
Karnataka Budget 2023: budget exploits middle class: BJP Lader CT Ravi
ಬೆಂಗಳೂರು:
ಸುಂಕಗಳನ್ನು ಹೆಚ್ಚಿಸುವ ಮೂಲಕ ಮಧ್ಯಮ ವರ್ಗದವರನ್ನು ಶೋಷಿಸುವ ಬಜೆಟ್ ಇದೆಂಬಂತೆ ಕಾಣುತ್ತಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಅವರು ತಿಳಿಸಿದರು.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯನವರು ಮಂಡಿಸಿದ ರಾಜ್ಯ ಬಜೆಟ್ ಕುರಿತು ಪ್ರತಿಕ್ರಿಯೆ ನೀಡಿದರು. ನೀಡುವವರನ್ನು ಬೇಡುವಂತೆ ಮಾಡುವುದು ಇವರ ಉದ್ದೇಶ ಇದ್ದಂತಿದೆ. ಆ ಕೆಲಸವನ್ನು ಯಶಸ್ವಿಯಾಗಿ ಮಾಡಿದ್ದಾರೆ ಎಂದು ಟೀಕಿಸಿದರು.
ಸಾಲ ಮಾಡಿಯಾದರೂ ತುಪ್ಪ ತಿನ್ನು ಎಂಬಂತೆ, ನಾಳೆ ಬಗ್ಗೆ, ಕರ್ನಾಟಕದ ಭವಿಷ್ಯದ ಬಗ್ಗೆ ಯಾವುದೇ ದೂರದೃಷ್ಟಿಯ ಚಿಂತನೆ ಇಲ್ಲದ, ಸಂಸತ್ ಚುನಾವಣೆಯನ್ನು ಏನಾದರೂ ಮಾಡಿ ಗೆಲ್ಲಬೇಕೆಂಬ ಯೋಚನೆಯ ಬಜೆಟ್ ಮಂಡಿಸಿದ್ದಾರೆ. ಸುಮಾರು 85 ಸಾವಿರ ಕೋಟಿಯಷ್ಟು ಹೊಸ ಸಾಲ ಮಾಡಿ ಹಂಚಿಕೆ ಮಾಡುವ ನೀತಿ ಇವರದು. ಕರ್ನಾಟಕವನ್ನು ಭವಿಷ್ಯದಲ್ಲಿ ಮುಳುಗಿಸುವ ಭೀತಿ ಕಾಡುತ್ತಿದೆ ಎಂದು ವಿಶ್ಲೇಷಿಸಿದರು.
ಮೂಲ ಸೌಕರ್ಯಕ್ಕೆ ಬಂಡವಾಳ ಹೂಡಿದಾಗ ಉದ್ಯೋಗ ಸೃಷ್ಟಿ ಸಾಧ್ಯವಾಗುತ್ತದೆ. ಈ ಸರಕಾರ ಮೂಲ ಸೌಕರ್ಯಕ್ಕೆ ಒತ್ತು ಕೊಟ್ಟಿಲ್ಲ. ಮೂಲಸೌಕರ್ಯದಲ್ಲಿ ಹೂಡಿಕೆಗೆ ಕ್ರಮ ತೆಗೆದುಕೊಂಡಿಲ್ಲ. ಮಾವನ ಜೋಬಿನಿಂದ ಕತ್ತರಿಸಿ ಅತ್ತೆ ಕೈಗೆ ಕೊಟ್ಟು ಹಮ್ಮೀರ ಎನಿಸಿಕೊಳ್ಳುವ ಚಿಂತನೆ ಇವರದು ಎಂದು ಆಕ್ಷೇಪಿಸಿದರು.
ರೈತರು ದಲ್ಲಾಳಿಗಳ ಕಪಿಮುಷ್ಟಿಯಿಂದ ಹೊರಕ್ಕೆ ಬರಬಾರದು ಎಂಬ ಯೋಚನೆ, ಸಂಚು ನಿಮ್ಮದಾಗಿರುವಂತಿದೆ. ರೈತರ ಉತ್ಪನ್ನಗಳ ಮೌಲ್ಯವರ್ಧನೆ ಮಾಡಲು, ರೈತರು ಕೈಗಾರಿಕೋದ್ಯಮಿಗಳಾಗಲು, ರೈತರು ಜಾಗತಿಕ ಮಾರುಕಟ್ಟೆಯಲ್ಲಿ ತಮ್ಮ ವಸ್ತುಗಳನ್ನು ಮಾರಾಟ ಮಾಡಲು, ನೇರವಾಗಿ ಖರೀದಿ ಒಪ್ಪಂದ ಮಾಡಿಕೊಳ್ಳಲು ಫಾರ್ಮರ್ ಪ್ರೊಡ್ಯೂಸರ್ ಆರ್ಗನೈಸೇಷನ್ (ಎಫ್ಪಿಒ) ನೆರವಾಗುತ್ತಿತ್ತು. ನೀವು ಎಪಿಎಂಸಿ ತಿದ್ದುಪಡಿ ಕಾಯ್ದೆ ರದ್ದು ಮಾಡಲು ಮುಂದಾದುರಿಂದ ಎಫ್ಪಿಒ ಗತಿ ಏನಾಗಲಿದೆ ಎಂದು ಪ್ರಶ್ನಿಸಿದರು.
