Home ರಾಜಕೀಯ ಕೇಂದ್ರ ಬಜೆಟ್ 2023: ಅಮೀರ್ ಕೆ ಸಾಥ್, ಗರೀಬ್ ಕಾ ವಿನಾಶ್ ಎಂದ ಸಿದ್ದರಾಮಯ್ಯ

ಕೇಂದ್ರ ಬಜೆಟ್ 2023: ಅಮೀರ್ ಕೆ ಸಾಥ್, ಗರೀಬ್ ಕಾ ವಿನಾಶ್ ಎಂದ ಸಿದ್ದರಾಮಯ್ಯ

14
0
Siddaramaiah
bengaluru

ಬೆಂಗಳೂರು:

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಇಂದು ಮಂಡಿಸಿದ 2023-24ನೇ ಸಾಲಿನ ಕೇಂದ್ರ ಬಜೆಟ್ ಅತ್ಯಂತ ನಿರಾಶದಾಯಕವಾಗಿದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಟೀಕಿಸಿದ್ದಾರೆ.

ಕೇಂದ್ರದ ಟ್ರಬಲ್ ಎಂಜಿನ್ ಸರ್ಕಾರ ಕಳೆದ ಎಂಟು ವರ್ಷಗಳಿಂದ ಪಾಲಿಸಿಕೊಂಡು ಬಂದಿರುವ ‘ ಅಮೀರ್ ಕೆ ಸಾಥ್, ಗರೀಬ್ ಕಾ ವಿನಾಶ್ ( ಶ್ರೀಮಂತರ ಪೋಷಣೆ ಮತ್ತು ಬಡವರ ವಿನಾಶ) ಎಂಬ ಜನವಿರೋಧಿ ನೀತಿಯ ಮುಂದುವರಿದ ಭಾಗವಾಗಿ ಕೇಂದ್ರದ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ 2023-2024ನೇ ಸಾಲಿನ ಬಜೆಟನ್ನು ಮಂಡಿಸಿದ್ದಾರೆ.

ಕೇಂದ್ರ ಸರ್ಕಾರದ ದುರಾಡಳಿತ ಮತ್ತು ಕೊರೊನಾ ರೋಗದಿಂದಾಗಿ ದೇಶದ ಆರ್ಥಿಕ ಸ್ಥಿತಿ ಹದಗೆಟ್ಟುಹೋಗಿದೆ. ಬಹಳ ಮುಖ್ಯವಾಗಿ ದೇಶದ ಬೆನ್ನೆಲುಬು ಎಂದು ಭಾಷಣದಲ್ಲಿ ಎಲ್ಲರೂ ಕೊಂಡಾಡುವ ರೈತರ ಬದುಕು ನೆಲ ಹಿಡಿದಿದೆ. ನಿರುದ್ಯೋಗದ ಪ್ರಮಾಣದಲ್ಲಿ ಹೆಚ್ಚಾಗಿದೆ. ಅತ್ಯಂತ ಹೆಚ್ಚು ಸಂಖ್ಯೆಯಲ್ಲಿ ಅಂದರೆ ಸುಮಾರು ಶೇಕಡಾ 54ರಷ್ಟು ಉದ್ಯೋಗವನ್ನು ಸೃಷ್ಟಿಸುವ ಮತ್ತು ದೇಶದ ಆರ್ಥಿಕತೆಗೆ ದೊಡ್ಡ ಕೊಡುಗೆಯನ್ನು ನೀಡುವ ಕೃಷಿ ಕ್ಷೇತ್ರವನ್ನು ಬಜೆಟ್ ನಲ್ಲಿ ಸಂಪೂರ್ಣವಾಗಿ ನಿರ್ಲಕ್ಷಿಸಲಾಗಿದೆ.

bengaluru

2022-23ರ ಬಜೆಟ್ ಗೆ ಹೋಲಿಸಿದರೆ ಈ ಬಜೆಟ್ ನಲ್ಲಿ ಕೃಷಿಕ್ಷೇತ್ರಕ್ಕೆ ರೂ.8.468.21 ಕೋಟಿಯಷ್ಟು ಹಣ ಕಡಿಮೆ ನೀಡಲಾಗಿರುವುದೇ ಈ ನಿರ್ಲಕ್ಷ್ಯಕ್ಕೆ ಸಾಕ್ಷಿ. ಸಣ್ಣ ಮತ್ತು ಮಧ್ಯಮ ರೈತರನ್ನು ಕೂಡಾ ಕಡೆಗಣಿಸಲಾಗಿದೆ. ಕನಿಷ್ಠ ಬೆಂಬಲ ಬೆಲೆಯಲ್ಲಿನ ಅನ್ಯಾಯ, ಅವೈಜ್ಞಾನಿಕ ಬೆಳೆ ವಿಮೆ, ಸಾಲದ ಹೊರೆ, ನೆರೆ ಮತ್ತು ಬರಪರಿಹಾರದಲ್ಲಿನ ಕೊರತೆಗಳ ಬಗ್ಗೆ ಬಜೆಟ್ ನಲ್ಲಿ ಪ್ರಸ್ತಾಪವೇ ಇಲ್ಲ.

ರೈತರ ಆದಾಯವನ್ನು ದುಪ್ಪಟ್ಟು ಮಾಡಲಾಗುವುದು ಎಂಬ ಘೋಷಣೆ ಪೊಳ್ಳಾಗಿದೆ. ಕನಿಷ್ಠ ಸಣ್ಣ ಹಿಡುವಳಿದಾರ ರೈತರ ಸಾಲವನ್ನಾಧರೂ ಮನ್ನಾ ಮಾಡಬಹುದೆಂಬ ನಿರೀಕ್ಷೆ ಸುಳ್ಳಾಗಿದೆ. ರೈತರಿಗೆ ಸಾಲ ನೀಡಲು ಎರಡು ಲಕ್ಷ ಕೋಟಿ ರೂಪಾಯಿಗಳನ್ನು ನಿಗದಿಪಡಿಸಲಾಗಿದೆ. ರೈತರನ್ನು ಋಣಮುಕ್ತಗೊಳಿಸಬೇಕಾಗಿರುವ ಸರ್ಕಾರ ಅವರನ್ನು ಇನ್ನಷ್ಟು ಸಾಲದ ಬಲೆಗೆ ನೂಕಲು ಹೊರಟಿದೆ. ಹೊಸ ಸಾಲ ಪಡೆದು ಹಳೆಸಾಲ ತೀರಿಸಿ ಎನ್ನುವುದನ್ನು ಸರ್ಕಾರ ಹೇಳಿದೆ. ಈ ಸಾಲದ ಬಡ್ಡಿದರ ಎಷ್ಟು ಎನ್ನುವುದನ್ನು ಇನ್ನೂ ಸ್ಪಷ್ಟಪಡಿಸಿಲ್ಲ.

