Home ಬೆಂಗಳೂರು ನಗರ Karnataka Budget 2023: ರಾಜಕೀಯ ಪ್ರೇರಿತ ರೀವರ್ಸ್ ಗೇರ್ ಬಜೆಟ್ : ಬಸವರಾಜ ಬೊಮ್ಮಾಯಿ

Karnataka Budget 2023: ರಾಜಕೀಯ ಪ್ರೇರಿತ ರೀವರ್ಸ್ ಗೇರ್ ಬಜೆಟ್ : ಬಸವರಾಜ ಬೊಮ್ಮಾಯಿ

18
0
Karnataka Budget 2023: Politically motivated reverse gear budget : Basavaraj Bommai
Karnataka Budget 2023: Politically motivated reverse gear budget : Basavaraj Bommai

ಬೆಂಗಳೂರು:

ಬಜೆಟ್ ನಲ್ಲಿ ಭವಿಷ್ಯದ ಯೋಜನೆಗಳ ಕುರಿತು ಹೇಳುವ ಬದಲು, ಹಿಂದಿನ ಸರ್ಕಾರ ಹಾಗೂ ಕೇಂದ್ರ ಸರ್ಕಾರವನ್ನು ದ್ವೇಷಿಸುವ ರಾಜಕೀಯ ಪ್ರೇರಿತ, ರಿವರ್ಸ್ ಗೇರ್ ಬಜೆಟ್‌ ಇದಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಟೀಕಿಸಿದ್ದಾರೆ.

ರಾಜ್ಯ ಸರ್ಕಾರದ ಬಜೆಟ್ ಕುರಿತು ಪತ್ರಿಕಾ ಗೋಷ್ಠಿ ನಡೆಸಿ ಮಾತನಾಡಿದ ಅವರು, ಇವತ್ತಿನ ಹಣಕಾಸಿನ ಸ್ಥಿತಿ, ಇವತ್ತಿನ ವಾಸ್ತವ ಸ್ಥಿತಿ ಬಗ್ಗೆ ಮಾತನಾಡುವ ಬದಲು ಹಳೆಯ ಕಾರ್ಯಕ್ರಮಗಳ ಬಗ್ಗೆ ಹೇಳುತ್ತಾರೆ ಎಂದರೆ, ಅವರು ಭೂತಕಾಲದಲ್ಲಿದ್ದಾರೆ. ಇದು ರಾಜಕೀಯ ಬಜೆಟ್. ಹಲವಾರು ಅಂಕಿ ಅಂಶಗಳನ್ನು ಆ ಸಂದರ್ಭಕ್ಕೆ ವಾಸ್ತವಾಂಶಕ್ಕೆ ತಕ್ಕಂತೆ ಎಲ್ಲ ಸರ್ಕಾರಗಳು ಮಾಡಿವೆ. ಪ್ರತಿಯೊಂದಕ್ಕೂ 2013 ಕ್ಕೆ ಹೋಲಿಕೆ ಮಾಡಿದ್ದಾರೆ. ಅದನ್ನು ನೋಡಿದರೆ ಅವರು ಹೆಚ್ಚು ಸಾಲ ಮಾಡಿದ್ದಾರೆ. ಇದೊಂದು ರಿವರ್ಸ್ ಗೇರ್ ಇರುವ ಸರ್ಕಾರ ಆಗಿದೆ ಎಂದು ವಾಗ್ದಾಳಿ ನಡೆಸಿದರು.

