ಕೋಲಾರ ಸಮೀಪದ ಕಾಜಿಕಲ್ಲಹಳ್ಳಿ ಗ್ರಾಮದಲ್ಲಿ ರಾಜ್ಯದ ಮೊಟ್ಟಮೊದಲ ಆನೆಗಳ ಆರೈಕೆ ಕೇಂದ್ರವನ್ನು ಆರಂಭಿಸಲಾಗಿದ್ದು, ಕೇಂದ್ರಕ್ಕೆ ಶೀಘ್ರದಲ್ಲಿಯೇ ಪ್ರವಾಸಿಗರ ಭೇಟಿಗೆ ಅವಕಾಶ ನೀಡಲಾಗುತ್ತದೆ ಎಂದು ತಿಳಿದುಬಂದಿದೆ. ಬೆಂಗಳೂರು: ಕೋಲಾರ ಸಮೀಪದ ಕಾಜಿಕಲ್ಲಹಳ್ಳಿ ಗ್ರಾಮದಲ್ಲಿ ರಾಜ್ಯದ ಮೊಟ್ಟಮೊದಲ ಆನೆಗಳ ಆರೈಕೆ ಕೇಂದ್ರವನ್ನು ಆರಂಭಿಸಲಾಗಿದ್ದು, ಕೇಂದ್ರಕ್ಕೆ ಶೀಘ್ರದಲ್ಲಿಯೇ ಪ್ರವಾಸಿಗರ ಭೇಟಿಗೆ ಅವಕಾಶ ನೀಡಲಾಗುತ್ತದೆ ಎಂದು ತಿಳಿದುಬಂದಿದೆ.
ಲಕ್ಷ್ಮೀಸಾಗರ ಮೀಸಲು ಅರಣ್ಯದಲ್ಲಿ 25 ಎಕರೆ ಪ್ರದೇಶದಲ್ಲಿ ಆನೆಗಳ ಆರೈಕ ಕೇಂದ್ರವನ್ನು ಸ್ಥಾಪಿಸಲಾಗಿದ್ದು, ಪ್ರಸ್ತುತ ಈ ಕೇಂದ್ರದಲ್ಲಿ ಸ್ಥೂಲಕಾಯ, ಮಧುಮೇಹ ಮತ್ತು ಗಾಯಗಳಿಗಾಗಿ ನಾಲ್ಕು ಆನೆಗಳು ಚಿಕಿತ್ಸೆ ಪಡೆದುಕೊಳ್ಳುತ್ತಿವೆ.
ಆನೆಗಳ ಆರೈಕೆಗೆ ಕೇಂದ್ರ ಆರಂಭಿಸಿರುವ ಸರ್ಕಾರ ಮುಂದಿನ ದಿನಗಳಲ್ಲಿ ಈ ಕೇಂದ್ರಕ್ಕೆ ಪ್ರವಾಸಿಗರ ಭೇಟಿಗೆ ಅವಕಾಶ ನೀಡಲು ಹಾಗೂ ಪ್ರಾಣಿಗಳಿಗೆ ಆಹಾರ ನೀಡಲು ಅವಕಾಶ ಮಾಡಿಕೊಡುವತ್ತ ಕೆಲಸ ಮಾಡುತ್ತಿದೆ ಎಂದು ತಿಳಿದುಬಂದಿದೆ.
