Home ಬೆಂಗಳೂರು ನಗರ 6 ಲಕ್ಷ ಹಳ್ಳಿಗಳಿಗೆ ಬ್ರಾಡ್‍ಬ್ಯಾಂಡ್ ಇಂಟರ್‍ನೆಟ್- ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್

6 ಲಕ್ಷ ಹಳ್ಳಿಗಳಿಗೆ ಬ್ರಾಡ್‍ಬ್ಯಾಂಡ್ ಇಂಟರ್‍ನೆಟ್- ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್

48
0
Broadband Internet for 6 lakh villages- Rajeev Chandrashekhar

ಬೆಂಗಳೂರು:

ಬೃಹತ್ ಪ್ರಮಾಣದ “ಭಾರತ್ ನೆಟ್” ಯೋಜನೆ ಅನುಷ್ಠಾನಗೊಳ್ಳುತ್ತಿದ್ದು, 2024-2025ರ ವೇಳೆಗೆ ಪ್ರತಿಯೊಂದು ಗ್ರಾಮವನ್ನೂ ಡಿಜಿಟಲ್ ಸಂಪರ್ಕ ಮೂಲಕ ಜೋಡಿಸಲಾಗುವುದು. ಬ್ರಾಡ್‍ಬ್ಯಾಂಡ್ ಇಂಟರ್‍ನೆಟ್ 6 ಲಕ್ಷ ಹಳ್ಳಿಗಳನ್ನು ತಲುಪಲಿದೆ. 2.8 ಲಕ್ಷ ಗ್ರಾಮಗಳು ಈಗಾಗಲೇ ಇದರಡಿ ಸಂಪರ್ಕ ಪಡೆದಿವೆ ಎಂದು ಕೇಂದ್ರ ಕೌಶಲ್ಯಾಭಿವೃದ್ಧಿ ಹಾಗೂ ಉದ್ಯಮಶೀಲತೆ, ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಖಾತೆ ರಾಜ್ಯ ಸಚಿವರಾದ ರಾಜೀವ್ ಚಂದ್ರಶೇಖರ್ ಅವರು ತಿಳಿಸಿದರು.

ಜನಾಶೀರ್ವಾದ ಯಾತ್ರೆ ಸಂಬಂಧ ಶಿವಮೊಗ್ಗದಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಇದಲ್ಲದೆ ಡಿಜಿಟಲ್ ವಿಲೇಜ್ ಪರಿಕಲ್ಪನೆಯೂ ಜಾರಿಯಲ್ಲಿದೆ. 5 ಸಾವಿರ ಗ್ರಾಮಗಳ ಪ್ರತಿ ಮನೆಗೆ ಕಡಿಮೆ ಬೆಲೆಯ ಉಪಕರಣದ ಮೂಲಕ ಮಾದರಿ ಯೋಜನೆ ಜಾರಿಗೊಳ್ಳುತ್ತಿದೆ. ಕರ್ನಾಟಕದಲ್ಲಿ ಪ್ರತಿ ಜಿಲ್ಲೆಗೊಂದು ಡಿಜಿಟಲ್ ವಿಲೇಜ್ ಇರುತ್ತದೆ ಎಂದರು.

ವರ್ಕ್ ಫ್ರಂ ಹೋಂ ಪರಿಕಲ್ಪನೆಯಿಂದ ಬೆಂಗಳೂರಿನ ಮೇಲಿನ ಉದ್ಯೋಗದ ಒತ್ತಡ ಕಡಿಮೆ ಆಗಲಿದೆ. ಉದ್ಯೋಗಾವಕಾಶಗಳು ಶಿವಮೊಗ್ಗ ಸೇರಿದಂತೆ ರಾಜ್ಯದ ವಿವಿಧೆಡೆ ಹಂಚಿಹೋಗಲಿವೆ ಕೋವಿಡೋತ್ತರ ವಾಸ್ತವ ಇದಾಗಿದೆ. ಶಿವಮೊಗ್ಗ ಸೇರಿ ವಿವಿಧ ಜಿಲ್ಲೆಗಳಿಗೆ ಇದೊಂದು ವಿಶೇಷ ಅವಕಾಶ. ಕೌಶಲ- ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಅಗತ್ಯವಿರುವ ಎಲ್ಲ ಸೌಕರ್ಯಗಳನ್ನು ರಾಜ್ಯಕ್ಕೆ ಒದಗಿಸಲು ಬದ್ಧನಿರುವುದಾಗಿ ತಿಳಿಸಿದರು.

ಮಾಹಿತಿ ತಂತ್ರಜ್ಞಾನದ ಅಭಿವೃದ್ಧಿ ಒಂದೆರಡು ದಿನಗಳಲ್ಲಿ ಆಗಲಾರದು. ಆದರೆ, ಕೋವಿಡ್ ನಂತರ ವಿಶ್ವದ ವಿವಿಧ ದೇಶಗಳು ಈಗ ಉತ್ಪಾದನೆ ಮತ್ತು ಸೇವಾÀ ಕ್ಷೇತ್ರಗಳಲ್ಲಿ ಭಾರತದತ್ತ ನೋಡುತ್ತಿವೆ. 2014ರಲ್ಲಿ ದೇಶದ ಇಲೆಕ್ಟ್ರಾನಿಕ್ ವಸ್ತುಗಳ ಉತ್ಪಾದನೆಯು 1.9 ಲಕ್ಷ ಕೋಟಿ ಇತ್ತು. 2020ರಲ್ಲಿ ಅದು 5.3 ಲಕ್ಷ ಕೋಟಿಗೆ ಏರಿದೆ. ಉತ್ಪಾದನೆ ಕ್ಷೇತ್ರದಲ್ಲಿ ಚೀನಾ ಬದಲು ಭಾರತ ಮುಂಚೂಣಿ ನೆಲೆಯಲ್ಲಿದೆ ಎಂದು ವಿವರಿಸಿದರು.