ಹತ್ತಿಬೆಳೆಯನ್ನು ಹೊರತುಪಡಿಸಿದರೆ ಬೇರೆ ಯಾವ ಬೆಳೆಗೂ ಬೆಳೆ ಕೇಂದ್ರಿತ ಯೋಜನೆಗಳು ಬಜೆಟ್ ನಲ್ಲಿ ಇಲ್ಲ. ತೋಟಗಾರಿಕಾ ಬೆಳೆಗಳನ್ನು ಪ್ರಸ್ತಾಪ ಮಾಡಲಾಗಿದ್ದರು ಅಲ್ಲಿಯೂ ಬೆಳೆ ಕೇಂದ್ರಿತ ಉದಾಹರಣೆಗೆ ತೆಂಗು, ಅಡಿಕೆ ಇತ್ಯಾದಿ ಬೆಳೆಗಳಿಗೆ ನಿರ್ದಿಷ್ಠ ಯೋಜನೆಗಳನ್ನು ಹೇಳಿಲ್ಲ.

ಭದ್ರ ಮೇಲ್ದಂಡೆ ಯೋಜನೆಗೆ ರೂ.5300 ಕೋಟಿ ರೂಪಾಯಿಯನ್ನು ನಿಗದಿಪಡಿಸಲಾಗಿದೆ. ಈ ಯೋಜನೆ ಪೂರ್ಣಗೊಳ್ಳಬೇಕಾದರೆ ರೂ.23,000 ಕೋಟಿ ಅವಶ್ಯಕತೆಯಿದೆ. ಕೇಂದ್ರ ಸರ್ಕಾರ ನೀಡಲು ಒಪ್ಪಿರುವುದು ಯೋಜನಾ ವೆಚ್ಚದ ಕಾಲುಭಾಗ ಮಾತ್ರ. ಈ ಹಣದಲ್ಲಿ 40% ಕಮಿಷನ್ ಕಳೆದರೆ ಕೊನೆಗೆ ಯೋಜನೆಗೆ ಸಿಗಲಿರುವುದು ರೂ.3000 ಕೋಟಿಗಿಂತಲೂ ಕಡಿಮೆ. ನಿಗದಿ ಪಡಿಸಿರುವ ಹಣ ಕೂಡಾ ಒಂದು ವರ್ಷಕ್ಕೋ ಐದು ವರ್ಷಕ್ಕೋ ಎನ್ನುವದನ್ನೂ ಸ್ಪಷ್ಟಪಡಿಸಿಲ್ಲ.

ಬಹಳ ಮುಖ್ಯವಾಗಿ ಕೃಷ್ಣಾ ಜಲಾನಯನ ಪ್ರದೇಶದ ವ್ಯಾಪ್ತಿಯಲ್ಲಿರುವ ಈ ಯೋಜನೆ ಅನುಷ್ಠಾನಗೊಳ್ಳಬೇಕಾದರೆ ಬಿ ಸ್ಕೀಮ್ ಗೆ ಸಂಬಂಧಿಸಿದ ವ್ಯಾಜ್ಯ ಇತ್ಯರ್ಥವಾಗಬೇಕು. ಅಲ್ಲಿಯ ವರೆಗೆ ಈ ಹಣವನ್ನು ಖರ್ಚು ಮಾಡುವ ಹಾಗಿಲ್ಲ. ಕೃಷ್ಣಾ ಮೇಲ್ದಂಡೆ, ಮಹದಾಯಿ, ಮೇಕೆದಾಟು ಯೋಜನೆಗಳಿಗೆ ಪೈಸೆ ಹಣವನ್ನೂ ನೀಡಿಲ್ಲ.
ಉಪನಗರ ರೈಲ್ವೆ ಮತ್ತು ಮೆಟ್ರೋ ರೈಲು ಯೋಜನೆಗೆ ಹೆಚ್ಚಿನ ಅನುದಾನ ನೀಡಬಹುದೆಂಬ ನಿರೀಕ್ಷೆ ಇತ್ತು ಅದೂ ಸುಳ್ಳಾಗಿದೆ.

ಆಹಾರ ಸಬ್ಸಿಡಿಯನ್ನು ಶೇಕಡಾ 31ರಷ್ಟು ಕಡಿಮೆ ಮಾಡಲಾಗಿದೆ. 2022-23ರಲ್ಲಿ ರೂ.2,87,194 ಕೋಟಿಯಷ್ಟು ಆಹಾರ ಸಬ್ಸಿಡಿ ನೀಡಲಾಗಿತ್ತು. ಈ ಬಾರಿ ಅದನ್ನು ರೂ.1,97,350 ಕೋಟಿಗೆ ಇಳಿಸಲಾಗಿದೆ.

ನರೇಗಾ ಯೋಜನೆಗೆ ಶೇಕಡಾ 32ರಷ್ಟು ಕಡಿಮೆ ಅನುದಾನ ನಿಗದಿಪಡಿಸಲಾಗಿದೆ. 2022-23ರಲ್ಲಿ ರೂ.89, 154 ಕೋಟಿ ಗಳಷ್ಟು ನೀಡಲಾಗುತ್ತಿದ್ದ ಅನುದಾನವನ್ನು 2023-24ರ ಸಾಲಿನಲ್ಲಿ ರೂ.61,032 ಕೋಟಿಗೆ ಇಳಿಸಲಾಗಿದೆ.
ಎಲ್ ಪಿಜಿ ಸಬ್ಸಿಡಿಯನ್ನು ಶೇಕಡಾ 75ರಷ್ಟು ಕಡಿತಗೊಳಿಸಲಾಘಿದೆ. 2022-23ರಲ್ಲಿ ರೂ.9,.170 ಕೋಟಿಗಳಷ್ಟಿದ್ದ ಎಲ್ ಪಿಜಿ. ಸಬ್ಸಿಡಿ 2023-24ರ ಸಾಲಿಗೆ ರೂ.2,257 ಕೋಟಿಗೆ ಇಳಿಸಲಾಗಿದೆ.

