Home Uncategorized ದೇಶದ ಆರ್ಥಿಕತೆಗೆ ಭವಿಷ್ಯದಲ್ಲಿ ಕರ್ನಾಟಕದ ಕೊಡುಗೆ ದೊಡ್ಡದಾಗಿರಲಿದೆ: ಸಿಎಂ ಬಸವರಾಜ ಬೊಮ್ಮಾಯಿ

ದೇಶದ ಆರ್ಥಿಕತೆಗೆ ಭವಿಷ್ಯದಲ್ಲಿ ಕರ್ನಾಟಕದ ಕೊಡುಗೆ ದೊಡ್ಡದಾಗಿರಲಿದೆ: ಸಿಎಂ ಬಸವರಾಜ ಬೊಮ್ಮಾಯಿ

50
0
Karnataka's contribution to the economy of the country is huge: CM Basavaraj Bommai

ರಾಷ್ಟ್ರೀಯ ಸ್ಟಾರ್ಟ್ ಅಪ್ ದಿನ

ಬೆಂಗಳೂರು:

ಭವಿಷ್ಯದಲ್ಲಿ ದೇಶದ ಆರ್ಥಿಕತೆಯಲ್ಲಿ ಕರ್ನಾಟಕ ದೊಡ್ಡ ಪಾತ್ರವನ್ನು ವಹಿಸಲಿದೆ. ದೇಶದ 54000 ಸ್ಟಾರ್ಟ್ ಅಪ್ ಗಳಲ್ಲಿ 13000 ಕರ್ನಾಟಕ ರಾಜ್ಯದಲ್ಲಿ ಪ್ರಾರಂಭವಾಗಿರುವುದು ಹೆಮ್ಮೆಯ ವಿಷಯ. ಸ್ಟಾರ್ಟ್ ಅಪ್ ಗಳ ಸ್ಥಾಪನೆಗೆ ಉತ್ತೇಜನಕ್ಕಾಗಿ ಕರ್ನಾಟಕ ಸರ್ಕಾರ ಹಲವಾರು ಕ್ರಮಗಳನ್ನು ತೆಗೆದುಕೊಂಡಿದ್ದು, ಸ್ಟಾರ್ಟ್ ಅಪ್ ಸೆಲ್ ಮೂಲಕ ಮಾರ್ಗದರ್ಶನ, ವೈಜ್ಞಾನಿಕ ಬೆಂಬಲ ನೀಡುವ ಕೆಲಸವನ್ನು ಸರ್ಕಾರ ಮಾಡುತ್ತಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಈ ಮೂಲಕ ನವಭಾರತಕ್ಕಾಗಿ ನವಕರ್ನಾಟಕ ನಿರ್ಮಾಣದ ಪರಿಕಲ್ಪನೆಯನ್ನು ಸಾಕಾರಗೊಳಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಿಳಿಸಿದರು.

ಅವರು ಇಂದು ಸ್ಟಾರ್ಟ್ ಅಪ್ ದಿನಾಚರಣೆಯ ಅಂಗವಾಗಿ ಆನ್ ಲೈನ್ ಮೂಲಕ ಸಂದೇಶ ನೀಡಿದರು.

Also Read: Karnataka’s role to be bigger in driving our nation to $5-trillion economy: CM Bommai

ಪ್ರಧಾನಮಂತ್ರಿಯವರ ಅಭಿಲಾಷೆಯಂತೆ ಸ್ಟಾರ್ಟ್ ಅಪ್ ದಿನಾಚರಣೆಯನ್ನು ರಾಜ್ಯದಲ್ಲಿ ಇಂದು ಅರ್ಥಪೂರ್ಣವಾಗಿ ಆಚರಿಸಲಾಗಿದೆ. ಬರುವ ವರ್ಷದಲ್ಲಿ ಸರ್ಕಾರ ನವೋದ್ಯಮಗಳಿಗೆ, ಉದ್ಯಮಶೀಲತೆಗೆ , ವೈಜ್ಞಾನಿಕ ಚಿಂತನೆಗೆ ಸಂಪೂರ್ಣ ಬೆಂಬಲ ನೀಡುವುದು ಎಂದು ತಿಳಿಸಿದರು.