ಪ್ರಸ್ತುತ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿರುವ ಆನೆಗಳು, ತಮಿಳುನಾಡು, ಕೇರಳ, ಗೋವಾ ಮತ್ತು ನಂಜನಗೂಡಿನಿಂದ ಬಂದ ಆನೆಗಳಾಗಿವೆ ಎಂದು ತಿಳಿದುಬಂದಿದೆ. ನಾಲ್ಕು ಆನೆಗಳ ಪೈಕಿ ಮೂರು ಆನೆಗಳು, ಮಧುಮೇಹ, ಗಾಯ ಹಾಗೂ ಕಾಲುಗಳು ಊದಿಕೊಂಡ ಹಿನ್ನೆಲೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಒಂದು ಆನೆ ಸ್ಥೂಲಕಾಯತೆಗೆ ಚಿಕಿತ್ಸೆ ಪಡೆಯುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ದೇವಾಲಯಗಳ ಆನೆಗಳಲ್ಲಿ ಮಧುಮೇಹ ಮತ್ತು ಬೊಜ್ಜು ಸಾಮಾನ್ಯವಾಗಿ ಕಂಡುಬರುವ ಸಮಸ್ಯೆಗಳಾಗಿವೆ. ಆಹಾರ ಕ್ರಮ ಮತ್ತು ಸೀಮಿತ ದೈಹಿಕ ವ್ಯಾಯಾಮ ಇದಕ್ಕೆ ಕಾರಣವಾಗಿದೆ. ಹೀಗಾಗಿಯೇ ಆನೆಗಳು ಗಾಯಗೊಂಡಾಗ ಗುಣವಾಗಲು ಸಾಕಷ್ಟು ಸಮಯ ಬೇಕಾಗುತ್ತದೆ. ಕೋಲಾರದಲ್ಲಿರುವ ಕೇಂದ್ರದಲ್ಲಿ ಕೇವಲ ವಿಶೇಷ ವೈದ್ಯಕೀಯ ಆರೈಕೆಯಷ್ಟೇ ಅಲ್ಲದೆ, ಪ್ರತಿಯೊಂದು ಆನೆಗೂ ದೈನಂದಿನ ವ್ಯಾಯಾಮ ಮತ್ತು ಆಹಾರ ಕ್ರಮ ಅನುಸರಿಸುವಂತೆ ಮಾಡಲಾಗುತ್ತಿದೆ ಎಂದು ಪಶುವೈದ್ಯರು ವಿವರಿಸಿದ್ದಾರೆ.
ಈ ಕೇಂದ್ರದಲ್ಲಿ ಪ್ರತೀ ಆನೆಗೆ ಪ್ರತ್ಯೇಕ ಆರೈಕೆ ಕೇಂದ್ರ, ಸ್ನಾನ ಗೃಹ, ಮನರಂಜನಾ ಸ್ಥಳಗಳು, ವೈದ್ಯಕೀಯ ಕೊಠಡಿಗಳು ಮತ್ತು ವಾಕಿಂಗ್ ಪ್ರದೇಶಗಳಿವೆ. ಇನ್ನೂ 8 ಆನೆಗಳಿಗೆ ಆರೈಕೆ ಮಾಡಲು ಸೌಲಭ್ಯಗಳ ಸ್ಥಾಪಿಸಲಾಗುತ್ತಿದೆ. ತ್ಯಾಜ್ಯ ಮರುಬಳಕೆ ಘಟಗಳನ್ನೂ ಈ ಕೇಂದ್ರದಲ್ಲಿ ಸ್ಥಾಪಿಸಲಾಗುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.
ಇತರ ಆರೈಕೆ ಕೇಂದ್ರಗಳಿಗಿಂತ ಈ ಕೇಂದ್ರ ಭಿನ್ನವಾಗಿದೆ. ಇದು ಬಿಸಿಲು ಮತ್ತು ಮಳೆಯಿಂದ ಆನೆಗಳನ್ನು ರಕ್ಷಿಸಲು ತೆರೆದ ಮತ್ತು ಮುಚ್ಚಿದ ಸ್ಥಳಗಳನ್ನು ಹೊಂದಿದೆ. ಕಾವಾಡಿಗಳು, ಮಾವುತರು, ಅರಣ್ಯ ಸಿಬ್ಬಂದಿ ಮತ್ತು ಪಶುವೈದ್ಯರಿಗೆ ವಿಶೇಷ ಘಟಕಗಳನ್ನು ಸ್ಥಾಪಿಸಲಾಗಿದೆ. ಆನೆಗಳಿಗೆ ಚಿಕಿತ್ಸೆ ನೀಡಲು ಪಶುವೈದ್ಯರು ಮತ್ತು ಎನ್ಜಿಒಗಳೊಂದಿಗೆ ಕೆಲಸ ಮಾಡುವ ತಜ್ಞರನ್ನು ಕೂಡ ನಿಯೋಜಿಸಲಾಗಿದೆ ಎಂದು ಅಧಿಕಾರಿ ಹೇಳಿದ್ದಾರೆ.