ಪ್ರಧಾನ ಮಂತ್ರಿ ಆವಾಸ್ ಯೋಜನಾ ವೆಚ್ಚವನ್ನು ಶೇಕಡಾ 66ರಷ್ಟು ಹೆಚ್ಚಿಸಲಾಗಿದೆ. ಪ್ರತಿಮನೆ ನಿರ್ಮಾಣ ವೆಚ್ಚವನ್ನು ರೂ.48,000 ರೂಪಾಯಿಗಳಿಂದ ರೂ.79, 590 ರೂಪಾಯಿಗಳಿಗೆ ಹೆಚ್ಚಿಸಲಾಗಿದೆ. ಈ ಹೆಚ್ಚಳ ಬಡ ಕುಟುಂಬಗಳಿಗೆ ನೆರವಾಗುವುದಕ್ಕೋ? ಗುತ್ತಿಗೆದಾರರಿಗೆ ಲಾಭ ಮಾಡಿಕೊಡಲಿಕ್ಕಾಗಿಯೇ? ಕೇಂದ್ರ ಸರ್ಕಾರದ ಅಧಿಕೃತ ಮಾಹಿತಿ ಪ್ರಕಾರವೇ ಶೇಕಡಾ 50ರಷ್ಟು ಮನೆಗಳನ್ನೇ ನಿರ್ಮಿಸಲಾಗಿಲ್ಲ. ಬಹಳ ಮುಖ್ಯವಾಗಿ ನಗರ ಪ್ರದೇಶದಲ್ಲಿರುವ ಕೊಳಗೇರಿ ನಿವಾಸಿಗಳ ವಸತಿ ಸಮಸ್ಯೆಯನ್ನು ಪರಿಹರಿಸುವ ಪ್ರಸ್ತಾಪ ಬಜೆಟ್ ನಲ್ಲಿ ಇಲ್ಲ.
ಕೇಂದ್ರ ಹಣಕಾಸು ಸಚಿವರಾದ ನಿರ್ಮಲಾ ಸೀತಾರಾಮನ್ ಕರ್ನಾಟಕದಿಂದ ರಾಜ್ಯಸಭೆಗೆ ಆಯ್ಕೆಯಾಗಿ ಹೋಗಿದ್ದರೂ ಅವರು ಕರ್ನಾಟಕವನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದ್ದಾರೆ. ಒಂದೆರಡು ಬಾರಿ ಕರ್ನಾಟಕದ ಹೆಸರನ್ನು ಉಲ್ಲೇಖಮಾಡಿದ ಹೊರತಾಗಿ ವಿಶೇಷ ನೆರವಿನ ಘೋಷಣೆಗಳನ್ನು ಮಾಡಿಲ್ಲ.

ಕೇಂದ್ರ ಸರ್ಕಾರದ ಅಡಿಯಾಳಿನಂತೆ ವರ್ತಿಸುತ್ತಿರುವ ರಾಜ್ಯ ಸರ್ಕಾರ ರಾಜ್ಯದ ಬೇಡಿಕೆಗಳ ಬಗ್ಗೆ ಕೇಂದ್ರ ಸರ್ಕಾರದ ಗಮನಸೆಳೆಯಲು ಸಂಪೂರ್ಣ ವಿಫಲವಾಗಿದೆ. ಸಾಮಾನ್ಯವಾಗಿ ಬಜೆಟ್ ಪೂರ್ವದಲ್ಲಿ ಮುಖ್ಯಮಂತ್ರಿಗಳು ದೆಹಲಿಗೆ ತೆರಳಿ ಸಂಸತ್ ಸದಸ್ಯರ ಜೊತೆ ಸಮಾಲೋಚನೆ ನಡೆಸಿ ರಾಜ್ಯದ ಬೇಡಿಕೆಗಳನ್ನು ಕೇಂದ್ರ ಸರ್ಕಾರದ ಮುಂದಿಡುವುದು ರೂಢಿ. ಆದರೆ ಈ ಬಾರಿ ಈ ಸಂಪ್ರದಾಯವನ್ನು ಮುರಿಯಲಾಗಿದೆ.

ರಾಜ್ಯದಿಂದ ಆರಿಸಿಹೋಗಿರುವ ಬಿಜೆಪಿಯ 25 ಲೋಕಸಭಾ ಸದಸ್ಯರು ಮತ್ತು ಆರು ರಾಜ್ಯಸಭಾ ಸದಸ್ಯರಿದ್ದಾರೆ. ಇವರಲ್ಲಿ ಯಾರೋಬ್ಬರು ರಾಜ್ಯದ ಬೇಡಿಕೆಗಳ ಬಗ್ಗೆಯಾಗಲಿ, ರಾಜ್ಯಕ್ಕೆ ಆಗಿರುವ ಅನ್ಯಾಯದ ಬಗ್ಗೆಯಾಗಲಿ ಎಲ್ಲಿಯೂ ಸೊಲ್ಲೆತ್ತಿಲ್ಲ, ಇದರಿಂದಾಗಿ ಕೇಂದ್ರ ಸರ್ಕಾರ ಕೂಡಾ ಕರ್ನಾಟಕವನ್ನು ಸಂಪೂರ್ಣ ನಿರ್ಲಕ್ಷಿಸಿದೆ.

ಮೋದಿ ಸರ್ಕಾರ ಕರ್ನಾಟಕಕ್ಕೂ ಉಂಡೆ ನಾಮ ಹಾಕಿದೆ.

  • ಇದು ಹೊರಗೆ ಥಳುಕು ಒಳಗೆ ಹುಳುಕಿನ ಬಜೆಟ್
  • ನಮ್ಮ ಕರುನಾಡಿಗೆ ಮೋಸದ ಬಜೆಟ್ [ನಮೋ ಬಜೆಟ್]
  • 25 ಜನ ನಾಲಾಯಕ್ ಬಿಜೆಪಿ ಎಂಪಿಗಳು ಕರ್ನಾಟಕದ ಹಿತಾಸಕ್ತಿಯನ್ನು ರಕ್ಷಿಸಿಲ್ಲ.

• ಈ ವರ್ಷದ ಬಜೆಟ್ ಗಾತ್ರ 4503097 ಕೋಟಿ. ಇದರಲ್ಲಿ ರಾಜಸ್ವ ಸ್ವೀಕೃತಿ 26.32 ಲಕ್ಷ ಕೋಟಿ. ತೆರಿಗೆ ಮೂಲದ ಆದಾಯ 23.03 ಲಕ್ಷ ಕೋಟಿ, ತೆರಿಗೇಯೇತರ ಆದಾಯ 3 ಲಕ್ಷ ಕೋಟಿ.

• 2023-24ಕ್ಕೆ 18 ಲಕ್ಷ ಕೋಟಿ ಸಾಲ ಮಾಡಲು ಹೊರಟಿದ್ದಾರೆ. 2022-23 ರಲ್ಲಿ 16.61 ಸಾಲ ಮಾಡಲಾಗುವುದು ಎಂದು ಬಜೆಟ್‍ನಲ್ಲಿ ಹೇಳಿದ್ದರು. ಆದರೆ ಮಾಡಿದ ಸಾಲ 17.55 ಲಕ್ಷ ಕೋಟಿ ಸಾಲ ಮಾಡಿದ್ದಾರೆ.