ರಾಜ್ಯಪಾಲರ ಭಾಷಣ ಮತ್ತು ಬಜೆಟ್ ವ್ಯತ್ಯಾಸ ನೋಡಿದರೆ ಇದೊಂದು ಸುಳ್ಳು ಹೇಳುವ ಸರ್ಕಾರ ಅಂತ ಗೊತ್ತಾಗಿದೆ. ಕೊವಿಡ್ ನಿರ್ವಹಣೆಯ ಬಗ್ಗೆ ಇಡೀ ವಿಶ್ವವೇ ಕೊಂಡಾಡಿದೆ. ನಮ್ಮ ರಾಜ್ಯದ ಕೊವಿಡ್ ನಿರ್ವಹಣೆಯ ಬಗ್ಗೆ ದೇಶವೇ ಕೊಂಡಾಡಿದೆ. ಕೇಂದ್ರ ಸರ್ಕಾರ ಕೊವಿಡ್ ಸಂದರ್ಭದಲ್ಲಿ ಸಾಕಷ್ಟು ಸಹಾಯ ಮಾಡಿದೆ. ನಮ್ಮ ಸರ್ಕಾರ ಕೂಡ ಸುಮಾರು 2000 ಕೋಟಿ ರೂ. ಕೊವಿಡ್ ನಿಂದ ಸಂಕಷ್ಟಕ್ಕೆ ಒಳಗಾದವರ ನೆರವಿಗೆ ನೀಡಿದ್ದೇವೆ. ನಾವು ಎಷ್ಟು ಹೆಚ್ಚು ತೆರಿಗೆ ಸಂಗ್ರಹ ಮಾಡಿದ್ದೇವೆ. ಕೇಂದ್ರ ಎಷ್ಟು ಅನುದಾನ ನೀಡಿದೆ ಎನ್ನುವುದು ದಾಖಲೆ ಇದೆ. ಕೇಂದ್ರದ ಅನುದಾನ ಕಡಿಮೆ ಆಗಿದೆ ಅಂತ ಹೇಳಿದ್ದಾರೆ. ಕೇಂದ್ರ ಸರ್ಕಾರ ಎರಡು ರೀತಿಯಲ್ಲಿ ಅನುದಾನ ನೀಡಲಿದೆ. ಕೆಲವು ಯೋಜನೆಗಳಲ್ಲಿ ನೇರವಾಗಿ ಫಲಾನುಭವಿಗಳಿಗೆ ಅನುದಾನ ದೊರೆಯುತ್ತದೆ ಅದನ್ನು ಮರೆಮಾಚುವ ಕೆಲಸ ಮಾಡಿದ್ದಾರೆ ಎಂದು ಹೇಳಿದರು.

ಈ ಬಜೆಟ್ ನೋಡಿದರೆ ಟೀಕೆ ಮಾಡುವುದಕ್ಕೆ ಹೆಚ್ಚಿನ ಸ್ಥಾನ ನೀಡಿದ್ದಾರೆ. ಗ್ಯಾರೆಂಟಿ ಯೋಜನೆಗಳಿಗೆ 52 ಸಾವಿರ ಕೋಟಿ ವೆಚ್ಚವಾಗಲಿದೆ ಅಂತ ಹೇಳಿದ್ದಾರೆ. ಈಗಾಗಲೇ 6 ತಿಂಗಳು ಕಳೆದಿದೆ. ಈ ವರ್ಷ ಸುಮಾರು 25 ಸಾವಿರ ಕೊಟಿ ಮಾತ್ರ ಹೆಚ್ಚಿಗೆ ಬೇಕಾಗುತ್ತದೆ. ತೆರಿಗೆ ಹೆಚ್ಚಳ ಮಾಡುವ ಅಗತ್ಯವಿರಲಿಲ್ಲ ಎಂದರು.

ಸಾಮಾನ್ಯರ ಮೇಲೆ ಹೊರೆ

ಗ್ಯಾರೆಂಟಿ ಯೋಜನೆಗಳ ಜಾರಿಯ ಹೆಸರಲ್ಲಿ ಈ‌ ಬಜೆಟ್ ಸಾಮಾನ್ಯರ ಮೇಲೆ ದೊಡ್ಡ ಹೊರೆ ಹೊರೆಸಿದೆ. ನಮ್ಮದು 77 ಸಾವಿರ ಕೋಟಿ ಸಾಲ ಇದ್ದದ್ದು, ಈಗ 88 ಸಾವಿರ ಕೋಟಿಗೆ ಹೆಚ್ಚಿಸಿದ್ದಾರೆ. ಬಜೆಟ್ ಗಾತ್ರ 3.27 ಲಕ್ಷ ಕೋಟಿ ಮಾಡಿದ್ದಾರೆ. ನಾವು ಸರಪ್ಲಸ್ ಬಜೆಟ್ ಮಾಡಿದ್ದೇವು ಇವರು ಡೆಫಿಸಿಟ್ ಬಜೆಟ್ ಮಾಡಿದ್ದಾರೆ. ಯಾವುದೇ ಭರವಸೆ ನೀಡದೆ, ಜನರಿಗೆ ಸುಳ್ಳು ಬರವಸೆ ನೀಡಿದ್ದಾರೆ. ಶಿಕ್ಷಣ, ಆರೋಗ್ಯ, ಕೃಷಿ, ಪಿಡಬ್ಲುಡಿ, ನೀರಾವರಿ, ಯೋಜನೆಗಳಿಗೆ ಅನುದಾನ ಪ್ರಮಾಣ ಕಡಿಮೆ ಮಾಡಿದ್ದಾರೆ. ಹೆಚ್ಚಿನ ಅನುದಾನ ನೀಡದೆ ಅಭಿವೃದ್ಧಿ ಹೇಗೆ ಆಗುತ್ತದೆ ಎಂದು ಪ್ರಶ್ನಿಸಿದರು.

