Formation of a public transport fare control committee in Karnataka: ಕರ್ನಾಟಕದಲ್ಲಿ ಸಾರ್ವಜನಿಕ ಸಾರಿಗೆ ದರ ನಿಯಂತ್ರಣ ಸಮಿತಿ ರಚನೆ – ಖಾಸಗಿ ಬಸ್ಗಳಿಗೂ ಅವಕಾಶ ನೀಡಿ ಎಂದು ಸಿಎಂ ಸಿದ್ದರಾಮಯ್ಯಗೆ ಮೋಹನ್ದಾಸ್ ಪೈ ವ್ಯಂಗ್ಯ ಟ್ವೀಟ್
ಬೆಂಗಳೂರು:
ಬಿಎಂಟಿಸಿ ಹಿರಿಯ ಅಧಿಕಾರಿಗಳ ಹೆಸರಿನಲ್ಲಿ ನಕಲಿ ಸಹಿ ಹಾಕಿ 16 ಕೋಟಿ ರುಪಾಯಿ ವಂಚನೆ ಮಾಡಿದ ಆರು ಮಂದಿ ಆರೋಪಗಳ ಪೈಕಿ ಓರ್ವನನ್ನು ಬಂಧಿಸಲಾಗಿದೆ ಎಂದು ತಿಳಿದುಬಂದಿದೆ.
ಹಿರಿಯ ಅಧಿಕಾರಿಗಳ ಸಹಿ ಮತ್ತು ನಕಲಿ ಸೀಲುಗಳನ್ನು ಬಳಸಿ ಕೋಟ್ಯಂತರ ರೂಪಾಯಿ ನಷ್ಟ ಉಂಟು ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಯಲ್ಲಿದ್ದ ಏಳು ಅಧಿಕಾರಿಗಳ ವಿರುದ್ಧ ಕರ್ನಾಟಕ ಪೊಲೀಸರು ಎಫ್ ಐಆರ್ ದಾಖಲಿಸಿದ್ದು, ಈ ಪೈಕಿ ಒಬ್ಬ ವ್ಯಕ್ತಿಯನ್ನು ಬಂಧಿಸಿದ್ದಾರೆ.
ಈ ಸಂಬಂಧ ಬಿಎಂಟಿಸಿಯಲ್ಲಿ ಸಹಾಯಕ ಭದ್ರತಾ ಮತ್ತು ವಿಜಿಲೆನ್ಸ್ ಅಧಿಕಾರಿ ಸಿ.ಕೆ. ರಮ್ಯಾ ಅವರು ನೀಡಿದ್ದ ದೂರಿನ ಆಧಾರದ ಮೇಲೆ ಮಾಜಿ ಮುಖ್ಯ ಸಂಚಾರ ವ್ಯವಸ್ಥಾಪಕ ಶ್ರೀರಾಮ್ ಮುಲ್ಕಾವನ್ ವಿರುದ್ಧ ದೂರು ದಾಖಲಿಸಿದ್ದರು.
ಶ್ರೀರಾಮ್ ಮುಲ್ಕಾವನ್ ಮಾತ್ರವಲ್ಲದೇ ಮುದ್ದೋಡಿ ವಿಭಾಗೀಯ ಸಂಚಾರಿ ಅಧಿಕಾರಿ ಶ್ಯಾಮಲಾ ಎಸ್. ಮಮತಾ ಬಿ.ಕೆ. ಸಹಾಯಕ ಸಂಚಾರ ವ್ಯವಸ್ಥಾಪಕ; ಅನಿತಾ .ಟಿ, ಸಹಾಯಕ ಸಂಚಾರ ಅಧೀಕ್ಷಕರು; ಗುಣಶೀಲ, ಸಹಾಯಕ ಸಂಚಾರ ನಿರೀಕ್ಷಕರು; ಕಿರಿಯ ಸಹಾಯಕ ಆರ್.ವೆಂಕಟೇಶ್, ಕಿರಿಯ ಸಹಾಯಕ ಪ್ರಕಾಶ್ ಕೊಪ್ಪಳ ಅವರ ವಿರುದ್ದವೂ ದೂರು ದಾಖಲಾಗಿದೆ. ಈ ಸಂಬಂಧ ವಿಲ್ಸನ್ ಗಾರ್ಡನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಇತರ ಅಧಿಕಾರಿಗಳ ಹುಡುಕಾಟ ನಡೆಸಿದ್ದಾರೆ.