ಪ್ರಧಾನಮಂತ್ರಿಯವರ ದೂರದೃಷ್ಟಿಯ ಫಲವಾಗಿ ದೇಶದಲ್ಲಿ 500 ರ ಆಸುಪಾಸಿನಲ್ಲಿದ್ದ ಸ್ಟಾರ್ಟ್ ಅಪ್ ಗಳು ಇಂದು 54000ದ ಗಡಿ ದಾಟಿದೆ. ಸರ್ಕಾರದ ಕಟ್ಟುಪಾಡುಗಳಿಂದ ಮುಕ್ತಿಗೊಳಿಸಿ ಇನ್ನೊವೇಶನ್, ನವೋದ್ಯಮಗಳಿಗೆ ಸಹಾಯ ಒದಗಿಸಲು ಒಂದು ವೇದಿಕೆಯನ್ನು ಸ್ಟಷ್ಟಿ ಮಾಡುವ ಮೂಲಕ ಸ್ಟಾರ್ಟ್ ಅಪ್ ಗಳ ಸ್ಥಾಪನೆಗೆ ಪ್ರೋತ್ಸಾಹಿಸಿದ್ದಾರೆ. ಕರ್ನಾಟಕದಲ್ಲಿ ಅತಿ ಹೆಚ್ಚು ಸ್ಟಾರ್ಟ್ ಅಪ್ ಗಳ ಬೆಳವಣಿಗೆಗೆ ಮಾನ್ಯ ಪ್ರಧಾನಮಂತ್ರಿಗಳೇ ಪ್ರೇರಣೆಯಾಗಿದ್ದಾರೆ. ಸ್ಟಾರ್ಟ್ ಅಪ್ ಗಳಲ್ಲಿ ತೊಡಗಿರುವ ರಾಜ್ಯದ ಎಲ್ಲ ಯುವಕರ ಪರವಾಗಿ ಪ್ರಧಾನಮಂತ್ರಿಗಳಿಗೆ ಧನ್ಯವಾದಗಳನ್ನು ಅರ್ಪಿಸಿದರು.

ಐಟಿಬಿಟಿಯಲ್ಲಿ ದೇಶದಲ್ಲಿ ಕರ್ನಾಟಕ ಪ್ರಥಮ ಸ್ಥಾನ : ಕರ್ನಾಟಕ ಐಟಿಬಿಟಿ ಕ್ಷೇತ್ರದಲ್ಲಿ ದೇಶದಲ್ಲಿ ಮೊದಲ ಸ್ಥಾನದಲ್ಲಿದೆ. 80 ರ ದಶಕದಲ್ಲಿ ಮೊದಲ ಸಾಫ್ಟ್ ವೇರ್ ಕಂಪನಿ ಕರ್ನಾಟಕದಲ್ಲಿ ಪ್ರಾರಂಭವಾಯಿತು. ಅಂದಿನಿಂದ ಇಂದಿನವರೆಗೂ ರಾಜ್ಯದಲ್ಲಿ ಈ ಕ್ಷೇತ್ರದಲ್ಲಿ ಬೆಳೆದಿದ್ದು, ಐಟಿಬಿಟಿಗಳ ರಫ್ತು ಕರ್ನಾಟಕದಿಂದ ಹೆಚ್ಚಿನ ಪ್ರಮಾಣದಲ್ಲಿ ಆಗುತ್ತಿದೆ ಎಂದು ತಿಳಿಸಿದರು.

ನವೋದ್ಯಮಿಗಳಿಗೆ ಆರ್ಥಿಕ ನೆರವು: ಎಲಿವೇಟ್ 100, ಎಸ್ ಸಿಎಸ್ ಟಿಯವರಿಗೆ ಎಲಿವೇಟ್ ಉನ್ನತಿ ಕಾರ್ಯಕ್ರಮಗಳ ಮೂಲಕ ನವೋದ್ಯಮಿಗಳಿಗೆ ಆರ್ಥಿಕ ನೆರವು ನೀಡಲಾಗುತ್ತಿದೆ. ಅಮೃತ ನವೋದ್ಯಮ ಯೋಜನೆಯಡಿ ಓಬಿಸಿ ಹಾಗೂ ಅಲ್ಪಸಂಖ್ಯಾತರ 75 ಸ್ಟಾರ್ಟ್ ಅಪ್ ಗಳಿಗೆ ಆರ್ಥಿಕ ನೆರವು ನೀಡಲಾಗುತ್ತಿದೆ. ಮಹಿಳಾ ನವೋದ್ಯಮಿಗಳಿಗೆ ಉತ್ತೇಜಿಸಲು ಎಲಿವೇಟ್ 25 ಸ್ಟಾರ್ಟ್ ಅಪ್ ಗಳಿಗೆ ಆರ್ಥಿಕ ನೆರವು ನೀಡಲಾಗುತ್ತಿದೆ. ರಾಜ್ಯದಲ್ಲಿ 482 ಸ್ಟಾರ್ಟ್ ಅಪ್ ಗಳಿಗೆ 120 ಕೋಟಿ ರೂ.ಗಳ ಆರ್ಥಿಕ ನೆರವು ನೀಡಲಾಗಿದೆ ಎಂದು ತಿಳಿಸಿದರು.

ಬಿಯಾಂಡ್ ಬೆಂಗಳೂರು : ‘ಬಿಯಾಂಡ್ ಬೆಂಗಳೂರು’ ಯೋಜನೆಯಡಿ ರಾಜ್ಯದ ಜಿಲ್ಲೆಗಳಲ್ಲಿ ನವೋದ್ಯಮ, ಐಟಿ ಬಿಟಿ, ಸ್ಟಾರ್ಟ್ ಅಪ್ ಗಳನ್ನು ಪ್ರಾರಂಭಿಸುವ ಚಿಂತನೆಯಿದೆ. ರಾಜ್ಯದಲ್ಲಿ ನೂತನ ಆರ್ ಎಂಡ್ ಡಿ ನೀತಿಯನ್ನು ಪ್ರಾರಂಭಿಸಿ, ಸಣ್ಣ ಮಟ್ಟದ ಗ್ಯಾರೇಜಿನಿಂದ ಹಿಡಿದು ದೊಡ್ಡ ಕೈಗಾರಿಕೆವರೆಗೂ ವೈಜ್ಞಾನಿಕ ಸಂಶೋಧನೆಗೆ ಸಹಕಾರ ನೀಡಲಾಗುವುದು ಎಂದು ತಿಳಿಸಿದರು.

