ಬೆಂಗಳೂರು:
ಕೋವಿಡ್-19ರ ಲಸಿಕೆಗೆ ಸಂಬಂಧಪಟ್ಟಂತೆ ಹಲವು ವಂದಂತಿಗಳು ಹರಡುತ್ತಿದ್ದು, ಇದರ ಪ್ರಾಮುಖ್ಯತೆ ಹಾಗೂ ಸುರಕ್ಷತೆಯ ಬಗ್ಗೆ ಮಾಧ್ಯಮದವರು ಜನರಿಗೆ ಅರಿವು ಮೂಡಿಸಬೇಕೆಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆಯುಕ್ತರಾದ ಡಾ. ಕೆ.ವಿ. ತ್ರಿಲೋಕಚಂದ್ರ ತಿಳಿಸಿದರು.
ಅವರು ಇಂದು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಮಹಾತ್ಮಗಾಂಧಿ ಮಾದ್ಯಮ ಕೇಂದ್ರದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಯೋಗದೊಂದಿಗೆ ಕೋವಿಡ್-19 ಲಸಿಕೆ ಆಂದೋಲನ ಕುರಿತು ಮಾಧ್ಯಮ ಪ್ರತಿನಿಧಿಗಳಿಗೆ ಹಮ್ಮಿಕೊಂಡಿದ್ದ ಒಂದು ದಿನದ ರಾಜ್ಯಮಟ್ಟದ ಕಾರ್ಯಾಗಾರದ ಉದ್ಘಾಟನೆ ನೆರವೇರಿಸಿ ಮಾತನಾಡಿದರು.
ಮಾಧ್ಯಮದವರು ಜನರಲ್ಲಿ ವಿಶ್ವಾಸ ಮೂಡಿಸಲು ಕ್ಷೇತ್ರ ಮಟ್ಟದಲ್ಲಿ ನಡೆಯುವಂತಹ ಸಕಾರಾತ್ಮಕ ಪ್ರಕರಣಗಳನ್ನು ಪ್ರಕಟಿಸಿ, ಲಸಿಕೆ ಕುರಿತ ಹಿಂಜರಿಕೆಯನ್ನು ಹೋಗಲಾಡಿಸುವುದರ ಜೊತೆಗೆ, ಜನರು ಲಸಿಕೆ ಪಡೆಯಲು ಮುಂದೆ ಬರುವಂತೆ ಪ್ರೋತ್ಸಾಹಿಸಿ, ಗುರಿ ಮುಟ್ಟಲು ಸಹಕರಿಸಬೇಕೆಂದರು.
![ಲಸಿಕೆಗೆ ಸಂಬಂಧಪಟ್ಟ ವದಂತಿಗಳಿಗೆ ಕಿವಿಗೊಡಬೇಡಿ : ಡಾ.ಕೆ.ವಿ. ತ್ರಿಲೋಕಚಂದ್ರ 1 Dont listen to vaccine related rumours Trilokachandra1](https://kannada.thebengalurulive.com/wp-content/uploads/2021/02/Dont-listen-to-vaccine-related-rumours-Trilokachandra1-1024x514.jpg)
ಲಸಿಕಾ ಅಭಿಯಾನದ ನಿರ್ದೇಶಕರಾದ ಶ್ರೀಮತಿ ಡಾ. ಅರುಂಧತಿ ಚಂದ್ರಶೇಖರ್ ಅವರು ಮಾತನಾಡಿ, ಕೊರೊನಾ ಲಸಿಕಾ ಅಭಿಯಾನ ಪ್ರಾರಂಭವಾಗಿ ಒಂದು ತಿಂಗಳಾಗಿದ್ದು, ಪ್ರಾರಂಭದ ಹಂತದಲ್ಲಿ ಶೇ.50 ರಷ್ಟು ಪ್ರಗತಿಯನ್ನು ಸಾಧಿಸಲಾಗಿತ್ತು. ತದನಂತರ ಪ್ರಗತಿಯು ಕಡಿಮೆಯಾಗುತ್ತಿದೆ. ಜನರಿಗೆ ಲಸಿಕೆ ಕುರಿತಂತೆ ವಿಶ್ವಾಸ ಮೂಡಿಸಲು ಮಾಧ್ಯಮವು ಪ್ರಮುಖ ಪಾತ್ರ ವಹಿಸುವುದರಿಂದ, ಮಾಧ್ಯಮದವರು ಪಾರದರ್ಶಕವಾಗಿ ಸರಿಯಾದ ಸುದ್ದಿಯನ್ನು ಜನತೆಗೆ ಮುಟ್ಟಿಸಿದರೆ, ನಮ್ಮ ರಾಜ್ಯದಲ್ಲಿ ಯಶಸ್ಸು ಕಾಣಬಹುದು ಎಂದರು.
ಮಾಧ್ಯಮದವರು ಬೇರೆ ಸುದ್ದಿಗಳಿಗೆ ಆದ್ಯತೆ ನೀಡದೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ನೀಡುವ ಸುದ್ದಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಬೇಕೆಂದರು.
ಈಗಾಗಲೇ ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತರಿಗೂ ಸಹ ಕಾರ್ಯಾಗಾರವನ್ನು ನಡೆಸಲಾಗಿದ್ದು, ಇಂದು ಮಾದ್ಯಮದವರಿಗೆ ಕಾರ್ಯಾಗಾರವನ್ನು ಏರ್ಪಡಿಸಲಾಗಿದೆ ಎಂದರು.
ಕಾರ್ಯಾಗಾರದಲ್ಲಿ ಲಸಿಕಾ ವಿಭಾಗದ ಉಪನಿರ್ದೇಶಕರಾದ ಶ್ರೀಮತಿ ಡಾ. ರಜನಿ ಸ್ವಾಗತಿಸಿದರು. ಕಾರ್ಯಾಗಾರದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ನಿರ್ದೇಶಕರಾದ ಓಂ ಪ್ರಕಾಶ್ ಪಾಟೀಲ್, ಇತರ ಹಿರಿಯ ಅಧಿಕಾರಿಗಳು ಹಾಗೂ ಸಂಪನ್ಮೂಲ ವ್ಯಕ್ತಿಗಳು ಉಪಸ್ಥಿತರಿದ್ದರು.