ಮಂಗಳೂರಿನ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದ ಬಳಿ ಕೇಬಲ್ ರಿಪೇರಿ ಕಾರ್ಯಕ್ಕಾಗಿ ಕಂಪನಿ ಅಗೆದಿದ್ದ ಗುಂಡಿಗೆ ಮಹಿಳೆಯೊಬ್ಬರು ಬಿದ್ದಿದ್ದು, ಈ ಹಿನ್ನಲೆಯಲ್ಲಿ ದೂರಸಂಪರ್ಕ ಸೇವಾ ಸಂಸ್ಥೆ ಏರ್ಟೆಲ್ ವಿರುದ್ಧ ಮಂಗಳೂರು ಮಹಾನಗರ ಪಾಲಿಕೆ (ಎಂಸಿಸಿ) ಪೊಲೀಸರಿಗೆ ದೂರು ನೀಡಿದೆ. ಮಂಗಳೂರು: ಮಂಗಳೂರಿನ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದ ಬಳಿ ಕೇಬಲ್ ರಿಪೇರಿ ಕಾರ್ಯಕ್ಕಾಗಿ ಕಂಪನಿ ಅಗೆದಿದ್ದ ಗುಂಡಿಗೆ ಮಹಿಳೆಯೊಬ್ಬರು ಬಿದ್ದಿದ್ದು, ಈ ಹಿನ್ನಲೆಯಲ್ಲಿ ದೂರಸಂಪರ್ಕ ಸೇವಾ ಸಂಸ್ಥೆ ಏರ್ಟೆಲ್ ವಿರುದ್ಧ ಮಂಗಳೂರು ಮಹಾನಗರ ಪಾಲಿಕೆ (ಎಂಸಿಸಿ) ಪೊಲೀಸರಿಗೆ ದೂರು ನೀಡಿದೆ.
ಸೋಮವಾರ ಬೆಳಗ್ಗೆ 11.3ರ ಸುಮಾರಿಗೆ ಮಹಿಳೆ ಪಾದಚಾರಿ ಮಾರ್ಗದಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ನೋಡದೆ ಗುಂಡಿಯೊಳಗೆ ಬಿದ್ದಿದ್ದಾರೆ. ಕೂಡಲೇ ಸ್ಥಳದಲ್ಲಿದ್ದ ಕೆಲವರು ಆಕೆಯನ್ನು ರಕ್ಷಣೆ ಮಾಡಿದ್ದಾರೆ.
ರಸ್ತೆ ಅಗೆದು ಗುಂಡಿ ಸೃಷ್ಟಿಸಿ ನಂತರ ಅದನ್ನು ಮುಚ್ಚದೆ ನಿರ್ಲಕ್ಷ್ಯ ತೋರಿದ ಏರ್’ಟೆಲ್ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕೆಂದು ಬಂದರ್ ಪೊಲೀಸ್ ಠಾಣೆಗೆ ನೀಡಿದ ದೂರಿನಲ್ಲಿ ಮಂಗಳೂರು ಮಹಾನಗರ ಪಾಲಿಕೆ (ಎಂಸಿಸಿ) ಹೇಳಿದೆ.
ಲಕ್ಷ್ಮಿದಾಸ್ ಜ್ಯುವೆಲ್ಲರಿ ಬಳಿಯ ಫುಟ್ಪಾತ್ನಲ್ಲಿ ಯಾವುದೇ ಅನುಮತಿಯಿಲ್ಲದೆ ಮತ್ತು ಯಾವುದೇ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳದೆ ಕೆಲವು ಕೇಬಲ್ ದುರಸ್ತಿ ಕಾರ್ಯಕ್ಕಾಗಿ ಗುಂಡಿಯನ್ನು ತೋಡಲಾಗಿದೆ. ಹೀಗಾಗಿ ಸಂಸ್ಥೆಯ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಪ್ರಕರಣ ಸಂಬಂಧ ಪ್ರತಿಕ್ರಿಯೆ ನೀಡಿರುವ ಮಂಗಳೂರು ಮಹಾನಗರ ಪಾಲಿಕೆ ಆಯುಕ್ತ ಅಕ್ಷಿ ಶ್ರೀಧರ್ ಅವರು, ಏರ್ಟೆಲ್ಗೆ ದಂಡ ವಿಧಿಸಲಾಗುವುದು ಎಂದು ಹೇಳಿದ್ದಾರೆ.
ಮಹಿಳೆಯನ್ನು ರಕ್ಷಿಸಿದ ವ್ಯಕ್ತಿಗಳಲ್ಲಿ ಒಬ್ಬರಾದ ತಾರಾನಾಥ್ ಅವರು ಮಾತನಾಡಿ, ಮಹಿಳೆ ಎಂಟು ಅಡಿ ಆಳದ ಹೊಂಡಕ್ಕೆ ತಲೆಕೆಳಗಾಗಿ ಬಿದ್ದಿದ್ದರು. ಪರಿಣಾಮ ಅವರ ಕುತ್ತಿಗೆ ಮತ್ತು ಬೆನ್ನಿಗೆ ಕೆಲವು ಗಾಯಗಳಾಗಿವೆ ಎಂದು ಹೇಳಿದ್ದಾರೆ.
ಈ ದುರ್ಘಟನೆಗೆ ಪೌರಕಾರ್ಮಿಕರೇ ಕಾರಣ ಎಂದು ಆರೋಪಿಸಿದ ಅವರು, ಕೆಲ ಉದ್ದೇಶಿತ ಕಾಮಗಾರಿ ಮುಗಿದರೂ ಗುಂಡಿಯನ್ನು ಮುಚ್ಚಲಾಗಿಲ್ಲ. ಮಹಿಳೆ ಹೊಂಡಕ್ಕೆ ಬಿದ್ದ ನಂತರವೇ ಪಾಲಿಕೆ ಎಚ್ಚೆತ್ತುಕೊಂಡಿದೆ ಎಂದು ತಿಳಿಸಿದ್ದಾರೆ.