ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರಕ್ಕೆ ಕೃತಜ್ಞತೆ ಸಲ್ಲಿಸಿದ ಬೆಂಗಳೂರು ದಕ್ಷಿಣ ಸಂಸದ ತೇಜಸ್ವೀ ಸೂರ್ಯ
ಬೆಂಗಳೂರು:
ಸಂಚಾರ ದಟ್ಟಣೆ ಸಮಸ್ಯೆಯಿಂದ ಬಳಲುತ್ತಿರುವ ಬೆಂಗಳೂರು ಮಹಾನಗರದ ಜನತೆಗೆ ಕೇಂದ್ರ ಸರ್ಕಾರವು ಸಿಹಿಸುದ್ದಿ ನೀಡಿದ್ದು, ಔಟರ್ ರಿಂಗ್ ರೋಡ್ ಮತ್ತು ಏರ್ಪೋರ್ಟ್ ಮಾರ್ಗಗಳ ಮೆಟ್ರೋ ಹಾಗೂ ಸಬರ್ಬನ್ ರೈಲು ಯೋಜನೆಯ ಅನುಮೋದನೆಯಿಂದ ನಗರವು ‘ಫಾಸ್ಟ್ ಟ್ರಾಕ್’ಗೆ ಅಡಿಯಿಡಲಿದೆ ಎಂದು ಬೆಂಗಳೂರು ದಕ್ಷಿಣ ಸಂಸದರಾದ ತೇಜಸ್ವೀ ಸೂರ್ಯ ರವರು ಇಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದ ಕ್ಯಾಬಿನೆಟ್ ಸಮಿತಿಯು ಬೆಂಗಳೂರು ಮೆಟ್ರೋ ಹಂತ 2A & 2B ಗೆ ಅನುಮೋದನೆ ನೀಡಿದ್ದು, ಸಿಲ್ಕ್ ಬೋರ್ಡ್ ನಿಂದ ಕೆ ಆರ್ ಪುರಂ( ಹಂತ 2A) ಮತ್ತು ಕೆ ಆರ್ ಪುರಂ ನಿಂದ ಹೆಬ್ಬಾಳ ಮಾರ್ಗವಾಗಿ ಏರ್ಪೋರ್ಟ್ ( ಹಂತ 2B) ಮಾರ್ಗವು 14,788 ಕೋಟಿ ರೂ,ಗಳ ವೆಚ್ಚದಲ್ಲಿ ಅನುಷ್ಠಾನಗೊಳ್ಳಲಿದೆ.
ಯೋಜನೆಯ ಮಹತ್ವದ ಕುರಿತು ವಿವರಿಸಿದ ಸಂಸದ ತೇಜಸ್ವೀ ಸೂರ್ಯ ರವರು, ಭಾರತದ 167 ಬಿಲಿಯನ್ ಡಾಲರ್ ಗಳ ಐ ಟಿ ಆದಾಯದಲ್ಲಿ ಬೆಂಗಳೂರು ನಗರವು ಶೇ 40 ರಷ್ಟು ಪಾಲು ಹೊಂದಿದ್ದು, ಔಟರ್ ರಿಂಗ್ ರೋಡ್ ನಲ್ಲಿರುವ ಐ ಟಿ ಕಂಪೆನಿಗಳಿಂದಲೇ ಶೇ.32 ರಷ್ಟು ಕೊಡುಗೆ ಇದ್ದು, ಸದರಿ 17ಕಿಮೀ ಮಾರ್ಗವು ಮೆಟ್ರೋ ರೈಲು ಸೌಲಭ್ಯದಿಂದ ವಂಚಿತವಾಗಿತ್ತು.ನಿಯಮಿತ ಸಾರಿಗೆ ಆಯ್ಕೆಗಳ ಅನ್ವಯ ಬೆಂಗಳೂರು ನಗರದಲ್ಲಿ 2008-2020ರ ಅವಧಿಯಲ್ಲಿ 53ಲಕ್ಷ ಖಾಸಗೀ ವಾಹನಗಳ ಸೇರ್ಪಡೆಯಾಗಿದ್ದನ್ನು ಇಲ್ಲಿ ಗಣನೆಗೆ ತೆಗೆದುಕೊಳ್ಳಬಹುದು.
ಹಲವು ಕಂಪನಿಗಳ 5.5 ಲಕ್ಷ ಉದ್ಯೋಗಿಗಳು ಸಂಚರಿಸಲಿರುವ ಈ ಮಾರ್ಗದಲ್ಲಿ ಸರಾಸರಿ ವಾಹನ ವೇಗವು ಪ್ರತಿ ಘಂಟೆಗೆ/4 ಕಿಮೀ ಮಂದಗತಿಗೆ ಇಳಿದಿರುವುದು ಈ ಮಾರ್ಗದ ಸಂಚಾರ ದಟ್ಟಣೆಗೆ ಹಿಡಿದ ಕೈಗನ್ನಡಿ.
