ರಾಜ್ಯದಲ್ಲಿ ಕೈಗಾರಿಕೋದ್ಯಮಿಗಳು ಮತ್ತು ಹೂಡಿಕೆದಾರರಿಗೆ ಹಾದಿ ಸುಗಮ ಮಾಡಿಕೊಡಲು ಹಾಗೂ ಕೈಗಾರಿಕಾ ಸ್ಥಾಪನೆಗೆ ಎದುರಾಗುವ ತಾಂತ್ರಿಕ, ಕಾನೂನಾತ್ಮಕ ಅಡೆತಡೆಗಳಿಗೆ ಪರಿಹಾರ ಕಂಡುಕೊಳ್ಳಲು ಕರ್ನಾಟಕ ವಿಶೇಷ ಹೂಡಿಕೆ ಪ್ರದೇಶ ಮಸೂದೆ-2022 ಅನ್ನು ಮಂಗಳವಾರ ವಿಧಾನಸಭೆಯಲ್ಲಿ ಅಂಗೀಕರಿಸಲಾಯಿತು. ಬೆಳಗಾವಿ: ರಾಜ್ಯದಲ್ಲಿ ಕೈಗಾರಿಕೋದ್ಯಮಿಗಳು ಮತ್ತು ಹೂಡಿಕೆದಾರರಿಗೆ ಹಾದಿ ಸುಗಮ ಮಾಡಿಕೊಡಲು ಹಾಗೂ ಕೈಗಾರಿಕಾ ಸ್ಥಾಪನೆಗೆ ಎದುರಾಗುವ ತಾಂತ್ರಿಕ, ಕಾನೂನಾತ್ಮಕ ಅಡೆತಡೆಗಳಿಗೆ ಪರಿಹಾರ ಕಂಡುಕೊಳ್ಳಲು ಕರ್ನಾಟಕ ವಿಶೇಷ ಹೂಡಿಕೆ ಪ್ರದೇಶ ಮಸೂದೆ-2022 ಅನ್ನು ಮಂಗಳವಾರ ವಿಧಾನಸಭೆಯಲ್ಲಿ ಅಂಗೀಕರಿಸಲಾಯಿತು.
ವಿಧೇಯಕವನ್ನು ಮಂಡಿಸಿದ ಬೃಹತ್ ಮತ್ತು ಮಧ್ಯಮ ಪ್ರಮಾಣದ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ, ರಾಜ್ಯದಲ್ಲಿ ದೊಡ್ಡ-ಅತಿದೊಡ್ಡ ಅಥವಾ ಬೃಹತ್ ಗಾತ್ರದ ಅಂದರೆ 1,250 ಎಕರೆಗೂ ಮೀರಿದ ಹೂಡಿಕೆ ಪ್ರದೇಶ, ಕೈಗಾರಿಕಾ ಪ್ರದೇಶಗಳು ಅಥವಾ ಕ್ಲಸ್ಟರ್ಗಳನ್ನು ಸ್ಥಾಪಿಸಲು, ನಡೆಸಲು, ನಿಯಂತ್ರಿಸಲು ಮತ್ತು ನಿರ್ವಹಿಸಲು ಮುಖ್ಯವಾಗಿ ಜಾಗತಿಕ ಉತ್ಪಾದನ ಪ್ರಮುಖ ತಾಣವಾಗಿ ಕರ್ನಾಟಕದ ಸ್ಥಾನವನ್ನು ಉಳಿಸಿಕೊಳ್ಳಲು, ಈ ಮಸೂದೆವನ್ನು ತರಲಾಗುತ್ತಿದೆ, ಕ್ಲಸ್ಟರ್ಗಳನ್ನು ಅಭಿವೃದ್ಧಿಪಡಿಸುವ ಮೊದಲು ಆಯಾ ಗ್ರಾಮ ಪಂಚಾಯಿತಿಗಳು ಅಥವಾ ಪುರಸಭೆಗಳು ಸಿದ್ಧಪಡಿಸಿದ ಅಭಿವೃದ್ಧಿ ಯೋಜನೆಯನ್ನು ಪ್ರಾದೇಶಿಕ ಅಭಿವೃದ್ಧಿ ಪ್ರಾಧಿಕಾರವು ಗಣನೆಗೆ ತೆಗೆದುಕೊಳ್ಳಲಾಗುತ್ತದೆ ಎಂದು ವಿವರಿಸಿದರು.
