Home Uncategorized ‘ಸೀದಾ ಮನೆಗೆ ಕಳಿಸ್ತೀನಿ’; ಯುವ ಆಟಗಾರನಿಗೆ ಖಡಕ್ ವಾರ್ನಿಂಗ್ ನೀಡಿದ್ದ ಸಚಿನ್ ತೆಂಡೂಲ್ಕರ್..!

‘ಸೀದಾ ಮನೆಗೆ ಕಳಿಸ್ತೀನಿ’; ಯುವ ಆಟಗಾರನಿಗೆ ಖಡಕ್ ವಾರ್ನಿಂಗ್ ನೀಡಿದ್ದ ಸಚಿನ್ ತೆಂಡೂಲ್ಕರ್..!

11
0

ಭಾರತದ ಶ್ರೇಷ್ಠ ಬ್ಯಾಟ್ಸ್‌ಮನ್, ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ (Sachin Tendulkar) ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ತನ್ನ ಅದ್ಭುತ ಬ್ಯಾಟಿಂಗ್‌ನಿಂದಾಗಿ ವಿಶ್ವ ಕ್ರಿಕೆಟ್​ನಲ್ಲಿ ಹಲವು ದಾಖಲೆಗಳನ್ನು ಬರೆದಿರುವ ಸವ್ಯಸಾಚಿ ಸಚಿನ್ ಆಟಕ್ಕೆ ಸರಿಸಾಟಿ ಯಾರಿಲ್ಲ ಎಂಬುದು ಕ್ರಿಕೆಟ್ ಲೋಕದ ಅಭಿಪ್ರಾಯ. ಸಚಿನ್ ತನ್ನ ಆಡದಿಂದ ಮಾತ್ರವಲ್ಲ, ತನ್ನ ಸರಳತೆ ಮತ್ತು ಶಾಂತ ನಡವಳಿಕೆಯಿಂದಲೂ ಕ್ರಿಕೆಟ್​ನಲ್ಲಿ ಒಳ್ಳೇಯ ಹೆಸರು ಪಡೆದಿದ್ದಾರೆ. ಮೈದಾನದಲ್ಲಿ ಹೆಚ್ಚು ಆಕ್ರಮಣಶೀಲತೆ, ಕೋಪ ಮತ್ತು ಅಸಮಾಧಾನವನ್ನು ತೋರಿಸದ ಆಟಗಾರರಲ್ಲಿ ಸಚಿನ್ ಕೂಡ ಒಬ್ಬರು. ಹೀಗಿರುವಾಗ ಸಚಿನ್ ಪಂದ್ಯದ ಮಧ್ಯೆ ಯುವ ಆಟಗಾರನಿಗೆ ತಂಡದಿಂದ ಹೊರಹಾಕಿ, ಮನೆಗೆ ವಾಪಸ್ ಕಳುಹಿಸುವುದಾಗಿ ಬೆದರಿಕೆ ಹಾಕಿದ್ದ ದಿನವೊಂದಿತ್ತು ಎಂದು ಹೇಳಿದರೆ ನೀವು ನಂಬದೇ ಇರಬಹುದು. ಆದರೆ ಈ ಘಟನೆ ನಡೆದಿರುವುದು ಅಕ್ಷರಶಃ ಸತ್ಯ. ಸ್ವತಃ ಸಚಿನ್ ಅವರೇ ಈ ಘಟನೆಯ ಬಗ್ಗೆ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದಾರೆ.

ಇನ್ಫೋಸಿಸ್ ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ ಕ್ರಿಕೆಟ್ ಬಗ್ಗೆ ಹಾಗೂ ತನ್ನ ಅನುಭವಗಳ ಬಗ್ಗೆ ಮಾತನಾಡಿದ ಸಚಿನ್, ನಾಯಕನಾಗಿ ತುಂಬಾ ಕಟ್ಟುನಿಟ್ಟಾಗಿರಬೇಕು. ನನಗೆ ಆಟದಲ್ಲಿ ನಿರ್ಲಕ್ಷ್ಯವನ್ನು ಸಹಿಸಲಾಗಲ್ಲ. ಹೀಗೆ ಆಟದಲ್ಲಿ ನಿರ್ಲಕ್ಷ್ಯ ತೋರಿ ಹಲವು ಬಾರಿ ಆಟಗಾರರೂ ನನ್ನ ಕೋಪಕ್ಕೆ ಬಲಿಯಾಗಿದ್ದರು. ಅಂತಹದೊಂದು ಘಟನೆ ನನ್ನ ಕ್ರಿಕೆಟ್ ಬದುಕಿನಲ್ಲೂ ನಡೆದಿತ್ತು ಎಂದು ಸಚಿನ್ ಹೇಳಿಕೊಂಡಿದ್ದಾರೆ.