ರೈತರು ಉದ್ಯಮಿಗಳಾಗಬಾರದು ಎಂಬ ಚಿಂತನೆ ನಿಮ್ಮದೇ? ರೈತರು ಜಾಗತಿಕ ಮಾರುಕಟ್ಟೆಯಲ್ಲಿ ಸ್ಪರ್ಧೆ ಮಾಡಬಾರದೇ? ಅವರನ್ನು ಜಾಗತಿಕ ಮಾರುಕಟ್ಟೆ ಪ್ರವೇಶಿಸದಂತೆ ತಡೆಯುವ ಹುನ್ನಾರ ನಿಮ್ಮದೇ? ನಾವು ರೈತರ ಆದಾಯವನ್ನು ಯೋಚಿಸಿದರೆ ನೀವು ಎಪಿಎಂಸಿ ಆದಾಯವನ್ನು ಚಿಂತಿಸುತ್ತಿದ್ದೀರಲ್ಲವೇ ಎಂದು ಪ್ರಶ್ನೆಗಳನ್ನು ಮುಂದಿಟ್ಟರು. ಅಮೃತದಂಥ ಮಾತು, ವಿಷ ಹಾಕುವಂಥ ಚಿಂತನೆ ನಿಮ್ಮ ಬಜೆಟ್ನಲ್ಲಿ ಇದ್ದಂತಿದೆ ಎಂದು ಟೀಕಿಸಿದರು.
ಮೇಲುನೋಟಕ್ಕೆ ಸಕ್ಕರೆ ಕೊಟ್ಟು ಒಳಗಡೆ ಕಹಿ ಉಣಿಸುವ ಬಜೆಟ್ ಇದಾಗಿದೆ ಎಂದು ಆರೋಪಿಸಿದ ಅವರು, ನೂತನ ಶಿಕ್ಷಣ ನೀತಿಯನ್ನು (ಎನ್ಇಪಿ) ವಿರೋಧಿಸಿದ್ದೀರಿ; ಕಾಮಾಲೆ ರೋಗಿಗೆ ಕಾಣೋದೇಲ್ಲ ಹಳದಿ ಎಂಬಂತಿದೆ. ಪ್ರಾಥಮಿಕ ಭಾಷೆ ಮಾತೃಭಾಷೆಯೇ ಇರಬೇಕೆಂದು ಎನ್ಇಪಿ ಹೇಳುತ್ತದೆ. ಕೌಶಲ್ಯಯುಕ್ತ ಶಿಕ್ಷಣಕ್ಕೆ ಅಲ್ಲಿ ಅವಕಾಶವಿದೆ. ಅಂಥ ಶಿಕ್ಷಣ ನಿಮಗೆ ಬೇಡವೇ ಎಂದು ಪ್ರಶ್ನಿಸಿದರು. ಕ್ಯಾಪಿಟೇಶನ್ ಲಾಬಿಯನ್ನು ರಕ್ಷಿಸುವ ಚಿಂತನೆ ನಿಮ್ಮದು ಎಂದು ಆಕ್ಷೇಪಿಸಿದರು.
ಜಿಎಸ್ಟಿ ಜಾರಿ ಬಳಿಕ ನರೇಂದ್ರ ಮೋದಿಯವರು ಹೆಚ್ಚಿನ ತೆರಿಗೆ ಪಾಲನ್ನು ಕರ್ನಾಟಕಕ್ಕೆ ಕೊಡುವ ಕುರಿತು ಉಲ್ಲೇಖಿಸಬೇಕಿತ್ತು. ಆದರೆ, ಅದನ್ನು ಹೇಳುವ ಔದಾರ್ಯ ತೋರದೆ ನಿಮ್ಮ ಸಣ್ಣತನವನ್ನು ಯಥಾವತ್ ತೋರಿಸಿದ್ದೀರಿ ಎಂದು ಟೀಕಿಸಿದರು.