• 2023 ರ ಕೊನೆಗೆ ಮೋದಿ ಸರ್ಕಾರದ ಸಾಲದ ಮೊತ್ತ 173 ಲಕ್ಷ ಕೋಟಿಗೆ ಏರಿಕೆಯಾಗುತ್ತದೆ. ಮನಮೋಹನಸಿಂಗರು ಅಧಿಕಾರದಿಂದ ಇಳಿದಾಗ 53.11 ಲಕ್ಷ ಕೋಟಿಗಳಷ್ಟು ಸಾಲ ಇತ್ತು. ಆದರೆ ಮೋದಿ ಒಬ್ಬರೆ 120 ಲಕ್ಷ ಕೊಟಿಗಳಷ್ಟು ಸಾಲ ಮಾಡಿದ್ದಾರೆ.

• 26.32 ಲಕ್ಷ ಕೋಟಿಯಷ್ಟು ರೆವೆನ್ಯೂ ಸ್ವೀಕೃತಿ ಇದೆ ಎಂದು ಹಣಕಾಸು ಮಂತ್ರಿ ಹೇಳಿದ್ದಾರೆ. ಅದರಲ್ಲಿ 10.80 ಲಕ್ಷ ಕೋಟಿ ಕೇವಲ ಬಡ್ಡಿ ಪಾವತಿಗೆ ಖರ್ಚಾಗುತ್ತಿದೆ. ಇದು ಶೇ.42 ರಷ್ಟು ಬಡ್ಡಿಗೆ ಆಗುತ್ತದೆ. ಅಂದರೆ ದೇಶ 100 ರೂ ದುಡಿದರೆ ಅದರಲ್ಲಿ 42 ರೂಪಾಯಿ ಕೇವಲ ಬಡ್ಡಿಗೆ ಹೋಗುತ್ತದೆ.

• ಈ ವರ್ಷದ ಫಿಸ್ಕಲ್ ಡೆಫಿಸಿಟ್ 17.87 ಲಕ್ಷ ಕೋಟಿಯಷ್ಟು ಇರಲಿದೆ ಎಂದು ಕೇಂದ್ರ ಸರ್ಕಾರ ಹೇಳುತ್ತಿದ್ದರೂ ವಾಸ್ತವವಾಗಿ 18 ಲಕ್ಷ ಕೋಟಿಯನ್ನೂ ಮೀರಲಿದೆ.

• ಈ ಲೆಕ್ಕದಲ್ಲಿ ಫಿಸ್ಕಲ್ ಡೆಫಿಸಿಟ್ ಶೇ 6.1 ರಷ್ಟು ಇರಲಿದೆ. ಆದರೆ, ಹಣಕಾಸು ಸಚಿವರು ಶೇ5.9 ರಷ್ಟು ಇರಲಿದೆ ಎಂದು ಹೇಳಿಕೆ ಕೊಟ್ಟಿದ್ದಾರೆ.

• 2023-24ರ ಪ್ರಾಥಮಿಕ ಕೊರತೆ 7.01 ಲಕ್ಷ ಕೋಟಿಗಳಷ್ಟು ಇರಲಿದೆ. 2022-23ರ ಬಜೆಟ್ ಸಂದರ್ಭದಲ್ಲಿ 7.02 ಲಕ್ಷ ಕೋಟಿಗಳಷ್ಟು ಪ್ರಾಥಮಿಕ ಕೊರತೆ ಇರಲಿದೆ ಎಂದು ಅಂದಾಜಿಸಿದ್ದರು. ಆದರೆ ಅಂತಿಮ ಪರಿಷ್ಕರಣೆ ಸಂದರ್ಭದಲ್ಲಿ ಅವರ ಪ್ರಮಾಣ 8.02 ಲಕ್ಷ ಕೋಟಿಗೆ ಏರಿಕೆಯಾಗಿತ್ತು. ಹಾಗಾಗಿ ಕೇಂದ್ರ ಸರ್ಕಾರದ ಅಂಕಿ ಅಂಶಗಳ ಮೇಲೆಯೇ ನಮಗೆ ನಂಬಿಕೆ ಹೊರಟು ಹೋಗಿದೆ.

• ಸಂಗ್ರಹವಾಗುವ ಪ್ರತಿ 100 ರೂಪಾಯಿಯಲ್ಲಿ ಕಾರ್ಪೋರೇಟ್ ಮತ್ತು ಆದಾಯ ತೆರಿಗೆಯಿಂದ 30 ರೂಪಾಯಿಗಳು, ಜನರು ಕಟ್ಟುವ ತೆರಿಗೆಯಿಂದ 34 ರೂಪಾಯಿ, ಸಾಲ ಮತ್ತು ಇತರೆ ಹೊಣೆಗಾರಿಕೆಗಳ ಮೂಲದಿಂದ 34 ರೂ ಹಾಗೂ ಇತರೆ ಮೂಲದಿಂದ 2 ರೂಗಳನ್ನು ಸ್ವೀಕರಿಸುತ್ತದೆ.

• ಈ ವರ್ಷ ತೆರಿಗೆ ಸಂಗ್ರಹದ ಪ್ರಮಾಣ ಹಿಂದಿನ ವರ್ಷಗಳಿಗಿಂತಲೂ ಕಡಿಮೆ ಇರಲಿದೆ ಎಂದು ಅಂದಾಜಿಸಲಾಗಿದೆ. 2021-22 ರಲ್ಲಿ ಜಿಡಿಪಿಗೆ ಶೇ.11.4 ರಷ್ಟು ತೆರಿಗೆ ಸಂಗ್ರಹವಾಗಿದ್ದರೆ, 2023-24ಕ್ಕೆ ಶೇ 11.1 ರಷ್ಟು ತೆರಿಗೆ ಸಂಗ್ರಹ ಆಗಬಹುದೆಂದು ಅಂದಾಜಿಸಲಾಗಿದೆ.

• ಅಂದರೆ ಈ ವರ್ಷವೂ ಕೂಡ ಕಾರ್ಪೋರೇಟ್ ಬಂಡವಾಳಿಗರು ಮತ್ತು ಅತಿ ಶ್ರೀಮಂತರಿಗಿಂತ ಬಡವರೇ ಹೆಚ್ಚು ತೆರಿಗೆಯನ್ನು ಕಟ್ಟುವ ಗ್ರಹಚಾರಕ್ಕೆ ತುತ್ತಾಗಿದ್ದಾರೆ.

• ಚುನಾವಣಾ ವರ್ಷ ಆಗಿರುವುದರಿಂದ ರಾಜ್ಯಕ್ಕೆ ಈ ನೆಪದಲ್ಲಾದರೂ ಒಂದಷ್ಟು ಅನುಕೂಲ ಈ ಬಜೆಟ್‍ನಿಂದ ಆಗಬಹುದು ಎನ್ನುವ ನಿರೀಕ್ಷೆ ಇತ್ತು. ಈ ನಿರೀಕ್ಷೆಯನ್ನು ಹುಸಿಗೊಳಿಸಿ ನಿರ್ಮಲಾ ಸೀತಾರಾಮನ್ ಅವರು ಮತ್ತೆ ತಾವು ಆಯ್ಕೆಯಾದ ರಾಜ್ಯಕ್ಕೆ ದ್ರೋಹ ಎಸಗಿದ್ದಾರೆ.