“ಈ ಯೋಜನೆಯ ಪ್ರಾಮುಖ್ಯತೆ, ತ್ವರಿತಗತಿಯ ಅನುಮೋದನೆಗೆ ಸಂಬಂಧಿಸಿದಂತೆ ಕೇಂದ್ರ ನಗರಾಭಿವೃದ್ಧಿ ಸಚಿವರಾದ ಶ್ರೀ ಹರ್ದೀಪ್ ಸಿಂಗ್ ಪುರಿ, ನೀತಿ ಆಯೋಗದ ಸಿ.ಇ. ಓ ಶ್ರೀ ಅಮಿತಾಭ್ ಕಾಂತ್ ರನ್ನು ಹಲವು ಬಾರಿ ಭೇಟಿಯಾಗಿದ್ದು, ಯೋಜನೆಯ ಲಿಖಿತ ಮಾದರಿಗಳೊಂದಿಗೆ ವಿವರಿಸಿರುವ ಕುರಿತು ಸಂಸದ ತೇಜಸ್ವೀ ಸೂರ್ಯ ತಿಳಿಸಿದರು. ಮೆಟ್ರೋ ಹಾಗೂ ಸಬರ್ಬನ್ ರೈಲು ಯೋಜನೆಯ ಮಹತ್ವ,ಅಗತ್ಯತೆ ಕುರಿತು ಹಣಕಾಸು ಸಚಿವರಾದ ಶ್ರೀಮತಿ ನಿರ್ಮಲಾ ಸೀತಾರಾಮನ್, ಕೇಂದ್ರ ರೈಲ್ವೆ ಸಚಿವರಾದ ಶ್ರೀ ಪಿಯೂಷ್ ಗೋಯಲ್ ರಿಗೂ ಮನವರಿಕೆ ಮಾಡಿಕೊಟ್ಟಿದ್ದನ್ನು ಸಂಸದ ತೇಜಸ್ವೀ ಸೂರ್ಯ ಇದೇ ಸಂದರ್ಭದಲ್ಲಿ ವಿವರಿಸಿದರು.
” ಈ ಕುರಿತು ಸಂಸತ್ತಿನಲ್ಲಿಯೂ ಮಾತನಾಡಿ, ತ್ವರಿತಗತಿಯಲ್ಲಿ ಈ ಎರಡೂ ಮೆಟ್ರೋ ಮಾರ್ಗಗಳಿಗೆ ಅನುಮೋದನೆ ನೀಡುವಂತೆ ಗಮನ ಸೆಳೆದಿದ್ದು, 2025 ರ ಹೊತ್ತಿಗೆ ಈ ಮಾರ್ಗಗಳಲ್ಲಿ ಪ್ರತಿನಿತ್ಯ 7.5 ಲಕ್ಷ ಪ್ರಯಾಣಿಕರು ಸಂಚರಿಸುವ ಅಂದಾಜಿದೆ. ಬೆಂಗಳೂರು ನಗರದ ಸಾರ್ವಜನಿಕ ಸಾರಿಗೆಯ ಬಹುಮುಖ್ಯ ‘ಜೀವನಾಡಿ’ಯಾಗಿ ಈ 2 ಮಾರ್ಗಗಳು ಕಾರ್ಯನಿರ್ವಹಿಸಲಿದ್ದು, ಯೋಜನೆಗೆ ಅನುಮೋದನೆ ನೀಡಿದ ಪ್ರಧಾನಿ ಶ್ರೀ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವನ್ನು ನಾನು ಇದೇ ಸಂದರ್ಭದಲ್ಲಿ ಅಭಿನಂದಿಸುತ್ತೇನೆ” ಎಂದು ಸಂಸದ ತೇಜಸ್ವೀ ಸೂರ್ಯ ತಿಳಿಸಿದರು.
ಸಬರ್ಬನ್ ರೈಲು ಮತ್ತು ಮೆಟ್ರೋ ಮಾರ್ಗಗಳ ಅನುಷ್ಠಾನದಿಂದ ಬೆಂಗಳೂರು ನಗರದ ಸಾರ್ವಜನಿಕ ಸಾರಿಗೆ ವ್ಯವಸ್ಥೆಯಲ್ಲಿ ಆಮೂಲಾಗ್ರ ಬದಲಾವಣೆ ಕಾಣಲಿದ್ದು, ಕೇಂದ್ರ ಸರ್ಕಾರಕ್ಕೆ ನನ್ನ ಧನ್ಯವಾದಗಳು”.