ಇವರು ಆರ್ಥಿಕ ಶಿಸ್ತು ತರುವುದಾಗಿ ಹೇಳಿದ್ದರು ಯಾವುದೇ ಆರ್ಥಿಕ ಶಿಸ್ತು ಇಲ್ಲ. ಇದು ರಾಜ್ಯದ ಜನತೆಗೆ ನಿರಾಶಾದಾಯಕವಾಗಿರುವ ರಿವರ್ಸ್ ಗೇರ್ ಬಜೆಟ್, ಟಿಕೆಗೆ ಬಜೆಟ್ ನಲ್ಲಿ ಹೆಚ್ಚು ಆದ್ಯತೆ ನೀಡಿದ್ದಾರೆ. ಅವರು ಬಜೆಟ್ ನಲ್ಲಿಯೂ ಕೂಡ ದ್ವೇಷದ ರಾಜಕಾರಣ ಮಾಡಿದ್ದಾರೆ. ನಮ್ಮ ಯೋಜನೆಗಳ ಬಗ್ಗೆ ಎಲ್ಲಿಯೂ ಪ್ರಸ್ತಾಪ ಮಾಡಿಲ್ಲ. ನಾವು ಎಲ್ಲರಿಗೂ ಉಚಿತ ಶಿಕ್ಷಣ ಪ್ರಸ್ತಾಪ ಮಾಡಿದ್ದೇವು. ಸ್ತ್ರೀ ಸಾಮರ್ಥ್ಯ, ಯುವ ನಿಧಿ ಯೋಜನೆ ಮಾಡಿದ್ದೆವು ಅವುಗಳ ಬಗ್ಗೆ ಯಾವುದೇ ಪ್ರಸ್ತಾಪವಿಲ್ಲ. ಇದೊಂದು ಜನ ವಿರೋಧಿ, ಅಭಿವೃದ್ಧಿ ಮಾರಕವಾಗುವಂತಹ ಯಾವುದೇ ಹೊಸ ಭರವಸೆ ನೀಡದಿರುವ, ದುಡಿಯುವ ವರ್ಗ, ಪರಿಶಿಷ್ಟ ಜನರಿಗೆ ಯಾವುದೇ ಅನುಕೂಲಕರವಲ್ಲದ ಬಜೆಟ್ ಇದಾಗಿದೆ.

ಕೊವಿಡ್ ಸಂದರ್ಭದಲ್ಲಿ ಏನೂ ಅಗಿಲ್ಲ ಎನ್ನುವಂತೆ ಭಾವಿಸಿದ್ದಾರೆ. ಕೊವಿಡ್ ಇಲ್ಲದ ಸಂದರ್ಭದಲ್ಲಿ ಇವರು ಸಾಲ ಮಾಡಿದ್ದಾರೆ. ಕೇಂದ್ರದಿಂದ ಬರುವ ಅನುದಾನ ಬರುತ್ತಿದೆ. ಜಿಎಸ್ ಟಿ ಪರಿಹಾರ ಐದು ವರ್ಷ ಬರುತ್ತದೆ ಅಂತ ಸಂವಿಧಾನದಲ್ಲಿಯೇ ಇದೆ. ಅದನ್ನು ಕಾಂಗ್ರೆಸ್ ನವರೂ ಒಪ್ಪಿಕೊಂಡು ಬಂದಿದ್ದಾರೆ. ಗ್ಯಾರೆಂಟಿ ಯೋಜನೆಗಳ ಭಾರ ಸಾಮಾನ್ಯ ಜನರ ಮೇಲೆ ಹಾಕಿದ್ದಾರೆ. ಬಜೆಟ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುವ ಸಚಿವರಿಗೆ ಅಧಿಕಾರದ ಮದ ಏರಿದೆ. ಇಷ್ಟು ಬೇಗ ಅಧಿಕಾರದ ಮದ ಏರಬಾರದು ಎಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಮಾಜಿ ಸಚಿವರಾದ ಬೈರತಿ ಬಸವರಾಜ, ಸಿ.ಸಿ.ಪಾಟೀಲ್, ಎಸ್ ಟಿ ಸೋಮಶೇಖರ, ಶಾಸಕರಾದ ಸುರೇಶಗೌಡ ಹಾಜರಿದ್ದರು.

LEAVE A REPLY

Please enter your comment!
Please enter your name here