ಕೋವಿಡ್-19 ವೈರಸ್ ನ ಉಪತಳಿ ಬಿಎಫ್.7 ಭಾರತಕ್ಕೆ ಕಾಲಿಡುತ್ತಿದ್ದಂತೆ ಜನತೆಯಲ್ಲಿ ಆತಂಕ ಮನೆಮಾಡಿದೆ. ಮತ್ತೆ 2020-21ರ ಪರಿಸ್ಥಿತಿ ಉಂಟಾಗುತ್ತದೆಯೇ, ಕೊರೋನಾ ಬರುತ್ತದೆಯೇ, ಲಾಕ್ ಡೌನ್ ಆಗುತ್ತದೆಯೇ ಎಂದು ಜನರು ಮಾತನಾಡಿಕೊಳ್ಳುತ್ತಿದ್ದಾರೆ. ಬೆಳಗಾವಿ: ಕೋವಿಡ್-19 ವೈರಸ್ ನ ಉಪತಳಿ ಬಿಎಫ್.7 ಭಾರತಕ್ಕೆ ಕಾಲಿಡುತ್ತಿದ್ದಂತೆ ಜನತೆಯಲ್ಲಿ ಆತಂಕ ಮನೆಮಾಡಿದೆ. ಮತ್ತೆ 2020-21ರ ಪರಿಸ್ಥಿತಿ ಉಂಟಾಗುತ್ತದೆಯೇ, ಕೊರೋನಾ ಬರುತ್ತದೆಯೇ, ಲಾಕ್ ಡೌನ್ ಆಗುತ್ತದೆಯೇ ಎಂದು ಜನರು ಮಾತನಾಡಿಕೊಳ್ಳುತ್ತಿದ್ದಾರೆ.
ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರಗಳು ಸೇರಿದಂತೆ ಕೇಂದ್ರ ಸರ್ಕಾರ ಕೂಡ ಮುಂಜಾಗ್ರತೆ ಕ್ರಮ ಕೈಗೊಳ್ಳುತ್ತಿವೆ. ಇಂದು ಬೆಳಗಾವಿಯಲ್ಲಿ ಕಂದಾಯ ಸಚಿವ ಆರ್ ಅಶೋಕ್ ಮತ್ತು ಆರೋಗ್ಯ ಸಚಿವ ಡಾ ಕೆ ಸುಧಾಕರ್ ನೇತೃತ್ವದಲ್ಲಿ ಕೋವಿಡ್ ನಿರ್ವಹಣಾ ಸಮಿತಿ ಸಭೆ ನಡೆಯಲಿದೆ.
ಇದಕ್ಕೂ ಮುನ್ನ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಕಂದಾಯ ಸಚಿವ ಅಶೋಕ್, ಯಾರೂ ಆತಂಕಗೊಳ್ಳುವ ಅಗತ್ಯವಿಲ್ಲ. ಮುಂಜಾಗ್ರತೆ ಕೈಗೊಳ್ಳಬೇಕೆಂದು ಮುಖ್ಯಮಂತ್ರಿಗಳು ಸೂಚನೆ ಕೊಟ್ಟಿದ್ದಾರೆ. ಯಾರೂ ಆತಂಕಗೊಳ್ಳುವ ಅವಶ್ಯಕತೆಯಿಲ್ಲ, ವ್ಯಾಪಾರ-ವಹಿವಾಟುಗಳಿಗೆ, ಶಿಕ್ಷಣಕ್ಕೆ, ಕೈಗಾರಿಕೆಗಳಿಗೆ ಯಾವುದೇ ರೀತಿಯಲ್ಲಿ ತೊಂದರೆಯಾಗುವುದಿಲ್ಲ ಎಂದರು.
ಇಂದು ಸಂಜೆ ಅಥವಾ ನಾಳೆಯೊಳಗೆ ಮುಖ್ಯಮಂತ್ರಿಗಳು ಕೋವಿಡ್ ಮುಂಜಾಗ್ರತಾ ಕ್ರಮಗಳ ಬಗ್ಗೆ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಲಿದ್ದಾರೆ ಎಂದರು.