ಬೆಂಗಳೂರು: ಬೆಂಗಳೂರಿನಲ್ಲಿ ಬೀದಿ ನಾಯಿಗಳ ಕಾಟ ನಿಯಂತ್ರಣಕ್ಕೆ ಕೈಗೊಳ್ಳಲಾಗುತ್ತಿರುವ ಕ್ರಮಗಳ ಕುರಿತು ಕರ್ನಾಟಕ ಲೋಕಾಯುಕ್ತರು ಸಮಗ್ರ ಪರಿಶೀಲನೆ ನಡೆಸಿದ್ದು, ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA), ವಿವಿಧ ನಗರ ಪಾಲಿಕೆಗಳು ಮತ್ತು ಜಿಲ್ಲಾ ಪಂಚಾಯಿತಿಗಳಿಗೆ ವಿವರವಾದ ಅನುಷ್ಠಾನ ವರದಿ ಸಲ್ಲಿಸಲು ಸೂಚಿಸಿದ್ದಾರೆ.
2024ರ ಆಗಸ್ಟ್ನಲ್ಲಿ ಜಲಹಳ್ಳಿ ಪೂರ್ವದ ವಾಯುಪಡೆಯ ವಸತಿ ಸಮುಚ್ಚಯದಲ್ಲಿ 76 ವರ್ಷದ ನಿವೃತ್ತ ಶಿಕ್ಷಕಿ ಮೇಲೆ ಬೀದಿ ನಾಯಿಗಳ ಗುಂಪು ದಾಳಿ ನಡೆಸಿ ಮೃತಪಟ್ಟ ಘಟನೆ ನಗರವನ್ನು ಬೆಚ್ಚಿಬೀಳಿಸಿತ್ತು. ಈ ಹಿನ್ನೆಲೆ ಸ್ವಯಂಪ್ರೇರಿತವಾಗಿ ದಾಖಲಾದ ಪ್ರಕರಣದ ವಿಚಾರಣೆ ಲೋಕಾಯುಕ್ತರ ಮುಂದೆ ನಡೆಯುತ್ತಿದೆ.
ವಿಚಾರಣೆ ವೇಳೆ ಅಧಿಕಾರಿಗಳು ಸಲ್ಲಿಸಿದ ವರದಿಯಲ್ಲಿ, ಸುಪ್ರೀಂ ಕೋರ್ಟ್ ನೀಡಿರುವ ನಿರ್ದೇಶನಗಳ ಅನುಸಾರ ಹಲವು ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ. ನಗರದ ವಿವಿಧ ವಲಯಗಳಲ್ಲಿ Animal Birth Control (ABC) ಸ್ಟೆರಿಲೈಸೇಶನ್ ಕಾರ್ಯಕ್ರಮ, ರೇಬೀಸ್ ಲಸಿಕೆ ಅಭಿಯಾನ, ಬೀದಿ ನಾಯಿಗಳಿಗೆ ಆಹಾರ ನೀಡಲು ನಿರ್ದಿಷ್ಟ ಸ್ಥಳಗಳ ಗುರುತು ಮತ್ತು ಹೊಸ ಶೆಲ್ಟರ್ ಹೋಂಗಳನ್ನು ಸ್ಥಾಪಿಸುವ ಕಾರ್ಯಗಳನ್ನು ಕೈಗೊಳ್ಳಲಾಗಿದೆ ಎಂದು ವಿವರಿಸಿದರು. ಈವರೆಗೆ ಸುಮಾರು 1.5 ಲಕ್ಷಕ್ಕೂ ಹೆಚ್ಚು ನಾಯಿಗಳಿಗೆ ಲಸಿಕೆ ನೀಡಲಾಗಿದೆ ಎಂದು ತಿಳಿಸಲಾಯಿತು.
