ಬೇಸ್ಮೆಂಟ್ಗಳ ವಾಣಿಜ್ಯ ಬಳಕೆ, ಒತ್ತುವರಿ ವಿರುದ್ಧ ಕ್ರಮಕ್ಕೆ ಬೆಂಗಳೂರು ದಕ್ಷಿಣ ನಗರ ಪಾಲಿಕೆ ಸೂಚನೆ; ಮಳೆನೀರು ಕಾಲುವೆ ಹೂಳೆತ್ತುವಿಕೆಗೂ ಆದೇಶ
ಬೆಂಗಳೂರು, ಸೆಪ್ಟೆಂಬರ್ 2: ಎಚ್ಎಸ್ಆರ್ ಲೇಔಟ್ ಮತ್ತು ಅರಕೆರೆ ಪ್ರದೇಶಗಳಲ್ಲಿ ಬೇಸ್ಮೆಂಟ್ಗಳನ್ನು ಅನಧಿಕೃತವಾಗಿ ವಾಣಿಜ್ಯ ಉದ್ದೇಶಕ್ಕೆ ಬಳಸುವುದು, ಪಾದಚಾರಿ ಮಾರ್ಗ ಹಾಗೂ ನಾಗರಿಕ ಸೌಲಭ್ಯ (CA) ನಿವೇಶನಗಳ ಒತ್ತುವರಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಬೆಂಗಳೂರು ದಕ್ಷಿಣ ನಗರ ಪಾಲಿಕೆ ಅಧಿಕಾರಿಗಳಿಗೆ ಸೂಚಿಸಲಾಗಿದ್ದು, ಮಳೆನೀರು ಕಾಲುವೆಗಳ ಹೂಳೆತ್ತುವಿಕೆ, ಕೆರೆ ಅಭಿವೃದ್ಧಿ, ರಸ್ತೆ ಕಾಮಗಾರಿ ಮತ್ತು ಘನತ್ಯಾಜ್ಯ ನಿರ್ವಹಣಾ ಕ್ರಮಗಳನ್ನು ತ್ವರಿತಗೊಳಿಸಲು ನಿರ್ದೇಶಿಸಲಾಗಿದೆ.
ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಶಾಸಕ ಸತೀಶ್ ರೆಡ್ಡಿ ಅವರೊಂದಿಗೆ ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಹಾಗೂ ಬೆಂಗಳೂರು ದಕ್ಷಿಣ ನಗರ ಪಾಲಿಕೆ ಆಯುಕ್ತ ಕೆ.ಎನ್. ರಮೇಶ್ ಬುಧವಾರ ಬೆಳಗ್ಗೆ ಎಚ್ಎಸ್ಆರ್ ಲೇಔಟ್ನ ಟ್ವಿನ್ ಪಾರ್ಕ್ ಮತ್ತು ಅರಕೆರೆ ಉದ್ಯಾನವನದಲ್ಲಿ ಸ್ಥಳ ಪರಿಶೀಲನೆ ನಡೆಸಿ ಸ್ಥಳೀಯ ನಿವಾಸಿಗಳ ಕುಂದುಕೊರತೆಗಳನ್ನು ಆಲಿಸಿದರು.
ಮಡಿವಾಳ, ಬಿಟಿಎಂ ಲೇಔಟ್ ಮತ್ತು ಪುಟ್ಟೇನಹಳ್ಳಿ ಭಾಗದಿಂದ ಹರಿದುಬರುವ ಮಳೆನೀರು ಎಚ್ಎಸ್ಆರ್ ಲೇಔಟ್ ಮೂಲಕ ಬೆಳ್ಳಂದೂರು ಕೆರೆಗೆ ಸಾಗುತ್ತದೆ. ಮಳೆಗಾಲದಲ್ಲಿ ಸರ್ವಿಸ್ ರಸ್ತೆಯ ಪಕ್ಕದ ಕಾಲುವೆಗಳಲ್ಲಿ ನೀರು ಉಕ್ಕಿ ಮನೆಗಳಿಗೆ ನುಗ್ಗುವುದನ್ನು ತಡೆಯಲು ಸರ್ವಿಸ್ ರಸ್ತೆಯಲ್ಲಿ ಪ್ರತ್ಯೇಕ ಚರಂಡಿ ವ್ಯವಸ್ಥೆ ಕಲ್ಪಿಸುವಂತೆ ನಿವಾಸಿಗಳು ಮನವಿ ಮಾಡಿದರು.