• 2021 ರಲ್ಲಿ ತಮಿಳುನಾಡು ಚುನಾವಣೆ ಹೊತ್ತಲ್ಲಿ ಘೋಷಣೆಯ ಸಂದರ್ಭದಲ್ಲಿ ಆ ವರ್ಷದ ಬಜೆಟ್‍ನಲ್ಲಿ 1.03 ಲಕ್ಷ ಕೋಟಿ ಅನುದಾನಗಳನ್ನು ಹೆದ್ದಾರಿ ಯೋಜನೆಗಳಿಗೆ ಘೋಷಿಸಿದ್ದರು. ಆದರೆ ಈ ವರ್ಷ ಕರ್ನಾಟಕದ ಭದ್ರಾ ಮೇಲ್ದಂಡೆಗೆ 5300 ಕೋಟಿ ಘೋಷಣೆ ಬಿಟ್ಟರೆ ಬೇರೆ ನಯಾಪೈಸೆ ಅನುಕೂಲ ಆಗಿಲ್ಲ.

• ಭದ್ರಾ ಮೇಲ್ದಂಡೆ ಯೋಜನೆಯ 2022-23 ರ ಯೋಜನಾ ವೆಚ್ಚ 23000 ಕೋಟಿ ಎಂದು ಕಾರಜೋಳ ಅವರು ಹೇಳಿದ್ದರು. ರಾಷ್ಟ್ರೀಯ ಯೋಜನೆ ಎಂದು ಘೋಷಣೆ ಮಾಡುತ್ತಾರೆ, ಇದರಿಂದ ಶೇ. 50 ರಷ್ಟು ಅನುದಾನವನ್ನು ಕೇಂದ್ರ ಸರ್ಕಾರವು ಕೊಡುತ್ತದೆ ಎಂದು ಮುಖ್ಯಮಂತ್ರಿ ಬೊಮ್ಮಾಯಿ ಮತ್ತು ನೀರಾವರಿ ಮಂತ್ರಿ ಕಾರಜೋಳ ಅವರು ಹೇಳಿಕೊಂಡು ಓಡಾಡುತ್ತಿದ್ದರು. ಆದರೆ ಕೇಂದ್ರ ಸರ್ಕಾರ ರಾಜ್ಯದ ಜನರ ಮೂಗಿಗೆ ತುಪ್ಪ ಸವರಿ ಬಿಟ್ಟಿದೆ. ಕೇಂದ್ರ ಸರ್ಕಾರ ಕೊಡುತ್ತೇನೆ ಏಮದು ಹೇಳಿರುವ ಅನುದಾನ ಎಷ್ಟು ವರ್ಷಕ್ಕೆ ಅನ್ವಯವಾಗುತ್ತದೆ ಎಂಬ ಮಾಹಿತಿಯನ್ನೇನೂ ಹೇಳಿಲ್ಲ.

• ಕಳೆದ ಎರಡು –ಮೂರು ವರ್ಷಗಳಿಂದ ಬೆಂಗಳೂರು ಸಬ್ ಅರ್ಬನ್ ರೈಲ್ವೆ ಯೋಜನೆಗೆಂದು ಒಂದಿಷ್ಟು ಅನುದಾನ ಘೋಷಿಸುತ್ತಿದ್ದರು. ಆದರೆ ಈ ಬಾರಿಯ ಬಜೆಟ್‍ನಲ್ಲಿ ಅದರ ಸುಳಿವೇ ಇಲ್ಲ.

• ಕಳೆದ ವರ್ಷ ನದಿ ಜೋಡಣೆಗೆಂದು ದೊಡ್ಡ ಮೊತ್ತವನ್ನು ಘೋಷಿಸಿದ್ದರು. ಆ ಯೋಜನೆಗಳನ್ನೂ ಕೈಗೆತ್ತಿಕೊಂಡಿಲ್ಲ. ಈ ವರ್ಷ ಅನುದಾನವನ್ನೂ ಘೋಷಣೆ ಮಾಡಿಲ್ಲ.

• ನರೇಗಾಕ್ಕೆ ಕಳೆದ ಸಾಲಿಗಿಂತ 29 ಸಾವಿರ ಕೋಟಿ ಅನುದಾನ ಕಡಿಮೆ ಮಾಡಿದ್ದಾರೆ. ದೇಶದಲ್ಲಿ ನಿರುದ್ಯೋಗ ತಾಂಡವ ಆಡುತ್ತಿರುವ ಹೊತ್ತಲ್ಲಿ ನರೇಗಾ ಆಸರೆಯಾಗಿದೆ. ಕೋವಿಡ್ ಮತ್ತು ಡಿಮಾನೆಟೈಸೇಷನ್ ನಿಂದ ಆದ ಅನಾಹುತಗಳ ಸಂದರ್ಭದಲ್ಲಿ ಗ್ರಾಮೀಣ ಭಾಗಕ್ಕೆ ಉಸಿರಾಗಿದ್ದು ನರೇಗಾ. ಆದರೆ ಕ್ರಮೇಣ ನರೇಗಾಕ್ಕೆ ಹಣ ಹೆಚ್ಚಾಗಿಸುವ ಬದಲಿಗೆ ಕಡಿಮೆ ಮಾಡಲಾಗುತ್ತಿದೆ.

• ಈ ವರ್ಷ ಆಹಾರಕ್ಕೆ ನೀಡುವ ಸಬ್ಸಿಡಿ ಪ್ರಮಾಣ 2022-23 ಕ್ಕಿಂತ ಸುಮಾರು 90 ಸಾವಿರ ಕೋಟಿಗಳಷ್ಟು ಕಡಿಮೆ ಮಾಡಿದ್ದಾರೆ. (2022-23 ರಲ್ಲಿ 2.87 ಲಕ್ಷ ಕೋಟಿ ಇದ್ದದ್ದು ಈ ವರ್ಷ 1.97 ಲಕ್ಷ ಕೋಟಿಗೆ ಇಳಿಸಿದ್ದಾರೆ)

• ರಸಗೊಬ್ಬರದ ಮೇಲಿನ ಸಬ್ಸಿಡಿ ಪ್ರಮಾಣ ಸುಮಾರು 50 ಸಾವಿರ ಕೋಟಿ ಕಡಿಮೆಯಾಗಿದೆ. (2022-23 ರಲ್ಲಿ 2.25 ಲಕ್ಷ ಕೋಟಿ ಇದ್ದದ್ದು ಈ ವರ್ಷ 1.75 ಲಕ್ಷ ಕೋಟಿಗೆ ಇಳಿಸಿದ್ದಾರೆ)

• ಕೃಷಿಗೆ 83 ಸಾವಿರ ಕೋಟಿ ಕಳೆದ ವರ್ಷ ಇತ್ತು. ಈ ವರ್ಷ ಕೇವಲ ಒಂದು ಸಾವಿರ ಕೋಟಿ ಹೆಚ್ಚಿಸಿ 84 ಸಾವಿರ ಕೋಟಿ ಮಾಡಿದ್ದಾರೆ.

