ಚಿಕ್ಕೋಡಿ:
ತಾಲ್ಲೂಕಿನ ಹಿರೇಕೋಡಿಯ ಜೈನ ಮುನಿ ಕಾಮಕುಮಾರ ನಂದಿ ಮಹಾರಾಜರ ಹತ್ಯೆ ಪ್ರಕರಣದ ತನಿಖೆಗೆ ಸಂಬಂಧಿಸಿ ಸಿಐಡಿ ಡಿಜಿಪಿ ಎಂ.ಎ.ಸಲೀಮ್ ಅವರು, ಹಿರೇಕೋಡಿಯ ನಂದಿಪರ್ವತ ಆಶ್ರಮ, ರಾಯಬಾಗ ತಾಲ್ಲೂಕಿನ ಖಟಕಬಾವಿ ಮತ್ತು ಮಾವಿನಹೊಂಡಕ್ಕೆ ಶನಿವಾರ ಭೇಟಿ ನೀಡಿ ಪರಿಶೀಲಿಸಿದರು.
ಖಟಕಬಾವಿಯ ಕೊಳವೆಬಾವಿಯಲ್ಲಿ ಪತ್ತೆಯಾಗಿದ್ದ ಜೈನ ಮುನಿ ಮೃತದೇಹವನ್ನು ಜುಲೈ 8ರಂದು ಹೊರತೆಗೆಯಲಾಗಿತ್ತು. ಈ ಪ್ರಕರಣದಲ್ಲಿ ನಾರಾಯಣ ಮಾಳಿ ಮತ್ತು ಹಾಸನದ ದಲಾಯತ್ ಅವರನ್ನು ಪೊಲೀಸರು ಬಂಧಿಸಿದ್ದರು. ಸರ್ಕಾರ ಈ ಪ್ರಕರಣವನ್ನು ತನಿಖೆಗಾಗಿ ಸಿಐಡಿಗೆ ಇತ್ತೀಚೆಗೆ ಹಸ್ತಾಂತರಿಸಿತ್ತು.
ಹಾಗಾಗಿ ಡಾ.ಎಂ.ಎ.ಸಲೀಮ್ ಮೂರು ಗ್ರಾಮಗಳಿಗೆ ಭೇಟಿ ಕೊಟ್ಟು, ಪ್ರಗತಿಯಲ್ಲಿರುವ ತನಿಖೆ ಪರಿಶೀಲಿಸಿದರು. ಸಿಐಡಿ ಐಜಿಪಿ ಪ್ರವೀಣ ಪವಾರ, ಉತ್ತರ ವಲಯದ ಐಜಿಪಿ ವಿಕಾಶಕುಮಾರ ವಿಕಾಶ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಂಜೀವ್ ಪಾಟೀಲ ಇದ್ದರು.