ಮಳೆನೀರು ಕಾಲುವೆಗಳಲ್ಲಿ ಸಂಗ್ರಹವಾಗಿರುವ ಹೂಳು ಮತ್ತು ತ್ಯಾಜ್ಯವನ್ನು ತೆರವುಗೊಳಿಸಲು ಸಕ್ಷನ್ ಪಂಪ್ ಹಾಗೂ ರೋಬೋಟಿಕ್ ಯಂತ್ರೋಪಕರಣಗಳನ್ನು ಬಳಸಿಕೊಂಡು ಆದ್ಯತೆಯ ಮೇರೆಗೆ ಡಿಸಿಲ್ಟಿಂಗ್ ಕಾಮಗಾರಿ ನಡೆಸಿ ನೀರು ಸರಾಗವಾಗಿ ಹರಿಯುವಂತೆ ನೋಡಿಕೊಳ್ಳಲು ಮಹೇಶ್ವರ್ ರಾವ್ ಅಧಿಕಾರಿಗಳಿಗೆ ಸೂಚಿಸಿದರು.
ಸೋಮಸುಂದರಪಾಳ್ಯ ಕೆರೆ ಸೇರಿದಂತೆ ಬೊಮ್ಮನಹಳ್ಳಿ ವ್ಯಾಪ್ತಿಯ ಕೆರೆಗಳಿಗೆ ತಂತಿ ಬೇಲಿ ಅಳವಡಿಕೆ ಮತ್ತು ಅಭಿವೃದ್ಧಿ ಕಾಮಗಾರಿಗಳಿಗೆ ತಕ್ಷಣ ಟೆಂಡರ್ ಕರೆಯುವಂತೆಯೂ ಅವರು ನಿರ್ದೇಶಿಸಿದರು.
ಬನ್ನೇರುಘಟ್ಟ ರಸ್ತೆಯ ಜೆ.ಡಿ. ಮರದಿಂದ ಐಐಎಂಬಿವರೆಗಿನ ವೈಟ್ ಟಾಪಿಂಗ್ ಮತ್ತು ದುರಸ್ತಿ ಕಾಮಗಾರಿಗಳನ್ನು ಸಾರ್ವಜನಿಕ ಸಂಚಾರಕ್ಕೆ ಅಡ್ಡಿಯಾಗದಂತೆ ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸಲು ಅಧಿಕಾರಿಗಳಿಗೆ ಸೂಚಿಸಲಾಯಿತು. ಸಿಂಗಸಂದ್ರ ಮತ್ತು ಎಇಸಿಎಸ್ ಲೇಔಟ್ನಲ್ಲಿ ಪಾಲಿಕೆಯ ವಲಯ ಸರಹದ್ದಿಗೆ ಸಂಬಂಧಿಸಿದ ಗೊಂದಲಗಳನ್ನು ಶೀಘ್ರ ಪರಿಹರಿಸುವಂತೆಯೂ ಮಹೇಶ್ವರ್ ರಾವ್ ತಿಳಿಸಿದರು.
ಘನತ್ಯಾಜ್ಯ ನಿರ್ವಹಣೆಗೆ ಸಂಬಂಧಿಸಿದಂತೆ, ಬಿಳೇಕಹಳ್ಳಿ ಸೇರಿದಂತೆ ಬೊಮ್ಮನಹಳ್ಳಿ ಕ್ಷೇತ್ರದ ಎಂಟು ವಾರ್ಡ್ಗಳ ಕಸ ಸಂಗ್ರಹಣಾ ಆಟೋಗಳಿಗೆ ಜಿಪಿಎಸ್ ಅಳವಡಿಕೆ ಹಾಗೂ ಸೆಕೆಂಡರಿ ಟ್ರಾನ್ಸ್ಫರ್ ಪಾಯಿಂಟ್ಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಕಡ್ಡಾಯವಾಗಿ ಅಳವಡಿಸುವಂತೆ ಮುಖ್ಯ ಆಯುಕ್ತರು ಸೂಚಿಸಿದರು.
