವೆ.
ವಿಶೇಷ ಕಾರ್ಯಾಚರಣೆಯ ಪ್ರಾಥಮಿಕ ಹಂತದಲ್ಲಿ 30 ಅಸ್ವಚ್ಛ ಖಾಲಿ ನಿವೇಶನಗಳ ಮಾಲೀಕರಿಗೆ ನೋಟಿಸ್ ಜಾರಿ ಮಾಡಲಾಗಿದೆ ಎಂದು ಬೆಂಗಳೂರು ದಕ್ಷಿಣ ನಗರ ಪಾಲಿಕೆ ಆಯುಕ್ತ ಕೆ.ಎನ್. ರಮೇಶ್ ತಿಳಿಸಿದ್ದಾರೆ.
ಇವುಗಳಲ್ಲಿ ಪದ್ಮನಾಭನಗರದ 10 ಹಾಗೂ ಬಿಟಿಎಂ ಲೇಔಟ್, ಜಯನಗರ, ಬೆಂಗಳೂರು ದಕ್ಷಿಣ ಮತ್ತು ಬೊಮ್ಮನಹಳ್ಳಿ ವಿಭಾಗಗಳ ತಲಾ ಐದು ನಿವೇಶನಗಳು ಸೇರಿವೆ.
ಬೆಂಗಳೂರು ಉತ್ತರ ನಗರ ಪಾಲಿಕೆ ವ್ಯಾಪ್ತಿಯಲ್ಲಿ 37 ನಿವೇಶನಗಳ ಮಾಲೀಕರಿಗೆ ನೋಟಿಸ್ ನೀಡಲಾಗಿದ್ದು, ತಮ್ಮ ನಿವೇಶನಗಳಲ್ಲಿರುವ ಕಸ, ಕಳೆ ಹಾಗೂ ಕಟ್ಟಡ ನಿರ್ಮಾಣ ತ್ಯಾಜ್ಯವನ್ನು 24 ಗಂಟೆಗಳೊಳಗೆ ತೆರವುಗೊಳಿಸಿ ನಿಗದಿತ ಸ್ಥಳದಲ್ಲಿ ವಿಲೇವಾರಿ ಮಾಡುವಂತೆ ಸೂಚಿಸಲಾಗಿದೆ ಎಂದು ಆಯುಕ್ತ ಪೊಮ್ಮಲ ಸುನೀಲ್ ಕುಮಾರ್ ತಿಳಿಸಿದ್ದಾರೆ.
ನಿಗದಿತ ಅವಧಿಯೊಳಗೆ ಮಾಲೀಕರು ತಮ್ಮ ನಿವೇಶನಗಳನ್ನು ಸ್ವಚ್ಛಗೊಳಿಸಿದರೆ ಯಾವುದೇ ಮುಂದಿನ ಕ್ರಮ ಕೈಗೊಳ್ಳುವುದಿಲ್ಲ ಎಂದು ಉತ್ತರ ನಗರ ಪಾಲಿಕೆ ತಿಳಿಸಿದೆ.
ನೋಟಿಸ್ ಪಾಲಿಸಲು ಮಾಲೀಕರು ವಿಫಲರಾದರೆ ಸಂಬಂಧಪಟ್ಟ ನಗರ ಪಾಲಿಕೆಯೇ ಸ್ವಚ್ಛತಾ ಕಾರ್ಯ ಕೈಗೊಳ್ಳಲಿದೆ. ಕಸವನ್ನು ತೆರವುಗೊಳಿಸಿ ಸಾಗಿಸಲು ತಗಲುವ ಸಂಪೂರ್ಣ ವೆಚ್ಚವನ್ನು ನಿವೇಶನದ ವಿಸ್ತೀರ್ಣಕ್ಕೆ ಅನುಗುಣವಾಗಿ ಲೆಕ್ಕಹಾಕಿ ಮಾಲೀಕರ ಆಸ್ತಿ ತೆರಿಗೆ ಖಾತೆಗೆ ಸೇರಿಸಲಾಗುತ್ತದೆ.
