ಸರ್ವಜನಿಕ ಉಪಯೋಗಕ್ಕೆ ಭೂಮಿ ಮಂಜೂರು ಮಾಡಲು ಆದ್ಯತೆ : ಜೆ ಮಂಜುನಾಥ್
ಬೆಂಗಳೂರು:
ಗ್ರಾಮೀಣ ಭಾಗದಲ್ಲಿ ಸಾರ್ವಜನಿಕ ಉಪಯೋಗಕ್ಕಾಗಿ ಭೂಮಿ ಮಂಜೂರು ಮಾಡಲು ಮೊದಲ ಆದ್ಯತೆ ನೀಡಲಾಗುವುದು ಎಂದು ಬೆಂಗಳೂರು ನಗರ ಜಿಲ್ಲಾಧಿಕಾರಿಗಳಾದ ಜೆ ಮಂಜುನಾಥ್ ತಿಳಿಸಿದರು.
ಅವರು ಇಂದು ದಾಸನಪುರ ಹೋಬಳಿಯ ಕಮ್ಮಸಂದ್ರ ಗ್ರಾಮದಲ್ಲಿ ನಡೆದ ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಗ್ರಾಮಸ್ಥರ ಅಹವಾಲುಗಳನ್ನು ಆಲಿಸಿ ಮಾತನಾಡಿದರು.
ಕದರಹಳ್ಳಿಯಲ್ಲಿ ನರೇಗಾ ಅಡಿಯಲ್ಲಿ ಸ್ಮಶಾನಕ್ಕಾಗಿ ಜಾಗ ನೀಡಬೇಕೆಂದು ಜಿಲ್ಲಾಧಿಕಾರಿಗಳು ಸೂಚಿಸಿದರು. ಕಮ್ಮಸಂದ್ರದಲ್ಲಿ ಹಳೆಶಾಲಾ ಕಟ್ಟಡಕ್ಕೆ ಕಾಂಪೌಂಡ್ ನಿರ್ಮಾಣಕ್ಕೆ ನರೇಗಾ ಅಡಿಯಲ್ಲಿ ಅವಕಾಶವಿದ್ದು ಕೂಡಲೇ ಕಾಂಪೌಂಡ್ ನಿರ್ಮಿಸಲು ಕ್ರಮವಹಿಸಲು ಸೂಚಿಸಿದ ಜಿಲ್ಲಾಧಿಕಾರಿಗಳು ಇದೀಗ ಕಾರ್ಯ ನಿರ್ವಹಿಸುತ್ತಿರುವ ಶಾಲೆ ಚಿಕ್ಕದಾಗಿದ್ದು, ಹೆಚ್ಚುವರಿ ಜಾಗಕ್ಕಾಗಿ ಶಾಲಾ ಕಟ್ಟಡ ನಿರ್ಮಿಸಲು ಆಶ್ರಯ ಯೋಜನೆಯಡಿ ಇರುವ ಜಾಗದ ಗಡಿ ಗುರುತಿಸಿ ಪಹಣಿಯಲ್ಲಿ ಶಾಲಾ ಜಾಗವೆಂದು ಬದಲಾವಣೆ ಮಾಡಬೇಕೆಂದು ಸೂಚಿಸಿದರು.
ಕಮ್ಮಸಂದ್ರ ಗ್ರಾಮದ ಸರ್ವೇ ನಂ.65 ಅನ್ನು ಸರ್ವೆ ಮಾಡಿಸಿ ಸ್ಮಶಾನ ಜಾಗ ನೀಡುವಂತೆ ತಹಶೀಲ್ದಾರರಿಗೆ ಸೂಚನೆ ನೀಡಿದರು. ರಾಜೀವ್ ಗಾಂಧಿ ಅಭಿವೃದ್ಧಿ ನಿಗಮದಿಂದ ಅರ್ಹ ಅಂಗನವಾಡಿ ಕಾರ್ಯಕರ್ತರನ್ನು ಗುರುತಿಸಿ ವಸತಿ ವ್ಯವಸ್ಥೆ ಕಲ್ಪಿಸಲು ಸೂಚಿಸಿದರು.