ಮತ್ತೆ ಅಖಾಡಕ್ಕಿಳಿದ ಕ್ರಿಕೆಟ್ ದೇವರು! ಅದರಲ್ಲೂ ನಾಯಕನಾಗಿ ಬ್ಯಾಟ್ ಬೀಸಲಿರುವ ಸಚಿನ್ ತೆಂಡೂಲ್ಕರ್

ನಿನ್ನನ್ನು ಮನೆಗೆ ಕಳುಹಿಸುತ್ತೇನೆ ಎಂದಿದ್ದ ಸಚಿನ್

ಆಟದಲ್ಲಿ ನಿರ್ಲಕ್ಷ್ಯ ತೋರಿದ ಆಟಗಾರನಿಗೆ ಖಡಕ್ ಎಚ್ಚರಿಕೆ ನೀಡಿದ್ದ ಘಟನೆಯನ್ನು ನೆನಪಿಸಿಕೊಂಡಿರುವ ಸಚಿನ್, ನಾನು ಆ ಸಮಯದಲ್ಲಿ ತಂಡದ ನಾಯಕನಾಗಿದ್ದೆ. ಆ ವೇಳೆ ನಾವು ಆಸ್ಟ್ರೇಲಿಯಾ ಪ್ರವಾಸಕ್ಕೆ ಹೋಗಿದ್ದೆವು. ನಮ್ಮ ತಂಡದಲ್ಲಿ ಒಬ್ಬ ಜೂನಿಯರ್ ಆಟಗಾರನಿದ್ದನು, ಅದು ಅವನ ಮೊದಲ ಪ್ರವಾಸವಾಗಿತ್ತು. ಪಂದ್ಯ ನಡೆಯುವ ವೇಳೆ ಆತ ಆಟದ ಮೇಲೆ ಹೆಚ್ಚು ಗಮನ ಹರಿಸುತ್ತಿರಲಿಲ್ಲ. ಫೀಲ್ಡಿಂಗ್ ಮಾಡುವಾಗ ಆ ಜೂನಿಯರ್ ಆಟಗಾರ, ಕ್ರೀಡಾಂಗಣದಲ್ಲಿ ಕುಳಿತ ಅಭಿಮಾನಿಗಳತ್ತ ಹೆಚ್ಚು ಗಮನ ಹರಿಸುತ್ತಿದ್ದ. ಒಂದೇ ಒಂದು ರನ್ ನೀಡುವ ಕಡೆ ಎರಡೆರಡು ರನ್ ಕೊಡುತ್ತಿದ್ದ. ಇದನ್ನು ಗಮನಿಸಿದ ನಾನು ಅವನನ್ನು ಕರೆದು ಅವನ ಭುಜದ ಮೇಲೆ ಕೈ ಹಾಕಿದೆ. ಬಳಿಕ ಯಾರಿಗೂ ಕೇಳದ ಹಾಗೆ ನಾನು, ನೀನು ಮತ್ತೆ ಹೀಗೆ ಮಾಡಿದರೆ, ನಿನ್ನನ್ನು ಸೀದಾ ಮನೆಗೆ ಕಳುಹಿಸುತ್ತೇನೆ. ನೀನು ತಂಡದೊಂದಿಗೆ ಹೋಟೆಲ್​ಗೆ ಬರುವ ಬದಲು ಸೀದಾ ಭಾರತಕ್ಕೆ ಹೋಗಬೇಕಾಗುತ್ತದೆ ಎಂದು ಎಚ್ಚರಿಸಿದ್ದೆ ಎಂದಿದ್ದಾರೆ.

ಟೀಂ ಇಂಡಿಯಾದಲ್ಲಿ ಎಲ್ಲರಿಗೂ ಅವಕಾಶ ಸಿಗುವುದಿಲ್ಲ

ವಾಸ್ತವವಾಗಿ ತಾನು ಈ ಜೂನಿಯರ್ ಆಟಗಾರನ ಮೇಲೆ ಇಷ್ಟು ಕಟುವಾಗಲು ಕಾರಣ ಏನೆಂಬುದನ್ನು ವಿವರಿಸಿರುವ ಸಚಿನ್, ಟೀಂ ಇಂಡಿಯಾದಲ್ಲಿ ಸಿಕ್ಕಿರುವ ಅವಕಾಶವನ್ನು ಆ ಆಟಗಾರ ಹಗುರವಾಗಿ ತೆಗೆದುಕೊಳ್ಳದಿರಲಿ ಎಂಬುದು ನನ್ನ ಉದ್ದೇಶವಾಗಿತ್ತು ಹೀಗಾಗಿ ನಾನು ಹಾಗೆ ನಡೆದುಕೊಳ್ಳಬೇಕಾಯಿತು. ಅಲ್ಲದೆ ಭಾರತ ಪರ ಆಡುವಾಗ ಯಾವುದಕ್ಕೂ ರಾಜಿಯಾಗಬಾರದು. ಭಾರತದ ಪರ ಆಡುವುದು ದೊಡ್ಡ ಗೌರವ. ಹಾಗೆಯೇ ತಂಡದಲ್ಲಿ ನೀವು ಗಳಿಸುವ ಸ್ಥಾನವನ್ನು ಗಿಟ್ಟಿಸಿಕೊಳ್ಳಲು ಲಕ್ಷಾಂತರ ಜನರು ಕನಸು ಕಾಣುತ್ತಾರೆ. ಆದ್ದರಿಂದ ಸಿಗುವ ಅವಕಾಶ ಲಘುವಾಗಿ ತೆಗೆದುಕೊಳ್ಳಬೇಡಿ ಎಂದು ಸಚಿನ್ ಸಲಹೆ ಕೂಡ ನೀಡಿದ್ದಾರೆ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

LEAVE A REPLY

Please enter your comment!
Please enter your name here