ಶಾಲೆಗಳಲ್ಲಿ ಸಂಶೋಧನೆ ಹಾಗೂ ನವೋದ್ಯಮಕ್ಕೆ ಭದ್ರ ಬುನಾದಿ : ಶಾಲೆಗಳಲ್ಲಿ ವೈಜ್ಞಾನಿಕ ಚಿಂತನೆ, ಉದ್ಯಮಶೀಲತೆಗೆ ಉತ್ತೇಜನ ನೀಡಲು ಶಾಲೆಗಳ ಪಠ್ಯಪುಸ್ತಕದಲ್ಲಿ ಈ ವಿಷಯಗಳನ್ನು ಸೇರಿಸಲು ತೀರ್ಮಾನಿಸಲಾಗಿದೆ. 150 ಐಟಿಐಗಳನ್ನು ಉನ್ನತೀಕರಿಸಲಾಗಿದೆ. ಡಿಪ್ಲೊಮಾ ಕಾಲೇಜುಗಳನ್ನು ಉನ್ನತೀಕರಿಸಲು ಯೋಜಿಸಲಾಗಿದೆ. ಶಾಲೆ ಕಾಲೇಜುಗಳಲ್ಲಿ ವೈಜ್ಞಾನಿಕ ಚಿಂತನೆ ಸಂಶೋಧನೆ ಹಾಗೂ ನವೋದ್ಯಮಕ್ಕೆ ಭದ್ರ ಬುನಾದಿ ಹಾಕುವ ಮಹಾತ್ವಾಕಾಂಕ್ಷೆಯ ಯೋಜನೆಯನ್ನು ಸರ್ಕಾರ ತರಲಿದೆ ಎಂದು ತಿಳಿಸಿದರು.

ಬೆಂಗಳೂರು ನಗರದಲ್ಲಿ 180 ಕ್ಕೂ ಹೆಚ್ಚು ವಿವಿಧ ಕ್ಷೇತ್ರಗಳಲ್ಲಿ ಸಂಶೋಧನಾ ಕೇಂದ್ರಗಳಿವೆ. ಕೃಷಿ, ತೋಟಗಾರಿಕೆ, ರೇಷ್ಮೆ ಉದ್ಯಮ, ಹೆಚ್ಚು ಉದ್ಯೋಗ ಸೃಜಿಸುವಂತಹ ಕ್ಷೇತ್ರಗಳ್ಲಲಿ ಸ್ಟಾರ್ಟ್ ಅಪ್ ಗಳು ಬರಬೇಕೆನ್ನುವ ಚಿಂತನೆ ಸರ್ಕಾರ ಹೊಂದಿದೆ. ಸಾಮಾಜಿಕ ಜವಾಬ್ದದಾರಿಯಿಂದ ಶಿಕ್ಷಣ, ಆರೋಗ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಕ್ಷೇತ್ರಗಳಲ್ಲಿ ಸ್ಟಾರ್ಟ್ ಅಪ್ ಗಳು ಹೆಚ್ಚು ಬರಬೇಕೆನ್ನುವ ಆಶಯ ವ್ಯಕ್ತಪಡಿಸಿದರು.

ಉತ್ತಮ ತಂತ್ರಾಂಶ, ತಂತ್ರಜ್ಞಾನ ಹಾಗೂ ವೈಜ್ಞಾನಿಕತೆಯಿಂದ ಪ್ರಧಾನಿಯವರ 5 ಟ್ರಿಲಿಯನ್ ಡಾಲರ್ ಆರ್ಥಿಕತೆಯ ಕನಸನ್ನು ಸಾಕಾರಗೊಳಿಸುವಲ್ಲಿ ಕರ್ನಾಟಕ ಮಹತ್ವದ ಪಾತ್ರ ವಹಿಸಲಿದೆ. ನವ ಭಾರತ, ನವ ಆರ್ಥಿಕತೆಯ ಭಾರತದಲ್ಲಿ ನವ ಕರ್ನಾಟಕದ ಸ್ಟಾರ್ಟ್ ಅಪ್ ಗಳ ಮೂಲಕ ಮಹತ್ತರ ಕೊಡುಗೆ ನೀಡಲಿದೆ. ಯುವಕರಿಗೆ ವೈಜ್ಞಾನಿಕ ಚಿಂತನೆಯಿಂದ ಹೊಸ ಸವಾಲುಗಳನ್ನು ಎದುರಿಸಲು ಪ್ರೋತ್ಸಾಹ ನೀಡುತ್ತಿರುವ ಪ್ರಧಾನ ಮಂತ್ರಿಗಳಿಗೆ ಅಭಿನಂಧಿಸಿದರು.

LEAVE A REPLY

Please enter your comment!
Please enter your name here