ಪಶು ಆಸ್ಪತ್ರೆ ನಿರ್ಮಾಣಕ್ಕೆ ಗ್ರಾಮಸ್ಥರು ಜಾಗ ಕೋರಿದರು. ಇದಕ್ಕೆ ಪ್ರತಿಕ್ರಿಯಿಸಿ ಸೂಕ್ತ ಜಾಗವೊಂದನ್ನು ಗುರುತಿಸಿ ಜಾಗ ಮಂಜೂರಾತಿಗೆ ಕ್ರಮ ವಹಿಸಲು ಅವರು ತಿಳಿಸಿದರು. ಹೈನುಗಾರಿಕೆಯನ್ನು ಅವಲಂಬಿಸಿ ಉತ್ತಮ ಆರ್ಥಿಕ ಗಳಿಕೆಯನ್ನು ಪಡೆದಿರುವುದಲ್ಲದೇ, ಕೋಲಾರದ ರೈತರು ಉತ್ಪಾದಿಸುತ್ತಿರುವ ಹಾಲು ಗಡಿಯಲ್ಲಿ ದೇಶ ಕಾಯುವ ಸೇನೆಗೆ ರವಾನಿಸಲಾಗುತ್ತಿದೆ. ಬೆಂಗಳೂರು ನಗರ ಜಿಲ್ಲೆಯಲ್ಲೂ ಇಂತಹದೊಂದು ಸಾಧನೆಗೆ ಜನರು ಮನಸು ಮಾಡಿ ಹೈನುಗಾರಿಕೆಯನ್ನು ಅಳವಡಿಸಿಕೊಳ್ಳುವಂತೆ ಸಲಹೆ ನೀಡಿದರು.
ರೈತರು ತಮ್ಮ ತಾಕುಗಳ ಬಗ್ಗೆ ಫ್ರೂಟ್ಸ್ ಪೊರ್ಟಲ್ ನಲ್ಲಿ ನೋಂದಟಯಿಸಲು ತಮ್ಮ ಆಧಾರ್ ಸಂಖ್ಯೆ ಹಾಗೂ ಬ್ಯಾಂಕ್ ವಿವರಗಳನ್ನು ಜೋಡಣೆ ಮಾಡಿಸಿಕೊಳ್ಳಬೇಕೆಂದು ಜಿಲ್ಲಾಧಿಕಾರಿಗಳು ತಿಳಿ ಹೇಳಿದರು.
ಜನನ ಮರಣ ವಿವರಗಳನ್ನೂ ಸಹ ಇದರಲ್ಲಿ ಪೂರ್ಣವಾಗಿ ನೋಂದಣೆ ಮಾಡುವಂತೆ ಕಂದಾಯ ಸಿಬ್ಬಂದಿಗಳಿಗೆ ಸೂಚಿಸಿದ ಜಿಲ್ಲಾಧಿಕಾರಿಗಳು ಪಿಎಂ ಕಿಸಾನ್ ಯೋಜನೆಯಡಿ ಫ್ರೂಟ್ ಪೋರ್ಟಲ್ ನಲ್ಲಿ ಕಮ್ಮಸಂದ್ರದಲ್ಲಿ ಇರುವಂತಹ ಒಟ್ಟು 290 ತಾಕುಗಳಲ್ಲಿ 110 ತಾಕುಗಳು ನಮೂದಾಗಿದ್ದು, 180 ತಾಕುಗಳು ನಮೂದಾಗಿಲ್ಲ.. ಉಳಿದ ರೈತರ ವಿವರ ಕೂಡ ಶೀಘ್ರವಾಗಿ ನಮೂದಿಸುವಂತೆ ಜಿಲ್ಲಾಧಿಕಾರಿಗಳು ಸೂಚಿಸಿದರು .
ಗ್ರಾಮಸ್ಥರಿಂದ ಬಂದಿರುವ ಮನವಿಯಂತೆ ಚರಂಡಿ ನಿರ್ಮಾಣ ಮತ್ತು ಅದನ್ನು ಸ್ವಚ್ಛಗೊಳಿಸುವ ಬಗ್ಗೆ ಮತ್ತು ಕಸ ಸಂಗ್ರಹ ಮತ್ತು ವಿಲೇವಾರಿ ಕುರಿತಂತೆ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗೆ ಕ್ರಮವಹಿಸುವಂತೆ ಸೂಚಿಸಿದರು.

