Nalin Kumar Kateel took responsibility for BJP's defeat
ಬೆಂಗಳೂರು:
ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಸೋಲು ಕಂಡಿದ್ದು, ಸೋಲಿನ ಹೊಣೆ ಹೊರುವುದಾಗಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ಶನಿವಾರ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾರ್ಯಕರ್ತರಿಗೆ ಧನ್ಯವಾದ ತಿಳಿಸುತ್ತೇನೆ. ನಮ್ಮ ಸರ್ಕಾರ ಒಳ್ಳೆಯ ಕೆಲಸ ಮಾಡಿದರೂ ಅನಿರೀಕ್ಷಿತ ಫಲಿತಾಂಶ ಬಂದಿದೆ. ಬಿಜೆಪಿಗೆ ಹಿನ್ನಡೆಯಾಗಿದೆ .ಇಡೀ ಸೋಲಿನ ಜವಾಬ್ದಾರಿಯನ್ನು ರಾಜ್ಯಧ್ಯಕ್ಷನಾಗಿ ನಾನು ಹೊರುತ್ತೇನೆ ಎಂದು ಹೇಳಿದರು.
ಸೋಲಿಗೆ ಕಾರಣಗಳನ್ನು, ಫಲಿತಾಂಶವನ್ನು ಅವಲೋಕನ ಮಾಡುತ್ತೇವೆ. ಜನಾದೇಶವನ್ನು ಸ್ವೀಕರಿಸುತ್ತೇವೆ. ಯಾವ ಕಾರಣಕ್ಕೆ ಹಿನ್ನೆಡೆಯಾಗಿದೆ ಎಂದು ಅವಲೋಕನ ಮಾಡುತ್ತೇವೆ. ಕೆಲವು ಕಡೆ ಗೆಲ್ಲಲು ಸಾಧ್ಯ ಇಲ್ಲದೆ ಇರುವ ಕಡೆ ಕೂಡಾ ಗೆದ್ದಿದ್ದೇವೆಂದು ತಿಳಿಸಿದರು.
‘ಬಿಜೆಪಿಯಿಂದ ಆಯ್ಕೆ ಆಗಿರುವವರಿಗೆ ಅಭಿನಂದನೆ ಸಲ್ಲಿಸ್ತೇನೆ. ಕಾಂಗ್ರೆಸ್ಗೂ ಅಭಿನಂದನೆ ಸಲ್ಲಿಸುತ್ತೇನೆ. ಜನತೆಯ ತೀರ್ಪನ್ನು ಸ್ವಾಗತಿಸುತ್ತೇವೆ. ನಮ್ಮ ಕಾರ್ಯಕರ್ತರು ಹಗಲು, ರಾತ್ರಿ ಕೆಲಸ ಮಾಡಿದ್ದಾರೆ. ನಮ್ಮ ಸರ್ಕಾರ ಉತ್ತಮ ಕೆಲಸ ಮಾಡಿದೆ. ಯಡಿಯೂರಪ್ಪ, ಬೊಮ್ಮಾಯಿ ಅವರು ಕೆಲಸ ಮಾಡಿದ್ದಾರೆ. ಬಿಜೆಪಿ ಸೋಲಿಗೆ ರಾಜ್ಯಾಧ್ಯಕ್ಷ ಆಗಿ ನಾನು ಹೊಣೆ ಹೊರುತ್ತೇನೆ. ಲೋಕಸಭಾ ಚುನಾವಣೆಗೆ ಒಗ್ಗಟ್ಟಿನಿಂದ ಕೆಲಸ ಮಾಡುತ್ತೇವೆಂದು ಹೇಳಿದರು.
ಬಿಜೆಪಿ ಹಿರಿಯ ನಾಯಕ ಬಿಎಸ್.ಯಡಿಯೂರಪ್ಪ ಅವರು ಮಾತನಾಡಿ, ಬಿಜೆಪಿಗೆ ಸೋಲು ಗೆಲುವು ಹೊಸದಲ್ಲ. ಈ ಫಲಿತಾಂಶದಿಂದ ಪಕ್ಷದ ಕಾರ್ಯಕರ್ತರು ಗಾಬರಿಪಡುವ ಅಗತ್ಯವಿಲ್ಲ. ಪಕ್ಷಕ್ಕೆ ಆಗಿರುವ ಹಿನ್ನಡೆ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳುತ್ತೇವೆ. ಜನರ ಈ ತೀರ್ಪನ್ನು ಗೌರವದಿಂದ ಸ್ವೀಕರಿಸುತ್ತೇನೆ ಎಂದು ಹೇಳಿದ್ದಾರೆ,
