ನವದೆಹಲಿ: ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದ (Karnataka-Maharashtra Border Dispute) ಬಗ್ಗೆ ವಿವರಿಸಿದ್ದೇನೆ. ಜನರ ನಡುವೆ ಏನು ಸಮಸ್ಯೆ ಇಲ್ಲ. ಈ ಬಗ್ಗೆ ಯಾರು ಪ್ರಚೋದನಕಾರಿ ಹೇಳಿಕೆ ನೀಡಬಾರದು. ಸುಪ್ರೀಂಕೋರ್ಟ್ ಈ ಬಗ್ಗೆ ಆದೇಶ ನೀಡಲಿದೆ. ಸಣ್ಣ ಪುಟ್ಟ ವಿಚಾರಗಳ ಸಮಸ್ಯೆಗಳಿದ್ದರೆ ತಟಸ್ಥ ಸಮಿತಿಯಲ್ಲಿ ಚರ್ಚಿಸಿ ಸರಿ ಮಾಡಿಕೊಳ್ಳಲು ಕೇಂದ್ರ ಗೃಹ ಸಚಿವ ಅಮಿತ್ ಶಾ (Amit shah) ಸೂಚಿಸಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (CM Basavaraj Bommai) ಹೇಳಿದ್ದಾರೆ.
ನವದೆಹಲಿಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಜೊತೆ ಗಡಿ ವಿವಾದ ಕುರಿತು ಇಂದು (ಡಿ.14) ಚರ್ಚಿಸಿದ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು 2004 ರಿಂದ ಏನೆಲ್ಲ ಆಯ್ತು ಎಂದು ಹೇಳಿದ್ದೇನೆ. ಮಹಾರಾಷ್ಟ್ರದವರು ತಮ್ಮ ವಾದ ಮುಂದಿಟ್ಟರು. ಎರಡು ವಾದವನ್ನು ಕೇಳಿದ ಬಳಿಕ ಕೆಲವು ನಿರ್ದೇಶನ ನೀಡಿದ್ದಾರೆ. ಎಲ್ಲ ರಾಜಕೀಯ ಪಕ್ಷಗಳಿಗೂ ಅವರು ಮನವಿ ಮಾಡಿದ್ದಾರೆ. ರಾಜಕೀಯ ಹೊರೆತಾಗಿ ಒಂದಾಗಿ ಇರುವ ಬಗ್ಗೆ ಹೇಳಿದ್ದಾರೆ ಎಂದು ತಿಳಿಸಿದರು.
ಗಡಿ ವಿವಾದ ಜನವರಿಯಲ್ಲಿ ಕೋರ್ಟ್ನಲ್ಲಿ ವಿಚಾರಣೆಗೆ ಬರಲಿದೆ. ನಾನು ಗಡಿಯಲ್ಲಿನ ವಾಸ್ತವ ಸ್ಥಿತಿಗತಿ ಬಗ್ಗೆ ಹೇಳಿದ್ದೇನೆ. ಗಡಿಯಲ್ಲಿನ ಗಲಭೆ, ಪ್ರತಿಭಟನೆಗಳ ಬಗ್ಗೆ ನಿಗಾ ವಹಿಸಲು ಆಯಾ ರಾಜ್ಯದಲ್ಲಿ ಓರ್ವ ಐಪಿಎಸ್ ಅಧಿಕಾರಿಯನ್ನು ನೇಮಿಸಲು ಸೂಚಿಸಿದ್ದಾರೆ ಎಂದು ಬೊಮ್ಮಾಯಿ ತಿಳಿಸಿದ್ದಾರೆ.
ಮತ್ತೆ ಮುಂದಕ್ಕೆ ಹೋದ ಸಚಿವ ಸಂಪುಟ ವಿಸ್ತರಣೆ
ಸಚಿವ ಸಂಪುಟ ವಿಸ್ತರಣೆ ಬಗ್ಗೆ ಪ್ರಸ್ತಾಪಿಸಿದೆ. ಮತ್ತೊಮ್ಮೆ ಸಮಯ ಕೊಡುವುದಾಗಿ ಹೇಳಿದ್ದಾರೆ. ಶೀಘ್ರದಲ್ಲಿ ಸಮಯ ಕೊಡುವಂತೆ ಮನವಿ ಮಾಡಿದ್ದೇನೆ. ವಿಸ್ತರಣೆಯ ಸಾಧಕ ಬಾಧಕಗಳನ್ನು ತಿಳಿಸಿದ್ದೇನೆ ಎಂದು ಹೇಳಿದರು.
ಕೊಪ್ಪಳ ಕಾರ್ಯಕ್ರಮಕ್ಕೆ ಯಡಿಯೂರಪ್ಪ ಭಾಗಿಯಾಗುತ್ತಾರೆ
ಕೊಪ್ಪಳ ಕಾರ್ಯಕ್ರಮಕ್ಕೆ ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪಗೆ ಆಹ್ವಾನ ನೀಡದ ವಿಚಾರವಾಗಿ ಮಾತನಾಡಿದ ಅವರು ನಾಳೆ ಯಡಿಯೂರಪ್ಪನವರು ಕಾರ್ಯಕ್ರಮಕ್ಕೆ ಬರುತ್ತಿದ್ದಾರೆ. ಅಹಮದಾಬಾದ್ನಲ್ಲಿ ಎಲ್ಲ ನಾಯಕರು ಜೊತೆಯಾಗಿ ಇದ್ದೇವೆ. ಕಾಂಗ್ರೆಸ್ ಸುಮ್ನೆ ಆರೋಪ ಮಾಡುತ್ತಿದೆ. ಕಾಂಗ್ರೆಸ್ ಎಲೆಯಲ್ಲಿ ಕತ್ತೆ ಬಿದ್ದಿದೆ.
ಕತ್ತಲಲ್ಲಿ ಕರಿ ಬೆಕ್ಕು ಹುಡುಕುವ ಪ್ರಯತ್ನ ಮಾಡುತ್ತಿದ್ದಾರೆ. ಅವರಲ್ಲಿ ಸಾಕಷ್ಟು ಬಿರುಕುಗಳಿದೆ ಅದನ್ನು ಮರೆ ಮಾಚಲು ಪ್ರಯತ್ನಿಸುತ್ತಿದ್ದಾರೆ ಎಂದು ವಾಗ್ದಾಳಿ ಮಾಡಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