Home ಬೆಂಗಳೂರು ನಗರ Karnataka DCM DK Shivakumar | ಬಿಜೆಪಿ ಸರಕಾರ ಕೋಮು ಘಟನೆಯ ಸಾವಿರಾರು ಪ್ರಕರಣಗಳನ್ನು ಕೈಬಿಟ್ಟಿದೆ,...

Karnataka DCM DK Shivakumar | ಬಿಜೆಪಿ ಸರಕಾರ ಕೋಮು ಘಟನೆಯ ಸಾವಿರಾರು ಪ್ರಕರಣಗಳನ್ನು ಕೈಬಿಟ್ಟಿದೆ, ಸಾವಿರಾರು ರೌಡಿ ಶೀಟರ್‌ಗಳನ್ನು ಬೀದಿಗೆ ಬಿಟ್ಟಿದೆ: ಡಿಸಿಎಂ ಡಿ.ಕೆ.ಶಿವಕುಮಾರ್‌ ತಿರುಗೇಟು

84
0
Karnataka DCM DK Shivakumar | BJP govt dropped thousands of cases of communal incidents, left thousands of rowdy sheeters on streets
Karnataka DCM DK Shivakumar | BJP govt dropped thousands of cases of communal incidents, left thousands of rowdy sheeters on streets

ಬೆಂಗಳೂರು:

“ಹಿಂದಿನ ಬಿಜೆಪಿ ಸರಕಾರ ಕೋಮು ಘಟನೆಗೆ ಸಂಬಧಪಟ್ಟ ಸಾವಿರಾರು ಪ್ರಕರಣಗಳನ್ನು ಕೈಬಿಟ್ಟಿದೆ. ಜತೆಗೆ ಸಾವಿರಾರು ರೌಡಿ ಶೀಟರ್‌ಗಳನ್ನು ಬೀದಿಗೆ ಬಿಟ್ಟಿದೆ” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್‌ ಅವರು ತಿರುಗೇಟು ನೀಡಿದ್ದಾರೆ.

ಸದಾಶಿವನಗರದ ನಿವಾಸದ ಬಳಿ ಮಾಧ್ಯಮಗಳು, ಗಲಭೆ ಪ್ರಕರಣ ಹಿಂಪಡೆಯುವಂತೆ ನೀವು ಪತ್ರ ಬರೆದಿದ್ದೀರಾ ಎನ್ನುವುದನ್ನು ಬಿಜೆಪಿ ಅಸ್ತ್ರವಾಗಿಸಿಕೊಂಡಿದೆ ಎಂದು ಕೇಳಿದ ಪ್ರಶ್ನೆಗೆ ಶಿವಕುಮಾರ್ ಅವರು ಬುಧವಾರ ಉತ್ತರಿಸಿದರು. ಬಿಜೆಪಿ ಸರ್ಕಾರದ ಅವಧಿಯಲ್ಲಿ ಹಿಂಪಡೆಯಲಾದ ಕೋಮು ಪ್ರಕರಣಗಳ ಬಗ್ಗೆ ಮಾಹಿತಿ ನೀಡಿದರು.

“ಬಿಜೆಪಿಯವರಿಗೆ ತಮ್ಮ ಮನೆ ಹುಳುಕು, ದೋಸೆ ತೂತು ಕಾಣುತ್ತಿಲ್ಲ. ವಿರೋಧ ಪಕ್ಷದ ನಾಯಕನನ್ನು ಆಯ್ಕೆ ಮಾಡದವರು ನಮಗೆ ಪ್ರಶ್ನೆ ಮಾಡುತ್ತಿದ್ದಾರೆ” ಎಂದು ವ್ಯಂಗ್ಯವಾಡಿದರು.

“ಬಿಜೆಪಿಯವರು ಅವರ ಅಧಿಕಾರವಧಿಯಲ್ಲಿ ಏನೇನು ಮಾಡಿದರು ಎಂಬುದು ಜನರಿಗೆ ಗೊತ್ತಿಲ್ಲ ಎಂದು ತಿಳಿದುಕೊಂಡಿದ್ದಾರೆ. ಜನ ಅವರನ್ನು ಎಲ್ಲಿ ಕೂರಿಸಬೇಕೊ ಅಲ್ಲಿ ಕೂರಿಸಿದ್ದಾರೆ. ಬಿಜೆಪಿ ಸರ್ಕಾರದಲ್ಲಿ ಯಾವ, ಯಾವ ಪ್ರಕರಣಗಳನ್ನು ಹಿಂಪಡೆಯಬೇಕು ಎಂದು ಮನವಿ ಮಾಡಿದವರ ಪಟ್ಟಿ ನಮ್ಮ ಬಳಿ ಇದೆ. ಬಸವರಾಜ ಬೊಮ್ಮಾಯಿ, ಅರಗ ಜ್ಞಾನೇಂದ್ರ, ಮಾಧುಸ್ವಾಮಿ ಅವರು ಸೇರಿದಂತೆ ಅನೇಕರು ಮನವಿ ಮಾಡಿದ್ದರು. 2023 ರ ಜನವರಿ ಹಾಗೂ ಫೆಬ್ರವರಿ ತಿಂಗಳಿನಲ್ಲಿ 7,361 ರೌಡಿಶೀಟರ್‌ಗಳನ್ನು ಪಟ್ಟಿಯಿಂದ ಕೈ ಬಿಟ್ಟಿದ್ದೇ ಬಿಜೆಪಿ ಸರ್ಕಾರ. ಅವರು ಈಗ ನಮಗೆ ಬುದ್ಧಿ ಹೇಳಲು ಬರುತ್ತಿದ್ದಾರೆ” ಎಂದು ತಿಳಿಸಿದರು.

