ಬೆಂಗಳೂರು:
ಕಾಂಗ್ರೆಸ್ ಜನರಿಗೆ ಬೆಲೆಏರಿಕೆಯ ಗ್ಯಾರಂಟಿ ನೀಡಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಅವರು ಆಕ್ಷೇಪಿಸಿದರು.
ನಗರದ ಕೆ.ಜಿ.ರಸ್ತೆಯ ಹೋಟೆಲ್ ಬೆಂಗಳೂರು ಗೇಟ್ನಲ್ಲಿ ಗಾಂಧಿನಗರ ಮಂಡಲದ ವತಿಯಿಂದ ಇಂದು ನಡೆದ ‘ಮೇರಾ ಬೂತ್- ಸಬ್ಸೇ ಮಜ್ಬೂತ್’ ಕಾರ್ಯಕ್ರಮವನ್ನು ಉದ್ಘಾಟಿಸಿದ ಬಳಿಕ ಮಾಧ್ಯಮ ಪ್ರತಿನಿಧಿಗಳ ಜೊತೆ ಅವರು ಮಾತನಾಡಿದರು.
ಸದ್ದಿಲ್ಲದೆ ವಿದ್ಯುತ್ ದರ ಏರಿಸಿದ್ದಾರೆ. ಅಬಕಾರಿ ಸುಂಕವನ್ನೂ ಏರಿಸಿದ್ದಾರೆ. ಅದರ ಬೆನ್ನಿಗೇ ಎಲ್ಲ ಅಗತ್ಯ ವಸ್ತುಗಳ ಬೆಲೆ ಏರಿಕೆ ಆಗುತ್ತಿದೆ. ಪಿಕ್ ಪಾಕೆಟರ್ಗಿಂತ ನಾಜೂಕಾಗಿ ಜೋಬು ಕತ್ತರಿಸುವ ಕೆಲಸವನ್ನು ಕಾಂಗ್ರೆಸ್ ಸರಕಾರ ಮಾಡುತ್ತಿದೆ. ಮುಂದೆ ಕೊಟ್ಟಂತೆ ತೋರಿಸಿದ್ದಾರೆ. ಇನ್ನೊಂದೆಡೆ ಪಿಕ್ ಪಾಕೆಟ್ ಕೆಲಸವನ್ನು ಕಾಂಗ್ರೆಸ್ ಸರಕಾರ ಮಾಡುತ್ತಿರುವುದು ನಮ್ಮ ಅನುಭವಕ್ಕೆ ಬಂದಿದೆ ಎಂದು ನುಡಿದರು.
ಕಾಂಗ್ರೆಸ್ ಆಡಳಿತದಲ್ಲಿ ಇದ್ದಲ್ಲೆಲ್ಲ ಹಗರಣಗಳದ್ದೇ ಸದ್ದು. ಅವರೆಲ್ಲರೂ ಖಾಯಂ ಜೈಲಿನಲ್ಲಿ ಇರಬೇಕಾದ ಭಯದಿಂದ ಒಟ್ಟಾಗಲು ಯತ್ನಿಸುತ್ತಿದ್ದಾರೆ. ಭಾರತದ ಅಭಿವೃದ್ಧಿ, ಉದ್ಧರಿಸುವ ಅಜೆಂಡ ಅವರದಲ್ಲ. ಕುಟುಂಬ ಉಳಿಸಿಕೊಳ್ಳುವುದು, ಜೈಲಿಗೆ ಹೋಗುವುದನ್ನು ತಪ್ಪಿಸುವ ಉದ್ದೇಶ ಈ ವಿಪಕ್ಷಗಳದು ಎಂದು ಟೀಕಿಸಿದರು.
ಕೇಂದ್ರದ ಬಿಜೆಪಿ ಸರಕಾರ ಜನರ ಬದುಕನ್ನು ಬದಲಾಯಿಸಲು ಸಹಾಯ ಮಾಡುತ್ತಿದೆ ಎಂಬುದನ್ನು ತಿಳಿಸಬೇಕಿದೆ ಎಂದ ಅವರು, ಒಂದು ಸುಂಕ ಹೆಚ್ಚಳ, ವಿದ್ಯುತ್ ದರ ಏರಿಕೆಯ ಪರಿಣಾಮವಾಗಿ ಆಹಾರವಸ್ತುಗಳ ದರ ಏರಿಕೆ ಆಗುತ್ತದೆ. ನಾವು ತುಲನೆ ಮಾಡಿ ನೋಡಬೇಕು; ಕಾಂಗ್ರೆಸ್ ಆಡಳಿತವಿರುವ ರಾಜ್ಯಗಳಲ್ಲಿ ಪೆಟ್ರೋಲ್- ಡೀಸೆಲ್ ಬೆಲೆ ಎಷ್ಟಿದೆ? ಯಾಕೆ ಜಾಸ್ತಿ ಮಾಡಿದ್ದಾರೆ? ಎಂಬುದನ್ನು ತುಲನೆ ಮಾಡಿ ನೋಡಬೇಕು ಎಂದರು.