• ಕೈಗಾರಿಕಾ ಅಭಿವೃದ್ಧಿಗೆ 53 ಸಾವಿರ ಕೋಟಿ ಇದ್ದದ್ದನ್ನು 48 ಸಾವಿರ ಕೋಟಿ ಇಳಿಸಿದ್ದಾರೆ.

• ಶಿಕ್ಷಣಕ್ಕೆ 1.04 ಲಕ್ಷ ಕೋಟಿಯಿಂದ ಕೇವಲ 8 ಸಾವಿರ ಕೋಟಿ ಹೆಚ್ಚಿಸಿ 1.12 ಲಕ್ಷ ಕೋಟಿ ಮಾಡಿದ್ದಾರೆ.

• ಆರೋಗ್ಯಕ್ಕೆ 87 ಸಾವಿರ ಕೋಟಿ ಕೊಟ್ಟಿದ್ದರು. ಈ ವರ್ಷ 88.9 ಸಾವಿರ ಕೋಟಿ ಮಾತ್ರ ಕೊಟ್ಟಿದ್ದಾರೆ.

• ಗ್ರಾಮೀಣಾಭಿವೃದ್ಧಿಗೆ 2.43 ಲಕ್ಷ ಕೋಟಿ ಖರ್ಚು ಮಾಡಿದ್ದವರು, ಈಗ 2.38 ಲಕ್ಷ ಕೋಟಿಗೆ ಇಳಿಸಿ ಸುಮಾರು 5 ಸಾವಿರ ಕೋಟಿ ಕಡಿಮೆ ಮಾಡಿದ್ದಾರೆ.

• ಸಮಾಜ ಕಲ್ಯಾಣಕ್ಕೆ 52 ಸಾವಿರ ಕೋಟಿ ಕೊಟ್ಟಿದ್ದವರು ಈ ಬಾರಿ ಹೆಚ್ಚಿಸಿರುವುದು ಕೇವಲ 3 ಸಾವಿರ ಕೋಟಿ ಮಾತ್ರ. ಇದರಿಂದ 55 ಸಾವಿರ ಕೋಟಿಗೆ ಏರಿಕೆಯಾಗಿದೆಯಷ್ಟೆ.
• ಕಳೆದ ವರ್ಷ ನಗರಾಭಿವೃದ್ಧಿಗೆ 76.6 ಸಾವಿರ ಕೋಟಿ ಕೊಟ್ಟಿದ್ದರು. ಈ ವರ್ಷ 76.4 ಸಾವಿರ ಕೋಟಿಗೆ ಇಳಿಸಿದ್ದಾರೆ.

• ಒಟ್ಟಾರೆ, ಶಿಕ್ಷಣ-ಸಮಾಜ ಕಲ್ಯಾಣ-ಕೃಷಿ-ರಾಜ್ಯಗಳಿಗೆ ತೆರಿಗೆ ಹಂಚಿಕೆ-ಗ್ರಾಮೀಣಾಭಿವೃದ್ಧಿ-ಸಬ್ಸಡಿಗಳು-ಆರೋಗ್ಯ ಇತರೆ ಅತೀ ಮುಖ್ಯವಾದ ಕ್ಷೇತ್ರಗಳಿಗೆ ಕಳೆದ ವರ್ಷ ಕೊಟ್ಟಿದ್ದ ಅನುದಾನಕ್ಕಿಂತ ಕಡಿಮೆ ಮಾಡಿದ್ದಾರೆ ಅಥವಾ ಯಥಾ ಸ್ಥಿತಿಯನ್ನು ಉಳಿಸಿಕೊಂಡಿದ್ದಾರೆ.

• ಹಣದುಬ್ಬರದ ಪ್ರಮಾಣ ಶೇ.7ರಷ್ಟು ಕಳೆದರೆ, ದೇಶದ ಅಭಿವೃದ್ಧಿ ಮತ್ತು ಸಾಮಾಜಿಕ ಕ್ಷೇತ್ರಗಳಿಗೆ ಕೊಟ್ಟಿರುವ ಅನುದಾನಗಳು ನಕಾರಾತ್ಮಕ ಹಾದಿಯಲ್ಲಿವೆ. ಉದಾಹರಣೆಗೆ, ನರೇಗಾಕ್ಕೆ 90 ಸಾವಿರ ಕೋಟಿ 2022-23 ರಲ್ಲಿ ಖರ್ಚು ಮಾಡಿದ್ದರೆ ಈ ವರ್ಷ ಕೇವಲ 60 ಸಾವಿರ ಕೋಟಿಗಳನ್ನು ಮೀಸಲಿರಿಸಿದ್ದಾರೆ.

• ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆ ಬಗ್ಗೆ ಮೋದಿಯವರು ಹೋದಲೆಲ್ಲಾ ಮಾತನಾಡುತ್ತಾರೆ. ಆದರೆ, ಕಳೆದ ವರ್ಷ 13 ಸಾವಿರ ಕೋಟಿ ರೂಪಾಯಿ ಕೊಟ್ಟಿದ್ದವರು ಈ ಬಾರಿ. 10700 ಕೋಟಿ ರೂಪಾಯಿ ಮಾತ್ರ ಕೊಟ್ಟಿದ್ದಾರೆ.

• ನೆನ್ನೆ ಬಿಡುಗಡೆ ಮಾಡಿದ ಆರ್ಥಿಕ ಸಮೀಕ್ಷೆಯಲ್ಲಿ ಶೇ.20 ರಷ್ಟು ಕುಟುಂಬಗಳು ಇನ್ನೂ ಶೌಚಾಲಯ ಹೊಂದಿಲ್ಲ ಎಂಬ ವರದಿ ಇದೆ. ಆದರೆ, ಗ್ರಾಮೀಣ ಸ್ವಚ್ಚ ಭಾರತ್ ಮಿಷನ್‍ಗೆ ಕಳೆದ ವರ್ಷ ಕೊಟ್ಟಿದ್ದಷ್ಟೇ ಅನುದಾನವನ್ನು ಈ ವರ್ಷವೂ ಕೊಟ್ಟಿದ್ದಾರೆ.