ಕೆಲವು ಪ್ರದೇಶಗಳಲ್ಲಿ ನಾಯಿಗಳಿಗೆ ಆಶ್ರಯ ನೀಡಲು ಭೂಮಿ ಗುರುತಿಸಲಾಗಿದ್ದು, ಎಸ್. ಬಿಂಗಿಪುರದಲ್ಲಿ ಸುಮಾರು 500 ನಾಯಿಗಳನ್ನು ಇರಿಸಬಹುದಾದ ಶೆಲ್ಟರ್ ಹೋಂ ನಿರ್ಮಾಣಕ್ಕೆ ಭೂಮಿ ಮೀಸಲು ಮಾಡಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು. ನಾಯಿಗಳ ಶೆಲ್ಟರ್ ಹೋಂ ನಿರ್ಮಾಣ ಮತ್ತು ನಿರ್ವಹಣೆಗೆ ₹183.60 ಲಕ್ಷ ಮೀಸಲಿಡಲಾಗಿದ್ದು, ಹೆಚ್ಚುವರಿಯಾಗಿ 100 ನಾಯಿಗಳಿಗೆ ಶೆಲ್ಟರ್ ನಿರ್ಮಾಣಕ್ಕೆ ₹46 ಲಕ್ಷ ಅನುದಾನ ನೀಡಲಾಗಿದೆ ಎಂದು ತಿಳಿಸಲಾಯಿತು.
ಆದರೆ ಲೋಕಾಯುಕ್ತರು ಪರಿಶೀಲನೆಯ ಬಳಿಕ ಹಲವು ವರದಿಗಳು ಸಮಗ್ರವಾಗಿಲ್ಲ, ಸ್ಪಷ್ಟ ಸಮಯಪಟ್ಟಿ ಹಾಗೂ ವಿವರಗಳ ಕೊರತೆ ಇದೆ ಎಂದು ಅಭಿಪ್ರಾಯಪಟ್ಟರು. 2025ರ ನವೆಂಬರ್ 7ರಂದು ಸುಪ್ರೀಂ ಕೋರ್ಟ್ ನೀಡಿದ ತೀರ್ಪಿನಂತೆ ಸರ್ಕಾರ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಆಂಟಿ ರೇಬೀಸ್ ಲಸಿಕೆ ಮತ್ತು ಇಮ್ಯೂನ್ ಗ್ಲೋಬ್ಯುಲಿನ್ ಕಡ್ಡಾಯವಾಗಿ ಲಭ್ಯವಾಗಬೇಕು ಎಂಬ ನಿರ್ದೇಶನಗಳನ್ನೂ ಪಾಲಿಸಬೇಕು ಎಂದು ಅವರು ಸೂಚಿಸಿದರು.
ಬೀದಿ ನಾಯಿಗಳ ಸಮಸ್ಯೆಯಿಂದ ನಾಗರಿಕರ ಸುರಕ್ಷತೆ ಖಚಿತವಾಗುವಂತೆ ಕ್ರಮ ಕೈಗೊಳ್ಳುವ ಜೊತೆಗೆ, ಪ್ರಾಣಿಗಳಿಗೂ ಮಾನವೀಯ ರೀತಿಯಲ್ಲಿ ಆಶ್ರಯ ಮತ್ತು ಆಹಾರ ವ್ಯವಸ್ಥೆ ಕಲ್ಪಿಸಬೇಕು ಎಂದು ಲೋಕಾಯುಕ್ತರು ಸ್ಪಷ್ಟಪಡಿಸಿದರು.
ಮುಂದಿನ ವಿಚಾರಣೆಗೆ ಮುನ್ನ ಏಪ್ರಿಲ್ 30, 2026ರೊಳಗೆ ಸಮಗ್ರ ಅನುಷ್ಠಾನ ವರದಿ ಸಲ್ಲಿಸಲು ಸೂಚಿಸಲಾಗಿದ್ದು, ಪ್ರಕರಣವನ್ನು ಮೇ 8, 2026ರಂದು ಮರುಪರಿಶೀಲಿಸಲಾಗುವುದು.