ಇವುಗಳ ನಿರ್ವಹಣೆಗೆ ಅಧಿನಿಯಮದಡಿ ವಿಶೇಷ ಹೂಡಿಕೆ ಅಗ್ರ ಪ್ರಾಧಿಕಾರ ರಚಿಸುವುದು, ಪ್ರಾಧಿಕಾರದ ಮೂಲಕ ಆ ಪ್ರದೇಶಗಳನ್ನು ನಿರ್ವಹಣೆ ಹಾಗೂ ಅಭಿವೃದ್ಧಿ ಪಡಿಸುವುದಾಗಿದೆ. ಕರ್ನಾಟಕ ಕೈಗಾರಿಕಾ ಪ್ರದೇಶಗಳ ಅಭಿವೃದ್ಧಿ ಮಂಡಳಿಯು ವಿಶೇಷ ಹೂಡಿಕೆ ಪ್ರದೇಶದ ಉನ್ನತ ಪ್ರಾಧಿಕಾರವಾಗಿರುತ್ತದೆ. ಇಲ್ಲಿ ಹೂಡಿಕೆದಾರರಿಗೆ ಮಾಲಿನ್ಯ ನಿಯಂತ್ರಣ ಮಂಡಳಿಯ ಅನುಮತಿ ಹೊರತುಪಡಿಸಿ ಉಳಿದ ಎಲ್ಲ ಅನುಮತಿಗಳನ್ನು ಈ ಪ್ರಾಧಿಕಾರವೇ ನೀಡಲಿವೆ. ಈ ಪ್ರಾಧಿಕಾರಕ್ಕೆ ಕೆಐಡಿಎಬಿ, ಆರ್ಡಿಪಿಆರ್ ಇಲಾಖೆಗಳಿಂದ ಒಪ್ಪಿಗೆ ಪಡೆಯಲಾಗಿದೆ. ಈ ಪ್ರದೇಶಗಳಿಂದ ಸಂಗ್ರಹವಾಗುವ ತೆರಿಗೆಯನ್ನು ಇದೇ ಪ್ರಾಧಿಕಾರ ಸಂಗ್ರಹಿಸುತ್ತದೆ. ಅದರಲ್ಲಿ ಶೇ.30ರಷ್ಟು ಸ್ಥಳೀಯ ಸಂಸ್ಥೆಗೆ ನೀಡಿದರೆ, ಉಳಿದ ಶೇ.70ರಷ್ಟು ತೆರಿಗೆಯಲ್ಲಿ ಆ ಪ್ರದೇಶದ ಅಭಿವೃದ್ಧಿಗೆ ಬಳಸಿಕೊಳ್ಳುತ್ತದೆ ಎಂದು ವಿವರಿಸಿದರು.
ಈ ವೇಳೆ ಮಧ್ಯಪ್ರವೇಶಿಸಿದ ಕಾಂಗ್ರೆಸ್ ಸದಸ್ಯ ಆರ್.ವಿ.ದೇಶಪಾಂಡೆ, ಇದು ಒಳ್ಳೆಯ ಮಸೂದೆ. ಆದರೆ, ಇದರ ಅನುಷ್ಠಾನ ಕಷ್ಟವಾಗಲಿದೆ. ಉಳಿದ ಇಲಾಖೆಗಳು ಇದಕ್ಕೆ ಅನುಮತಿಸುತ್ತವೆ ಎಂಬ ನಂಬಿಕೆಯಿಲ್ಲ ಎಂದು ತಿಳಿಸಿದರು.