ಬಳಕೆದಾರರ ರಕ್ಷಣೆ- ಹಿತಾಸಕ್ತಿ ಕಾಪಾಡುವ ಹೊಸ ಕಾಯಿದೆಗಳನ್ನು ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಜಾರಿಗೊಳಿಸಲಾಗುತ್ತಿದೆ. ತಂತ್ರಜ್ಞಾನ ಕೌಶಲದ ಶಿಕ್ಷಣ ಇಂದಿನ ಅಗತ್ಯವಾಗಿದೆ. ನೂತನ ಶಿಕ್ಷಣ ನೀತಿಯು (ಎನ್‍ಇಪಿ) ಉದ್ಯೋಗಾವಕಾಶಗಳನ್ನು ನೀಡಲಿದೆ ಎಂದರು. ಇದರಡಿ ಕೌಶಲ್ಯ ಸಂಬಂಧಿ ಶಿಕ್ಷಣಕ್ಕೆ ಅವಕಾಶವಿದೆ ಎಂದು ವಿವರಿಸಿದರು.

Broadband Internet for 6 lakh villages- Rajeev Chandrashekhar

ಐಟಿಐಗಳು, ಜನ್ ಶಿಕ್ಷಾ ಸಂಸ್ಥಾನ್, ಪ್ರಧಾನಿ ಕೌಶಲ ಕೇಂದ್ರ ಸೇರಿದಂತೆ ವಿವಿಧ ಸಂಸ್ಥೆಗಳಲ್ಲಿ ಕಳೆದ 5 ವರ್ಷಗಳಲ್ಲಿ 2 ಕೋಟಿ ಯುವಜನರು ಕೌಶಲಾಭಿವೃದ್ಧಿ ಮಾಡಿಕೊಂಡಿದ್ದಾರೆ. ಕಡಿಮೆ ಕಾಲಾವಧಿಯ ಕೋರ್ಸ್ ಮಾಡಿಕೊಂಡವರಲ್ಲಿ ಶೇ 60 ಜನರು ಉದ್ಯೋಗಾವಕಾಶ ಪಡೆದುಕೊಳ್ಳುತ್ತಿದ್ದಾರೆ. ಸರಕಾರಿ ಐಟಿಐಯ ಶೇ 82 ವಿದ್ಯ್ಯಾರ್ಥಿಗಳು ಉದ್ಯೋಗ ಪಡೆದರೆ, ಖಾಸಗಿ ಐಟಿಐ ತರಬೇತಾದ ಶೇ 55ರಿಂದ 60 ವಿದ್ಯಾರ್ಥಿಗಳು ಉದ್ಯೋಗ ಪಡೆಯುತ್ತಿದ್ದಾರೆ ಎಂದರು. ಈ ಪ್ರಮಾಣವನ್ನು ಇನ್ನಷ್ಟು ಹೆಚ್ಚಿಸಲು ಯತ್ನ ನಡೆದಿದೆ ಎಂದು ತಿಳಿಸಿದರು.

ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಕೆ.ಎಸ್.ಈಶ್ವರಪ್ಪ, ಶಿವಮೊಗ್ಗ ಲೋಕಸಭಾ ಕ್ಷೇತ್ರದ ಸಂಸದರಾದ ಶ್ರೀ ಬಿ.ವೈ. ರಾಘವೇಂದ್ರ, ಪುತೂರು ಶಾಸಕರು ಜನಾಶೀರ್ವಾದ ಯಾತ್ರೆ ಸಂಚಾಲಕರಾದ ಶ್ರೀ ಸಂಜೀವ ಮಠಂದೂರು, ರಾಜ್ಯ ಕಾರ್ಯದರ್ಶಿ ಹಾಗೂ ಜನಾಶೀರ್ವಾದ ಯಾತ್ರೆ ಸಹ ಸಂಚಾಲಕರಾದ ಶ್ರೀ ಕೇಶವಪ್ರಸಾದ್, ಶಿವಮೊಗ್ಗ ಜಿಲ್ಲೆಯ ಬಿಜೆಪಿ ಜಿಲ್ಲಾಧ್ಯಕ್ಷರಾದ ಶ್ರೀ ಟಿ.ಡಿ.ಮೇಘರಾಜ್ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು. ಬಳಿಕ ಸಸಿ ನೆಡುವ ಕಾರ್ಯ, ಸಭಾ ಕಾರ್ಯಕ್ರಮ, ಯಾತ್ರೆಯಲ್ಲೂ ಕೇಂದ್ರ ಸಚಿವರು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here