• ಗ್ರಾಮೀಣ ಜೀವನಾಭಿವೃದ್ಧಿ ಅಥವಾ ಉದ್ಯೋಗ ಸೃಷ್ಟಿಗಾಗಿ ಇರುವ ನ್ಯಾಷನಲ್ ಲೈವ್ಲಿವುಡ್ ಮಿಷನ್‍ನಲ್ಲಿ ಕಳೆದ ವರ್ಷ 14.3 ಸಾವಿರ ಕೋಟಿ ಕೊಟ್ಟಿದ್ದರು. ಈ ವರ್ಷ ಅದಕ್ಕಿಂತ 200 ಕೋಟಿ ಕಡಿತಗೊಳಿಸಿದ್ದಾರೆ.

• ಅಲ್ಪಸಂಖ್ಯಾತರ ಕಲ್ಯಾಣಕ್ಕಾಗಿ ಇರುವ ಮುಖ್ಯ ಯೋಜನೆಗಳಿಗಾಗಿ ಕಳೆದ ವರ್ಷ 1800 ಕೋಟಿ ರೂವನ್ನು ಮೀಸಲಿಸಿದ್ದವರು ಈ ವರ್ಷ ಕೇವಲ 610 ಕೋಟಿ ರೂಗಳನ್ನು ಒದಗಿಸಿದ್ದಾರೆ.

• ಪ್ರಧಾನ ಮಂತ್ರಿ ಗ್ರಾಮ ಸಡಕ್ (ಗ್ರಾಮೀಣ ರಸ್ತೆ) ಕಳೆದ ವರ್ಷ ನೀಡಿದ್ದ 19 ಸಾವಿರ ಕೋಟಿಯಷ್ಟೇ ಅನುದಾನವನ್ನು ಈ ವರ್ಷಕ್ಕೂ ಉಳಿಸಿದ್ದಾರೆ.

• ಬಿಜೆಪಿ ಸರ್ಕಾರವು ಅತಿ ಹೆಚ್ಚು ಮಾತನಾಡುವ ರಾಷ್ಟ್ರೀಯ ಕೃಷಿ ವಿಕಾಸ್ ಯೋಜನೆಗೆ ಕಳೆದ ವರ್ಷ 10433 ಕೋಟಿ ಕೊಟ್ಟಿದ್ದರೆ ಈ ವರ್ಷ ಕೇವಲ 7 ಸಾವಿರ ಕೋಟಿ ಕೊಟ್ಟಿದ್ದಾರೆ.

• ರೈತರು, ಸಣ್ಣ ರೈತರಿಗೆ ಯಾವ ಯೋಜನೆಯೂ ಇಲ್ಲ.

• ಬಿಜೆಪಿ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಪಿ ಎಂ ಕಿಸಾನ್‍ಗೆ 8000 ಕೋಟಿಗಳಷ್ಟು ಅನುದಾನ ಕಡಿಮೆ ಮಾಡಿದ್ದಾರೆ. ವರ್ಷದಿಂದ ವರ್ಷಕ್ಕೆ ಲಕ್ಷಾಂತರ ಹೊಸ ಸಣ್ಣ ರೈತರು ಉದ್ಭವಿಸುತ್ತಾರೆ. ಆಸ್ತಿ ವಿಭಜನೆಗೊಳ್ಳುತ್ತಲೆ ಇವೆ. ಆದರೆ ಕೊಡುತ್ತಿರುವ ಅನುದಾನವನ್ನೆ ಕಡಿಮೆ ಮಾಡಿದ್ದಾರೆ.

• 2022 ರ ಒಳಗೆ ದೇಶದ ಎಲ್ಲರಿಗೂ ಮನೆ ನಿರ್ಮಿಸುವುದಾಗಿ ಘೋಷಿಸಿದ್ದರು. ಆದರೆ ಕರ್ನಾಟಕದಲ್ಲೆ ಇನ್ನೂ 25 ಲಕ್ಷಕ್ಕೂ ಹೆಚ್ಚು ಕುಟುಂಬಗಳಿಗೆ ಸುಭದ್ರ ಸೂರುಗಳಿಲ್ಲವೆಂದು ದಾಖಲೆಗಳು ಹೇಳುತ್ತಿವೆ. ಹಾಗಾಗಿ ಬಜೆಟ್ ನಲ್ಲಿ ಇಟ್ಟಿರುವ ಅನುದಾನ ಯಾವುದಕ್ಕೂ ಸಾಲುವುದಿಲ್ಲ.

• ನಿರುದ್ಯೋಗದ ಬಗ್ಗೆ ಮಾತನಾಡಿದ್ದಾರೆ, ಆದರೆ ಯಾವ ಯೋಜನೆಯೂ ಬಜೆಟ್‍ನಲ್ಲಿ ಇಲ್ಲ. ಎನ್ ಆರ್ ಎಲ್ ಎಂ ಮತ್ತು ನರೇಗಾಕ್ಕೆ ಕೊಡುವ ಅನುದಾನಗಳನ್ನೆ ಕಡಿತ ಮಾಡಿದ್ದಾರೆ.

• ಎಂಎಸ್‍ಪಿ ಯೋಜನೆಯಡಿ ರೈತರಿಂದ ಕೃಷಿ ಉತ್ಪನ್ನಗಳನ್ನು ಖರೀದಿಸಲು 2022-23 ರಲ್ಲಿ 72.3 ಸಾವಿರ ಕೋಟಿ ಖರ್ಚು ಮಾಡಿದ್ದರೆ, ಈ ವರ್ಷ ಕೇವಲ 59.7 ಸಾವಿರ ಕೋಟಿ ರೂಗಳನ್ನು ಒದಗಿಸಿದ್ದಾರೆ.

• ದೇಶದ ಮೆಟ್ರೋ ಯೋಜನೆಗಳಿಗಾಗಿ 2022-23 ರಲ್ಲಿ 19130 ಕೋಟಿ ಒದಗಿಸಿದ್ದರೆ ಈ ವರ್ಷ ಕೇವಲ 400 ಕೋಟಿಗಳಷ್ಟನ್ನು ಮಾತ್ರ ಹೆಚ್ಚಿಸಿದ್ದಾರೆ.