ಜೆಡಿಎಸ್ ಶಾಸಕ ಶಿವಲಿಂಗೇಗೌಡ ಮಾತನಾಡಿ, ಇದು ಸರ್ಕಾರದ ಮತ್ತೊಂದು ಭೂಸ್ವಾಧೀನ ಯೋಜನೆಯೇ ಹೊರತು ಬೇರೇನೂ ಅಲ್ಲ. ರೈತರ ಭೂಮಿಯನ್ನು ಸ್ವಾಧೀನಪಡಿಸಿಕೊಂಡು ಅನೇಕ ಕೈಗಾರಿಕಾ ಪ್ರದೇಶಗಳನ್ನು ಅಭಿವೃದ್ಧಿಪಡಿಸಲಾಗಿದೆ. ಈಗ ಅಲ್ಲಿ ಟೌನ್ಶಿಪ್ಗಳನ್ನು ರಚಿಸಲಾಗುತ್ತಿದೆ. ಸರ್ಕಾರ ಮೊದಲು ಬಳಕೆಯಾಗದೆ ಉಳಿದಿರುವ ಜಮೀನುಗಳ ಲೆಕ್ಕಪರಿಶೋಧನೆ ನಡೆಸಿ ವಾಪಸ್ ಪಡೆಯಬೇಕು ಎಂದು ಹೇಳಿದರು.
ಬಿಜೆಪಿ ಶಾಸಕ ಸಿ.ಟಿ.ರವಿ ಮಾತನಾಡಿ, ”ಮುಂದಿನ 25 ವರ್ಷಗಳ ಕಾಲ ಯೋಜನೆಯೊಂದಿಗೆ ಪ್ರತಿ ಜಿಲ್ಲೆಯಲ್ಲಿ ಸಮೀಕ್ಷೆ ನಡೆಸಬೇಕು. ಮೆಗಾ ಕ್ಲಸ್ಟರ್ಗಳಿಂದ ಸಮಸ್ಯೆಗಳು ಹೆಚ್ಚಾಗುತ್ತವೆ… ಸಣ್ಣ ಕ್ಲಸ್ಟರ್ಗಳಲ್ಲಿನ ಸಂಪನ್ಮೂಲಗಳ ಉತ್ತಮ ಬಳಕೆಯತ್ತ ಸರ್ಕಾರ ಗಮನಹರಿಸಬೇಕೆಂದು ಹೇಳಿದರು,
ಈ ವೇಳೆ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ಈ ಹಿಂದೆ ಕೈಗಾರಿಕಾ ಪ್ರದೇಶಗಳಿಗೆ ಮಂಜೂರಾದ ಜಮೀನುಗಳ ದುರ್ಬಳಕೆ ಬಗ್ಗೆ ಅರಿವಿದೆ. “ಮಸೂದೆಯ ಅನುಷ್ಠಾನವು ಬಳಕೆಯಾಗದ ಜಮೀನುಗಳ ಲೆಕ್ಕಪರಿಶೋಧನೆಯೊಂದಿಗೆ ಪ್ರಾರಂಭವಾಗುತ್ತದೆ. ವಿವಿಧ ಸಂಘಗಳು ಮತ್ತು ವೇದಿಕೆಗಳು ಎಲ್ಲಾ ಮೂಲಭೂತ ಸೌಕರ್ಯಗಳೊಂದಿಗೆ ಮೀಸಲಾದ ಕೈಗಾರಿಕಾ ಪ್ರದೇಶಗಳನ್ನು ಹುಡುಕುತ್ತಿವೆ, ಮಸೂದೆ ಅವರಿಗೆ ಸುಲಭವಾಗಿ ವ್ಯವಹಾರಗಳನ್ನು ಸ್ಥಾಪಿಸಲು ಮತ್ತು ನಡೆಸಲು ಸಹಾಯ ಮಾಡುತ್ತದೆ. ನಾವು ಇಲೆಕ್ಟ್ರಾನಿಕ್ಸ್ ಸಿಟಿ ಮಾದರಿಯಲ್ಲಿ ಕೈಗಾರಿಕಾ ಪ್ರದೇಶಗಳ ಸ್ಥಾಪಿಸಲು ಬಯಸುತ್ತೇವೆ. ಇದು ಸ್ವಾವಲಂಬಿಯಾಗಿದೆ. ಈ ಕ್ಲಸ್ಟರ್ಗಳು ಬೆಂಗಳೂರಿನ ಹೊರಗೆ ಇರುತ್ತವೆ. ಸ್ಥಳೀಯ ಅಧಿಕಾರಿಗಳಿಂದ ಮಸೂದೆಗೆ ಒಪ್ಪಿಗೆ ಪಡೆಯಲಾಗಿದೆ. ಬಳಕೆಯಾಗದ ಭೂಮಿಯನ್ನು ವಾಪಸ್ ಪಡೆಯಲಾಗುವುದು ಎಂದರು.