ಸದರಿ ಯೋಜನೆಯ ಅನುಮೋದನೆಗೆ ಕೇಂದ್ರ ಸರ್ಕಾರದ ವತಿಯಿಂದ ತ್ವರಿತಗತಿಯಲ್ಲಿ ಸಂಪೂರ್ಣ ಸಹಕಾರ ದೊರೆತಿದ್ದು, ಕೇಂದ್ರ ಹಣಕಾಸು ಸಚಿವರಾದ ಶ್ರೀಮತಿ ನಿರ್ಮಲಾ ಸೀತಾರಾಮನ್ ರವರು, ಮೆಟ್ರೋ ಗೆ ಎ. ಡಿ.ಬಿ ಮತ್ತು ಜೆ.ಐ.ಸಿ.ಎ ವತಿಯಿಂದ ಸಾಲ ಪಡೆಯಲು ಸಹಕಾರ ನೀಡಿದ್ದು, ಯೋಜನೆಯ ಆರಂಭಕ್ಕೆ ವಿಶೇಷ ಆಸ್ಥೆ ವಹಿಸಿದ ಕೇಂದ್ರ ನಗರಾಭಿವೃದ್ಧಿ ಸಚಿವರಾದ ಶ್ರೀ ಹರ್ದೀಪ್ ಸಿಂಗ್ ರವರ ಕಾರ್ಯವೈಖರಿ ಅಭಿನಂದನಾರ್ಹ. ಮುಖ್ಯಮಂತ್ರಿ ಶ್ರೀ ಬಿ ಎಸ್ ಯಡಿಯೂರಪ್ಪ ನವರು ಈ ಯೋಜನೆಯ ಅನುಷ್ಠಾನವನ್ನು ಆದ್ಯತೆಯ ಮೇರೆಗೆ ಪರಿಗಣಿಸಿ, ಸಮಗ್ರ ಒಪ್ಪಿಗೆ ನೀಡಿದ್ದನ್ನು ನಾನು ಶ್ಲಾಘಿಸುತ್ತೇನೆ” ಎಂದು ಸಂಸದ ತೇಜಸ್ವೀ ಸೂರ್ಯ ಕೃತಜ್ಞತೆ ಸಲ್ಲಿಸಿದರು.
ಮೆಟ್ರೋ ಹಂತ 2A & 2B ಮಾರ್ಗಗಳ ಅನುಷ್ಠಾನದಿಂದ ಏರ್ಪೋರ್ಟ್ ಗೆ ತೆರಳುವ ಸಾವಿರಾರು ನಾಗರಿಕರಿಗೆ ಅನುಕೂಲವಾಗಲಿದ್ದು, ಕೆ ಆರ್ ಪುರಂ, ಯಲಹಂಕ ಮತ್ತು ಹೆಬ್ಬಾಳ ರೇಲ್ವೆ ನಿಲ್ದಾಣಗಳಲ್ಲಿನ ಇಂಟರ್ ಚೇಂಜ್ ವ್ಯವಸ್ಥೆಯಿಂದ ಟ್ರಾಫಿಕ್ ಹಾಟ್ ಸ್ಪಾಟ್ ಗಳಲ್ಲಿ ಸಂಚಾರ ಸಮಸ್ಯೆಗೆ ಕಡಿವಾಣ ಬೀಳಲಿದ್ದು, ಹೊಸೂರು ರಸ್ತೆ, ಸರ್ಜಾಪುರ, ವೈಟ್ ಫೀಲ್ಡ್, ಓಲ್ಡ್ ಮದ್ರಾಸ್ ರಸ್ತೆ ಮತ್ತು ಬಳ್ಳಾರಿ ರಸ್ತೆಗಳಲ್ಲಿನ ಸಂಚಾರ ವ್ಯವಸ್ಥೆ ಕೂಡ ಸರಾಗವಾಗಿ ತೆರಳಲು ಸಹಕಾರಿಯಾಗಲಿದೆ” ಎಂದು ವಿವರಿಸಿದರು.
‘ಬೆಂಗಳೂರು ನಗರದ ಸಾರಿಗೆ ವ್ಯವಸ್ಥೆಯಲ್ಲಿ ಇವೆರಡೂ ಮೆಟ್ರೋ ಮಾರ್ಗಗಳ ಅನುಷ್ಠಾನದಿಂದ, ಬೆಂಗಳೂರಿನ ಸಮಗ್ರ, ಔದ್ಯೋಗಿಕ, ಆರ್ಥಿಕ ಅಭಿವೃದ್ಧಿಗೆ ಮತ್ತಷ್ಟು ವೇಗ ದೊರಕಲಿದ್ದು, ಸಂಚಾರ ದಟ್ಟಣೆಗೆ ಬ್ರೇಕ್ ಬೀಳಲಿದೆ’ ಎಂದು ವಿವರಿಸಿದರು.