ವಿದ್ಯುತ್ ದರ ಏರಿಕೆ ಕುರಿತು ಕೈಗಾರಿಕೋದ್ಯಮಿಗಳು ಬೇಸರ- ಆತಂಕ ತೋಡಿಕೊಂಡಿದ್ದಾರೆ. ಕೈಗಾರಿಕೆ ಮುಚ್ಚಬೇಕಾದ ಸ್ಥಿತಿ ಬರಬಹುದೆಂದು ತಿಳಿಸಿದ್ದಾರೆ ಎಂದು ವಿವರಿಸಿದರು. ಇದರ ಹಿಂದೆ ದೊಡ್ಡ ಅಪಾಯ ಇದೆ. ಇದನ್ನು ಪರಿಹರಿಸಲು ರಾಜ್ಯ ಸರಕಾರ ಮುಂದಾಗಲಿ ಎಂದು ಒತ್ತಾಯಿಸಿದರು. ಕೈಗಾರಿಕೆಗಳು ಮುಚ್ಚಿದರೆ ಉದ್ಯೋಗಿಗಳು ಕೆಲಸ ಕಳಕೊಳ್ಳುತ್ತಾರೆ. ತೆರಿಗೆ ಸಂಗ್ರಹ ಕುಸಿಯುತ್ತದೆ. ಹೀಗಾದಾಗ ಉಚಿತ ಕೊಡಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.
ಸಾಲ ಮಾಡಿ ಎಷ್ಟು ದಿನ ತುಪ್ಪ ತಿನ್ನಬಹುದು; ಅಥವಾ ತಿನ್ನಿಸಬಹುದು ಎಂದು ಕೇಳಿದ ಅವರು, ಕೆಲವು ದಿನ ಕಳೆದ ಬಳಿಕ ತುಪ್ಪವೂ ಇಲ್ಲ; ಕೈಗೆ ಚಿಪ್ಪು ಅಷ್ಟೇ ಎಂದು ನುಡಿದರು. ಸಿದ್ದರಾಮಯ್ಯರ ಅವಧಿಯಲ್ಲಿ ರೀಡೂ ಆಗಿತ್ತು. ರೀಡೂ ಮೂಲಕ ವಂಚನೆ ಮಾಡುವುದು ಹೇಗೆ ಎಂಬುದನ್ನು ಪರಿಚಯಿಸಿದ್ದೇ ಕಾಂಗ್ರೆಸ್ ಆಡಳಿತ ಎಂದು ಆಕ್ಷೇಪ ವ್ಯಕ್ತಪಡಿಸಿದರು. ಕಾಂಗ್ರೆಸ್ಸಿಗರು ಪ್ರಾಮಾಣಿಕರಿದ್ದರೆ ಮೊದಲು ಆ ಕುರಿತು ಕ್ರಮ ಕೈಗೊಳ್ಳಲಿ ಎಂದು ಆಗ್ರಹಿಸಿದರು.
ಭೋಪಾಲ್ನಲ್ಲಿ ದೇಶದ ಎಲ್ಲ ಲೋಕಸಭಾ ಕ್ಷೇತ್ರದ ವಿಸ್ತಾರಕರ ಜೊತೆ ಹಾಗೂ ದೇಶದ 10 ಲಕ್ಷಕ್ಕೂ ಹೆಚ್ಚು ಕಾರ್ಯಕರ್ತರ ಜೊತೆಗೆ ವರ್ಚುವಲ್ ಮಾಧ್ಯಮದಲ್ಲಿ ಪ್ರಧಾನಿ ನರೇಂದ್ರ ಮೋದಿಜಿಯವರು ಮಾತನಾಡಿದ್ದಾರೆ. ಕಾರ್ಯಕರ್ತರ ಪ್ರಶ್ನೆಗಳು, ಅನುಮಾನಗಳಿಗೆ ಉತ್ತರವನ್ನು ವ್ಯಕ್ತಪಡಿಸಿದ್ದಾರೆ ಎಂದು ತಿಳಿಸಿದರು.
ಬಿಹಾರದ ಪಾಟ್ನಾದಲ್ಲಿ 15ಕ್ಕೂ ಹೆಚ್ಚು ವಿಪಕ್ಷಗಳು ಸೇರಿ ಬಿಜೆಪಿಯನ್ನು ಸೋಲಿಸುವುದು ಹೇಗೆ? ಎಂಬ ಪ್ರಯತ್ನ ನಡೆಸಿದ್ದಾರೆ. ಇದಕ್ಕೂ ಉತ್ತರ ಕೊಟ್ಟಿದ್ದಾರೆ. ಅವರ ಪರಿವಾರ ರಕ್ಷಣೆ ಎಂಬ ದೃಷ್ಟಿಯಿಂದ ಎಂಬುದು ಮಾತಿನಿಂದ ವ್ಯಕ್ತವಾಗಿದೆ. ಕೇಂದ್ರದ ಯೋಜನೆಗಳಿಂದ ಆರಂಭಿಸಿ ಗ್ಯಾರಂಟಿ ಕಾರ್ಡ್ ವರೆಗೆ ಉತ್ತರ ನೀಡಿದ್ದಾರೆ ಎಂದು ತಿಳಿಸಿದರು.
ವಿಧಾನಪರಿಷತ್ ಸದಸ್ಯೆ ತೇಜಸ್ವಿನಿ ಗೌಡ, ಜಿಲ್ಲಾ ಕಾರ್ಯದರ್ಶಿ ಸಪ್ತಗಿರಿ ಗೌಡ ಅವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.