ಲಕ್ಷ್ಮೀಪುರ ಗ್ರಾಮ ಪಂಚಾಯತ್ ಸುತ್ತಮುತ್ತ ಅಕ್ರಮ ಬಡಾವಣೆ ನಿರ್ಮಾಣಕ್ಕೆ ಕಡಿವಾಣ ಹಾಕಬೇಕು. ಅಮಾಯಕರು ಇದರಲ್ಲಿ ತಮ್ಮ ಜೀವಮಾನದ ಉಳಿತಾಯವನ್ನು ಹೂಡಿ ಮೋಸಹೋಗುವುದನ್ನು ತಪ್ಪಿಸಬೇಕು. ಸರ್ಕಾರಿ ಭೂಮಿಯನ್ನು ಒತ್ತುವರಿ ಮಾಡಿಕೊಂಡಿರುವ ಬಗ್ಗೆ ಜನರಲ್ಲಿ ಪ್ರಚಾರ ಮಾಡಿ ತಮ್ಮ ಹಣವನ್ನು ಅದರಲ್ಲಿ ತೊಡಗಿಸದಂತೆ ತಡೆಯಬೇಕು ಎಂದು ಗ್ರಾಮ ಲೆಕ್ಕಿಗರು, ಸರ್ವೇ ಅಧಿಕಾರಿಗಳು ಹಾಗೂ ಕಂದಾಯ ನಿರೀಕ್ಷಕರಿಗೆ ಜಿಲ್ಲಾಧಿಕಾರಿಗಳು ಸೂಚಿಸಿದರು.
ಕಾರ್ಯಕ್ರಮದಲ್ಲಿ ಮಹಿಳಾ ಮತ್ತುಮಕ್ಕಳ ಕಲ್ಯಾಣ ಇಲಾಖೆ ವತಿಯಿಂದ ಸಾಂಕೇತಿಕವಾಗಿ ಗ್ರಾಮದ ಕೆಲವರಿಗೆ ಭಾಗ್ಯಲಕ್ಷ್ಮೀ ಬಾಂಡ್ ಗಳನ್ನು ವಿತರಿಸಲಾಯಿತು.
ಇಂದಿನ ಕಾರ್ಯಕ್ರಮದಲ್ಲಿ ಕಂದಾಯ ಇಲಾಖೆಗೆ ಸಂಬಂಧಿಸಿದ 43 ಅರ್ಜಿಗಳು, ಗ್ರಾಮ ಪಂಚಾಯತ್ ಗೆ ಸಂಬಂಧಪಟ್ಟ 33 ಅರ್ಜಿಗಳು , ಲೋಕೋಪಯೋಗಿ ಇಲಾಖೆಗೆ ಸಂಬಂಧಿಸಿದ 2 ಅರ್ಜಿಗಳು, ಬೆಸ್ಕಾಂ ಗೆ ಸಂಬಂಧಿಸಿದ 2 ಅರ್ಜಿಗಳು, ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಗೆ ಸಂಬಂಧಿಸಿದ 1 ಅರ್ಜಿ, ಸಮಾಜ ಕಲ್ಯಾಣ ಇಲಾಗೆ ಸಂಬಂಧಿಸಿದ 7 ಅರ್ಜಿಗಳು, ಉಪ ನೋಂದಣಾಧಿಕಾರಿಗಳಿಗೆ ಇಲಾಖೆ ಸಂಬಂಧಿಸಿದ 1 ಅರ್ಜಿ ಸೇರಿದಂತೆ ಒಟ್ಟು 100 ಅರ್ಜಿಗಳನ್ನು ಸ್ವೀಕರಿಸಿಲಾಯಿತು. ಈ ಅರ್ಜಿಗಳಿಗೆ ಅತಿ ಶೀಘ್ರದಲ್ಲಿ ಸೂಕ್ತ ಪರಿಹಾರ ಕಲ್ಪಿಸುವಂತೆ ಜಿಲ್ಲಾಧಿಕಾರಿಗಳು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.
ಕಾರ್ಯಕ್ರಮದಲ್ಲಿ ಯಲಹಂಕ ಕ್ಷೇತ್ರದ ಶಾಸಕರು ಮತ್ತು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಎಸ್ ಆರ್ ವಿಶ್ವನಾಥ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಯಾದ ಡಾ. ಶ್ರೀನಿವಾಸ್ ಜಿ ಎ, ಭೂದಾಖಲೆಗಳ ಉಪ ನಿರ್ದೇಶಕಿ ಕುಸುಮಾ, ಕೃಷಿ ಜಂಟಿ ನಿರ್ದೇಶಕರಾದ ಜಯಸ್ವಾಮಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಉಪನಿರ್ದೇಶಕಿ ಪಲ್ಲವಿ ಹೊನ್ನಾಪುರ, ಉತ್ತರ ತಾಲ್ಲೂಕಿನ ತಹಸೀಲ್ದಾರರಾದ ಬಾಲಕೃಷ್ಣ, ಕಂದಾಯ ಇಲಾಖೆಯ ಅಧಿಕಾರಿಗಳು, ಮತ್ತು ತಾಲೂಕು ಪಂಚಾಯತ ಸದಸ್ಯರುಗಳು ಹಾಗೂ ಗ್ರಾಮ ಪಂಚಾಯತಿಯ ಚುನಾಯಿತ ಸದಸ್ಯರು ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.