ರಾಮನಗರ: ಸಾಲಬಾಧೆಗೆ ಸಿಲುಕಿ ಒಂದೇ ಕುಟುಂಬದ ಏಳು ಮಂದಿ ಆತ್ಮಹತ್ಯೆಗೆ ಯತ್ನ, ಮಹಿಳೆ ಸಾವು!
ರಾಮನಗರ:
ಸಾಲಬಾಧೆ ತಾಳಲಾರದೆ ಒಂದೇ ಕುಟುಂಬದ ಏಳು ಮಂದಿ ಆತ್ಮಹತ್ಯೆಗೆ ಯತ್ನಿಸಿದ್ದು ಮಹಿಳೆಯೊಬ್ಬರು ಮೃತಪಟ್ಟಿರುವ ದಾರುಣ ಘಟನೆ ರಾಮನಗರದಲ್ಲಿ ನಡೆದಿದೆ.
ದೊಡ್ಡಮಣ್ಣು ಗುಡ್ಡೆ ಗ್ರಾಮದಲ್ಲಿ ಘಟನೆ ನಡೆದಿದ್ದು ಮೃತ ಮಹಿಳೆಯನ್ನು 28 ವರ್ಷದ ಮಂಗಳಮ್ಮ ಎಂದು ಗುರುತಿಸಲಾಗಿದೆ. ತಾವರೆಕೆರೆ ಹೋಬಳಿ ಕುಂಬಳಗೂಡು ಸುಬ್ರಪ್ಪನ ಪಾಳ್ಯ ನೆಲಿಸಿದ್ದ ರಾಜು ಹಾಗೂ ಮಂಗಳಮ್ಮ ದಂಪತಿ ಕಳೆದ ಒಂದು ವರ್ಷದಿಂದ ದೊಡ್ಡಮಣ್ಣು ಗುಡ್ಡೆ ಗ್ರಾಮದಲ್ಲಿ ನೆಲೆಸಿದ್ದರು.
ಇದೀಗ ಸಾಲಗಾರರ ಕಾಟಕ್ಕೆ ಹೆದರಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದು ಈ ಪೈಕಿ ಮಂಗಳಮ್ಮು ಮೃತಪಟ್ಟಿದ್ದು ಇನ್ನುಳಿದ ಆರು ಮಂದಿ ಪರಿಸ್ಥಿತಿ ಗಂಭೀರವಾಗಿದ್ದು ಮಂಡ್ಯ ಮಿಮ್ಸ್ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ರಾಜು ಅವರ ಅತ್ತೆ ಸೋಂಪುರದಮ್ಮ, ರಾಜು ಅವರ ಮಕ್ಕಳಾದ ಆಕಾಶ್, ಕೃಷ್ಣ. ಮೃತ ಮಂಗಳಮ್ಮನ ಸಹೋದರಿ ಸವಿತಾ, ಆಕೆಯ ಪುತ್ರಿ ದರ್ಶಿನಿ ವಿಷ ಸೇವಿಸಿದ್ದರು. ತಾವರೆಕೆರೆಯಲ್ಲಿ ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ರಾಜು 11 ಲಕ್ಷ ರೂಪಾಯಿ ಸಾಲ ಮಾಡಿಕೊಂಡಿದ್ದರು. ಹೀಗಾಗಿ ಬೆಂಗಳೂರು ಬಿಟ್ಟು ರಾಮನಗರಕ್ಕೆ ತೆರಳಿದ್ದರು. ಇನ್ನು ರಾಜು ತನ್ನ ಅತ್ತೆ ಮನೆಯಲ್ಲಿ ವಾಸವಾಗಿರುವುದನ್ನು ಪತ್ತೆ ಮಾಡಿದ ಸಾಲಗಾರರು ಹಣ ನೀಡುವಂತೆ ಕೇಳುತ್ತಿದ್ದರು.
ಸಾಲಗಾರರ ನೀಡುತ್ತಿದ್ದ ಕಿರುಕುಳಕ್ಕೆ ಬೇಸತ್ತ ರಾಜು ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರ ಮಾಡಿದ್ದಾನೆ ಎನ್ನಲಾಗಿದೆ. ಅದರಂತೆ ಊರಿನ ಹೊರಗಿದ್ದ ಮಾವನ ಸಮಾಧಿ ಬಳಿ ಹೋಗಿ ಇಲಿ ಪಾಷಾಣ ಸೇವಿಸಿದ್ದಾರೆ. ಇನ್ನು ರಾಮನಗರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