ಪೌರಕಾರ್ಮಿಕರ ನಿವೃತ್ತಿ ಮತ್ತು ಮೃತಪಟ್ಟವರಿಂದ ತೆರವಾಗಿರುವ ಹುದ್ದೆಗಳನ್ನು ಭರ್ತಿ ಮಾಡುವಂತೆ ಶಾಸಕ ಸತೀಶ್ ರೆಡ್ಡಿ ಮನವಿ ಮಾಡಿದರು. ಸ್ವಚ್ಛತಾ ಕಾರ್ಯವನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡುವುದರ ಜೊತೆಗೆ ವಾಣಿಜ್ಯ ಸಂಸ್ಥೆಗಳು ರಸ್ತೆ ಬದಿಯಲ್ಲಿ ಕಸ ಬಿಸಾಡದಂತೆ ನೋಡಿಕೊಳ್ಳಲು ಅಧಿಕಾರಿಗಳಿಗೆ ಸೂಚಿಸಲಾಯಿತು. ವಾಣಿಜ್ಯ ಸಂಸ್ಥೆಗಳು ತಮ್ಮ ಆವರಣದೊಳಗೆ ಡಸ್ಟ್ಬಿನ್ ಇಟ್ಟು ಕಸವನ್ನು ಸಂಗ್ರಹಣಾ ವಾಹನಗಳಿಗೆ ನೀಡಬೇಕು ಎಂದು ತಿಳಿಸಲಾಯಿತು.
ಪರಿಶೀಲನೆ ವೇಳೆ ಎಚ್ಎಸ್ಆರ್ ಲೇಔಟ್ನ 19ನೇ ಮೇನ್ನ ಜೈ ಶ್ರೀರಾಮ್ ವೃತ್ತ ಹಾಗೂ 17 ಮತ್ತು 27ನೇ ಕ್ರಾಸ್ಗಳ ಪಾದಚಾರಿ ಮಾರ್ಗಗಳನ್ನು ಪರಿಶೀಲಿಸಲಾಯಿತು. ಯುಜಿಸಿ ಕೇಬಲ್ ಅಳವಡಿಸಲು ಪಾದಚಾರಿ ಮಾರ್ಗ ಅಗೆದು ದುರಸ್ತಿಪಡಿಸದೆ ಬಿಟ್ಟಿರುವ ಗುತ್ತಿಗೆದಾರರಿಗೆ ನೋಟಿಸ್ ನೀಡುವಂತೆ ಮಹೇಶ್ವರ್ ರಾವ್ ಸೂಚಿಸಿದರು. ಗುತ್ತಿಗೆದಾರರು ದುರಸ್ತಿ ಮಾಡದಿದ್ದರೆ ಪಾಲಿಕೆಯೇ ಕಾಮಗಾರಿ ನಡೆಸಿ ಅದರ ದುಪ್ಪಟ್ಟು ವೆಚ್ಚವನ್ನು ಗುತ್ತಿಗೆದಾರರಿಂದ ವಸೂಲಿ ಮಾಡುವಂತೆ ತಿಳಿಸಿದರು.
ಬೇಸ್ಮೆಂಟ್ಗಳನ್ನು ಅನಧಿಕೃತವಾಗಿ ವಾಣಿಜ್ಯ ಉದ್ದೇಶಕ್ಕೆ ಬಳಸುತ್ತಿರುವ ‘ವ್ಯಾಗಲ್ ಅಪ್’ ಅಂಗಡಿ ಸೇರಿದಂತೆ ಇತರ ಅಂಗಡಿಗಳಿಗೆ ನೋಟಿಸ್ ನೀಡಿ ಬಂದ್ ಮಾಡುವಂತೆ ಮುಖ್ಯ ಆಯುಕ್ತರು ಸೂಚಿಸಿದರು.