ಪ್ರಕರಣದ ಪ್ರಮುಖ ಆರೋಪಿ ಶ್ರೀರಾಮ್ ಮುಲ್ಕಾವನ್ ನನ್ನು ಪೊಲೀಸರು ಬಂಧಿಸಿದ್ದು, ಇತರರು ತಲೆಮರೆಸಿಕೊಂಡಿದ್ದಾರೆ. ಆರೋಪಿಗಳು ಬಿಎಂಟಿಸಿ ಮಾಜಿ ವ್ಯವಸ್ಥಾಪಕ ನಿರ್ದೇಶಕಿ ಸಿ.ಶಿಖಾ ಮತ್ತು ಭದ್ರತಾ ವಿಭಾಗದ ನಿರ್ದೇಶಕ ಮತ್ತು ವಿಜಿಲೆನ್ಸ್ ವಿಂಗ್ ನಿರ್ದೇಶಕ ಕೆ.ಅರುಣ್ ಅವರ ಸಹಿಯನ್ನು ನಕಲಿ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಗಳು ಗುಂಪಾಗಿ ಕೋಟಿಗಟ್ಟಲೆ ಹಣ ವಸೂಲಿ ಮಾಡಿದ್ದರು. ಹಗರಣ ಬೆಳಕಿಗೆ ಬಂದ ನಂತರ ಆರೋಪಿಗಳನ್ನು ವಾಣಿಜ್ಯ ಇಲಾಖೆಯಿಂದ ಬೇರೆ ಬೇರೆ ವಿಭಾಗಗಳಿಗೆ ವರ್ಗಾಯಿಸಲಾಗಿತ್ತು. ಆರೋಪಿಗಳು ನಕಲಿ ಸಹಿ ಮತ್ತು ಮುದ್ರೆಗಳನ್ನು ಬಳಸಿ ಸುಮಾರು 17.64 ಕೋಟಿ ರೂ. ಹಣವನ್ನು ಲಪಟಾಯಿಸಿದ್ದರು ಎಂದು ಆರೋಪಿಸಲಾಗಿದೆ.
ಈ ಬೆಳವಣಿಗೆ ಕುರಿತು ಪ್ರತಿಕ್ರಿಯಿಸಿದ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ, ‘ಬಿಎಂಟಿಸಿ ಪ್ರಕರಣದ ತನಿಖೆ ನಡೆಸುತ್ತಿದ್ದು, ಅಧಿಕಾರಿಗಳು ಯುಪಿಐ ಆ್ಯಪ್ ಮೂಲಕ 4 ರಿಂದ 5 ಲಕ್ಷ ರೂಪಾಯಿ ಲಂಚ ಪಡೆದಿರುವುದು ಪತ್ತೆಯಾಗಿದೆ. ಈಗ ಅಧಿಕಾರಿಗಳು ಅಮಾನತುಗೊಂಡಿದ್ದಾರೆ. ಕೇವಲ ಅಮಾನತುಗೊಳಿಸುವುದು ಸಾಕಾಗುವುದಿಲ್ಲ ಮತ್ತು ಆರೋಪಿಗಳಿಗೆ ಶಿಕ್ಷೆಯಾಗಬೇಕು ಎಂದು ನಾನು ಸೂಚನೆ ನೀಡಿದ್ದೇನೆ” ಎಂದು ಅವರು ಹೇಳಿದರು.