• ಆದಾಯ ತೆರಿಗೆ ಮಿತಿ ಹೆಚ್ಚಿಸಿದ್ದನ್ನು ಬಿಜೆಪಿಯವರು ದೊಡ್ಡ ಸಾಧನೆ ಎಂದು ಹೇಳಿಕೊಳ್ಳುತ್ತಿದ್ದಾರೆ. ಆದರೆ ಕಾರ್ಪೊರೇಟ್ ಬಂಡವಾಳಿಗರ ಮೇಲಿನ ತೆರಿಗೆಯನ್ನು ಶೇ.8 ರಷ್ಟು ಕಡಿಮೆ ಮಾಡಿದ್ದಾರೆ. ಅದಾನಿ ಅಂಬಾನಿ ಮುಂತಾದವರ ಮೇಲಿನ ತೆರಿಗೆ ಕಡಿತದಿಂದ ದೇಶಕ್ಕೆ 1.5 ಲಕ್ಷ ಕೋಟಿಗೂ ಹೆಚ್ಚು ನಷ್ಟವಾಗುತ್ತಿದೆ. ಆದರೆ ಮಧ್ಯಮ ವರ್ಗದವರ ಮೇಲಿನ ತೆರಿಗೆ ಇಳಿಸಿದ್ದೇವೆಂದು ಹೇಳುತ್ತಿರುವುದು ಸಣ್ಣ ಮೊತ್ತವನ್ನು ಮಾತ್ರ.

• ಅದಾನಿ ಬೇನಾಮಿ ವ್ಯವಹಾರದ ಮೂಲಕ ದೇಶಕ್ಕೆ ಮಾಡಿರುವ ಮೋಸದ ಪ್ರಮಾಣ ಲೆಕ್ಕ ಹಾಕಲು ಸಾಧ್ಯವಾಗದಷ್ಟು ಮಟ್ಟಕ್ಕೆ ಇದೆ. ಅದನ್ನು ತನಿಖೆ ಮಾಡಿ ದೇಶಕ್ಕೆ ಆಗಿರುವ ಲುಕ್ಸಾನನ್ನು ಸರಿಪಡಿಸುವ ಕುರಿತು ಯಾವುದೇ ಪ್ರಸ್ತಾಪ ಇಲ್ಲ.

• ಒಟ್ಟಾರೆ, ಈ ಬಜೆಟ್ ಅತ್ಯಂತ ನಿರಾಶಾದಾಯಕ. ಕೃಷಿ, ನೀರಾವರಿ, ಗ್ರಾಮೀಣಾಭಿವೃದ್ಧಿ, ಕೈಗಾರಿಕೆ, ಸಮಾಜ ಕಲ್ಯಾಣ ಎಲ್ಲಾ ಯೋಜನೆಗಳನ್ನೂ ಮೋದಿ ಅವರ ಸರ್ಕಾರ ಸಂಪೂರ್ಣ ನಿರ್ಲಕ್ಷಿಸಿದೆ.

• ದೇಶವು ಅತ್ಯಂತ ಗಂಭೀರ ಸ್ವರೂಪದ ಸಾಲದ ಸುಳಿಯಲ್ಲಿ ಸಿಲುಕಿದೆ.

• ನೆನ್ನೆ ಬಿಡುಗಡೆ ಮಾಡಿದ ಆರ್ಥಿಕ ಸಮೀಕ್ಷೆಯೂ ಅತ್ಯಂತ ಹುಸಿ ಅಂಕಿ ಅಂಶಗಳ ಅಲಂಕಾರ ಎನ್ನುವುದನ್ನು ಇಂದಿನ ಬಜೆಟ್ ಸಾಬೀತು ಪಡಿಸಿದೆ.

• ಒಟ್ಟಾರೆ ಈ ದೇಶದ ಯುವಕರಿಗೆ, ಮಹಿಳೆಯರಿಗೆ, ರೈತರು, ಕಾರ್ಮಿಕ ವರ್ಗಕ್ಕೆ, ದುಡಿಯುವ ಜನರಿಗೆ, ವಿದ್ಯಾರ್ಥಿಗಳಿಗೆ ಯಾರಿಗೂ ಸಹ ಮೋದಿ ಅವರ ನೇತೃತ್ವದ ಬಿಜೆಪಿ ಸರ್ಕಾರದಿಂದ ಯಾವುದೇ ಭರವಸೆ ಇಲ್ಲ ಎಂಬುದು ಈ ಬಜೆಟ್ ಸಾಬೀತುಮಾಡಿದೆ.

• ವಿಶೇಷವಾಗಿ ಕರ್ನಾಟಕದ ವಿಚಾರಕ್ಕೆ ಬಂದರೆ, ರೈಲ್ವೆ, ರಸ್ತೆ, ಕೃಷಿ ಹಾಗೂ ಇನ್ನಿತರೆ ಎಲ್ಲಾ ಕ್ಷೇತ್ರಗಳನ್ನೂ ಮೋದಿ ನೇತೃತ್ವದ ಸರ್ಕಾರ ನಿರ್ಲಕ್ಷಿಸಿದೆ.

• ರಾಜ್ಯ ಬಿಜೆಪಿಯವರು ಭದ್ರಾ ಮೇಲ್ದಂಡೆ ಯೋಜನೆಗೆ ಕೊಡುತ್ತೇವೆಂದು ಹೇಳಿರುವ 5300 ಕೋಟಿ ರೂಪಾಯಿಗಳ ಅನುದಾನವನ್ನು ಇಟ್ಟುಕೊಂಡೇ ಚುನಾವಣೆಯನ್ನು ಎದುರಿಸುತ್ತೇವೆ ಎನ್ನುವ ತಿಕ್ಕಲು ಭ್ರಮೆಯಲ್ಲಿ ಇದ್ದಾರೆ.

• ಮೇಕೆದಾಟು, ಮಹದಾಯಿ, ಕೃಷ್ಣಾ ಮೇಲ್ದಂಡೆ ಯೋಜನೆಗೆ ಒಂದೇ ಒಂದು ರೂಪಾಯಿಯನ್ನೂ ಕೊಟ್ಟಿಲ್ಲ.

• ಈ ವರ್ಷ ಚುನಾವಣೆಯ ನೆಪದಲ್ಲಾದರೂ ರಾಜ್ಯಕ್ಕೆ ಹೆಚ್ಚಿನ ಅನುದಾನ ಬರುತ್ತದೆ, ಹೆಚ್ಚಿನ ಯೋಜನೆಗಳು ಬರುತ್ತವೆ ಎಂದು ನಿರೀಕ್ಷಿಸಿದ್ದೆ. ಈಗ ಅದೆಲ್ಲವೂ ಹುಸಿಯಾಗಿದೆ.

• ಕರ್ನಾಟಕದ ಜನರಿಂದ 3.5 ಲಕ್ಷ ಕೋಟಿಗೂ ಹೆಚ್ಚು ತೆರಿಗೆ ದೋಚುವ ಮೋದಿ ಸರ್ಕಾರ ಕರ್ನಾಟಕದ ಜನರಿಗೆ ಎಲ್ಲಾ ದಿಕ್ಕುಗಳಿಂದಲೂ ಮೋಸ ಮಾಡಿದೆ.

 

bengaluru

LEAVE A REPLY

Please enter your comment!
Please enter your name here