ಪಾದಚಾರಿ ಮಾರ್ಗದಲ್ಲಿ ಸಾರ್ವಜನಿಕರ ಸಂಚಾರಕ್ಕೆ ಅಡ್ಡಿಯಾಗಿರುವ ಮರಗಳ ರೆಂಬೆಗಳನ್ನು ಟ್ರಿಮ್ ಮಾಡುವುದು ಮತ್ತು ಸ್ವಾಭಿಮಾನ ಪಾರ್ಕ್ನಲ್ಲಿ ಅನಧಿಕೃತವಾಗಿ ನಿರ್ಮಿಸಿರುವ ಕಟ್ಟೆಗಳನ್ನು ತೆರವುಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಯಿತು. ಪಾದಚಾರಿ ಮಾರ್ಗದಲ್ಲಿ ವಾಹನ ನಿಲುಗಡೆ ಮಾಡುವವರ ವಿರುದ್ಧ ಸಂಚಾರ ಪೊಲೀಸರ ನೆರವಿನಿಂದ ಟೋಯಿಂಗ್ ಕಾರ್ಯಾಚರಣೆ ನಡೆಸಿ ದಂಡ ವಿಧಿಸುವಂತೆಯೂ, ಅಗತ್ಯವಿರುವ ಕಡೆ ಸಿಗ್ನಲ್ ಮತ್ತು ರಸ್ತೆ ವಿಭಜಕ ಕಾಮಗಾರಿಗಳನ್ನು ತಕ್ಷಣ ಕೈಗೆತ್ತಿಕೊಳ್ಳುವಂತೆಯೂ ಮಹೇಶ್ವರ್ ರಾವ್ ನಿರ್ದೇಶಿಸಿದರು.
ನಂತರ ಶಾಸಕ ಸತೀಶ್ ರೆಡ್ಡಿ ಮತ್ತು ಆಯುಕ್ತ ಕೆ.ಎನ್. ರಮೇಶ್ ಅರಕೆರೆ ವಾರ್ಡ್ನಲ್ಲಿ ಪರಿಶೀಲನೆ ಮುಂದುವರಿಸಿದರು. ವಾರ್ಡ್ ವ್ಯಾಪ್ತಿಯಲ್ಲಿ ₹200 ಕೋಟಿಗೂ ಅಧಿಕ ಮೌಲ್ಯದ ನಾಗರಿಕ ಸೌಲಭ್ಯ ನಿವೇಶನಗಳು ಅಕ್ರಮವಾಗಿ ಒತ್ತುವರಿಯಾಗುವುದನ್ನು ತಡೆಯಲು ತಂತಿ ಬೇಲಿ ಅಳವಡಿಸುವಂತೆ ನಿವಾಸಿಗಳು ಮನವಿ ಮಾಡಿದರು.
ಬಿಡಿಎ ಲೇಔಟ್ಗಳಲ್ಲಿನ ಸಿಎ ನಿವೇಶನಗಳು ಹಾಗೂ ಬಿಟಿಎಂ 5ನೇ ಹಂತದ ಬಿಎಂಟಿಸಿ ಬಸ್ ನಿಲ್ದಾಣದ ಜಾಗಗಳು ಅಕ್ರಮವಾಗಿ ಒತ್ತುವರಿಯಾಗಿವೆ ಎಂದು ಸತೀಶ್ ರೆಡ್ಡಿ ತಿಳಿಸಿ, ಅವುಗಳನ್ನು ತಕ್ಷಣ ತೆರವುಗೊಳಿಸುವಂತೆ ಮನವಿ ಮಾಡಿದರು. ಭಗವತಿ ಲೇಔಟ್ನಲ್ಲಿ ಮನೆಗಳು ಮತ್ತು ಸಂಪ್ಗಳಿಗೆ ಹಾನಿ ಉಂಟುಮಾಡುತ್ತಿರುವ ಬೃಹತ್ ಮರಗಳನ್ನು ತೆರವುಗೊಳಿಸುವುದು ಹಾಗೂ ಬಿಡಿಎ ಪಾರ್ಕ್ಗಳ ಸಮಗ್ರ ಅಭಿವೃದ್ಧಿಗೂ ಅವರು ಮನವಿ ಮಾಡಿದರು.
ಅರಕೆರೆಯಲ್ಲಿ ಬಿಡಿಎ ಮತ್ತು ಪಾಲಿಕೆ ಎಂಜಿನಿಯರ್ಗಳು ಜಂಟಿ ಸರ್ವೇ ನಡೆಸಿ ಪ್ರತಿಯೊಂದು ಸಿಎ ನಿವೇಶನ ಮತ್ತು ಪಾರ್ಕ್ನ ಗಡಿ ಗುರುತಿಸಿ, ಅನಧಿಕೃತ ಒತ್ತುವರಿಗಳನ್ನು ತೆರವುಗೊಳಿಸಿ ತಂತಿ ಬೇಲಿ ಅಳವಡಿಸುವಂತೆ ರಮೇಶ್ ಸೂಚಿಸಿದರು.
