Home ಬೆಂಗಳೂರು ನಗರ ಮೇಕ್ರೀ ಸರ್ಕ್‌ಲ್‌ನಲ್ಲಿ ಕೆಂಪೇಗೌಡರಿಗೆ ಡಿಸಿಎಂ ನಮನ

ಮೇಕ್ರೀ ಸರ್ಕ್‌ಲ್‌ನಲ್ಲಿ ಕೆಂಪೇಗೌಡರಿಗೆ ಡಿಸಿಎಂ ನಮನ

69
0

ನಾಡಪ್ರಭು ಆಶಯದಂತೆ ಬೆಂಗಳೂರು ಅಭಿವೃದ್ಧಿ: ಡಿಸಿಎಂ

ಬೆಂಗಳೂರು:

ಐದುನೂರು ವರ್ಷಗಳ ಹಿಂದೆ ನಾಡಪ್ರಭು ಕೆಂಪೇಗೌಡರು ಅತ್ಯಂತ ವೈಜ್ಞಾನಿಕವಾಗಿ ಬೆಂಗಳೂರು ಮಹಾನಗರವನ್ನು ನಿರ್ಮಾಣ ಮಾಡಿದ್ದರು. ಮುಂದಿನ ದಿನಗಳಲ್ಲಿ ಅವರ ಆಶಯದಂತೆ ನಗರವನ್ನು ಮತ್ತಷ್ಟು ಅಭಿವೃದ್ಧಿ ಪಥದಲ್ಲಿ ಮುಂದಕ್ಕೆ ಕೊಂಡೊಯ್ಯಲು ಸರಕಾರವು ಎಲ್ಲ ಕ್ರಮ ಕೈಗೊಳ್ಳುತ್ತಿದೆ ಎಂದು ನಾಡಪ್ರಭು ಕೆಂಪೇಗೌಡ ಪಾರಂಪರಿಕ ತಾಣ ಅಭಿವೃದ್ಧಿ ಪ್ರಾಧಿಕಾರದ ಉಪಾಧ್ಯಕ್ಷರೂ ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.‌ಅಶ್ವತ್ಥನಾರಾಯಣ ಹೇಳಿದರು.

ನಾಡಪ್ರಭು ಕೆಂಪೇಗೌಡರ 512ನೇ ಜಯಂತಿ ನಿಮಿತ್ತ ನಗರ ಮೇಕ್ರಿ ವೃತ್ತದ ಬಳಿ ಸ್ವತಃ ಕೆಂಪೇಗೌಡರೇ ನಿರ್ಮಿಸಿದ್ದ ದಕ್ಷಿಣದ ಗಡಿ ಗೋಪುರದ ಬಳಿ ಪ್ರಭುಗಳ ಪ್ರತಿಮೆಗೆ ನಮನ ಸಲ್ಲಿಸಿದ ನಂತರ ಮಾಧ್ಯಮಗಳ ಜತೆ ಮಾತನಾಡಿದ ಅವರು, ಇಡೀ ದೇಶದಲ್ಲೇ ಅತ್ಯುತ್ತಮ ನಗವನ್ನು ಕಟ್ಟಿ ನಮಗಾಗಿ ಬಿಟ್ಟುಹೋಗಿದ್ದಾರೆ. ಅದರ ಆಸ್ಮಿತೆಗೆ ಧಕ್ಕೆ ಆಗದಂತೆ ನಗರವನ್ನು ಮುಂದಿನ ದಿನಗಳಲ್ಲಿ ಅಭಿವೃದ್ಧಿಪಡಿಸಲಾಗುವುದು ಎಂದು ಹೇಳಿದರು.

Karnataka DyCM pays homage to Kempegowda in Mehkri Circle1

ಈಗಾಗಲೇ ಕೆಂಪೇಗೌಡರ ವೀರ ಸಮಾಧಿಯುಳ್ಳ ಮಾಗಡಿ ತಾಲೂಕಿನ ಕೆಂಪಾಪುರವನ್ನು ಜಾಗತಿಕ ಪ್ರವಾಸಿ ತಾಣವನ್ನಾಗಿ ಅಭಿವೃದ್ಧಿಪಡಿಸಲಾಗುತ್ತಿದೆ. ಹಾಗೆಯೇ, ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ನಿರ್ಮಾಣ ಆಗುತ್ತಿರುವ ಸೆಂಟ್ರಲ್‌ ಪಾರ್ಕ್‌ನಲ್ಲಿ 108 ಅಡಿ ಎತ್ತರದ ಪ್ರತಿಮೆ ಸ್ಥಾಪನೆ ಮಾಡುವ ಕಾರ್ಯ ಮುಂದಿನ ವರ್ಷಕ್ಕೆ ಮುಗಿದು ಲೋಕಾರ್ಪಣೆಯಾಗಲಿದೆ ಎಂದರು ಅವರು ತಿಳಿಸಿದರು.

ಕೆಂಪೇಗೌಡರು ಚಿರಸ್ಥಾಯಿಯಾಗಿ ಉಳಿದುಕೊಳ್ಳಲು, ಮುಂದಿನ ತಲೆಮಾರಿಗೂ ಅವರ ಬಗ್ಗೆ ತಿಳಿಸಲು ಸರಕಾರ ಎಲ್ಲ ಕ್ರಮಗಳನ್ನೂ ಕೈಗೊಂಡಿದೆ ಎಂದು ಅವರು ಹೇಳಿದರು.

ಮಾಗಡಿ ಶಾಸಕ ಮಂಜುನಾಥ್‌, ಬೆಂಗಳೂರು ಉತ್ತರ ಬಿಜೆಪಿ ವಿಭಾಗದ ಅಧ್ಯಕ್ಷ ನಾರಾಯಣ ಗೌಡ, ಬಿಬಿಎಂಪಿ ನಿಕಟಪೂರ್ವ ಸದಸ್ಯೆ ಸುಮಂಗಲಾ ಕೇಶವ್‌, ರಾಮನಗರ ಬಿಜೆಪಿ ಜಿಲ್ಲಾಧ್ಯಕ್ಷ ಹುಲವಾಡಿ ದೇವರಾಜ್‌ ಮುಂತಾದವರು ಜತೆಯಲ್ಲಿದ್ದರು.

LEAVE A REPLY

Please enter your comment!
Please enter your name here