ಬಿಡಿಎ ಕಂಠೀರವ ಸ್ಟುಡಿಯೋ ಅಂಡರ್ಪಾಸ್ ಕಾಮಗಾರಿ ಸ್ಥಳದಲ್ಲಿ ಮಣ್ಣು ಕುಸಿದು ಇಬ್ಬರು ಕಾರ್ಮಿಕರ ಸಾವು, ಮೂವರಿಗೆ ಗಾಯ
ಬೆಂಗಳೂರು: ಬಿಡಿಎ ಕಂಠೀರವ ಸ್ಟುಡಿಯೋ ಅಂಡರ್ಪಾಸ್ ನಿರ್ಮಾಣ ಸ್ಥಳದಲ್ಲಿ ಮಂಗಳವಾರ ಕಾಮಗಾರಿ ನಡೆಯುತ್ತಿದ್ದ ವೇಳೆ ಮಣ್ಣಿನ ಒಂದು ಭಾಗ ಕುಸಿದು ಇಬ್ಬರು ನಿರ್ಮಾಣ ಕಾರ್ಮಿಕರು ಮೃತಪಟ್ಟಿದ್ದು, ಮೂವರು ಗಾಯಗೊಂಡಿದ್ದಾರೆ ಎಂದು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ತಿಳಿಸಿದೆ.
ಬೆಳಿಗ್ಗೆ ಸುಮಾರು 10.45ಕ್ಕೆ ಕಾಮಗಾರಿ ನಡೆಯುತ್ತಿದ್ದ ವೇಳೆ ಘಟನೆ ಸಂಭವಿಸಿದೆ. ಈ ಯೋಜನೆಯನ್ನು ನೇಮಕಗೊಂಡ ಗುತ್ತಿಗೆದಾರ PJB Engineers Pvt. Ltd. ಟರ್ನ್ಕೀ ಆಧಾರದಲ್ಲಿ ಅನುಷ್ಠಾನಗೊಳಿಸುತ್ತಿದೆ. ಮಣ್ಣು ಕುಸಿದ ಘಟನೆಯಲ್ಲಿ ಐವರು ಕಾರ್ಮಿಕರು ಸಿಲುಕಿದ್ದರು.
ಮೃತರನ್ನು ಒಡಿಶಾದ ಸೋನಾರಾಮ್ ಮತ್ತು ಪಶ್ಚಿಮ ಬಂಗಾಳದ ಪರಿಮಲ್ ಬಾಶಕ್ ಎಂದು ಗುರುತಿಸಲಾಗಿದೆ.
ಗಾಯಗೊಂಡವರನ್ನು ಜಾರ್ಖಂಡ್ನ ಸದಾನಂದ್, ಛತ್ತೀಸ್ಗಢದ ಇಮ್ರಿಯಾಸ್ ಮತ್ತು ಜಾರ್ಖಂಡ್ನ ಸುನಿಲ್ ಕಲ್ಕೋರ್ ಎಂದು ಗುರುತಿಸಲಾಗಿದೆ. ಅವರು ಸಮೀಪದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರ ವೈದ್ಯಕೀಯ ವೆಚ್ಚವನ್ನು ಬಿಡಿಎ ಭರಿಸಲಿದ್ದು, ಗಾಯಾಳುಗಳು ಮತ್ತು ಅವರ ಕುಟುಂಬಗಳಿಗೆ ಅಗತ್ಯ ನೆರವು ನೀಡಲಾಗುವುದು ಎಂದು ಪ್ರಾಧಿಕಾರ ತಿಳಿಸಿದೆ.
ಅಪಘಾತದ ಕಾರಣ ಪತ್ತೆಹಚ್ಚಲು ಬಿಡಿಎ ಅಧ್ಯಕ್ಷರು ಸ್ವತಂತ್ರ ತನಿಖೆಗೆ ಆದೇಶಿಸಿದ್ದಾರೆ. ನಿವೃತ್ತ ನ್ಯಾಯಾಧೀಶರು ಮತ್ತು ನಿವೃತ್ತ ಮುಖ್ಯ ಎಂಜಿನಿಯರ್ ಅವರನ್ನು ಒಳಗೊಂಡ ಸಮಿತಿಯನ್ನು ರಚಿಸಲಾಗುತ್ತಿದ್ದು, 45 ದಿನಗಳೊಳಗೆ ವರದಿ ಸಲ್ಲಿಸುವಂತೆ ಸೂಚಿಸಲಾಗಿದೆ.
ಮೃತ ಕಾರ್ಮಿಕರ ಪಾರ್ಥಿವ ಶರೀರಗಳನ್ನು ಅವರ ಸ್ವಗ್ರಾಮಗಳಿಗೆ ಕಳುಹಿಸಲು ಕಾರ್ಮಿಕ ಇಲಾಖೆ ಮತ್ತು ಸಂಬಂಧಿತ ಜಿಲ್ಲಾಡಳಿತಗಳ ಸಮನ್ವಯದಲ್ಲಿ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಬಿಡಿಎ ತಿಳಿಸಿದೆ.
ಮೃತ ಇಬ್ಬರು ಕಾರ್ಮಿಕರ ಕುಟುಂಬಗಳಿಗೆ ತಲಾ ₹8 ಲಕ್ಷ ಪರಿಹಾರ ನೀಡುವುದಾಗಿ ಪ್ರಾಧಿಕಾರ ಘೋಷಿಸಿದೆ.