ಸಭೆಯಲ್ಲಿ ಭಾಗವಹಿಸಿದ ಅಧಿಕಾರಿಗಳಲ್ಲಿ ಬೆಂಗಳೂರು ನಗರ ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಯತೀಶ್ ಆರ್., ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯಿತಿಯ ಉಪ ಕಾರ್ಯದರ್ಶಿ ಶಿವಕುಮಾರ್ ಬಿ., ಬೆಂಗಳೂರು ದಕ್ಷಿಣ ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅನ್ಮೋಲ್ ಜೈನ್, ಪಶುಸಂಗೋಪನಾ ಇಲಾಖೆಯ ಉಪ ನಿರ್ದೇಶಕ ಡಾ. ಅಸದೂಲ್ಲಾ ಶರೀಫ್, ಮಾಗಡಿ ತಾಲ್ಲೂಕಿನ ಕಾರ್ಯನಿರ್ವಾಹಕ ಅಧಿಕಾರಿ ಜಯಪಾಲ್ ಡಿ., ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಪಶುಸಂಗೋಪನಾ ಉಪ ನಿರ್ದೇಶಕ ಡಾ. ಚಂದ್ರಯ್ಯ, ಬೆಂಗಳೂರು ಸೆಂಟ್ರಲ್ ಸಿಟಿ ಕಾರ್ಪೊರೇಷನ್ನ ಜಾಯಿಂಟ್ ಕಮಿಷನರ್ ಹೇಮಂತ್ ಶರಣ್ ಜೆ. ಹಾಗೂ ಮುಖ್ಯ ಪಶುವೈದ್ಯಾಧಿಕಾರಿ ಡಾ. ಎಂ.ಹೆಚ್. ರೆಡ್ಡಿ, ಬೆಂಗಳೂರು ನಾರ್ತ್ ಸಿಟಿ ಕಾರ್ಪೊರೇಷನ್ನ ಜಾಯಿಂಟ್ ಕಮಿಷನರ್ ಮೊಹಮ್ಮದ್ ನಯೀಮ್ ಮೊಮಿನ್ ಹಾಗೂ ಮುಖ್ಯ ಪಶುವೈದ್ಯಾಧಿಕಾರಿ ಡಾ. ಗಂಗಾಧರಯ್ಯ ಎಚ್.ಕೆ., ಬೆಂಗಳೂರು ಸೌತ್ ಸಿಟಿ ಕಾರ್ಪೊರೇಷನ್ನ ಆಯುಕ್ತ ರಮೇಶ್ ಕೆ.ಎನ್. ಹಾಗೂ ಮುಖ್ಯ ಪಶುವೈದ್ಯಾಧಿಕಾರಿ ಡಾ. ಶ್ರೀನಾಥ್ ಡಿ.ಎನ್., ಬೆಂಗಳೂರು ಈಸ್ಟ್ ಸಿಟಿ ಕಾರ್ಪೊರೇಷನ್ನ ಮುಖ್ಯ ಪಶುವೈದ್ಯಾಧಿಕಾರಿ ಡಾ. ರುದ್ರೇಶ್ ಕುಮಾರ್ ಕೆ.ಸಿ., ಬೆಂಗಳೂರು ವೆಸ್ಟ್ ಸಿಟಿ ಕಾರ್ಪೊರೇಷನ್ನ ಮುಖ್ಯ ಪಶುವೈದ್ಯಾಧಿಕಾರಿ ಡಾ. ಕೆ.ಎಂ. ವೆಂಕಟೇಶ್ ಉಪಸ್ಥಿತರಿದ್ದರು. ಪ್ರಾಣಿ ಹಿತಾಸಕ್ತಿ ಕಾರ್ಯಕರ್ತರು ಹಾಗೂ ಎಸ್ಪಿಸಿಎ ಸದಸ್ಯರಾದ ಸುಜಾತ ಪ್ರಸನ್ನ, ನೆವಿನಾ ಕಾಮತ್ ಮತ್ತು ಲೀನಾ ಎಸ್ ಕೂಡ ಸಭೆಯಲ್ಲಿ ಹಾಜರಿದ್ದರು.
