ಬೆಂಗಳೂರು:
ಕಾಂಗ್ರೆಸ್ ನ ಎಲ್ಲಾ ಐದು ಗ್ಯಾರಂಟಿಗಳ ಅನುಷ್ಠಾನಕ್ಕೆ ವಾರ್ಷಿಕವಾಗಿ ಒಟ್ಟಾರೇ ರೂ. 59,000 ದಿಂದ ರೂ.60,000 ಕೋಟಿ ರೂಪಾಯಿ ಅಗತ್ಯವಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
16ನೇ ವಿಧಾನಸಭೆಗೆ ನೂತನವಾಗಿ ಆಯ್ಕೆಯಾದ ಶಾಸಕರುಗಳ ತರಬೇತಿ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಜುಲೈ 7 ರಂದು ಮಂಡಿಸಲಿರುವ ಕಾಂಗ್ರೆಸ್ ಸರ್ಕಾರದ ಹೊಸ ಬಜೆಟ್ ಗಾತ್ರ ರೂ. 3,35,000 ಕೋಟಿ ಯಷ್ಟು ಇರುವ ಸಾಧ್ಯತೆಯಿದೆ ಎಂದರು.
ಐದು ಗ್ಯಾರಂಟಿ ಯೋಜನೆಗಳನ್ನು ಅನುಷ್ಟಾನಗೊಳಿಸಬೇಕಾಗಿದೆ. ಉಳಿದ ಅವಧಿಗಾಗಿ 40 ಸಾವಿರ ಕೋಟಿ ರೂ ನೀಡಬೇಕಾಗಿದೆ. ಐದು ಗ್ಯಾರಂಟಿಗಳಿಗೆ ಒಟ್ಟು 59 ಸಾವಿರದಿಂದ ಅರವತ್ತು ಸಾವಿರ ಕೋಟಿ ರೂಪಾಯಿಗಳ ಅಗತ್ಯವಿದೆ. ಜುಲೈ 7 ರಂದು ಮಂಡಿಸಲಿರುವ ಬಜೆಟ್ ಆಗಸ್ಟ್ 1 ರಿಂದ ಜಾರಿಗೆ ಬರಲಿದೆ ಎಂದು ತಿಳಿಸಿದರು.
ಶಾಸಕರು ಬಜೆಟ್ ಬಗ್ಗೆ ತಿಳಿಯಲು ಮತ್ತು ಅರ್ಥಮಾಡಿಕೊಳ್ಳಲು ಪ್ರಯತ್ನಿಸಬೇಕು ಎಂದು ಒತ್ತಾಯಿಸಿದ ಸಿಎಂ, ತೆರಿಗೆಯ ಬಗ್ಗೆ ತಿಳಿದುಕೊಳ್ಳಬೇಕು, ಶ್ರೀಮಂತರಿಗೆ ತೆರಿಗೆ ವಿಧಿಸಬೇಕು, ಬಡವರಿಗೆ ವಿಧಿಸಬಾರದು ಎಂದರು.
ಐದು ಗ್ಯಾರಂಟಿಗಳು: ಎಲ್ಲಾ ಮನೆಗಳಿಗೆ 200 ಯೂನಿಟ್ಗಳವರೆಗೆ ಉಚಿತ ವಿದ್ಯುತ್ (ಗೃಹ ಜ್ಯೋತಿ) ಪ್ರತಿ ಕುಟುಂಬದ ಮಹಿಳಾ ಯಜಮಾನಿಗೆ ರೂ 2,000 ಮಾಸಿಕ ನೆರವು (ಗೃಹ ಲಕ್ಷ್ಮಿ) ಬಿಪಿಎಲ್ ಕುಟುಂಬದ ಪ್ರತಿಯೊಬ್ಬ ಸದಸ್ಯರಿಗೆ 10 ಕೆಜಿ ಉಚಿತ ಅಕ್ಕಿ (ಅನ್ನಾ ಭಾಗ್ಯ), ನಿರುದ್ಯೋಗಿ ಪದವೀಧರರಿಗೆ ಪ್ರತಿ ತಿಂಗಳು ರೂ 3,000 ಮತ್ತು 18-25 ವರ್ಷ ವಯಸ್ಸಿನ ನಿರುದ್ಯೋಗಿ ಡಿಪ್ಲೊಮಾ ಹೊಂದಿರುವವರಿಗೆ ರೂ 1,500 (ಯುವನಿಧಿ) ಮತ್ತು ಸಾರ್ವಜನಿಕ ಸಾರಿಗೆ ಬಸ್ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ (ಶಕ್ತಿ)
ಸಾರ್ವಜನಿಕ ಸಾರಿಗೆ ಬಸ್ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣವನ್ನು ಒದಗಿಸುವ ಯೋಜನೆಯನ್ನು ಸರ್ಕಾರ ಈಗಾಗಲೇ ಪ್ರಾರಂಭಿಸಿದ್ದರೆ, ಉಳಿದ ನಾಲ್ಕು ಯೋಜನೆಗಳು ಅನುಷ್ಠಾನದ ವಿವಿಧ ಹಂತಗಳಲ್ಲಿವೆ ಮತ್ತು ಅವುಗಳ ಜಾರಿಗೆ ಈಗಾಗಲೇ ಸಮಯವನ್ನು ನಿಗದಿಪಡಿಸಲಾಗಿದೆ.