ಬೆಂಗಳೂರು ಪಶ್ಚಿಮ ಮತ್ತು ದಕ್ಷಿಣ ನಗರ ಪಾಲಿಕೆಗಳು ಘನತ್ಯಾಜ್ಯ ನಿರ್ವಹಣಾ ನಿಯಮಗಳು-2016ರ ನಿಯಮ 15(2), ಘನತ್ಯಾಜ್ಯ ನಿರ್ವಹಣಾ ಉಪನಿಯಮಗಳು-2020ರ ಉಪನಿಯಮ 18(1)(a) ಮತ್ತು 18(1)(b), ಹಾಗೂ ಗ್ರೇಟರ್ ಬೆಂಗಳೂರು ಆಡಳಿತ ಕಾಯ್ದೆ-2024ರ ಕಲಂ 274(1), 285(2) ಮತ್ತು 290ರ ಅಡಿಯಲ್ಲಿ ಕ್ರಮ ಆರಂಭಿಸಿವೆ.
ಬೆಂಗಳೂರು ಉತ್ತರ ನಗರ ಪಾಲಿಕೆಯು ಘನತ್ಯಾಜ್ಯ ನಿರ್ವಹಣಾ ಉಪನಿಯಮಗಳು-2020ರ ಉಪನಿಯಮ 18(1)(b), ಹಾಗೂ ಗ್ರೇಟರ್ ಬೆಂಗಳೂರು ಆಡಳಿತ ಕಾಯ್ದೆ-2024ರ ಕಲಂ 274(1), 285(2) ಮತ್ತು 290 ಅನ್ನು ಉಲ್ಲೇಖಿಸಿದೆ.
ಅನ್ವಯಿಸುವ ನಿಯಮಗಳ ಪ್ರಕಾರ ಖಾಲಿ ನಿವೇಶನಗಳಲ್ಲಿ ತ್ಯಾಜ್ಯ ಸುರಿಯುವುದು ಅಥವಾ ಸುಡುವುದನ್ನು ನಿಷೇಧಿಸಲಾಗಿದೆ. ನಿವೇಶನಗಳಲ್ಲಿ ಸಂಗ್ರಹವಾಗಿರುವ ಕಸ, ಗಿಡಗಂಟಿ ಹಾಗೂ ಕಟ್ಟಡ ನಿರ್ಮಾಣ ಮತ್ತು ನೆಲಸಮ ತ್ಯಾಜ್ಯವನ್ನು ತೆರವುಗೊಳಿಸುವ ಜವಾಬ್ದಾರಿ ಮಾಲೀಕರದ್ದಾಗಿದೆ.
ನಿರ್ವಹಣೆಯಿಲ್ಲದ ಖಾಲಿ ನಿವೇಶನಗಳು ಸಾರ್ವಜನಿಕರಿಗೆ ತೊಂದರೆ ಉಂಟುಮಾಡುವ ಮತ್ತು ಅನೈರ್ಮಲ್ಯದ ತ್ಯಾಜ್ಯ ತಾಣಗಳಾಗಿ ಮಾರ್ಪಟ್ಟು ಸಾಂಕ್ರಾಮಿಕ ರೋಗಗಳು ಹರಡುವ ಅಪಾಯವನ್ನು ಹೆಚ್ಚಿಸುತ್ತವೆ ಎಂದು ನಗರ ಪಾಲಿಕೆಗಳು ತಿಳಿಸಿವೆ. ಸ್ವಚ್ಛ ಮತ್ತು ಸುಸ್ಥಿರ ನಗರ ಪರಿಸರ ಕಾಪಾಡಲು ನಿವೇಶನಗಳನ್ನು ಸ್ವಚ್ಛವಾಗಿಟ್ಟುಕೊಂಡು ಸಹಕರಿಸುವಂತೆ ಮಾಲೀಕರಿಗೆ ಮನವಿ ಮಾಡಿವೆ.