ಪಾದಚಾರಿ ಮಾರ್ಗಗಳ ಒತ್ತುವರಿಗಳನ್ನು ತೆರವುಗೊಳಿಸುವುದರ ಜೊತೆಗೆ ವಾಹನ ನಿಲುಗಡೆಗೆ ಮಾತ್ರ ಮೀಸಲಾಗಿರುವ ವಾಣಿಜ್ಯ ಸಂಕೀರ್ಣಗಳ ಬೇಸ್ಮೆಂಟ್ಗಳನ್ನು ವ್ಯಾಪಾರ ಚಟುವಟಿಕೆಗಳಿಗೆ ಬಳಸುತ್ತಿರುವವರಿಗೆ ನೋಟಿಸ್ ನೀಡಿ ಕ್ರಮ ಕೈಗೊಳ್ಳುವಂತೆಯೂ ಅವರು ನಿರ್ದೇಶಿಸಿದರು.
₹5 ಕೋಟಿ ವೆಚ್ಚದಲ್ಲಿ ನಿರ್ಮಿಸಲಾದ ಒಳಾಂಗಣ ಕ್ರೀಡಾಂಗಣವನ್ನೂ ಆಯುಕ್ತರು ಪರಿಶೀಲಿಸಿದರು. ಸಮರ್ಪಕ ನಿರ್ವಹಣೆಯ ಕೊರತೆಯಿಂದಾಗಿ ಕ್ರೀಡಾಂಗಣ ದುಷ್ಕರ್ಮಿಗಳ ತಾಣವಾಗುತ್ತಿರುವ ಬಗ್ಗೆ ವ್ಯಕ್ತವಾದ ಕಳವಳವನ್ನು ಗಂಭೀರವಾಗಿ ಪರಿಗಣಿಸಿ, ಅದನ್ನು ತಕ್ಷಣ ದುರಸ್ತಿಪಡಿಸಿ ಸಾರ್ವಜನಿಕ ಬಳಕೆಗೆ ಮುಕ್ತಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಅರಕೆರೆ ಮತ್ತು ಹುಳಿಮಾವು ಕೆರೆಗಳ ಅಭಿವೃದ್ಧಿ ಕಾಮಗಾರಿಗಳನ್ನು ನಿಗದಿತ ಕಾಲಮಿತಿಯೊಳಗೆ ಪೂರ್ಣಗೊಳಿಸುವಂತೆ ಗುತ್ತಿಗೆದಾರರಿಗೆ ಸೂಚಿಸಲಾಯಿತು.
ಒಳಚರಂಡಿ ಕಾಮಗಾರಿಗಾಗಿ ರಸ್ತೆ ಅಗೆಯುವ ಜಲಮಂಡಳಿ ಕಾಮಗಾರಿ ಪೂರ್ಣಗೊಂಡ ತಕ್ಷಣ ರಸ್ತೆಯನ್ನು ವೈಜ್ಞಾನಿಕವಾಗಿ ಪುನಶ್ಚೇತನಗೊಳಿಸಬೇಕು ಎಂದು ರಮೇಶ್ BWSSB ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು. ರಸ್ತೆಗಳನ್ನು ಸಮರ್ಪಕವಾಗಿ ಪುನಶ್ಚೇತನಗೊಳಿಸದಿದ್ದರೆ ಮುಂದಿನ ದಿನಗಳಲ್ಲಿ ರಸ್ತೆ ಅಗೆಯುವ ಕಾಮಗಾರಿಗಳಿಗೆ ಅನುಮತಿ ನೀಡುವುದಿಲ್ಲ ಎಂದು ಅವರು ತಿಳಿಸಿದರು.
ಪಾಲಿಕೆ ಅಪರ ಆಯುಕ್ತ ಡಾ. ನವೀನ್ ಕುಮಾರ್ ರಾಜು, ಮುಖ್ಯ ಅಭಿಯಂತರ ಬಸವರಾಜ್ ಕಬಾಡೆ, ಮಾಲತಿ ಹಾಗೂ ಇತರ ಅಧಿಕಾರಿಗಳು ಪರಿಶೀಲನೆ ವೇಳೆ ಉಪಸ್ಥಿತರಿದ್ದರು.