“ಬಿಜೆಪಿಯವರು ಅವರ ಕಾರ್ಯಕರ್ತರ ಪರವಾಗಿ ರಾಜಕಾರಣ ಮಾಡಿದ್ದಾರೆ. ನಾವು ಕಾನೂನು ಪ್ರಕಾರ ನಡೆದುಕೊಳ್ಳುತ್ತಿದ್ದೇವೆ. ಅಮಾಯಕರ ಮೇಲೆ ಇರುವ ಪ್ರಕರಣಗಳನ್ನು ಮಾತ್ರ ಪರಿಶೀಲನೆ ಮಾಡುತ್ತಿದ್ದೇವೆ. ಕಾನೂನಿನ ಚೌಕಟ್ಟಿನಲ್ಲಿ ಮಾಡಲು ಅವಕಾಶವಿದ್ದರೇ ಮಾಡಬಹುದು ಎಂದು ಅಧಿಕಾರಿಗಳು ಶಿಫಾರಸ್ಸು ಮಾಡುತ್ತಾರೆ. ಇದಕ್ಕೆಂದೇ ಸಮಿತಿ ಇದೆ. ಅವರು ವರದಿ ನೀಡಿದ ಮೇಲೆ ತೀರ್ಮಾನ ಮಾಡಲಾಗುತ್ತದೆ” ಎಂದು ಹೇಳಿದರು.

ಪ್ರಕರಣಗಳನ್ನು ಹಿಂಪಡೆಯಲು ಸರ್ಕಾರ ಆತುರಲ್ಲಿ ಇದೆಯೇ ಎನ್ನುವ ಪ್ರಶ್ನೆಗೆ, “ನನ್ನ ಮೇಲೂ ಸಾಕಷ್ಟು ಪ್ರಕರಣಗಳು ಇವೆ, ಈಗಲೂ ಅನೇಕ ಚಾಲ್ತಿಯಲ್ಲಿವೆ. ಅನೇಕ ಪ್ರಕರಣಗಳನ್ನು ರಾಜಕೀಯ ಉದ್ದೇಶಕ್ಕೆ ಹಾಕಲಾಗಿದೆ. ಪ್ರಕರಣ ಹಿಂಪಡೆಯಲು ನಮಗೆ ಏನೂ ಅವಸರ ಇಲ್ಲ, ಬಿಜೆಪಿಯವರೇ ತರಾತುರಿಯಲ್ಲಿ ಇದ್ದಾರೆ. ನೀವು (ಮಾಧ್ಯಮದವರು) ಅವರನ್ನು ಪ್ರತಿದಿನ ತೋರಿಸುತ್ತಾ ಇದ್ದೀರಿ. ಅದಕ್ಕೆ ಅವರು ಆ ರೀತಿ ಹೇಳುತ್ತಿದ್ದಾರೆ” ಎಂದರು.

“ಯಾರ್ಯಾರು ಪ್ರಕರಣ ಹಿಂಪಡೆಯಲು ಪತ್ರ ಬರೆದಿದ್ದರು, ಸಹಿ ಹಾಕಿದ್ದರು ಆ ಪತ್ರಗಳನ್ನೆಲ್ಲಾ ಮುಂದಿಡಲೇ? ನಾನು ಹೆಸರಿಸಿದವರು ಗಲಭೆ ಪ್ರಕರಣಗಳನ್ನು ಹಿಂಪಡೆಯಲು ಶಿಫಾರಸ್ಸು ಮಾಡಿಲ್ಲ ಎಂದು ಹೇಳಲಿ. ಅವರೇ ಬರೆದಿರುವ ಪತ್ರಗಳನ್ನು ಬಿಡುಗಡೆ ಮಾಡುತ್ತೇನೆ” ಎಂದು ಸವಾಲು ಹಾಕಿದರು

LEAVE A REPLY

Please enter your comment!
Please enter your name here