
• ಬ್ರಿಟೀಷರ ವಿರುದ್ಧ ಕಿತ್ತೂರು ಸಂಸ್ಥಾನದ ಜಯಕ್ಕೆ 200 ವರ್ಷ
• ಮುಂದಿನ ಅಕ್ಟೋಬರ್ ಗೆ 200 ವರ್ಷ ಪೂರೈಕೆ
• ಕೋಟೆ-ಅರಮನೆ ಸಂರಕ್ಷಣೆ ನಮ್ಮ ಜವಾಬ್ದಾರಿ ಎಂದ ಸಚಿವರು
• ಪ್ರವಾಸಿ ತಾಣವಾಗಿಯೂ ಅಭಿವೃದ್ದಿಗೆ ಸೂಚನೆ
ಬೆಳಗಾವಿ:
ಕಿತ್ತೂರು ಅರಮನೆ ಹಾಗೂ ಕೋಟೆ ಅಭಿವೃದ್ಧಿಯನ್ನು ಅಕ್ಟೋಬರ್ 2024ರ ಕಾಲಮಿತಿಯೊಳಗೆ ಮುಗಿಸಬೇಕು ಎಂದು ಸಚಿವ ಕೃಷ್ಣ ಬೈರೇಗೌಡ ಅವರು ಕಿತ್ತೂರು ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳಿಗೆ ಸೂಚಿಸಿದರು.
ಬೆಳಗಾವಿ ಸುವರ್ಣ ವಿಧಾನಸೌಧದಲ್ಲಿ ಶುಕ್ರವಾರ ಏರ್ಪಡಿಸಿದ್ದ ಕಿತ್ತೂರು ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳ ಜೊತೆಗೆ ಸಭೆ ನಡೆಸಿ ಮಾತನಾಡಿದ ಸಚಿವ ಕೃಷ್ಣ ಬೈರೇಗೌಡ ಅವರು, “ಬ್ರಿಟೀಷರ ವಿರುದ್ಧ ಕಿತ್ತೂರು ರಾಣಿ ಚೆನ್ನಮ್ಮ ಸೇನೆ ಮೊದಲ ಗೆಲುವು ಸಾಧಿಸಿದ್ದ ಐತಿಹಾಸಿಕ ವಿಜಯಕ್ಕೆ 2024 ಅಕ್ಟೋಬರ್ ಗೆ 200 ವರ್ಷವಾಗಲಿದೆ. ಇದು ಇಡೀ ನಾಡಿನ ಹೆಮ್ಮೆಯ ವಿಚಾರಗಳಲ್ಲೊಂದು.
ಈ ನಿಟ್ಟಿನಲ್ಲಿ ಸರ್ಕಾರ ಐತಿಹಾಸಿಕ ಕಾರ್ಯಕ್ರಮ ಯೋಜಿಸುವ ಆಲೋಚನೆಯಲ್ಲಿದ್ದು, ಅಷ್ಟರೊಳಗೆ ಕಿತ್ತೂರು ಕೋಟೆ ಹಾಗೂ ಅರಮನೆ ಹಾಗೂ ರಾಣಿ ಚೆನ್ನಮ್ಮ ಅವರ ಸಮಾಧಿ ಸ್ಥಳ ಸಂಪೂರ್ಣ ಅಭಿವೃದ್ಧಿಯಾಗಬೇಕು. ಅಲ್ಲದೆ, ಈ ಸ್ಥಳಗಳು ಪ್ರವಾಸಿ ತಾಣವಾಗಿಯೂ ಜನರನ್ನು ಸೆಳೆಯುವಂತಿರಬೇಕು” ಎಂದು ಅಧಿಕಾರಿಗಳಿಗೆ ಸಚಿವ ಕೃಷ್ಣ ಬೈರೇಗೌಡ ಅವರು ಸೂಚಿಸಿದರು.
ಕೋಟೆ ಹಾಗೂ ಅರಮನೆಯನ್ನು ಸಂರಕ್ಷಿಸುವುದು ನಮ್ಮ ಹೊಣೆ ಮತ್ತು ಜವಾಬ್ದಾರಿ. ನಮ್ಮ ಶ್ರೀಮಂತ ಇತಿಹಾಸ ಹಾಗೂ ಪರಂಪರೆಯ ಕುರುಹುಗಳನ್ನು ಉಳಿಸುವುದು ಮತ್ತು ಮುಂದಿನ ಪೀಳಿಗೆಗೆ ದಾಟಿಸುವುದು ನಮ್ಮ ಮೇಲಿರುವ ಮಹತ್ತರವಾದ ಜವಾಬ್ದಾರಿಯೂ ಆಗಿದೆ. ಹೀಗಾಗಿ ಮುಂದಿನ 200 ವರ್ಷಗಳನ್ನು ಗಮನದಲ್ಲಿಟ್ಟು ಮುಂದಾಲೋಚನೆಯಿಂದಾಗಿ ಈ ತಾಣಗಳನ್ನು ಅಭಿವೃದ್ಧಿಪಡಿಸಬೇಕು ಎಂದರು.
ಅಭಿವೃದ್ಧಿ ವಿಚಾರದಲ್ಲಿ ಪ್ರಾಚೀನತೆಯ ಅಂಶಗಳನ್ನೂ ಒಳಗೊಂಡಿರಬೇಕು. ನೋಡುಗರಿಗೆ ಇದು ನಮ್ಮದೇ ಇತಿಹಾಸ ಎಂದು ಸೆಳೆಯುವಂತಿರಬೇಕು. ಈ ನಿಟ್ಟಿನಲ್ಲಿ ಪ್ರಾಧಿಕಾರ ಅಧಿಕಾರಿಗಳು ಪುರಾತತ್ವ ಇಲಾಖೆಯ ಸಲಹೆ ಸೂಚನೆಗಳನ್ನು ಪಡೆದುಕೊಳ್ಳಬೇಕು. ಅವರ ಮೇಲ್ವಿಚಾರಣೆಯಲ್ಲಿ ಎಲ್ಲಾ ಕೆಲಸಗಳೂ ನಡೆಯಬೇಕು ಎಂದು ಅವರು ಸೂಚಿಸಿದರು.
ಪ್ರಾಧಿಕಾರದ ಖಾತೆಯಲ್ಲಿ ಈಗಾಗಲೇ 14.5 ಕೋಟಿ ರೂ. ಹಣ ಇದೆ. ಮುಂದಿನ ವರ್ಷದ ಅನುದಾನವೂ ಸೇರಿ ಕನಿಷ್ಟ 20 ಕೋಟಿ ರೂ. ಪ್ರಾಧಿಕಾರಕ್ಕೆ ಸಿಗಲಿದೆ. ಅಲ್ಲದೆ, ವಿಶೇಷ ಪ್ಯಾಕೇಜ್ ನೀಡಲು-ಕೋಟೆ-ಅರಮನೆ ಅಭಿವೃದ್ಧಿ ಕಾಮಗಾರಿಗೆ ಸಂಬಂಧಿಸಿದ ವೆಚ್ಚವನ್ನು ಬಜೆಟ್ ನಲ್ಲಿ ಸೇರಿಸಲೂ ಸಹ ಸರ್ಕಾರ ಸಿದ್ದವಾಗಿದೆ ಎಂದು ಸಭೆಯಲ್ಲಿ ಸಚಿವ ಕೃಷ್ಣ ಬೈರೇಗೌಡ ಅವರು ಭರವಸೆ ನೀಡಿದರು.